ಹರಿಕಥಾಮೃತಸಾರ/ದತ್ತಸ್ವಾತಂತ್ರ್ಯ ಸಂಧಿ (ಸ್ವಾತಂತ್ರ್ಯ ದಾನ)

ವಿಕಿಸೋರ್ಸ್ದಿಂದ

ಕಾರುಣಿಕ ಹರಿ ತನ್ನೊಳಿಪ್ಪ ಅಪಾರ ಸ್ವಾತಂತ್ರ್ಯ ಗುಣವ ನಾನೂರು ತೆಗೆದು

ಸಪಾದ ಆರೊಂದಧಿಕ ಅರವತ್ತು ನಾರಿಗಿತ್ತ

ದ್ವಿ ಷೋಡಶ ಅಧಿಕ ನೂರು ಪಾದತ್ರಯವ ತನ್ನ ಶರೀರದೊಳಗೆ

ಈಪರಿ ವಿಭಾಗವ ಮಾಡಿ ತ್ರಿಪದಾಹ್ವ//1//


ಸತ್ಯ ಲೋಕಾಧಿಪನೊಳಗೆ ಐವತ್ತೆರೆಡು ಪವಮಾನನೊಳು ನಾಲ್ವತ್ತು ಮೇಲೆಂಟು

ಅಧಿಕ ಶಿವನೊಳಗಿಟ್ಟನಿಪ್ಪತ್ತು ಚಿತ್ತಜ ಇಂದ್ರರೊಳು ಐದಧಿಕ ದಶ

ತತ್ವಮಾನಿಗಳು ಎನಿಪ ಸುರರೊಳು ಹತ್ತು

ಈರೈದು ಅಖಿಳ ಜೀವರೊಳಿಟ್ಟ ನಿರವದ್ಯ//2//


ಕಲಿ ಮೊದಲುಗೊಂಡ ಅಖಿಳ ದಾನವರೊಳಗೆ ನಾಲ್ವತ್ತೈದು

ಈ ಪರಿ ತಿಳಿದು ಉಪಾಸನೆ ಮಾಡು ಮರೆಯದೆ ಪರಮ ಭಕುತಿಯಲಿ

ಇಳೆಯೊಳಗೆ ಸಂಚರಿಸು ಲಕ್ಷ್ಮೀ ನಿಲಯನ ಆಳಾನೆಂದು

ಸರ್ವ ಸ್ಥಳಗಳಲಿ ಸಂತೈಸುತಿಪ್ಪನು ಗೆಳೆಯನಂದದಲಿ//3//


ಅವನಿಪ ಸ್ವಾಮಿತ್ವ ಧರ್ಮವ ಸ್ವವಶ ಮಾತ್ಯರಿಗಿತ್ತು

ತಾ ಮತ್ತವರ ಮುಖದಲಿ ರಾಜ ಕಾರ್ಯಾವ ಮಾಡಿಸುವ ತೆರದಿ

ಕವಿಭಿರೀಡಿತ ತನ್ನ ಕಳೆಗಳ ದಿವಿಜ ದಾನವ ಮಾನವರೊಳಿಟ್ಟು

ಅವಿರತ ಗುಣತ್ರಯಜ ಕರ್ಮವ ಮಾಡಿ ಮಾಡಿಸುವ//4//


ಪುಣ್ಯ ಪಾಪಗಳು ಈ ತೆರದಿ ಕಾರುಣ್ಯ ಸಾಗರ ದೇವದಾನವ ಮಾನವರೊಳಿಟ್ಟು

ಅವರ ಫಲ ವ್ಯತ್ಯಾಸವನೆ ಮಾಡಿ

ಬನ್ನ ಬಡಿಸುವ ಭಕ್ತಿಹೀನರ ಸನ್ನುತ ಸುಕರ್ಮ ಫಲತೆಗೆದು

ಪ್ರಪನ್ನರಿಗೆ ಕೊಟ್ಟು ಅವರ ಸುಖಪಡಿಸುವನು ಸುಭುಜಾಹ್ವ//5//


