ಹರಿಕಥಾಮೃತಸಾರ/ಬಿಂಬಾಪರೋಕ್ಷ ಸಂಧಿ (ಬಿಂಬೋಪಾಸನ; ಬಿಂಬಪ್ರಕರಣ; ಬಿಂಬಪ್ರತಿಬಿಂಬ)

ವಿಕಿಸೋರ್ಸ್ದಿಂದ

ಮುಕ್ತ ಬಿಂಬನು ತುರಿಯ ಜೀವನ್ಮುಕ್ತ ಬಿಂಬನು ವಿಶ್ವ

ಶ್ರುತಿ ಸಂಸಕ್ತ ಬಿಂಬನು ತೈಜಸನು ಅಸೃಜ್ಯರಿಗೆ ಪ್ರಾಜ್ಞ

ಶಕ್ತನಾದರು ಸರಿಯೆ ಸರ್ವ ಉದ್ರಕ್ತ ಮಹಿಮನು

ದುಃಖ ಸುಖಗಳ ವಕ್ತೃ ಮಾಡುತಲಿಪ್ಪ ಕಲ್ಪಾಂತದಲಿ ಬಪ್ಪರಿಗೆ//1//


ಅಣ್ಣ ನಾಮಕ ಪ್ರಕೃತಿಯೊಳಗೆ ಅಚ್ಚಿನ್ನನು ಆಗಿಹ ಪ್ರಾಜ್ಞನಾಮದಿ

ಸೊನ್ನ ಒಡಲ ಮೊದಲಾದ ಅವರೊಳು ಅನ್ನಾದ ತೈಜಸನು

ಅನ್ನದ ಅಂಬುದ ನಾಭ ವಿಶ್ವನು ಭಿನ್ನ ನಾಮ ಕ್ರಿಯೆಗಳಿಂದಲಿ

ತನ್ನೊಳಗೆ ತಾ ರಮಿಪ ಪೂರ್ಣಾನಂದ ಜ್ಞಾನಮಯ//2//


ಬೂದಿಯೊಳಗೆ ಅಡಗಿಪ್ಪ ಅನಳನ ಉಪಾದಿ ಚೇತನ ಪ್ರಕೃತಿಯೊಳು

ಅನ್ನಾದ ಅನ್ನಾಹ್ವಯದಿ ಕರೆಸುವ ಬ್ರಹ್ಮ ಶಿವ ರೂಪಿ

ಓದನ ಪ್ರದ ವಿಷ್ಣು ಪರಮ ಆಹ್ಲಾದವ ಈವುತ

ತೃಪ್ತಿ ಬಡಿಸುವ ಅಗಾಧ ಮಹಿಮನ ಚಿತ್ರ ಕರ್ಮವನು ಆವ ಬಣ್ಣಿಸುವ//3//


ನಾದ ಭೋಜನ ಶಬ್ದದೊಳು ಬಿಂಬು ಓದನ ಉದಕದೊಳಗೆ

ಘೋಷ ಅನುವಾದದೊಳು ಶಾಂತಾಖ್ಯ ಜಠರಾಗ್ನಿಯೊಳಗೆ ಇರುತಿಪ್ಪ

ವೈದಿಕ ಸುಶಬ್ದದೊಳು ಪುತ್ರ ಸಹೋದರ ಅನುಗರೊಳು ಅತಿ ಶಾಂತನ ಪಾದ ಕಮಲ

ಅನವರತ ಚಿಂತಿಸು ಈ ಪರಿಯಲಿಂದ//4//


ವೇದ ಮಾನಿ ರಮಾ ಅನುಪಾಸ್ಯ ಗುಣ ಉದಧಿ ಗುಣ ತ್ರಯ ವಿವರ್ಜಿತ

ಸ್ವೋದರಸ್ಥಿತ ನಿಖಿಳ ಬ್ರಹ್ಮಾಂಡ ಆದಿ ವಿಲಕ್ಷಣನು

