ಪುಟ:ಹಳ್ಳಿಯ ಚಿತ್ರಗಳು.djvu/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನಾನು ರತ್ನಳ ಮದುವೆಗೆ ಹೋದುದು

೧೯

ಲಾರದೆ ಒಬ್ಬ ಅಂಬಿಗನು “ಬನ್ನಿ ಇವತ್ತಿಗೆ ನಿಮಗೆ ನೂರು ವರ್ಷ ತುಂಬಿತು" ಎಂದನು. ನಾವು ನೂರಾದರೂ ತುಂಬಲಿ ಇನ್ನೂರಾದರೂ ತುಂಬಲಿ; ಅವನು ಅಷ್ಟು ಹೇಳಿದುದೇ ಸಾಕೆಂದು ಹರಿಗೋಲಿನಲ್ಲಿ ಕುಳಿತುಬಿಟ್ಟೆವು.

ಹರಿಗೋಲು ಹೊರಟಿತು. ಅಂಬಿಗರು ಬಹಳ ವೇಗವಾಗಿ ಹುಟ್ಟಿಹಾಕುತ್ತಿದ್ದರು. ಒಂದು ನಿಮಿಷದೊಳಗೆ ಅವರ ದೇಹವೆಲ್ಲಾ ಬೆವರಿತು. ಅವರ ಚಟುವಟಿಕೆಯನ್ನು ನೋಡಿ ನನ್ನ ಬೇಸರಿಕೆಯು ಮಾಯವಾಯಿತು, ಅವರಲ್ಲಿ ಒಂದು ವಿಧವಾದ ಉತ್ಸಾಹವೂ ಕಾತರತೆಯೂ ಇದ್ದಿತು. ಕೆಲವೆಡೆ ಹರಿಗೋಲು ಪ್ರವಾಹದ ಮತ್ತು ಹುಟ್ಟೆಯ ಏಟುಗಳ ಸಮಾನ ವೇಗಕ್ಕೆ ಸಿಕ್ಕಿ, ಮುಂದಕ್ಕೆ ಹೋಗದೆ ನಿಂತುಬಿಡುತ್ತಿದ್ದಿತು. ಮತ್ತೆ ಕೆಲವು ಕಡೆ ಸುಳಿಗೆ ಸಿಲುಕಿ ಗಿರ್‍ರೆಂದು ತಿರುಗುತ್ತಿದ್ದಿತು. ಒಂದೊಂದು ಕಡೆ ಅಲೆಯೊಂದಿಗೆ ಮೇಲಕ್ಕೆದ್ದು ಕೆಳಕ್ಕೆ ಬೀಳುತ್ತಿದ್ದಿತು. ಅರ್ಧ ನದಿಯನ್ನು ದಾಟಿದ ಮೇಲೆ, ಅಂಬಿಗರ ಗಾಬರಿಯು ಹೆಚ್ಚಾಯಿತು. ಅವರು ಎಷ್ಟು ಜೋರಾಗಿ ಹುಟ್ಟಿ ಹೊಡೆದರೂ ಹರಿಗೋಲು ಕೆಳಮುಂದಾಗಿ ಹೋಗುತ್ತಿದ್ದಿತೇ ಹೊರತು, ಎದುರು ದಡವನ್ನು ಸೇರುವ ಸೂಚನೆ ತೋರಲೇ ಇಲ್ಲ. ಅಂಬಿಗರು ಪಟ್ಟ ಶ್ರಮವು ವ್ಯರ್ಥವಾಯಿತು. ಅಷ್ಟರಲ್ಲಿ ಒಬ್ಬ ಅಂಬಿಗನು "ಆ ಬಂಡೆಯ ಕೆಳಕ್ಕೆ ಹೋದರೆ ಹರಿಗೋಲು ನಮ್ಮ ಸ್ವಾಧೀನಕ್ಕೆ ಬರುವು ದಿಲ್ಲ. ಆ ತಿರುವಿನಲ್ಲಿ ಬಂಡೆಯ ಮೇಲಿನಿಂದ ಕೆಳಕ್ಕೆ ಉರುಳಿಬಿಡುತ್ತದೆ" ಎಂದನು. ಈ ಮಾತನ್ನು ಕೇಳಿ ಹರಿಗೋಲಿನಲ್ಲಿದ್ದವರೆಲ್ಲಾ ನಡಗಲು ಪ್ರಾರಂಭಿಸಿದರು. ಮುದುಕರಂತೂ “ನನಗೊತ್ತಯ್ಯ ಹರಿಗೋಲು ಅಂದ್ರೆ ಹೀಗೇ ಆಗುತ್ತೆ ಅಂತ. ಈ ನೀರಲ್ಲಿ ನನಗೆ ದುರ್ಮರಣವಾಗುವಂತೆ ವಿಧಿಯು ಬರೆದಿದ್ದರೆ ಯಾರೇನು ಮಾಡಲಾದೀತು" ಎಂದರು. ನನಗೂ ಕೂಡ ಅಂಬಿಗರು ಹರಿಗೋಲೇರುವಾಗ ನಿಮಗೆ ೧೦೦ ವರ್ಷ ತುಂಬಿತೆಂದು ಹೇಳಿದ ಮಾತು ಜ್ಞಾಪಕಕ್ಕೆ ಬಂದಿತು.

ಅಂಬಿಗರು ಮತ್ತಷ್ಟು ಜೋರಿನಿಂದ ಹುಟ್ಟೆ ಹೊಡೆಯಲು ಪ್ರಾರಂಭಿಸಿದರು. ಒಬ್ಬನು ಸಿಟ್ಟಿನಿಂದ ನಮ್ಮ ಕಡೆ ತಿರುಗಿ “ಪಾಪಿಗಳಿರಾ ನೋಡಿ, ಗಾಳಿಯಿಲ್ಲ ಗಾಳಿಯಿಲ್ಲ ಬಿಡು ಎಂದು ಬಡ್ಕೊಂಡ್ರೆಲ್ಲ. ಈಗ್ನಮ್ಮ ಕಷ್ಟ