ಮಾಣಿಕವ ಕೊಂಡು ಅಂಗಡಿಯೊಳು ಅಜಿವಾನ ಕೊಟ್ಟು ಆ ಪುರುಷನ

ಸಮಾಧಾನ ಮಾಡುವ ತೆರದಿ ದೈತ್ಯರು ನಿತ್ಯದಲಿ ಮಾಳ್ಪ

ದಾನ ಯಜ್ಞಾದಿಗಳ ಫಲ ಪವಮಾನ ಪಿತನು ಅಪಹರಿಸಿ

ಅಸಮೀಚೀನ ಸುಖಗಳ ಕೊಟ್ಟು ಅಸುರರ ಮತ್ತರನು ಮಾಳ್ಪ//6//


ಏಣ ಲಾಂಛನನ ಅಮಲ ಕಿರಣ ಕ್ರಮೇಣ ವೃದ್ಧಿಯನು ಐದಿ

ಲೋಗರ ಕಾಣಗೊಡದಿಹ ಕತ್ತಲೆಯ ಭಂಗಿಸುವ ತೆರದಂತೆ

ವೈನತೇಯಾಂಗಸನ ಮೂರ್ತಿ ಧ್ಯಾನವುಳ್ಳ ಮಹಾತ್ಮರಿಗೆ

ಸುಜ್ಞಾನ ಭಕ್ತ್ಯಾದಿಗಳು ವರ್ಧಿಸಿ ಸುಖವೇ ಕೊಡುತಿಹರು//7//


ಜನಪನ ಅರಿಕೆಯ ಚೋರ ಪೊಳಲೊಳು ಧನವ ಕದ್ದೊಯ್ದ ಈಯಲು

ಅವನ ಅವಗುಣಗಳು ಎಣಿಸದೆ ಪೊರೆವ ಕೊಡದಿರೆ ಶಿಕ್ಷಿಸುವ ತೆರದಿ

ಅನುಚಿತೋಚಿತ ಕರ್ಮ ಕೃಷ್ಣಾರ್ಪಣವೆನಲು

ಕೈಕೊಂಡು ತನ್ನರಮನೆಯೊಳಿಟ್ಟು ಆನಂದ ಬಡಿಸುವ ಮಾಧವಾನತರ//8//


ಅನ್ನದ ಅನ್ನಾದ ಅನ್ನ ನಾಮಕ ಮುನ್ನ ಪೇಳ್ದ ಪ್ರಕಾರ

ಜೀವರೊಳು ಅನ್ನ ರೂಪ ಪ್ರವೇಶಗೈದು ಅವರವರ ವ್ಯಾಪಾರ

ಬನ್ನಬಡದಲೆ ಮಾಡಿ ಮಾಡಿಸಿ ಧನ್ಯರಿವರು ಅಹುದು ಎಂದೆನಿಸಿ

ತ್ರೈಗುಣ್ಯ ವರ್ಜಿತ ತತ್ತದಾಹ್ವಯನು ಆಗಿ ಕರೆಸುವನು//9//


ಸಲಿಲಬಿಂದು ಪಯಾಬ್ಧಿಯೊಳು ಬೀಳಲು ವಿಕಾರವನು ಐದ ಬಲ್ಲದೆ

ಜಲವು ತದ್ರೂಪವನೆ ಐದುವುದು ಎಲ್ಲ ಕಾಲದಲಿ

ಕಲಿಲಮಲಾಪಹನ ಅರ್ಚಿಸುವ ಸತ್ಕುಲಜರ ಕುಕರ್ಮಗಳು

ತಾನಿಷ್ಕಲುಷ ಕರ್ಮಗಳಾಗಿ ಪುರುಷಾರ್ಥಗಳ ಕೊಡುತಿಹರು//10//


