ಹರಿಕಥಾಮೃತಸಾರ/ಅಣು ತಾರತಮ್ಯ ಸಂಧಿ

ವಿಕಿಸೋರ್ಸ್ದಿಂದ

ವಿಷ್ಣು ಸರ್ವೋತ್ತಮನು ಪ್ರಕೃತಿ ಕನಿಷ್ಠಳು ಎನಿಪಳು ಅನಂತ ಗುಣ

ಪರಮೇಷ್ಠಿ ಪವನರು ಕಡಿಮೆ ವಾಣೀ ಭಾರತಿಗಳು ಅಧಮ

ವಿಷ್ಣು ವಹನ ಫಣೀಂದ್ರ ಮೃಡರಿಗೆ ಕೃಷ್ಣ ಮಹಿಷಿಯರು ಅಧಮರು

ಇವರೊಳು ಶ್ರೇಷ್ಠಳು ಎನಿಪಳು ಜಾಂಬವತಿ ಆವೇಶ ಬಲದಿಂದ//1//


ಪ್ಲವಗ ಪನ್ನಗಪ ಅಹಿ ಭೂಷಣ ಯುವತಿಯರು ಸಮ ತಮ್ಮೊಳಗೆ

ಜಾಂಬವತಿಗಿಂದಲಿ ಕಡಿಮೆ ಇವರು ಇಂದ್ರ ಕಾಮರಿಗೆ ಅವರ ಪ್ರಾಣನು

ಕಡಿಮೆ ಕಾಮನ ಕುವರ ಶಚಿ ರತಿ ದಕ್ಷ ಗುರು ಮನು

ಪ್ರವಹ ಮಾರುತ ಕೊರತೆಯೆನಿಸುವ ಆರು ಜನರಿಂದ//2//


ಯಮ ದಿವಾಕರ ಚಂದ್ರ ಮಾನವಿ ಸುಮರು ಕೋಣಪ ಪ್ರವಹಗೆ ಅಧಮರು

ದ್ಯುಮಣಿಗಿಂದಲಿ ವರುಣ ನೀಚನು ನಾದದ ಅಧಮನು

ಸುಮನಸಾಸ್ಯ ಪ್ರಸೂತಿ ಭೃಗು ಮುನಿ ಸಮರು ನಾರದಗೆ ಅಧಮರು

ಅತ್ರಿ ಪ್ರಮುಖ ವಿಶ್ವಾಮಿತ್ರ ವೈವಸ್ವತರು ಅನಳಗೆ ಅಧಮ//3//


ಮಿತ್ರ ತಾರಾ ನಿರ್ಋತಿ ಪ್ರವಹಾ ಪತ್ನಿ ಪ್ರಾವಹಿ ಸಮರು

ವಿಶ್ವಾಮಿತ್ರಗಿಂದಲಿ ಕೊರತೆ

ವಿಷ್ವಕ್ಸೇನ ಗಣನಾಥ ವಿತ್ತಪತಿ ಅಶ್ವಿನಿಗಳು ಅಧಮರು

ಮಿತ್ರ ಮೊದಲಾದ ಅವರಿಗಿಂದಲಿ ಬಿತ್ತರಿಪೆನು ಶತಸ್ಥ ಮನುಜರ ವ್ಯೂಹ ನಾಮಗಳ//4//


ಮರುತರು ಒಂಭತ್ತು ಅಧಿಕ ನಾಲ್ವತ್ತು ಎರಡು ಅಶ್ವಿನಿ

ವಿಶ್ವೇದೇವರು ಎರಡೈದು ಹನ್ನೊಂದು ರುದ್ರರು ದ್ವಾದಶಾದಿತ್ಯ

ಗುರು ಪಿತೃ ತ್ರಯ ಅಷ್ಟವಸುಗಳು ಭರತ ಭಾರತಿ ಪೃಥ್ವಿ ಋಭುವು

ಎಂದರಿದು ಇವರನು ಸೋಮರಸ ಪಾನಾರ್ಹರು ಅಹುದೆಂದು//5//


