ಪುಟ:ಕರ್ನಾಟಕ ಗತವೈಭವ.djvu/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧ನೆಯ ಪ್ರಕರಣ -ಈ ಮೃತವಾದ ಕರ್ನಾಟಕದಿಂದೇನು?


ನೆಲಗೊಂಡಿರುವ ತಪ್ಪು ತಿಳುವಳಿಕೆಗಳು ಮಾಯವಾಗಲಿಕ್ಕೂ, ನಮ್ಮ ದೇಶದ ನಿಜವಾದ ಇತಿಹಾಸವನ್ನು ನಮ್ಮ ಜನರೇ ಅಭಿಮಾನ ಪೂರ್ವಕವಾಗಿ ಬರೆಯುವದು ರಾಷ್ಟ್ರದ ಪ್ರಗತಿಗೆ ಅತ್ಯಂತ ಅವಶ್ಯವಾದ ಸಂಗತಿಯಾಗಿದೆ.
ದರೆ ಈ ಕಾರ್ಯವು ಕೈಗೂಡುವದೆಂತು ! ಹಿಂದುಸ್ಥಾನವು ವಿಶಾಲವಾದ ದೇಶವಾಗಿದ್ದು, ಇದರಲ್ಲಿ ನಾನಾ ಜನಾಂಗಗಳು, ನಾನಾ ಧರ್ಮಗಳು, ನಾನಾ ಜಾತಿಗಳು ಸೇರಿರುತ್ತವೆ. ಹಿಂದುಸ್ಥಾನದ ಇತಿಹಾಸವೆಂದರೆ, ಇವೆಲ್ಲವುಗಳ ಒಟ್ಟುಗೂಡಿದ ಇತಿಹಾಸವು, ಆದುದರಿಂದ, ಈ ದೇಶದ ಇತಿಹಾಸವನ್ನು ಬರೆಯುವ ಕೆಲಸವು ಅತ್ಯಂತ ಕಠಿಣವಾಗಿದೆ. ಆದರೆ ಅವಶ್ಯವಿದ್ದಲ್ಲಿ, ರಾಷ್ಟ್ರವನ್ನು ಭಾಷಾತತ್ವದ ಮೇಲೆ ವಿಭಾಗಿಸಿ, ಆಯಾ ಭಾಷಾ ಪ್ರಾಂತದ ಜನರು ಗುಂಪಾಗಿ ಸೇರಿ, ತಮ್ಮ ತಮ್ಮ ಉನ್ನತಿಯನ್ನು ಮಾಡಿಕೊಳ್ಳುವದು ರಾಷ್ಟ್ರೀಯ ತತ್ವಕ್ಕೆ ಪೋಷಕವಾದ ಉಪಾಯವೆಂದೂ, ರಾಜ್ಯೋದ್ದಾರಕ್ಕೆ ಅನುಕೂಲವಾದ ಸಂಗತಿಯೆಂದೂ, ಬೇರೆ ವಿಧವಾಗಿ ಭೇದಗಳನ್ನು ಕಲ್ಪಿಸುವದಾಗಲಿ, ಇದಕ್ಕಿಂತ ಚಿಕ್ಕಚಿಕ್ಕ ವಿಭಾಗಗಳನ್ನು ಮಾಡುವದಾಗಲಿ, ಅನಾವಶ್ಯಕವೂ, ರಾಷ್ಟ್ರೀಯತ್ವಕ್ಕೆ ವಿಘಾತಕವೂ, ಆಗಿರುವದೆಂದೂ, ಇತ್ತಿತ್ತ ವಿಚಕ್ಷಣರಾದ ವಿದ್ವಾಂಸರು ಸಿದ್ಧಾಂತ ಪಡಿಸಿದ್ದಾರೆ. ಹಿಂದಕ್ಕೆ ಬಂಗಾಲವು ಇಬ್ಬಾಗವಾದಾಗ ನಮ್ಮ ವಂಗಬಂಧುಗಳು ಹುಯಿಲ(ಗದ್ದಲ)ನ್ನೆಬ್ಬಿಸಿದುದಕ್ಕೂ ಇದೇ ಕಾರಣವು, ಅಂಧ್ರರು (ತೆಲುಗು) ತಮಗೆ ಬೇರೊಂದು ಇಲಾಖೆಯೂ, ವಿಶ್ವವಿದ್ಯಾಲಯವೂ ಬೇಕೆಂದು ಕಳೆದ ನಾಲ್ಕಾರು ವರ್ಷಗಳಿಂದ ಕೂಗಿಕೊಳ್ಳುತ್ತಿರುವದರ ಗುಟ್ಟಾದರೂ ಅದೇ ಅಲ್ಲವೇ! ಮಹಾರಾಷ್ಟ್ರ ಬಂಧುಗಳು ವಾಙ್ಮಯದ ಅಭಿವೃದ್ಧಿಗಾಗಿಯೂ, ತಮ್ಮ ರಾಜಕೀಯ ಉನ್ನತಿಗಾಗಿಯೂ ಬೇರೆ ಪ್ರಾಂತಕ್ಕೆ ಸಂಬಂಧಪಟ್ಟವರಾಗಿದ್ದ ತನ್ನ ಭಾಷಾ ಬಂಧುಗಳನ್ನೊಡಗೂಡಿಯೇ ಕೆಲಸಮಾಡಲಿಕ್ಕೆ ಮುಂದು ಬೀಳುವದರ ಇಂಗಿತವೂ ಇದೇ, ಆದುದರಿಂದ, ಇದೇ ತತ್ವವನ್ನನುಸರಿಸಿ, ಬೇರೆ ಬೇರೆ ಭಾಷಾ ಪ್ರಾಂತಗಳ ಇತಿಹಾಸವು ಮೊದಲು ಬೇರೆ ಬೇರೆಯಾಗಿ ಬರೆಯಲ್ಪಡಬೇಕು. ಹೀಗೆ ಮಾಡಿದರೆ, ಬೇರೆ ಬೇರೆ ಪ್ರಾಂತಗಳೊಳಗಿನ ಜೀವಾಳದ ಎಳೆಯು ಒಂದೇ ಆಗಿರುವದರಿಂದ, ಹಿಂದೂ ದೇಶದ ಇತಿಹಾಸವನ್ನು ಬರೆಯುವ ಪ್ರಚಂಡ ಕಾರ್ಯವು ಅತಿಶಯವಾಗಿ ಸುಲಭವಾಗುವದೆಂದು ನಮ್ಮ ಧೃಡಾಭಿಪ್ರಾಯವು, ಯಾಕೆ೦