ಮೊಗದೊಳಗೆ ಮೊಗವಿಟ್ಟು ಮುದ್ದಿಸಿ ಮಗುವಿನಂ ಬಿಗಿದಪ್ಪಿ ರಂಬಿಸಿ

ನೇಹದಿ ತೆಗೆದು ತನ್ನಯ ಸ್ತನಗಳು ಉಣಿಸುವ ಜನನಿಯಂದದಲಿ

ಅಗಣಿತಾತ್ಮನು ತನ್ನ ಪಾದಾಬ್ಜಗಳ ಧೇನಿಪ ಭಕ್ತ ಜನರಿಗೆ

ಪ್ರಘಟಕನು ತಾನಾಗಿ ಸೌಖ್ಯಗಳು ಏವ ಸರ್ವತ್ರ//11//


ತೋಟಿಗನು ಭೂಮಿಯೊಳು ಬೀಜವ ನಾಟಬೇಕೆಂದೆನುತ

ಹಿತದಲಿ ಮೋಟೆಯಿಂ ನೀರೆತ್ತಿ ಸಸಿಗಳ ಸಂತೈಸುವಂತೆ

ಪಾಟುಬಡದಲೆ ಜಗದಿ ಜೀವರ ಘೋಟಕಾಸ್ಯನು ಸೃಜಿಸಿ

ಯೋಗ್ಯತೆ ದಾಟಗೊಡದಲೆ ಸಲಹುತಿಪ್ಪನು ಸರ್ವ ಕಾಲದಲಿ//12//


ಭೂಮಿಯೊಳು ಜಲವಿರೆ ತೃಷಾರ್ತನು ತಾ ಮರೆದು

ಮೊಗವೆತ್ತಿ ಎಣ್ದೆಸೆವ್ಯೋಮ ಮಂಡಲದೊಳಗೆ ಕಾಣದೆ ಮಿಡುಕುವಂದದಲಿ

ಶ್ರೀ ಮನೋರಮ ಸರ್ವರ ಅಂತರ್ಯಾಮಿಯು ಆಗಿರೆ ತಿಳಿಯಲರಿಯದೆ

ಭ್ರಾಮಕರು ಭಜಿಸುವರು ಭಕುತಿಯಲಿ ಅನ್ಯ ದೇವತೆಯ//13//


ಮುಖ್ಯ ಫಲ ವೈಕುಂಠ ಮುಖ್ಯಾಮುಖ್ಯ ಫಲ ಮಹದಾದಿ ಲೋಕಾ

ಅಮುಖ್ಯ ಫಲ ವೈಷಯಿಕವು ಎಂದರಿದು ಅತಿ ಭಕುತಿಯಿಂದ

ರಕ್ಕಸ ಅರಿಯ ಭಜಿಸುತಲಿ ನಿರ್ದುಃಖನಾಗು

ನಿರಂತರದಿ ಮೊರೆ ಪೊಕ್ಕವರ ಬಿಡ ಭೃತ್ಯವತ್ಸಲ ಭಾರತೀಶ ಪಿತ//14//


ವ್ಯಾಧಿಯಿಂ ಪೀಡಿತ ಶಿಶುವಿಗೆ ಗುಡೋದಕವ ನೆರೆದು ಅದಕೆ ಔಷಧ ತೇದು

ಕುಡಿಸುವ ತಾಯಿಯ ಉಪಾದಿಯಲಿ

ಸರ್ವಜ್ಞ ಬಾದರಾಯಣ ಭಕ್ತ ಜನಕೆ ಪ್ರಸಾದ ರೂಪಕನಾಗಿ

ಭಾಗವತಾದಿಯಲಿ ಪೇಳಿದನು ಧರ್ಮಾದಿಗಳೇ ಫಲವೆಂದು//15//


ದೂರದಲ್ಲಿಹ ಪರ್ವತ ಘನಾಕಾರ ತೋರ್ಪುದು ನೋಳ್ಪ ಜನರಿಗೆ

ಸಾರಗೈಯಲು ಸರ್ವ ವ್ಯಾಘ್ರಗಳಿಂದ ಭಯವಿಹುದು

ಘೋರತರ ಸಂಸಾರ ಸೌಖ್ಯ ಅಸಾರತರವೆಂದು ಅರಿತು

ನಿತ್ಯ ರಮಾರಮಣನ ಆರಾಧಿಸುವರು ಅದರಿಂದ ಬಲ್ಲವರು//16//


ಕೆಸರ ಘಟಗಳ ಮಾಡಿ ಬೇಸಿಗೆ ಬಿಸಿಲೊಳಗೆ ಇಟ್ಟು ಒಣಗಿಸಿದರು ಅದು

ಘನ ರಸವು ತುಂಬಲು ಬಹುದೇ? ಸರ್ವ ಸ್ವಾತಂತ್ರ ನಾನೆಂಬ

ಪಶುಪ ನರನು ಏನೇನು ಮಾಳ್ಪ ಅನಶನ ದಾನ ಸ್ನಾನ ಕರ್ಮಗಳು

ಒಸರಿ ಪೋಪವು ಬರಿದೆ ದೇಹ ಆಯಾಸವನೆ ಕೊಟ್ಟು//17//


ಎರಡು ದೀಕ್ಷೆಗಳಿಹವು ಬಾಹ್ಯಾಂತರವು ಎನಿಪ ನಾಮದಲಿ

ಬುಧರಿಂದರಿತು ದೀಕ್ಷಿತನು ಆಗು ದೀರ್ಘ ದ್ವೇಷಗಳ ಬಿಟ್ಟು

ಹರಿಯೇ ಸರ್ವೋತ್ತಮ ಕ್ಷರಾಕ್ಷರ ಪುರುಷ ಪೂಜಿತ ಪಾದ

ಜನ್ಮಾದಿ ಅರವಿ ದೂರ ಸುಖಾತ್ಮ ಸರ್ವಗನು ಎಂದು ಸ್ಮರಿಸುತಿರು//18//


ಹೇಯವಸ್ತುಗಳಿಲ್ಲವು ಉಪಾದೇಯ ವಸ್ತುಗಳಿಲ್ಲ

ನ್ಯಾಯಾನ್ಯಾಯ ಧರ್ಮಗಳಿಲ್ಲ ದ್ವೇಷ ಅಸೂಯೆ ಮೊದಲಿಲ್ಲ

ತಾಯಿ ತಂದೆಗಳಿಲ್ಲ ಕಮಲದಳಾಯತ ಅಕ್ಷಗೆಯೆನಲು

ಈಸುವ ಕಾಯಿಯಂದದಿ ಮುಳಗಗೊಡದೆ ಭವಾಬ್ಧಿ ದಾಟಿಸುವ//19//


ಮಂದನಾದರು ಸರಿಯೆ ಗೋಪೀಚಂದನ ಶ್ರೀ ಮುದ್ರೆಗಳ ನಲಿವಿಂದ ಧರಿಸುತ

ಶ್ರೀ ತುಳಸಿ ಪದುಮಾಕ್ಷಿ ಸರಗಳನು ಕಂಧರದ ಮಧ್ಯದಲಿ ಧರಿಸಿ

ಮುಕುಂದ ಶ್ರೀ ಭೂರಮಣ ತ್ರಿಜಗದ್ವಂದ್ಯ

ಸರ್ವ ಸ್ವಾಮಿ ಮಮ ಕುಲದೈವವು ಎನೆ ಪೊರೆವ//20//


ಪ್ರಾಯ ಧನ ಮದದಿಂದ ಜನರಿಗೆ ನಾಯಕ ಪ್ರಭುವೆಂಬಿ

ಪೂರ್ವದಿ ತಾಯಿ ಪೊಟ್ಟೆಯೊಳಿರಲು ಪ್ರಭುವೆಂದೇಕೆ ಕರೆಯರಲೈ?

