ಪುಟ:ಕರ್ನಾಟಕ ಗತವೈಭವ.djvu/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕರ್ನಾಟಕ ಗತವೈಭವ


ವನ್ನು ಹುಟ್ಟಿಸುವದೂ ಒಂದು ಮುಖ್ಯವಾದ ಉಪಾಯವಾಗಿದೆ. ಚಂದ್ರಗುಪ್ತ, ಅಶೋಕ, ಶಿವಾಜಿ ಮುಂತಾದ ಅರಸರ ಮಹಾ ಕಾರ್ಯಗಳನ್ನೂ, ರಾಜನೀತಿಯ ಚಾತುರ್ಯವನ್ನೂ ಕೇಳಿ ಯಾವ ಭಾರತೀಯನು ಪುಲಕಿತನಾಗಲಿಕ್ಕಿಲ್ಲ? ಬುದ್ಧ, ಶಂಕರ, ರಾಮಾನುಜ, ಮುಂತಾದ ಮಹಾತ್ಮರ ಪುಣ್ಯಚರಿತೆಗಳು ಯಾವ ಪಾಮರನ ಹೃದಯವನ್ನು ಪವಿತ್ರ ಮಾಡಲಿಕ್ಕಿಲ್ಲ! ಸಾರಾಂಶ:- ಭಾರತೀಯರಲ್ಲಿ ತಮ್ಮ ಪೂರ್ವಜರ ವಿಷಯವಾಗಿ ಅಭಿಮಾನವನ್ನು ಹುಟ್ಟಿಸಿ, ಮುಂದೆ ವೈಭವವನ್ನು ಪಡೆಯಲು ಉತ್ತೇಜಕವಾಗುವದಕ್ಕೆ ಇತಿಹಾಸಕ್ಕಿಂತ ಬೇರೆ ಸುಲಭ ಸಾಧನವಿಲ್ಲ. ಇಷ್ಟೇ ಅಲ್ಲ, ನಮ್ಮಲ್ಲಿಯ ಆತ್ಮವಿಶ್ವಾಸವೆಲ್ಲವೂ ಅಳಿದು ಹೋಗಿ, ನಾವು ಹೀಗೆ ನೈರಾಶ್ಯವಾದಿಗಳಾಗುವದಕ್ಕೂ, ದುರ್ಬಲರಂತೆ ಪ್ರತಿಯೊಂದಕ್ಕೂ ಪರರ ಮೋರೆಯ ಕಡೆಗೆ ನೋಡುವದಕ್ಕೂ, ನಮ್ಮಲ್ಲಿಯ ಚೈತನ್ಯದ ಜ್ಯೋತಿಯು ನಂದಿಹೋಗಿರುವದಕ್ಕೂ, ನಮ್ಮ ಇತಿಹಾಸ ಜ್ಞಾನದ ಅಭಾವವೇ -ಅಲ್ಲ– ವಿಪರ್ಯಾಸವೇ ಮೂಲಕಾರಣವು. ಸುರಾಜ ಉದ್ದೌಲನ ಕತ್ತಲೆಕೋಣೆಯ ಕಥೆಯು ನಮ್ಮ ಜನರ ವಿಷಯವಾಗಿ ನಮ್ಮವರಲ್ಲಿಯೂ, ಪರಕೀಯರಲ್ಲಿಯೂ ಎಂಥ ತಿರಸ್ಕಾರ ಬುದ್ಧಿಯನ್ನು ಹುಟ್ಟಿಸಿತ್ತು ! ಆದರೆ ಅದೆಲ್ಲವೂ ಕೇವಲ ಕಟ್ಟು ಕಥೆಯೆಂದು ತಿಳಿದು ಬಂದಿರುವದರಿಂದ, ಈಗ ನಮಗೆಷ್ಟು ಸಮಾಧಾನವಾಗಿದೆ! ೧೮೫೭ನೆಯ ಇಸ್ವಿಯ ದಂಗೆಯಲ್ಲಿ ಪ್ರಸಿದ್ಧಿಗೆ ಬಂದ ನಾನಾಸಾಹೇಬನು ಒಬ್ಬ ದೊಡ್ಡ ರಾಕ್ಷಸನೆಂದು ನಮ್ಮ ಕಲ್ಪನೆಯಾಗಿತ್ತಲ್ಲವೇ! ಆದರೆ ಇತ್ತೀಚೆಗೆ ಗೊತ್ತಾಗಿರುವ ಸಂಗತಿಯಿಂದ ಆ ನಮ್ಮ ಪೂರ್ವದ ಕಲ್ಪನೆಯಲ್ಲಿ ಬಲುಮಟ್ಟಿಗೆ ಬದಲು ಮಾಡಬೇಕಾಗಿರುವದಲ್ಲವೇ! ಆದುದರಿಂದ, ಕಾಲನ ದವಡೆಯಲ್ಲಿ ಸಿಕ್ಕಿ ಒದ್ದಾಡುತ್ತಿರುವ ನನ್ನ ಈ ಜನ್ಮಭೂಮಿಯನ್ನು ಉದ್ದರಿಸಲಿಕ್ಕೆ ಹೆಣಗುತ್ತಿರುವ ಪುಣ್ಯಾತ್ಮರಿಗೆ ಅವರ ಗತವೈಭವವೇ ಗತಿಯು, ನಮ್ಮೀ ದುರವಸ್ಥೆಯಲ್ಲಿ ಅದೊಂದೇ ನಮಗೆ ಸಂತಸದ ವಿಷಯವು, ಈ ಗತವೈಭವದ ಸ್ಮರಣೆಯು ನಮ್ಮನ್ನು ಈಗಿನ ನಿರಾಶಾಯುಕ್ತವಾದ ಸ್ಥಿತಿಯಿಂದ ಒಮ್ಮೆಯೇ ಎತ್ತಿಕೊಂಡು, ಕೆಲ ಹೊತ್ತಿನವರೆಗಾದರೂ, ಉತ್ಸಾಹಯುಕ್ತವಾದ ವಾತಾವರಣದೊಳಗೆ ತೂಗಾಡಿಸುತ್ತಿರುವುದೆಂಬದಕ್ಕೆ ಏನೂ ಸಂದೇಹವಿಲ್ಲ! ಸಾರಾಂಶ:- ನಮ್ಮ ಪೂರ್ವಜರ ಬಗ್ಗೆ ನಮ್ಮಲ್ಲಿ ಯೋಗ್ಯವಾದ ಅಭಿಮಾನ ಹುಟ್ಟಿಸುವದಕ್ಕೂ, ಅವರ ವಿಷಯವಾಗಿ ನಮ್ಮಲ್ಲಿ ನಿಷ್ಕಾರಣವಾಗಿ