ಈ ದಿವೌಕಸರೊಳಗೆ ಉಕ್ತರು ಐದಧಿಕ ದಶ

ಉಳಿದ ಎಂಭತ್ತೈದು ಶೇಷರಿಗೆ ಎಣೆಯೆನಿಸುವರು ಧನಪ ವಿಘ್ನೇಶಾ

ಸಾಧು ವೈವಸ್ವತ ಸ್ವಯಂಭುವ ಶ್ರೀದ ತಾಪಸರುಳಿದು

ಮನು ಎಕಾದಶರು ವಿಘ್ನೇಶಗಿಂತಲಿ ಕೊರತೆಯೆನಿಸುವರು//6//


ಚವನ ನಂದನ ಕವಿ ಬೃಹಸ್ಪತಿ ಅವರಜ ಉಚಿಥ್ಯಮುನಿ ಪಾವಕ

ಧೃವ ನಹುಷ ಶಶಿಬಿಂದು ಪ್ರಿಯವ್ರತನು ಪ್ರಹ್ಲಾದ

ಕುವಲಯಪರು ಉಕ್ತೇತರಿಂದಲಿ ಅವರ ರೋಹಿಣಿ ಶಾಮಲಾ ಜಾಹ್ನವಿ

ವಿರಾಟ್ ಪರ್ಜನ್ಯ ಸಂಜ್ಞಾ ದೇವಿಯರು ಅಧಮ//7//


ದ್ಯುನದಿಗಿಂತಲಿ ನೀಚರೆನಿಪರು ಅನಭಿಮಾನಿ ದಿವೌಕಸರು

ಕೇಚನ ಮುನಿಗಳಿಗೆ ಕಡಿಮೆ ಸ್ವಾಹಾ ದೇವಿಗೆ ಅಧಮ ಬುಧ

ಎನಿಸುವಳು ಉಷಾದೇವಿ ನೀಚಳು ಶನಿ ಕಡಿಮೆ ಕರ್ಮಾಧಿಪತಿ

ಸದ್ವಿನುತ ಪುಷ್ಕರ ನೀಚನು ಎನಿಸುವ ಸೂರ್ಯನಂದನಗೆ//8//


ಕೊರತೆಯೆನಿಪರು ಅಶೀತಿ ಋಷಿ ಪುಷ್ಕರಗೆ

ಊರ್ವಶಿ ಮುಖ್ಯ ಶತ ಅಪ್ಸರರು ತುಂಬುರ ಮುಖರು ಅಜಾನಜರು ಎನಿಸುತಿಹರು

ಕರೆಸುವುದು ಅನಳಗಣ ನಾಲ್ವತ್ತು ಅರೆ ಚತುರ್ದಶ ದ್ವಿ ಅಷ್ಟ ಸಾವಿರ

ಹರಿ ಮಡದಿಯರು ಸಮರೆನಿಸುವರು ಪಿಂತೆ ಪೇಳ್ವರಿಗೆ//9//


ತದವರರು ಅನಾಖ್ಯಾತ ಅಪ್ಸರ ಸುದತಿಯರು ಕೃಷ್ಣಾoಗ ಸಂಗಿಗಳು

ಅದರ ತರುವಾಯದಲಿ ಚಿರಪಿತರುಗಳು

ಇವರಿಂದ ತ್ರಿದಶ ಗಂಧರ್ವ ಗಣ ಇವರಿಂದ ಅಧಮ ನರ ಗಂಧರ್ವರು

ಇವರಿಂದ ಉದಧಿ ಮೇಲೆ ಅಖಿಳ ಪತಿಗಳು ಅಧಮರು ನೂರು ಗುಣದಿಂದ//10//


ಪೃಥ್ವಿ ಪತಿಗಳಿಗಿಂದ ಶತ ಮನುಜೋತ್ತಮರು ಕಡಿಮೆ ಎನಿಪರು

ಇವರಿಂದ ಉತ್ತರೋತ್ತರ ನೂರು ಗುಣದಿಂದ ಅಧಿಕರಾದವರ

