ಪುಟ:ಕರ್ನಾಟಕ ಗತವೈಭವ.djvu/೩೭

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ

೧೨

ಕರ್ನಾಟಕ ಗತವೈಭವ


ಗುವದು, ಇಂಥ ರಾಷ್ಟ್ರವು ಮೃತವಾಗಿರುವದೆಂದು ಕಲ್ಪನೆ ಮಾಡುವದಾದರೂ ಹೇಗೆ ! ಕನ್ನಡಿಗರೇ ! ಕರ್ನಾಟಕವು ಮೃತರಾಷ್ಟ್ರವಲ್ಲ. ಅದು ಸ್ವಭಾವತಃ ಚೈತನ್ಯ ಪೂರ್ಣವಾದ ರಾಷ್ಟ್ರವು, ಕಾಲಾನುಸಾರವಾಗಿ ಅದು ಮೇಲು ಕೀಳು ಸ್ಥಿತಿಗೆ ಈಡಾಗಿರಬಹುದು, ಆದರೆ ಅದರಲ್ಲಿರುವ ಚೈತನ್ಯ ಶಕ್ತಿಯು ಮಾತ್ರ ಯಾವ ಕೃತ್ರಿಮೋಪಾಯಗಳಿಂದಲೂ ಕುಂದಲಾರದು. ಈಗ ಅದು ತನ್ನ ಆಲಸ್ಯದ ಮೂಲಕ, ತನ್ನ ಜನರ ಹೇಡಿತನದ ಮೂಲಕ, ತನ್ನ ಕಡುತರವಾದ ದೈವ ದುರ್ವಿಲಾಸದ ಮೂಲಕ, ಸಾಲದುದಕ್ಕೆ ಸುತ್ತಲಿನ ಬಿಕ್ಕಟ್ಟಾದ ಪರಿಸ್ಥಿತಿಯ ಮೂಲಕ, ವಿಲಕ್ಷಣವಾದ ನಿದ್ರೆಗೀಡಾಗಿರುವದೇನೋ ಸರಿ ! ಆದರೆ ಇಂಥ ಸಂದು ಕಟ್ಟಿನಲ್ಲಿ, ತಾನು ಸತ್ತಿರದೆ ಜೀವಂತವಾಗಿರುವದೆಂಬ ತಿಳಿವನ್ನು ಮಾತ್ರ ನಾವು ಆ ರಾಷ್ಟ್ರದ ಮನಸ್ಸಿನಲ್ಲಿ ಚೆನ್ನಾಗಿ ತುಂಬಿಸಿದರೆ ಸಾಕು. ಅದೇ, ಅದನ್ನು ಅಡಬಡಿಸಿ ಎಚ್ಚರಗೊಳ್ಳುವಂತೆ ಮಾಡುವದು; ಅಲ್ಲದೆ ತನ್ನ ಸಾಂಪ್ರತದ ಹೀನಸ್ಥಿತಿಯ ಬಗ್ಗೆ ಪರಾಕಾಷ್ಟೆಯ ಉದ್ಯೋಗವನ್ನೂ ಉಂಟುಮಾಡುವದು. ಸಾರಾಂಶ:- ರಾಷ್ಟ್ರಕ್ಕೂ ಮನುಷ್ಯನಂತೆ ಆತ್ಮವಿರುವ ಕಾರಣ ವೇದಾಂತ ಶಾಸ್ತ್ರವನ್ನೋದಿ ಆತ್ಮನ ಅಮೃತತ್ವವನ್ನೂ ಆವ್ಯಯತ್ವವನ್ನೂ ಅವಿಕಾರಿತ್ವವನ್ನೂ ತಿಳಿದುಕೊಂಡಿರುವ ಮನುಷ್ಯನು ಹೇಗೆ ದುಃಖಿಸದ, ಎದೆಗುಂದದೆ, ಧೀರನಾಗಿಯೂ, ವೀರನಾಗಿಯ ಇರುವನೋ, ಹಾಗೆಯೇ ತನ್ನ ಜೀವದ್ದಶೆಯನ್ನರಿತು ಕೊಂಡ ರಾಷ್ಟ್ರವು ಎಂಥ ಕಷ್ಟ ಪರಂಪರೆಗಳಿಗೂ ಅಂಜದೆ ಅಳುಕದೆ ಇರುವದು. ಆದರೆ ಈಗ ನಮ್ಮ ಸ್ಥಿತಿಯು ಹಾಗೆಲ್ಲಿದೆ ! ಕನ್ನಡಿಗರಾದ ನಾವು ಈ ನಿತ್ಯ ತತ್ವವನ್ನು ಎಂದರೆ 'ಕರ್ನಾಟಕತ್ವ' ವನ್ನು ಮರೆತು, ಈಗಿರುವ ನಮ್ಮ ಕ್ಷಣಿಕವಾದ ಅವಸ್ಥೆಯೇ ಕಡೆಯವರೆಗೂ ಇರುವುದೆಂದು ಭಾವುಕ ಭಾವನೆಯಿಂದ ಕೈಕಾಲು ಕಳೆದುಕೊಂಡು ಕುಳಿತಿರುವೆವಲ್ಲಾ ! ಅದೇ, ನಾವು ನಮ್ಮ ಗತವೈಭವದ ಇತಿಹಾಸವನ್ನು, ನಮ್ಮ ಪ್ರಾಚೀನ ಸಂಸ್ಕೃತಿಯ ಹೃದಯಂಗಮವಾದ ಮೇಲ್ಮೆಯನ್ನು ಮನಸ್ಸಿನಲ್ಲಿ ನೆಡುವಂತೆ ಅರಿತವರಾಗಿದ್ದರೆ, ನಮ್ಮ ಕರ್ನಾಟಕವು ಭಾರತೀಯ ಇತಿಹಾಸದ ನಾಟ್ಯರಂಗದೊಳಗೆ ಕೈಕೊಂಡ ಪಾತ್ರದ ಬಲ್ಮೆಯು ನಮ್ಮ ಮಸಕಾದ ಮನಸಿನಲ್ಲಿ ಮೂಡಿದ್ದರೆ, ಈಗಿನಂತೆ ನಾವು ಜೋಲುಬಿದ್ದ ಮತ್ತು ಬಾಡಿದ ಮೋರೆಯವರಾಗಿ ಎಂದಿಗೂ ಕುಳಿತುಕೊಳ್ಳುತ್ತಿರಲಿಲ್ಲ ! ಒಳ್ಳೇದು! ಆದದ್ದಾ