ಪುಟ:ಭಾರತ ದರ್ಶನ.djvu/೪೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೪೧೦

ಭಾರತ ದರ್ಶನ

ದುರ್ಬಲಗೊಳಿಸಿ ಅಶಕ್ತಗೊಳಿಸಿ ಕೊನೆಗೂ ರಾಜ್ಯಾಂಗದಿಂದ ಹೊರಬೀಳಲು ಅವುಗಳಿಗೆ ಅವಕಾಶವಿತ್ತು; ಉಳಿದ ಪ್ರಾಂತ ಮತ್ತು ಸಂಸ್ಥಾನಗಳಿಗೆ ಹೆಚ್ಚು ಉಪಯುಕ್ತವಾಗುವಂತೆ ಪುನಃ ಆ ಸಂವಿಧಾನ ತಿದ್ದುವುದು ತುಂಬ ಕಷ್ಟವಿತ್ತು. ಸಂವಿಧಾನ ಸಭೆಗೆ ಪ್ರಾಂತ ಚುನಾವಣೆಯು ಕೋಮುವಾರು ಪದ್ಧತಿಯ ಪ್ರತ್ಯೇಕ ಚುನಾವಣೆಯಿಂದ ನಡೆಯಬೇಕಾಗಿತ್ತು. ಹಿಂದಿನ ಭಿನ್ನ ಭಾವನೆಗಳೆಲ್ಲ ಪುನಃ ಬೃಹದ್ರೂಪತಾಳಲು ಅವಕಾಶವಿತ್ತು; ಆದರೆ ಅಂದಿನ ಸ್ಥಿತಿಯಲ್ಲಿ ಅದು ಅನಿವಾರ್ಯವಿತ್ತು. ಸಂಸ್ಥಾನಗಳಲ್ಲಿ ಚುನಾವಣೆಗೆ ಯಾವ ಅವಕಾಶವನ್ನೂ ಕಲ್ಪಿಸಿರಲಿಲ್ಲ. ಒಂಭತ್ತು ಕೋಟಿ ಜನರನ್ನು ಕೇಳುವವರೇ ಇರಲಿಲ್ಲ. ಸಂಸ್ಥಾನಗಳ ನಿರಂಕುಶ ಅರಸರಿಗೆ ಪ್ರಜಾ ಸಂಖ್ಯೆಗೆ ಅನುಗುಣವಾಗಿ ತಮ್ಮ ಪ್ರತಿನಿಧಿಗಳನ್ನು ನಾಮಕರಣ ಮಾಡಲು ಅಧಿಕಾರ ಕೊಡಲಾಗಿತ್ತು. ಆಡಳಿತ ಅನುಭವ ಪಡೆದ ದಕ್ಷರಾದ ದಿವಾನರು ಕೆಲವರು ಅವರಲ್ಲಿ ಬರಬಹುದು. ಆದರೆ ಅವರೆಲ್ಲ ನಿರಂಕುಶ ಪಾಳೆಗಾರಿಕೆಯ ರಾಜರುಗಳ ಪ್ರತಿನಿಧಿಗಳೇ ಹೊರತು ಜನರ ಪ್ರತಿನಿಧಿಗಳಲ್ಲ. ಸಂವಿಧಾನ ಸಭೆಯ ಸದಸ್ಯ ಸಂಖ್ಯೆಯ ಕಾಲುಭಾಗವು ಸಂಖ್ಯಾಬಲದಿಂದ, ಪ್ರತಿಗಾಮಿ ಸಾಮಾಜಿಕ ದೃಷ್ಟಿಯಿಂದ ಮತ್ತು ಮುಂದೆ ಎಂದಾದರೂ ಹೊರಬೀಳಬಹುದೆಂಬ ಭಯದಿಂದ ಪ್ರಬಲ ಪರಿಣಾಮ ಮಾಡಲು ಅವಕಾಶವಿತ್ತು. ಸಂವಿಧಾನ ಸಭೆ ಚುನಾಯಿತ ಮತ್ತು ನಾಮಕರಣ ಸದಸ್ಯರ ಒಂದು ವಿಚಿತ್ರ ಕಲಸು ಮೇಲೋಗರವಾಗುತ್ತಿತ್ತು. ಚುನಾವಣೆ ಎಲ್ಲ ಪ್ರತ್ಯೇಕ ಚುನಾವಣಾ ಪದ್ಧತಿಯಿಂದ ಮತ್ತು ಕೆಲವು ಪಟ್ಟಾಧಿಕಾರಿಗಳಿಂದ, ನಾಮಕರಣವೆಲ್ಲ ಸಂಸ್ಥಾನಗಳ ಅರಸರಿಂದ. ಇದರ ಜೊತೆಗೆ ಒಮ್ಮತದಿಂದ ಮಾಡಿದ ತೀರ್ಮಾನವನ್ನು ಒಪ್ಪಲೇ ಬೇಕೆಂದು ಒತ್ತಾಯಪಡಿಸುವಂತೆ ಇರಲಿಲ್ಲ. ಒಮ್ಮತದ ಅಂತಿಮ ನಿರ್ಧಾರವಾಯಿತು ಎಂಬ ಮನೋತೃಪ್ತಿಗೆ ಅವಕಾಶವೇ ಇರಲಿಲ್ಲ. ಯಾವಾಗ ಬೇಕಾದರೂ ಹೊರ ಬೀಳಲು ಅವಕಾಶವಿದ್ದುದರಿಂದ, ತೀರ್ಮಾನ ಆಚರಣೆಗೆ ತರಲು ಯಾವ ನಿರ್ಬಂಧವೂ ಇಲ್ಲದ್ದರಿಂದ, ಸದಸ್ಯರನೇಕರು ಬೇಜವಾಬ್ದಾರಿಯಿಂದ ವರ್ತಿಸಲು ಆಸ್ಪದವಿತ್ತು.

ಭಾರತವನ್ನು ಬೇರೆ ಬೇರೆ ತುಂಡುಮಾಡುವ ಯಾವ ಸಲಹೆ ಎಂದರೂ ಯೋಚಿಸಲು ಬಹು ಸಂಕಟವಾಗುತ್ತಿತ್ತು. ಇದುವರೆಗೆ ಅದ್ಭುತ ಪರಿಣಾಮ ಮಾಡಿ ಜನಹೃದಯ ಸೂರೆಗೊಂಡಿದ್ದ ನಮ್ಮ ಎಲ್ಲ ಭಾವನೆ ಮತ್ತು ಸಂಕಲ್ಪಗಳಿಗೆ ಅದು ವಿರುದ್ಧವಿತ್ತು. ಭಾರತ ರಾಷ್ಟ್ರೀಯ ಚಳುವಳಿಯನ್ನು ಕಟ್ಟಿದ್ದು ಸಂಪೂರ್ಣ ಭಾರತದ ಐಕ್ಯತೆಯ ತಳಹದಿಯ ಮೇಲೆ. ಆದರೆ ಆ ಐಕ್ಯಭಾವನೆ ಈಗಿನ ರಾಷ್ಟ್ರೀಯ ಭಾವನೆಗಿಂತ ತುಂಬ ಪುರಾತನವಾದುದು ಮತ್ತು ಆಳವಾದುದು. ಭಾರತೀಯ ಇತಿಹಾಸದ ಮುಂಬೆಳ ಗಿನ ದಿನಗಳಿಂದ ಆ ಭಾವನೆ ಇದೆ. ಆ ಭಾವನೆ ಮತ್ತು ನಂಬಿಕೆಗಳಿಗೆ ಈಚಿನ ಘಟನೆಗಳ ಸಮರ್ಥನೆ ದೊರತಿದೆ ಮತ್ತು ಅನೇಕರಿಗೆ ಒಂದು ಜೀವನ ತತ್ವವಾಗಿ ಬಿಟ್ಟಿದೆ. ಅವರ ನಿಲುವಿನಿಂದ ಕದಲಿಸು ವಂತೆಯೂ ಇಲ್ಲ; ಅವರನ್ನು ಪ್ರಶ್ನಿಸುವಂತೆಯೂ ಇಲ್ಲ. ಮುಸ್ಲಿಂ ಲೀಗ್‌ನಿಂದ ಆ ಒಂದು ಸವಾಲು ಬಂದಿತ್ತು; ಆದರೆ ಯಾರೂ ಅದನ್ನು ವಿಶೇಷ ಮನಸ್ಸಿಗೆ ಹಚ್ಚಿಕೊಳ್ಳಲಿಲ್ಲ. ಅನೇಕ ಮುಸ್ಲಿಮರು ಸಹ ಆ ಸಲಹೆ ವಿರೋಧಿಸಿದರು. ರಾಷ್ಟ್ರ ವಿಭಜನೆಯಾಗಬೇಕೆಂದು ಅಸ್ಪಷ್ಟ ಹೇಳಿದರೂ, ಆ ಸಲಹೆಯ ಮೂಲ ರಾಷ್ಟ್ರ ವಿಭಜನೆಯಲ್ಲ; ಧರ್ಮ ಭಿನ್ನತೆಯಿಂದ ಬೇರೆ ಬೇರೆ ಜನಾಂಗಗಳು ಎಂಬ ಮಧ್ಯಯುಗದ ಭಾವನೆಯೇ ಅದರ ತಳಹದಿಯಾಗಿತ್ತು. ಆದ್ದರಿಂದ ಭಾರತದ ಪ್ರತಿಯೊಂದು ಹಳ್ಳಿಯಲ್ಲೂ ಎರಡು ಮೂರು ಜನಾಂಗಗಳಾಗಬೇಕಾಯಿತು. ಭಾರತ ವಿಭಜನೆಯಾದರೂ ದೇಶಾದ್ಯಂತ ಹರಡಿ ಹೆಣೆದುಕೊಂಡಿದ್ದ ಈ ಧರ್ಮ ಭಿನ್ನತೆಯನ್ನು ನಾಶಮಾಡಲು ಸಾಧ್ಯವಿರಲಿಲ್ಲ. ಯಾವ ಸಮಸ್ಯೆಯ ಪರಿಹಾರಕ್ಕೆಂದು ವಿಭಜನೆ ಸೂಚಿಸಲಾಗಿತ್ತೋ ಆ ಸಮಸ್ಯೆ ಇನ್ನೂ ಕಠಿನವೂ, ಜಟಿಲವೂ ಆಗುವಂತೆ ಇತ್ತು.

ಕೇವಲ ಭಾವನಾತಿರೇಕ ಮಾತ್ರವಲ್ಲದೆ ವಿಭಜನಾ ಸಲಹೆ ವಿರೋಧಿಸಲು ಇತರ ಪ್ರಬಲ ಕಾರಣಗಳೂ ಇದ್ದವು. ಮುಖ್ಯವಾಗಿ ಬ್ರಿಟಿಷ್ ಸರಕಾರದ ಆಡಳಿತ ನೀತಿಯ ಫಲವಾಗಿ ಭಾರತದ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿ ವಿಷಮಾವಸ್ಥೆ ಮುಟ್ಟಿತ್ತು; ಅತಿ ಶೀಘ್ರದಲ್ಲಿ ಸರ್ವತೋಮುಖ ಪ್ರಗತಿ ಸಾಧಿಸದಿದ್ದರೆ ಭಯಂಕರ ಪರಿಣಾಮಗಳು ಕಾದಿದ್ದವು. ಭಾರತದ ವಿವಿಧ ಭಾಗಗಳು ಒಂದರ ಕೊರತೆಯನ್ನೊಂದು ನಿವಾರಿಸುತ್ತಿದ್ದುದರಿಂದ ಆ ಪ್ರಗತಿ ಸಾಧನೆಗಾಗಿ ಸಮಗ್ರ ಭಾರತಕ್ಕೆ ಒಂದು ಯೋಜನೆಯ