ಪುಟ:ಕರ್ನಾಟಕ ಗತವೈಭವ.djvu/೧೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



೧೪೪

ಕರ್ನಾಟಕ-ಗತವೈಭವ


ಕಲಚೂರ್ಯರು- ಕಲಚೂರಿಯ ಬಿಜ್ಜಣನ ಮಗನಾದ ಸೋಮನೆಂಬವನ ತಾಮ್ರಶಾಸನವು ೧೮ನೆಯ ಸಂಪುಟದಲ್ಲಿ ಮುದ್ರಿತವಾಗಿದೆ. ೨ನೆಯದರಲ್ಲಿ ಯಾದವರ ೭ ಶಿಲಾಲೇಖಗಳು ಮುದ್ರಿತವಾಗಿವೆ. ೯ನೆಯದರಲ್ಲಿ ೧ ಮುದ್ರಿತವಾಗಿದೆ, ಮತ್ತು ೧೫ನೆಯ ಸಂಪುಟದಲ್ಲಿಯೂ ಯಾದವರ ಒಂದು ಲೇಖವು ಮುದ್ರಿತವಾಗಿದೆ. ಕೊಲ್ಲಾಪುರ ಶಿಲಾಹಾರವಂಶದಲ್ಲಿ ೧೫ ಮಂದಿ ಅರಸರು ಆಳಿದರು. ಅವರ ಶಿಲಾಲೇಖಗಳು ೨|೩|೧೩ ನೆಯ ಸಂಪುಟದಲ್ಲಿ ಅಚ್ಚಾಗಿವೆ.

ಈ ಮಾಸಪತ್ರಿಕೆಯೊಳಗಿನ ಲೇಖಗಳಲ್ಲದೆ, ಮತ್ತೆ ಕೆಲವರ ಪ್ರಯತ್ನಗಳಿಂದ ಕರ್ನಾಟಕಕ್ಕೆ ಅತಿಶಯವಾಗಿ ಸಹಾಯವಾಗಿದೆ. ಈ ಬಗೆಯಾಗಿ ಪ್ರಯತ್ನ ಮಾಡಿದವರಲ್ಲಿ, ಸರ್ ವಾಲ್ಟರ್ ಇಲಿಯಟ್ (Sir Walter Elliot) ಎಂಬವರೇ ಮೊದಲನೆಯವರು. ಇವರು ಮದ್ರಾಸ ಇಲಾಖೆಯಲ್ಲಿ ಸರಕಾರೀ ಅಧಿಕಾರಸ್ಥರಾಗಿದ್ದರು. ಇವರು ೭-೮ ವರ್ಷ ಸತತ ಶ್ರಮಪಟ್ಟು ಕರ್ನಾಟಕ ಪ್ರಾಂತ, ನಿಜಾಮರಾಜ್ಯದ ಪಶ್ಚಿಮಭಾಗ ಮತ್ತು ಮೈಸೂರು ಪ್ರಾಂತದ ಉತ್ತರ ಭಾಗ ಈ ಮೂರು ಪ್ರದೇಶಗಳೊಳಗಿನ ಸುಮಾರು ೧೩೦೦ ಶಿಲೆಯ ಮತ್ತು ತಾಮ್ರ ಶಾಸನಗಳ ಲೇಖಗಳನ್ನು ಕೂಡಿಹಾಕಿದರು. ಅವುಗಳಲ್ಲಿ ಸ್ವಚ್ಛವಾದ ೫೯೫ ಲೇಖಗಳನ್ನು ಬೇರೆ ತಗೆದು, ಒಂದೊಂದರ ನಾಲ್ಕು ನಾಲ್ಕು ಪ್ರತಿಗಳನ್ನು ಮಾಡಿಸಿದರು. ಅವುಗಳಲ್ಲೊಂದು ಎಡಿನ್‌ಬರೋ: ಪಟ್ಟಣದಲ್ಲಿರುವ ವಿಶ್ವ ವಿದ್ಯಾಲಯದ ಪುಸ್ತಕಾಲಯ (Edinborough University Library) ದಲ್ಲಿ ಕರ್ನಾಟಕದ ಲೇಖಗಳು (Karnataka Inscriptions) ಎಂಬ ಹೆಸರಿನಿಂದ ಎರಡು ಸಂಪುಟಗಳಾಗಿ ಈಗೂ ಇರುತ್ತವೆ. ಮತ್ತೊಂದು ಲಂಡನ ಪಟ್ಟಣದಲ್ಲಿರುವ ರಾಯಲ್‌ ಏಶಿಯಾಟಿಕ್ ಸೊಸಾಯಿಟಿಯ (Royal Asiatic Society, London) ಲಾಯಬ್ರರಿಯಲ್ಲಿ ಇರುತ್ತದೆ. ಮಿಕ್ಕ ಎರಡು ಪ್ರತಿಗಳ ಅವಸ್ಥೆಯೇನಾಗಿದೆಯೋ ಗೊತ್ತೇ ಇಲ್ಲ. ಸರ್ ವಾಲ್ಟರ್ ಇಲಿಯಟ್ ಇವರು ಈ ೫೯೫ ಲೇಖಗಳ ಇತ್ಯರ್ಥವನ್ನು ತೆಗೆದು ಒಂದು ಪ್ರಬಂಧವನ್ನು ಬರೆದು ಅವರು ಅದನ್ನು ಲಂಡನ ಸೊಸಾಯಿಟಿಯ ಮುಂದೆ ೧೮೩೬ನೆಯ ಇಸವಿಯ ಜುಲೈ ತಿಂಗಳಲ್ಲಿ ಓದಿದರು. ಅದು ಹಿಂದು ಶಿಲಾಲೇಖಗಳು (Hindu Inscriptions) ಎಂಬ ಹೆಸರಿನಿಂದ ರಾಯಲ್ ಏಶಿಯಾಟಿಕ್ ಸೊಸಾಯಿಟಿಯ