ಪುಟ:ಹಳ್ಳಿಯ ಚಿತ್ರಗಳು.djvu/೧೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಒಲುಮೆಯ ಒರೆಗಲ್ಲು

೧೩೭

ನಿನ್ನಲ್ಲಿ ಮನಸ್ಸಿದೆಯೆ? ನೀನು ಈಕಡೆ ಗಾಳಿಗೋಪರ ಕಟ್ಟುತ್ತಿರುವುದು. ಆಕಡೆ ಅವಳು ಇನ್ನಾರನ್ನಾದರೂ ಪ್ರೀತಿಸುವುದು, ಅಥವ ಅವಳ ತಂದೆ ಅವಳನ್ನು ಮತ್ತಾರಾದರೂ ಧನಿಕನಿಗೆ ವಿವಾಹ ಮಾಡಿಕೊಡುವುದು. ಆಗ?"

ನನ್ನ ಸ್ನೇಹಿತನು ನನ್ನ ಮಾತನ್ನು ಕೇಳಿ ಹಾಸ್ಯ ಮಾಡುತ್ತಾ "ಅಯ್ಯೋ! ನೀನು ಅವಳನ್ನು ಒಂದು ಸಲ ನೋಡಿಬಿಟ್ಟರೆ ಸಾಕು. ನಿನ್ನ ಅನುಮಾನವೆಲ್ಲಾ ಮಾಯವಾಗಿಬಿಡುವುದು. ಇನ್ನು ಅವಳ ಅಪ್ಪ? ಅವನೂ ಒಪ್ಪಲೇಬೇಕು. ನೀನು ಮದುವೆಗೆ ಬರಬೇಕೊ, ಬೇಕಾದರೆ ಅಯ್ಯಂಗಾರ್‍ರ ಅಡಿಗೆಯವರನ್ನೇ ಕರಸಿಬಿಡುತ್ತೇನೆ" ಎಂದನು.

ನನಗೆ ಬಹಳ ಸಂತೋಷವಾಯಿತೆಂದು ಹೇಳಬೇಕಾದುದಿಲ್ಲ. ಹಾಗಾದರೆ “ಇಂಟರ್ ಮ್ಯಾರೇಜ್ ಬೇಡವೊ?" ಎಂದೆ. ಅವನು ನಗುತ್ತಾ "ಪುಣ್ಯಾತ್ಮ ಇಗೋ ನಿನ್ನ ಇಂಟರ್ ಮ್ಯಾರೇಜ್‍ಗೆ ನಮಸ್ಕಾರ ತಕೊ" ಎಂದನು.

* * * *

ಮೂರು ವರ್ಷ ಕಳೆದುಹೋಯಿತು. ಅವನ ಸುದ್ದಿಯೇ ತಿಳಿಯಲಿಲ್ಲ. ಆಮೇಲೆ ಒಂದು ದಿವಸ ನಮ್ಮಿಬ್ಬರಿಗೂ ಗುರುತಿದ್ದ ಮತ್ತೊಬ್ಬ ಸಹಪಾಟಿ ಸಿಕ್ಕಿದೆ.

“ನಾನು-ಗೆ ಮದುವೆ ಆಯಿತೇನೊ?” ಎಂದೆ.

ಅವನ ಮುಖವು ಪೆಚ್ಚಾಯಿತು. ಅವನು ತಕ್ಷಣ ಪ್ರತ್ಯುತ್ತರ ಕೊಡಲಿಲ್ಲ. “ಯಾಕೆ ಮದುವೆ ಆಗಲಿಲ್ಲವೊ? ಹೋಗಲಿ ಆ ಹೆಣ್ಣು ಇಲ್ಲದಿದ್ದರೆ ಇನ್ನೊಂದು ಬರುತ್ತದೆ" ಎಂದೆ. ಸಹಪಾಟಿಯು ಮೆಲ್ಲನೆ "ಅವನು ಸತ್ತುಹೋದ" ಎಂದನು. ಆಕಾಶವೇ ನನ್ನ ತಲೆಯಮೇಲೆ ಕಳಚಿಬಿದ್ದಂತಾಯಿತು. ಇಬ್ಬರೂ ಯಾವ ಮಾತನ್ನೂ ಆಡದೆ ನೀರವವಾಗಿ ಸತ್ತವನಿಗೆ ನಮ್ಮ ಗೌರವವನ್ನು ಸಲ್ಲಿಸಿದೆವು. ದುಃಖದ ಮೊದಲ ಆವೇಗವು ಕಡಮೆಯಾದಮೇಲೆ "ಏನಾಗಿತ್ತು?” ಎಂದೆ.

ನನ್ನ ಸ್ನೇಹಿತನು "ಸಾಯುವ ಹಾಗೆ ಆಗಿತ್ತು" ಎಂದನು.

ಅವನ ಮಾತನ್ನು ಕೇಳಿ ಆ ದುಃಖದಲ್ಲಿಯೂ ಸ್ವಲ್ಪ ನಗು ಬಂದಿತು. "ಅಂದರೆ?” ಎಂದು ಕೇಳಿದೆ.