ಸಾಧು ಸಮ್ಮತವೆನಿಸುತಿಹ ನಿಷುಸೀದ ಗಣಪತಿಯೆಂಬ ಶ್ರುತಿ ಪ್ರತಿಪಾದಿಸುವುದು

ಅನವರತ ಅವನ ಗುಣ ಪ್ರಾಂತ ಗಾಣದಲೆ//5//


ಕರೆಸುವನು ಮಾಯಾ ರಮಣ ತಾ ಪುರುಷ ರೂಪದಿ ತ್ರಿಸ್ಥಳಗಳೊಳು

ಪರಮ ಸತ್ಪುರುಷಾರ್ಥದ ಮಹತ್ತತ್ವದೊಳಗಿದ್ದು

ಸರಸಿಜ ಭವಾಂಡ ಸ್ಥಿತ ಸ್ತ್ರೀ ಪುರುಷ ತನ್ಮಾತ್ರಗಳ

ಏಕೋತ್ತರ ದಶ ಇಂದ್ರಿಯಗಳ ಮಹಾ ಭೂತಗಳ ನಿರ್ಮಿಸಿದ//6//


ಈ ಶರೀರಗ ಪುರುಷ ತ್ರಿ ಗುಣದಿ ಸ್ತ್ರೀ ಸಹಿತ ತಾನಿದ್ದು

ಜೀವರಿಗೆ ಆಶೆ ಲೋಭ ಅಜ್ಞಾನ ಮದ ಮತ್ಸರ ಕುಮೋಹ ಕ್ಷುಧ

ಹಾಸ ಹರ್ಷ ಸುಷುಪ್ತಿ ಸ್ವಪ್ನ ಪಿಪಾಸ ಜಾಗ್ರತಿ ಜನ್ಮ ಸ್ಥಿತಿ ಮೃತಿ

ದೋಷ ಪುಣ್ಯ ಜಯಾಪಜಯ ದ್ವಂದ್ವಗಳ ಕಲ್ಪಿಸಿದ//7//


ತ್ರಿವಿಧ ಗುಣಮಯ ದೇಹ ಜೀವಕೆ ಕವಚದಂದದಿ ತೊಡಿಸಿ

ಕರ್ಮ ಪ್ರವಹದೊಳು ಸಂಚಾರ ಮಾಡಿಸುತಿಪ್ಪ ಜೇವರನಾ

ಕವಿಸಿ ಮಾಯಾರಮಣ ಮೋಹವ ಭವಕೆ ಕಾರಣನಾಗುವನು

ಸಂಶ್ರವಣ ಮನನವ ಮಾಳ್ಪರಿಗೆ ಮೋಚಕನು ಎನಿಸುತಿಪ್ಪ//8//


ಸಾಶನಾಹ್ವಯ ಸ್ತ್ರೀ ಪುರುಷರೊಳು ವಾಸವಾಗಿಹನು ಎಂದರಿದು

ವಿಶ್ವಾಸಪೂರ್ವಕ ಭಜಿಸಿ ತೋಷಿಸು ಸ್ವಾವರೋತ್ತಮರ

ಕ್ಲೇಶ ನಾಶನ ಅಚಲಗಳೊಳು ಪ್ರಕಾಶಿಸುತಲಿಹ

ಅನಶನ ರೂಪ ಉಪಾಸನವ ಮಾಳ್ಪರಿಗೆ ತೋರ್ಪನು ತನ್ನ ನಿಜರೂಪ//9//


ಪ್ರಕಾರಾಂತರ ಚಿಂತಿಸುವುದು ಈ ಪ್ರಕೃತಿಯೊಳು ವಿಶ್ವಾದಿ ರೂಪವ

ಪ್ರಕಟ ಮಾಳ್ಪೆನು ಯಥಾ ಮತಿಯೊಳು ಗುರುಕೃಪಾಬಲದಿ

ಮುಕುರ ನಿರ್ಮಿತ ಸದನದೊಳು ಪೊಗೆ ಸ್ವಕೀಯ ರೂಪವ ಕಾಂಬ ತೆರದಂತೆ