ನಿತ್ಯದಲಿ ಚಿಂತಿಸುತ ನಮಿಸುತ ಭೃತ್ಯನು ಆನುಹದೆಂಬ

ಭಕ್ತರ ಚಿತ್ತದಲಿ ನೆಲೆಗೊಂಡು ಕರುಣಿಪರು ಅಖಿಳ ಸೌಖ್ಯಗಳ//11//


ದ್ರುಮಲತಾ ತೃಣ ಗುಲ್ಮ ಜೀವರು ಕ್ರಮದಿ ನೀಚರು

ಇವರಿಗಿಂತಧಮರು ನಿತ್ಯ ಬದ್ಧರಿಗಿಂತಲು ಅಜ್ಞಾನಿ

ತಮಸಿಗೆ ಯೋಗ್ಯರ ಭೃತ್ಯರು ಅಧಮರು ಅಮರುಷಾದಿ ಅಭಿಮಾನಿ ದೈತ್ಯರು

ನಮುಚಿ ಮೊದಲಾದ ಅವರಿಗಿಂತಲಿ ವಿಪ್ರಚಿತ ನೀಚ//12//


ಅಲಕುಮಿಯು ತಾ ನೀಚಳೆನಿಪಲು ಕಲಿ ಪರಮ ನೀಚತಮ

ಅವನಿಂದುಳಿದ ಪಾಪಿಗಳಿಲ್ಲ ನೋಡಲು ಈ ಜಗತ್ರಯದಿ

ಮಲವಿಸರ್ಜನ ಕಾಲದಲಿ ಕತ್ತಲೆಯೊಳಗೆ ಕಲ್ಮಶ ಕುಮಾರ್ಗ

ಸ್ಥಳಗಳಲಿ ಚಿಂತನೆಯ ಮಾಳ್ಪುದು ಬಲ್ಲವರು ನಿತ್ಯ//13//


ಸತ್ವ ಜೀವರ ಮಾನಿ ಬ್ರಹ್ಮನು ನಿತ್ಯ ಬದ್ಧರೊಳಗೆ ಪುರಂಜನ

ದೈತ್ಯ ಸಮುದಾಯಧಿಪತಿ ಕಲಿಯೆನಿಪ

ಪವಮಾನ ನಿತ್ಯದಲಿ ಅವರೊಳಗೆ ಕರ್ಮ ಪ್ರವರ್ತಕನು ತಾನಾಗಿ

ಶ್ರೀ ಪುರುಷೋತ್ತಮನ ಸಂಪ್ರೀತಿಗೋಸುಗ ಮಾಡಿ ಮಾಡಿಸುವ//14//


ಪ್ರಾಣದೇವನು ತ್ರಿವಿಧರೊಳಗೆ ಪ್ರವೀಣ ತಾನೆಂದೆನಿಸಿ

ಅಧಿಕಾರ ಅನುಸಾರದಿ ಕರ್ಮಗಳ ತಾ ಮಾಡಿ ಮಾಡಿಸುವ

ಜ್ಞಾನ ಭಕ್ತಿ ಸುರರ್ಗೆ ಮಿಶ್ರ ಜ್ಞಾನ ಮಧ್ಯಮ ಜೀವರಿಗೆ

ಅಜ್ಞಾನ ಮೋಹ ದ್ವೇಷಗಳ ದೈತ್ಯರಿಗೆ ಕೊಡುತಿಪ್ಪ//15//


ದೇವ ದೈತ್ಯರ ತಾರತಮ್ಯವ ಈ ವಿಧದಿ ತಿಲಿದೆಲ್ಲರೊಳು

ಲಕ್ಷ್ಮೀವರನು ಸರ್ವೋತ್ತಮನೆಂದರಿದು ನಿತ್ಯದಲಿ

ಸೇವಿಸುವ ಭಕ್ತರಿಗೊಲಿದು ಸುಖವೀವ ಸರ್ವತ್ರದಲಿ ಸುಖಮಯ

ಶ್ರೀ ವಿರಿಂಚಾದಿ ಅಮರ ವಂದಿತ ಜಗನ್ನಾಥ ವಿಠಲನು//16//