ಕಾಯ ನಿನ್ನನು ಬಿಟ್ಟು ಪೋಗಲು ರಾಯಾ ನೀನೆಂಬುವ ಪ್ರಭುತ್ವ

ಪಲಾಯನವನೈದಿತು ಸಮೀಪದಲಿದ್ದರೆ ಅದು ತೋರು//21//


ವಾಸುದೇವ ಏಕ ಪ್ರಕಾರದಿ ಈಶನೆನಿಸುವ

ಬ್ರಹ್ಮ ರುದ್ರ ಶಚಿ ಈಶ ಮೊದಲಾದ ಅಮರರೆಲ್ಲರು ದಾಸರೆನಿಸುವರು

ಈ ಸುಮಾರ್ಗವ ಬಿಟ್ಟು ಸೋಹಮುಪಾಸನೆಯಗೈವ ನರ

ದೇಹಜ ದೈಶಿಕ ಕ್ಲೇಶಗಳು ಬರಲು ಅವನು ಏಕೆ ಬಿಡಿಸಿಕೊಳ//22//


ಆ ಪರ ಬ್ರಹ್ಮನಲಿ ತ್ರಿಜಗದ್ವ್ಯಾಪಕಾತ್ವ ನಿಯಾಮಕಾತ್ವ

ಸ್ಥಾಪಕಾತ್ವ ವಶಾತ್ವ ಈಶಾತ್ವಾದಿ ಗುಣಗಳಿಗೆ ಲೋಪವಿಲ್ಲ

ಏಕ ಪ್ರಕಾರ ಸ್ವರೂಪವು ಎನಿಪವು ಸರ್ವ ಕಾಲದಿ ಪೋಪವಲ್ಲವು

ಜೀವರಿಗೆ ದಾಸಾತ್ವದುಪಾದಿ//23//


ನಿತ್ಯನೂತನ ನಿರ್ವಿಕಾರ ಸುಹೃತ್ತಮ ಪ್ರಣವಸ್ಥ

ವರ್ಣೋತ್ಪತ್ತಿ ಕಾರಣ ವಾಗ್ಮನಃಮಯ ಸಾಮಗಾನರತ

ದತ್ತ ಕಪಿಲ ಹಯಾಸ್ಯ ರೂಪದಿ ಪೃಥ್ ಪ್ರುತಗ್ ಜೀವರೊಳಗಿದ್ದು ಪ್ರವರ್ತಿಸುವನು

ಅವರವರ ಯೋಗ್ಯತೆ ಕರ್ಮವ ಅನುಸರಿಸಿ//24//


ಶೃತಿಗಳು ಆತನ ಮಾತು ವಿಮಲಾ ಸ್ಮೃತಿಗಳು ಆತನ ಶಿಕ್ಷೆ

ಜೀವ ಪ್ರತತಿ ಪ್ರಕೃತಿಗಳು ಎರಡು ಪ್ರತಿಮೆಗಳು ಎನಿಸಿಕೊಳುತಿಹವು

ಇತರ ಕರ್ಮಗಳು ಎಲ್ಲ ಲಕ್ಷ್ಮೀ ಪತಿಗೆ ಪೂಜೆಗಳೆಂದು ಸ್ಮರಿಸುತ

ಚತುರ ವಿಧ ಪುರುಷಾರ್ಥಗಳ ಬೇಡದಿರು ಸ್ವಪ್ನದಲಿ//25//


ಭೂತಳಾಧಿಪನು ಆಜ್ಞ ಧಾರಕ ದೂತರಿಗೆ

ಸೇವಾನುಸಾರದಿ ವೇತನವ ಕೊಟ್ಟು ಅವರ ಸಂತೋಷಿಸುವ ತೆರದಂತೆ

ಮಾತರಿಶ್ವ ಪ್ರಿಯನು ಪರಮ ಪ್ರೀತಿ ಪೂರ್ವಕ

ಸದ್ಗುಣಂಗಳ ಗಾಧಕರ ಸಂತೋಷ ಪಡಿಸುವ ಇಹ ಪರಂಗಳಲಿ//26//