ಅಕುಟಿಲಾತ್ಮ ಚರಾಚರದಿ ಸರ್ವತ್ರ ತೋರುವನು//10//


ಪರಿಚ್ಛೇದ ತ್ರಯ ಪ್ರಕೃತಿಯೊಳಗೆ ಇರುತಿಹನು ವಿಶ್ವಾದಿ ರೂಪಕ

ಧರಿಸಿ ಆತ್ಮಾದಿ ತ್ರಿ ರೂಪವ ಈಷಣತ್ರಯದಿ

ಸುರುಚಿ ಜ್ಞಾನಾತ್ಮ ಸ್ವರೂಪದಿ ತುರಿಯ ನಾಮಕ ವಾಸುದೇವನ ಸ್ಮರಿಸು

ಮುಕ್ತಿ ಸುಖ ಪ್ರದಾಯಕನು ಈತನಹುದೆಂದು//11//


ಕಮಲಸಂಭವ ಜನಕ ಜಡ ಜಂಗಮರ ಒಳಗೆ ನೆಲೆಸಿದ್ದು

ಕ್ರಮ ವ್ಯುತ್ಕ್ರಮದಿ ಕರ್ಮವ ಮಾಡಿ ಮಾಡಿಸುತಿಪ್ಪ ಬೇಸರದೆ

ಕ್ಷಮ ಕ್ಷಾಮ ಕ್ಷಮೀಹನಾಹ್ವಯ ಸುಮನಸ ಅಸುರರೊಳಗೆ

ಅಹಂ ಮಮನಮಮ ಎಂದು ಈ ಉಪಾಸನೆ ಏವ ಪ್ರಾಂತದಲಿ//12//


ಈ ಸಮಸ್ತ ಜಗತ್ತು ಈಶಾವ್ಯಾಸವು ಎನಿಪುದು

ಕಾರ್ಯ ರೂಪವು ನಾಶವಾದರು ನಿತ್ಯವೇ ಸರಿ ಕಾರಣ ಪ್ರಕೃತಿ

ಶ್ರೀಶಗೆ ಜಡ ಪ್ರತಿಮೆಯೆನಿಪುದು ಮಾಸದು ಒಮ್ಮಿಗು ಸನ್ನಿಧಾನವು

ವಾಸವಾಗಿಹ ನಿತ್ಯ ಶಾಲಗ್ರಾಮದ ಉಪಾದಿ//13//


ಏಕಮೇವಾದ್ವಿತೀಯ ರೂಪ ಅನೇಕ ಜೀವರೊಳಿದ್ದು

ತಾ ಪ್ರತ್ಯೇಕ ಕರ್ಮವ ಮಾಡಿ ಮೋಹಿಸುತಿಪ್ಪ ತಿಳಿಸದಲೆ

ಮೂಕ ಬಧಿರ ಅಂಧಾದಿ ನಾಮಕ ಈ ಕಳೇವರದೊಳಗೆ ಕರೆಸುವ

ಮಾಕಳತ್ರನ ಲೌಕಿಕ ಮಹಾ ಮಹಿಮೆಗೆ ಏನೆಂಬೆ//14//


ಲೋಕ ಬಂಧು ಲೋಕನಾಥ ವಿಶೋಕ ಭಕ್ತರ ಶೋಕ ನಾಶನ

ಶ್ರೀ ಕರಾರ್ಚಿತ ಸೋಕದಂದದಲಿಪ್ಪ ಸರ್ವರೊಳು

ಸಾಕುವನು ಸಜ್ಜನರ ಪರಮ ಕೃಪಾಕರ ಈಶ ಪಿನಾಕಿ ಸನ್ನುತ

ಸ್ವೀಕರಿಸುವ ಅನತರು ಕೊಟ್ಟ ಸಮಸ್ತ ಕರ್ಮಗಳ//15//


