ಪುಟ:ಕರ್ನಾಟಕ ಗತವೈಭವ.djvu/೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೬ ನೆಯು ಪ್ರಕರಣ – ಚಾಲುಕ್ಯರ ಪೂರ್ವದ ಕರ್ನಾಟಕದ ಇತಿಹಾಸ

೪೫


ಮಾನದಲ್ಲಿ ಮಾಯವಾದರು, ಈ ಅವಧಿಯಲ್ಲಿಯೇ ಪೇಶಾವರದಲ್ಲಿ ಕಾನಿಷ್ಕನೆಂಬ ಬಲಾಡ್ಯ ಅರಸನು ಕ್ರಿ. ಶ. ೧೨೩ ರ ವರೆಗೆ ಆಳಿದನು. ಮುಂದೆ ಉತ್ತರದಲ್ಲಿ ಚಂದ್ರಗುಪ್ತನೆಂಬುವನು ೩೨೦ ನೆಯ ಇಸ್ವಿಯಲ್ಲಿ ಗುಪ್ತ ವಂಶವನ್ನು ಸ್ಥಾಪಿಸಿದನು. ಈ ಗುಪ್ತ ವಂಶದ ಸಮುದ್ರಗುಪ್ತನೆಂಬುವನು ಅತ್ಯಂತ ಪರಾಕ್ರಮಿಯು. ಇವನನ್ನು ಹಿಂದುಸ್ಥಾನದ ನೇಪೋಲಿಯನ್ನನೆಂದು ಹೇಳುತ್ತಾರೆ. ಅವನು ೩೭೫ ರಲ್ಲಿ ಮರಣಹೊಂದಿದನು. ಈ ಗುಪ್ತ ವಂಶವು ಉತ್ತರದಲ್ಲಿ ೪೮೦ ನೆಯ ಇಸ್ವಿಯ ವರೆಗೆ ಪ್ರಬಲವಾಗಿತ್ತು. ಈ ಗುಪ್ತ ವಂಶವು ಪರದೇಶಿಯ ಹೂಣರಿಂದ ಹಾಳಾಗಿ ಮಗಧದೇಶದ ರಾಜಕೀಯ ವರ್ಚಸ್ಸು ಹೊರಟುಹೋಯಿತು, ಮುಂದೆ ಉತ್ತರದಲ್ಲಿ ಸಾರ್ವಭೌಮನಾದ ಅರಸನೆಂದರೆ ಕನೋಜದ ಶೀಲಾದಿತ್ಯ ಹರ್ಷವರ್ಧನನೇ. ಇವನು ಕ್ರಿ. ಶ. ೬೦೬ ರಿಂದ ೬೪೭ರವರೆಗೆ ಆಳಿದನು. ಅವನನ್ನು ಕರ್ನಾಟಕದ ೨ನೆಯ ಪುಲಿಕೇಶಿಯು ಸೋಲಿಸಿದಂದಿನಿಂದ ಉತ್ತರ ಹಿಂದುಸ್ಥಾನದ ಉಜ್ವಲ ಇತಿಹಾಸವು ಮುಗಿಯಿತು. ಉತ್ತರದಲ್ಲಿ ಮುಂದೆ ಸಾರ್ವಭೌಮರಾಗಲಲ್ಲ. ಇರಲಿ, ಈ ಮೇರೆಗೆ ಉತ್ತರ ಹಿಂದುಸ್ತಾನದ ವೈಭವದ ಇತಿಹಾಸವು ಕ್ರಿ. ಪೂರ್ವದ ೩೨೧ರಿಂದ ಅಂದರೆ ಚಂದ್ರಗುಪ್ತನ ಕಾಲದಿಂದ ಕ್ರಿ. ಶ. ೬೪೮ರವರೆಗೆ ಅಂದರೆ ಹರ್ಷವರ್ಧನನ ಮರಣದವರೆಗೆ ಸುಮಾರು ೯೦೦ ವರ್ಷ ನಡೆಯಿತೆಂದು ಹೇಳಬಹುದು.
ಪ್ರಕಾರ, ಉತ್ತರ ಹಿಂದುಸ್ಥಾನ ಇತಿಹಾಸದ ಸ್ವಲ್ಪ ಕಲ್ಪನೆಯನ್ನು ಮಾಡಿ ಕೊಟ್ಟಿರುವೆವಷ್ಟೆ. ಇನ್ನು ಈ ಇತಿಹಾಸದ ಸಂಬಂಧವು ನಮ್ಮ ಕರ್ನಾಟಕದ ಇತಿಹಾಸಕ್ಕೆ ಯಾವ ಯಾವ ಕಾಲಕ್ಕೆ ಉಂಟಾಗುತ್ತದೆಂಬುದನ್ನು ಹೇಳುತ್ತೇವೆ.
ನಂದರು ಈ ಕುಂತಳದೇಶವನ್ನು ಒಂದಾನೊಂದು ಕಾಲಕ್ಕೆ ಅಂದರೆ ಕ್ರಿ. ಪೂರ್ವದ ೪ನೆಯ ಶತಮಾನದಲ್ಲಿ ಆಳಿದಂತೆ ತೋರುತ್ತದೆ. ೧೨ ನೆಯ ಶತಮಾನದ ಶಿಲಾಲಿಪಿಗಳಲ್ಲಿ ನಂದರು ಕುಂತಳದೇಶವನ್ನು ಆಳಿದಂತೆ ಬರೆದಿರುತ್ತದೆ. ಅಶೋಕನ ಕಾಲದಲ್ಲಿ ಈ ದೇಶವು ಅವನ ವಶದಲ್ಲಿದ್ದಂತೆ ಅವನ ಲೇಖಗಳೇ ಹೇಳುತ್ತಿರುವುದರಿಂದಲೂ, ಅಶೋಕನು ಕಲಿಂಗದೇಶವನ್ನು ಹೊರತು ಬೇರೆ ಯಾವ ಹೊಸ ದೇಶವನ್ನು ಆಕ್ರಮಿಸಲಿಲ್ಲವಾದುದರಿಂದಲೂ ಚಂದ್ರಗುಪ್ತನ ಕಾಲ ದಲ್ಲಿಯೇ ಈ ದೇಶವು ಅವನ ವಶವಾಯಿತೆಂದು ಊಹಿಸಲಿಕ್ಕೆ ಆಸ್ಪದವಿರುತ್ತದೆ.