ದೀಪ ದಿವದಲಿ ಕಂಡರಾದಡೆ ಲೋಪಗೈಸುವರು ಆ ಕ್ಷಣ

ಹರಿ ಸಮೀಪದಲ್ಲಿರೆ ನಂದ ನಾಮ ಸುನಂದವು ಎನಿಸುವವು

ಔಪಚಾರಿಕವಲ್ಲ ಸುಜನರ ಪಾಪ ಕರ್ಮವು ಪುಣ್ಯವು ಎನಿಪವು

ಪಾಪಿಗಳ ಸತ್ಪುಣ್ಯ ಕರ್ಮವು ಪಾಪವು ಎನಿಸುವವು//27//


ಧನವ ಸಂಪಾದಿಸುವ ಪ್ರದ್ರಾವಣಿಕರಂದದದಿ

ಕೋವಿದರ ಮನೆಮನೆಗಳಲಿ ಸಂಚರಿಸು ಶಾಸ್ತ್ರ ಶ್ರವಣ ಗೋಸುಗದಿ

ಮನನಗೈದು ಉಪದೇಶಿಸುತ ದುರ್ಜನರ ಕೂಡಿ ಆಡದಿರು ಸ್ವಪ್ನದಿ

ಪ್ರಣತ ಕಾಮದ ಕೊಡುವ ಸೌಖ್ಯಗಳ ಇಹ ಪರಂಗಳಲಿ//28//


ಕಾರಕ ಕ್ರಿಯ ದ್ರವ್ಯ ವಿಭ್ರಮ ಮೂರು ವಿಧ ಜೀವರಿಗೆ

ಬಹು ಸಂಸಾರಕೆ ಇವು ಕಾರಣವು ಎನಿಸುವವು ಎಲ್ಲ ಕಾಲದಲಿ ದೂರ ಓಡಿಸಿ

ಭ್ರಾಮಕತ್ರಯ ಮಾರಿಗೆ ಒಳಗಾಗದಲೆ

ಸರ್ವಾರಾಧಕನ ಚಿಂತಿಸುತಲಿರು ಸರ್ವತ್ರ ಮರೆಯದಲೆ//29//


ಕರಣ ಕರ್ಮವ ಮಾಡಿದರೆ ವಿಸ್ಮರಣೆ ಕಾಲದಿ ಮಾತುಗಳಿಗೆ

ಉತ್ತರವ ಕೊಡದಲೆ ಸುಮ್ಮನಿಪ್ಪನು

ಜಾಗರಾವಸ್ಥೆ ಕರುಣಿಸಲು ವ್ಯಾಪಾರ ಮಾಡುವ

ಬರಲು ನಾಲ್ಕವಸ್ಥೆಗಳು ಪರಿಹರಿಸಿ ಕೊಳನು ಏತಕೆ? ಸ್ವತಂತ್ರನು ತಾನೆಯೆಂಬುವನು//30//


ಯುಕ್ತಿ ಮಾತುಗಳಲ್ಲ ಶ್ರುತಿ ಸ್ಮೃತಿ ಉಕ್ತ ಮಾತುಗಳಿವು

ವಿಚಾರಿಸಿ ಮುಕ್ತಿಗಿವು ಸೋಪಾನವು ಎನಿಪವು ಪ್ರತಿಪ್ರತಿ ಪದವು

ಭಕ್ತಿಪೂರ್ವಕ ಪಠಿಸುವವರಿಗೆ ವ್ಯಕ್ತಿ ಕೊಡುವ ಸ್ವರೂಪ ಸುಖ

ಪ್ರವಿವಿರಕ್ತನ ಮಾಡುವನು ಭವಭಯದಿಂದ ಬಹು ರೂಪ//31//


ಶ್ರೀನಿವಾಸನ ಸುಗುಣ ಮಣಿಗಳ ಪ್ರಾಣಮಾತ ವಯುನಾಖ್ಯ ಸೂತ್ರದಿ ಪೋಣಿಸಿದ ಮಾಲಿಕೆಯ

ವಾಗ್ಮಯಗೆ ಸಮರ್ಪಿಸಿದ