ಅಹಿತ ಪ್ರತಿಮೆಗಳು ಎನಿಸುವವು ದೇಹ ಗೇಹ ಅಪತ್ಯ ಸತಿ ಧನ

ಲೋಹ ಕಾಷ್ಠ ಶಿಲಾಮೃದ್ ಆತ್ಮಕವು ಆದ ದ್ರವ್ಯಗಳು

ನೇಹ್ಯದಲಿ ಪರಮಾತ್ಮ ಎನಗೆ ಇತ್ತೀಹನು ಎಂದರಿದು ಅನುದಿನದಿ

ಸಮ್ಮೋಹಕೆ ಒಳಗಾಗದಲೆ ಪೂಜಿಸು ಸರ್ವ ನಾಮಕನ//16//


ಶ್ರೀ ತರುಣಿ ವಲ್ಲಭಗೆ ಜೀವರು ಚೇತನ ಪ್ರತಿಮೆಗಳು

ಓತಪ್ರೋತನಾಗಿದ್ದು ಎಲ್ಲರೊಳು ವ್ಯಾಪಾರ ಮಾಡುತಿಹ

ಹೋತ ಸರ್ವ ಇಂದ್ರಿಯಗಳೊಳು ಸಂಪ್ರೀತಿಯಿಂದ ಉಂಡುಣಿಸಿ ವಿಷಯ

ನಿರ್ವಾತ ದೇಶಗ ದೀಪದಿಂದಲಿಪ್ಪ ನಿರ್ಭಯದಿ//17//


ಭೂತ ಸೋಕಿದ ಮಾನವನು ಬಹು ಮಾತನಾಡುವ ತೆರದಿ

ಮಹಾ ಭೂತ ವಿಷ್ಣ್ವಾವೇಷದಿಂದಲಿ ವರ್ತಿಪುದು ಜಗವು

ಕೈತವೋಕ್ತಿಗಳಲ್ಲ ಶೇಷ ಫಣಾತ ಪತ್ರಗೆ

ಜೀವ ಪಂಚಕ ವ್ರಾತವೆಂದಿಗು ಭಿನ್ನ ಪಾದಾಹ್ವಯದಿ ಕರೆಸುವುದು//18//


ದಿವಿಯೊಳಿಪ್ಪವು ಮೂರು ಪಾದಗಳು ಅವನಿಯೊಳಗಿಹುದೊಂದು

ಈ ವಿಧ ಕವಿಭಿರೀಡಿತ ಕರೆಸುವ ಚತುಷ್ಪಾತು ತಾನೆಂದು

ಇವನ ಪಾದ ಚತುಷ್ಟಯಗಳ ಅನುಭವಕೆ ತಂದು ನಿರಂತರದಿ

ಉದ್ಧವನ ಸಖ ಸರ್ವಾಂತರಾತ್ಮಕನು ಎಂದು ಸ್ಮರಿಸುತಿರು//19//


ವಂಶ ಬಾಗಿಲು ಬೆಳೆಯೆ ಕಂಡು ನರಾಂಶದಲಿ ಶೋಭಿಪುದು

ಬಾಗದ ವಂಶ ಪಾಶದಿ ಕಟ್ಟಿ ಏರುಪ ಡೊಂಬ ಮಸ್ತಕಕೆ

ಕಂಸ ಮರ್ದನ ದಾಸರಿಗೆ ನಿಸ್ಸಂಶಯದಿ ಎರಗದಲೆ

ನಾ ವಿದ್ವಾಂಸನು ಎಂದು ಅಹಂಕರಿಸೆ ಭವಗುಣದಿ ಬಂಧಿಸುವ//20//


ಜ್ಯೋತಿ ರೂಪಗೆ ಪ್ರತಿಮೆಗಳು ಸಾಂಕೇತಿಕ ಆರೋಪಿತ

