ಪುಟ:ಹಳ್ಳಿಯ ಚಿತ್ರಗಳು.djvu/೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನಮ್ಮ ಜೋಡಿದಾರರ ಕೆಲವು ಚಿತ್ರಗಳು

೪೯

ಮೂಲಕ ಹೊರಕ್ಕೆ ತೋರುತ್ತಿದ್ದಿತು. ಹಿತ್ತಲು ಬಾಗಲೂ ತೆರೆಯಿತು. ಎಲ್ಲರಿಗಿಂತಲೂ ಮುಂಚೆ ಅವನ ಕಣ್ಣಿಗೆ ಬಿದ್ದವರು ಅವನ ತಂದೆ.

ಇವನನ್ನು ಈ ಅವಸ್ಥೆಯಲ್ಲಿ ಕಂಡು ಅವರ ತಂದೆಗೆ ಬಹಳ ನಗು ಬಂದಿತು. ಉಳಿದವರೆಲ್ಲಾ ಘೊಳ್ಳೆಂದು ನಕ್ಕುಬಿಟ್ಟರು. ಜೋಡಿದಾರನಿಗೆ ಮಾತ್ರ ಪ್ರಾಣವೇ ಹೋದಂತಾಯಿತು. ತನ್ನ ಅವಸ್ಥೆಯನ್ನು ನೋಡಿ ಅವರು ನಕ್ಕುದು ಇವನಿಗೆ ಸಹಿಸಲಿಲ್ಲ. ಮನಸ್ಸಿನಲ್ಲಿ “ಪಾಪಿಗಳಿರಾ ನಿಮ್ಮನ್ನು ಶಿಕ್ಷಿಸುವ ದೇವರೇ ಇಲ್ಲವೆ?" ಎಂದುಕೊಂಡನು.

ಬೇರೆ ಬಟ್ಟೆಯನ್ನು ಹಾಕಿಕೊಂಡುದಾಯಿತು. ಸರಿ ವಿಚಾರಣೆ. ತಮ್ಮ ತಂದೆಯವರೊಬ್ಬರೇ ವಿಚಾರಣೆ ಮಾಡಿದ್ದರೆ ನಮ್ಮ ನಾಯಕನಿಗೆ ದುಃಖ ವಿರುತ್ತಿರಲಿಲ್ಲ; ಆದರೆ ಊರಿಗೆ ಊರೇ ಸೇರಿಬಿಟ್ಟಿತ್ತು. ಭಾಷ್ಯಕಾರರೆಂದು ತನ್ನನ್ನು ಮಧ್ಯಾಹ್ನ ಗೌರವಿಸಿದವರೆಲ್ಲಾ ಈಗಿನ ತನ್ನ ಈ ಅವಸ್ಥೆಯನ್ನು ನೋಡುವರಲ್ಲಾ? ಎಂದು ಅವನಿಗೆ ದುಃಖವುಂಟಾಯಿತು. ಆದರೆ ವಿಧಿಯಿರಲಿಲ್ಲ. ಬಂದದ್ದನ್ನು ಅನುಭವಿಸಲೇಬೇಕಾಗಿತ್ತು. ತನಗೆ ಅವಮಾನ ಮಾಡಲು ಪ್ರಪಂಚವೆಲ್ಲಾ ಒಂದಾಗಿರುವುದೆಂದು ಅವನು ಭಾವಿಸಿದನು.

ಅವರ ತಂದೆಯವರು ನಿನಗೆ ನೀರಿನ ಬರ ಹಿಡಿದಿದೆ. ನಿನ್ನ ಜುಟ್ಟನ್ನು ಹಿಡಿದುಕೊಂಡು ನೀರಿನೊಳಗೆ ಉಸಿರು ಕಟ್ಟುವವರೆಗೆ ಮುಳುಗಿಸಿಬಿಡುತ್ತೇನೆ" ಎಂದರು. ನಮ್ಮ ನಾಯಕನಿಗೆ ನೀರು ಎಂದ ಕೂಡಲೇ ಬಾಯಲ್ಲಿ ನೀರೊಡೆಯಿತು. ಅವನು ಧೈರದಿಂದ “ಅಷ್ಟು ಮಾಡಿದರೆ ಸಾಕು. ನಾನು ಕದ್ದು ಈಜೋದೆ ತಪ್ಪುತ್ತೆ. ಬೇಕಾದಷ್ಟು ಹೊತ್ತು ನೀರಿನಲ್ಲಿ ಮುಳುಗಿಸಿ. ಅನಂತರ ಮೇಲಕ್ಕೆ ಬರುತ್ತೇನೆ” ಎಂದನು.

ಜೋಡಿದಾರರು ಹೊಡೆಯಬೇಕೆಂದು ಎತ್ತಿದ್ದ ಕೈಯಿನ ಬೆತ್ತವನ್ನು ಕೆಳಕ್ಕೆ ಹಾಕಿಬಿಟ್ಟರು. ಪೋಪ್ ಎಂಬ ಪಾಶ್ಚಾತ್ಯ ಕವಿಯು ಕವಿತೆಗಳನ್ನು ಮಾಡಿ ಮಾಡಿ ತನ್ನ ಬಾಲ್ಯದಲ್ಲಿಯೇ ಅವನ ತಂದೆಗೆ ಬೇಸರಿಕೆಯನ್ನು ಹತ್ತಿಸಿಬಿಟ್ಟನಂತೆ. ಅವನ ತಂದೆಯು ಒಂದು ದಿವಸ ಕೋಪದಿಂದ, ಬೆತ್ತವನ್ನು ಹಿಡಿದುಕೊಂಡು ನಿನ್ನ ಕವಿತೆಗಳಿಗೆ ಇದೇ ಬಹುಮಾನ ಎಂದು ಹೊಡೆಯುವುದಕ್ಕೆ ಹೋದರಂತೆ. ಪೋಪನು ದೈನ್ಯದಿಂದ,