ಜ್ಞಾನಿಗಳ ದೃಕ್ ವಿಷಯವುಹುದ ಅಜ್ಞಾನಿಗಳಿಗೆ ಅಸಹ್ಯ ತೋರ್ಪುದು

ಮಾಣಿಕವ ಮರ್ಕಟನ ಕೈಯಲಿ ಕೊಟ್ಟ ತೆರದಂತೆ//32//


ಶ್ರೀವಿಧಿ ಈರ ವಿಪಾಹಿಪ ಈಶ ಶಚೀ ವರಾತ್ಮಭವ ಅರ್ಕ ಶಶಿ

ದಿಗ್ದೇವ ಋಷಿ ಗಂಧರ್ವ ಕಿನ್ನರ ಸಿದ್ಧ ಸಾಧ್ಯ ಗಣ ಸೇವಿತ ಪದಾಂಬುಜ

ತ್ವತ್ಪಾದಾಲವಂಬಿಗಳು ಆದ ಭಕ್ತರ ಕಾವ

ಕರುಣಾ ಸಾಂದ್ರ ಲಕ್ಷ್ಮೀ ಹೃತ್ಕುಮುದ ಚಂದ್ರ//33//


ಆದರಿಶ ಅಗತಾಕ್ಷ ಭಾಷಾ ಭೇದದಿಂದಲಿ ಕರೆಯಲು ಅದನು

ನಿಷೇಧಗೈದು ಅವಲೋಕಿಸದೆ ಬಿಡುವರೆ ವಿವೇಕಿಗಳು

ಮಾಧವನ ಗುಣ ಪೇಳ್ವ ಪ್ರಾಕೃತವು ಆದರೆಯು ಸರಿ

ಕೇಳಿ ಪರಮ ಆಹ್ಲಾದಬಡದಿಪ್ಪರೆ? ನಿರಂತರ ಬಲ್ಲ ಕೋವಿದರು//34//


ಭಾಸ್ಕರನ ಮಂಡಲವ ಕಂಡು ನಮಸ್ಕರಿಸಿ ಮೋದಿಸದೆ

ದ್ವೇಷದಿ ತಸ್ಕರನು ನಿಂದಿಸಲು ಕುಂದಹುದೇ ದಿವಾಕರಗೆ

ಸಂಸ್ಕೃತವು ಇದಲ್ಲ ಎಂದು ಕುಹಕ ತಿರಸ್ಕರಿಸಲು ಏನಹುದು?

ಭಕ್ತಿ ಪುರಸ್ಕರದಿ ಕೇಳ್ವರಿಗೊಲಿವನು ಪುಷ್ಕರಾಕ್ಷ ಸದಾ//35//


ಪತಿತನ ಕಪಾಲದೊಳು ಭಾಗೀರಥಿಯ ಜಲವಿರೆ ಪೇಯವು ಎನಿಪುದೆ?

ಇತರ ಕವಿ ನಿರ್ಮಿತ ಕುಕಾವ್ಯ ಅಶ್ರಾವ್ಯ ಬುಧರಿಂದ

ಕೃತಿ ಪತಿಕಥಾನ್ವಿತವು ಎನಿಪ ಪ್ರಾಕೃತವೆ ತಾ ಸಂಸ್ಕೃತವು ಎನಿಸಿ

ಸದ್ಗತಿಯನೀವುದು ಭಕ್ತಿ ಪೂರ್ವಕ ಕೇಳಿ ಪೇಳ್ವರಿಗೆ//36//


ವೇದ ಶಾಸ್ತ್ರ ಸಯುಕ್ತಿ ಗ್ರಂಥಗಳು ಓದಿ ಕೇಳ್ದವನಲ್ಲ

ಸಂತತ ಸಾಧುಗಳ ಸಹವಾಸ ಸಲ್ಲಾಪಗಳು ಮೊದಲಿಲ್ಲ

ಮೋದ ತೀರ್ಥ ಆರ್ಯರ ಮತಾನುಗರು ಆದವರ ಕರುಣದಲಿ ಪೇಳ್ದೆ

ರಮಾಧವ ಜಗನ್ನಾಥ ವಿಠಲ ತಿಳಿಸಿದದರೊಳಗೆ//37//