ಸುಪೌರುಷ ಧಾತು ಸಪ್ತಕ ಧೈರ್ಯ ಶೌರ್ಯ ಔದಾರ್ಯ ಚಾತುರ್ಯ

ಮಾತು ಮಾನ ಮಹತ್ವ ಸಹನ ಸುನೀತಿ ನಿರ್ಮಲ ದೇಶ ಬ್ರಾಹ್ಮಣ

ಭೂತ ಪಂಚಕ ಬುದ್ಧಿ ಮೊದಲಾದ ಇಂದ್ರಿಯ ಸ್ಥಾನ//21//


ಜೀವ ರಾಶಿಯೊಳು ಅಮೃತ ಶಾಶ್ವತ ಸ್ಥಾವರಗಳೊಳು ಸ್ಥಾಣು ನಾಮಕ

ಆವಕಾಲದಲಿಪ್ಪ ಅಜಿತಾನಂತನು ಎಂದೆನಿಸಿ

ಗೋವಿದಾಂಪತಿ ಗಾಯನಪ್ರಿಯ ಸಾವಯವ ಸಹಸ್ರ ನಾಮ

ಪರಾವರೇಶ ಪವಿತ್ರಕರ್ಮ ವಿಪಶ್ಚಿತ ಸುಸಾಮ//22//


ಮಾಧವನ ಪೂಜಾರ್ಥವಾಗಿ ನಿಷೇಧ ಕರ್ಮವ ಮಾಡಿ

ಧನ ಸಂಪಾದಿಸಲು ಸತ್ಪುಣ್ಯ ಕರ್ಮಗಳು ಎನಿಸಿಕೊಳುತಿಹವು

ಸ್ವೋದರಂಭರಣಾರ್ಥ ನಿತ್ಯಡಿ ಸಾಧು ಕರ್ಮವ ಮಾಡಿದರು ಸರಿ

ಯೈದುವನು ದೇಹಾಂತರವ ಸಂದೇಹವು ಇನಿತಿಲ್ಲ//23//


ಅಪಗತಾಶ್ರಯ ಎಲ್ಲರೊಳಗಿದ್ದು ಉಪಮನು ಎನಿಪ ಅನುಪಮ ರೂಪನು

ಶಫರ ಕೇತನ ಜನಕ ಮೋಹಿಪ ಮೋಹಕನ ತೆರದಿ

ತಪನ ಕೋಟಿ ಸಮಪ್ರಭಾ ಸಿತವಪುವು ಎನಿಪ ಕೃಷ್ಣಾದಿ ರೂಪಕ

ವಿಪಗಳಂತೆ ಉಂಡುಣಿಪ ಸರ್ವತ್ರದಲಿ ನೆಲೆಸಿದ್ದು//24//


ಅಡವಿಯೊಳು ಬಿತ್ತದಲೆ ಬೆಳೆದಿಹ ಗಿಡದ ಮೂಲಿಕೆ

ಸಕಲ ಜೀವರ ಒಡಲೊಳಿಪ್ಪ ಆಮಯವ ಪರಿಹರಗೈಸುವಂದದಲಿ

ಜಡಜ ಸಂಭವ ಜನಕ ತ್ರಿಜಗದ್ವಡೆಯ ಸಂತೈಸೆನಲು

ಅವರು ಇದ್ದೆಡೆಗೆ ಬಂದೊದಗುವನು ಭಕ್ತರ ಭಿಡೆಯ ಮೀರದಲೆ//25//


ಶ್ರೀ ನಿಕೇತನ ತನ್ನವರ ದೇಹ ಅನುಬಂಧಿಗಳಂತೆ ಅವ್ಯವಧಾನದಲಿ ನೆಲೆಸಿಪ್ಪ

ಸರ್ವದ ಸಕಲ ಕಾಮದನು

ಕೊಟ್ಟರು ಭುಂಜಿಸುತ ಮದ್ದಾನೆಯಂದದಿ ಸಂಚರಿಸು

