ವಿಷಯಕ್ಕೆ ಹೋಗು

ಪುಟ:ಯಕ್ಷ ಪ್ರಭಾಕರ.pdf/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಜಬ್ಬಾರ್ ಸಮೋ ಸಂಪಾಜೆ ಯಕ್ಷಗಾನ ಅರ್ಥಧಾರಿ
ಜಬ್ಬಾರ್ ಸಮೋ ಸಂಪಾಜೆ
ಯಕ್ಷಗಾನ ಅರ್ಥಧಾರಿ

ಬದುಕೆಂಬ ರಂಗಭೂಮಿಯ 'ಬಹು ಕುತೂಹಲಿ'

ಸಾಂಸ್ಕೃತಿಕ ವಲಯದ ಬಹುಮುಖೀ ಚಿಂತಕ ಪ್ರತಿಭೆ; ಅಧ್ಯಯನ-ಅಧ್ಯಾಪನ-ಒರಹ-ಬರೆಹಗಳ ಸದೃಢ ಸಹಚರ್ಯೆಯಿಂದ ಮುಪ್ಪುರಿಗೊಂಡ ಅಪರೂಪದ ವ್ಯಕ್ತಿತ್ವ: ಬಹು ವಿಷಯಗಳ ತಿಳುವಳಿಕೆಯಿಂದ ಪರಿಪಾಕಿತಗೊಂಡು ವಿದ್ವಾಂಸ ವಲಯದಲ್ಲಿ ಬಹುಮಾನಿತ ಮಾಹಿತಿ-ಮೂಲ; ಹೀರಿಕೆ ಮತ್ತು ಹಟವಾದಿ ಸ್ವಭಾವವನ್ನು ಹಿಂದಿಕ್ಕಿ ಮೆರೆಯುವ ವಿನಿಮಯ ಮನೋಧರ್ಮ; ಯಕ್ಷಗಾನದ ಸಾಹಿತ್ಯ ಮತ್ತು ರಂಗಭೂಮಿ ಸ್ವರೂಪಗಳೆರಡರ ಸ್ಪಷ್ಟ ಅರಿವಿರುವ, ಸಂಪನ್ಮೂಲ; ಹಳೆ-ನಡು-ಆಧುನಿಕ ಅರ್ಥಧಾರಿಗಳ ಜೊತೆಗೆ ಅರ್ಥಹೇಳಿ, ಅನುಭವ ಹರಡಿ, ಇಂದಿಗೂ ಪ್ರಸ್ತುತರಾದ ಮೂರು ಕಾಲಘಟ್ಟಗಳ ವಿಭಿನ್ನ ಮನೋಧರ್ಮಗಳ ನಡುವ ಸಂಧಿ ಸರಪಣಿಯ ಗಟ್ಟಿ ಗೊಣಸು; ಸುಪ್ರಸಿದ್ಧ ಯಕ್ಷಗಾನ ಪ್ರಸಂಗ 'ಶ್ರೀ ಕೃಷ್ಣ ಸಂಧಾನ'ದ ಪ್ರಬುದ್ಧ ಅಧ್ಯಯನದಿಂದ, ಹೊಸ ವಿವೇಚನಾ ಕ್ರಮದಿಂದ ಸುಪುಷ್ಟ ಹೊಳಹುಗಳನ್ನು ಗ್ರಹಿಸಿ, ಸಂಕಲಿಸಿ, ಕೃತಿ ರೂಪದಿಂದ ಪ್ರಕಾಶಿಸಿ 'ಡಾಕ್ಟರೇಟ್ ಪದವಿ' ಪಡೆದು ಸಮಗ್ರ ಯಕ್ಷಗಾನ ರಂಗಭೂಮಿಗೆ ಕೀರ್ತಿ ತಂದಿರುವ ಮಹಾನುಭಾವ; ತಾವೇ ಆನಂದಿಸಿ, ಒಪ್ಪಿ, ಘೋಷಿಸಿಕೊಂಡಂತೆ ಹೊರೆ-ಹೊರಳು- ಹೋರಾಟಗಳಾಗಿ ವಿಸ್ತರಿಸಿಕೊಂಡಿರುವ ಬದುಕೆಂಬ ರಂಗಭೂಮಿಯ 'ಬಹು ಕುತೂಹಲಿ' ಎನಿಸಿ ಕೊಂಡಿರುವ ಡಾ. ಎಂ. ಪ್ರಭಾಕರ ಜೋಶಿ ನನ್ನ ಮಟ್ಟಿಗೆ ಈಗ ಏನೆಲ್ಲ-ಏನಲ್ಲ'! ಯಕ್ಷಗಾನ ಕಲಾ ಪ್ರಪಂಚದ ಕಾರ್ಪಣ್ಯಗಳನ್ನು ಸ್ವಯಂ ಅರಿವಿನಿಂದ ಗ್ರಹಿಸಿ, ಸಂಕಟಗ್ರಸ್ತ ಕಲಾವಿದರ ನೊಂದ ಬಾಳಿಗೆ ಭರವಸೆ-ಉತ್ಸಾಹ- ಆಸರೆಗಳ ವಿಶ್ವಾಸದುಸಿರು ತುಂಬುವ ಶ್ರೀ ಪಟ್ಲ ಸತೀಶ ಶೆಟ್ಟಿಯವರ ನಿಡುಗಾಲದ ಕನಸು ಈಡೇರಿ ಸಾರ್ಥಕಗೊಂಡು ರೂಪದಳೆದ ಯಕ್ಷಧ್ರುವ ಪಟ್ಲ ಫೌಂಡೇಶನ್ (ರಿ) ಮಂಗಳೂರು ಸಂಸ್ಥೆಯ 2019ರ ಸಾಲಿನ ಪ್ರತಿಷ್ಠಿತ 'ಪಟ್ಲ ಪ್ರಶಸ್ತಿಗೆ ಡಾ. ಎಂ. ಪ್ರಭಾಕರ ಜೋಶಿಯವರು ಸರ್ವಮಾನ್ಯ ಸಾರ್ಥಕ ಆಯ್ಕೆ.28 / ಯಕ್ಷ ಪ್ರಭಾಕರ