ಮತ್ತೇನು ಬೇಡದೆ ಭಜಿಸುತಿರು ಅವನ ಅಂಘ್ರಿ ಕಮಲಗಳ//26//


ಬೇಡದಲೆ ಕೊಡುತಿಪ್ಪ ಸುರರಿಗೆ ಬೇಡಿದರೆ ಕೊಡುತಿಹನು ನರರಿಗೆ

ಬೇಡಿ ಬಳಲುವ ದೈತ್ಯರಿಗೆ ಕೊಡನು ಒಮ್ಮೆ ಪುರುಷಾರ್ಥ

ಮೂಢರು ಅನುದಿನ ಧರ್ಮ ಕರ್ಮವ ಮಾಡಿದರು ಸರಿ

ಅಹಿಕ ಫಲಗಳ ನೀಡಿ ಉನ್ಮತ್ತರನು ಮಾಡಿ ಮಹಾ ನಿರಯವೀವ//27//


ತರಣಿ ಸರ್ವತ್ರದಲಿ ಕಿರಣವ ಹರಹಿ ತತ್ತದ್ ವಸ್ತುಗಳನು ಸರಿಸಿ

ಅದರ ಅದರಂತೆ ಛಾಯವ ಕಂಗೊಳಿಪ ತೆರದಿ

ಅರಿಧರ ಏಜಾನೇಜ ಜಗದೊಳಗಿರುವ ಛಾಯಾ ತಪವೆನಿಸಿ

ಸಂಕರುಷಣಾಹ್ವಯ ಅವರವರ ಯೋಗ್ಯತೆಗಳಂತೆ ಇಪ್ಪ//28//


ಈ ವಿಧದಿ ಸರ್ವತ್ರ ಲಕ್ಷ್ಮೀ ಭೂ ವನಿತೆಯರ ಕೂಡಿ

ತನ್ನ ಕಳಾ ವಿಶೇಷಗಳ ಎಲ್ಲ ಕಡೆಯಲಿ ತುಂಬಿ ಸೇವ್ಯತಮ

ಸೇವಕನು ತಾನೆನಿಸಿ ಮಾಯಾದೇವಿ ರಮಣ

ಪ್ರವಿಷ್ಟ ರೂಪವ ಸೇವೆ ಮಾಳ್ಪ ಶರಣ್ಯ ಶಾಶ್ವತ ಕರುಣಿ ಕಮಲಾಕ್ಷ//29//


ಪ್ರಣವ ಕಾರಣ ಕಾರ್ಯ ಪ್ರತಿಪಾದ್ಯನು ಪರಾತ್ಪರ

ಚೇತನಾಚೇತನ ವಿಲಕ್ಷಣ ಅನಂತ ಸತ್ಕಲ್ಯಾಣ ಗುಣಪೂರ್ಣ

ಅನುಪಮನು ಉಪಾಸಿತ ಗುಣ ಉದಧಿ ಅನಘ ಅಜಿತ ಅನಂತ

ನಿಷ್ಕಿಂಚನ ಜನಪ್ರಿಯ ನಿರ್ವಿಕಾರ ನಿರಾಶ್ರಯ ಅವ್ಯಕ್ತಾ//30//


ಗೋಪ ಭೀಯ ಭವಾಂಧಕಾರಕೆ ದೀಪವಟ್ಟಿಗೆ

ಸಕಲ ಸುಖ ಸದನ ಉಪರಿಗ್ರಹವು ಎನಿಸುತಿಪ್ಪುದು ಹರಿಕಥಾಮೃತವು

ಗೋಪತಿ ಜಗನ್ನಾಥ ವಿಠಲ ಸಮೀಪದಲಿ ನೆಲೆಸಿದ್ದು

ಭಕ್ತರನು ಆಪವರ್ಗರ ಮಾಡುವನು ಮಹ ದುಃಖ ಭಯದಿಂದ//31//