೧೩ನೆಯ ಪ್ರಕರಣ - ಕರ್ನಾಟಕದ ಕಟ್ಟಡಗಳು
೧೦೬
ಆ ಬಾಲಕನ ಕುಲಗೋತ್ರಗಳನ್ನು ಕೇಳಿದರು. ಅವನು, ತಾನು ಅದೇ ಜಕಣಾಚಾರ್ಯರ ಮಗನಾದ ಡಂಕಣಾಚಾರ್ಯನೆಂದೂ ತಮ್ಮ ತಂದೆಯು ಒಂದು ಜಾಗೆಯಲ್ಲಿ ಜ್ಯೋತಿಷಗಣನೆಯಲ್ಲಿ ತಪ್ಪಿ, ನಿಷ್ಕಾರಣವಾಗಿ ತನ್ನ ತಾಯಿಯ ಮೇಲೆ ವ್ಯಭಿಚಾರವನ್ನು ಆರೋಪಿಸಿದರೆಂದೂ ಹೇಳಿದನು. ಆಗ ತಂದೆ ಮಕ್ಕಳಿಬ್ಬರನ್ನೂ ಅರಸನು ಸನ್ಮಾನಿಸಿ, ತಂದೆ ಮಕ್ಕಳಿಬ್ಬರೂ ಕೂಡಿ ತಮ್ಮ ಉಭಯ ಚಾತುರ್ಯದಿಂದ ಹೊಸದೊಂದು ಅತ್ಯಂತ ಸುಂದರವಾದ ಗುಡಿಯನ್ನು ನಿರ್ಮಾಣ ಮಾಡಬೇಕೆಂದು ವಿಜ್ಞಾಪಿಸಿದನು. ಅದಕ್ಕೆ ಒಪ್ಪಿ, ಅವರಿಬ್ಬರೂ ಬೇಲೂರಲ್ಲಿರುವ ಈಗಿನ ಚೆನ್ನಕೇಶವ ದೇವಾಲಯವನ್ನು ನಿರ್ಮಿಸಿದರು. ಬೇಲೂರಿನಲ್ಲಿ ಈಗ ಎರಡು ಗುಡಿಗಳುಂಟು. ಮೊದಲನೆಯ ಗುಡಿಯಲ್ಲಿಯ ಚೆನ್ನಕೇಶವ ಮೂರ್ತಿಯು ನಾಭಿಕಮಲದ ಹತ್ತರ ಭಿನ್ನವಾಗಿದೆ, ಮತ್ತು ಆ ಗುಡಿಯ ಹತ್ತರವೇ ಈಗಿನ ಹೊಸಗುಡಿಯು ನಿಂತಿದೆ. ಇದರಿಂದ, ಮೇಲಿನ ಕಥೆಗೆ ಪುಷ್ಟಿ ದೊರೆಯುತ್ತದೆ, ಮುಂದೆ ಜಕಣಾಚಾರ್ಯರು ತಮ್ಮ ಹುಟ್ಟಿದ ಊರು ಆದ ಕೈದಾಳದಲ್ಲಿ ಕೇಶವನ ಗುಡಿಯೊಂದನ್ನು ಕಟ್ಟಿಸಿದ ಕೂಡಲೆ
ಅವರ ಕೈಯು ಮತ್ತೆ ಚಿಗುರಿತಂತೆ.
ಇರಲಿ, ಕರ್ನಾಟಕ ಪ್ರಾಚೀನ ಶಿಲ್ಪಿಗರಲ್ಲಿ ದಾಸೋಜ, ಮಲ್ಲೋಜ, ನಾಗೋಜ ಮುಂತಾದ ಹೆಸರುಗಳು ಬಹಳ ದೊರೆಯುತ್ತವೆ. ಇವರ ಕುಲ ಜಾತಿಗಳನ್ನು ಸಂಶೋಧಕರೇ ಗೊತ್ತುಹಚ್ಚಬೇಕು.
ಕನ್ನಡಿಗರೆ! ಈ ನಿಮ್ಮ ಕಟ್ಟಡಗಳನ್ನು ನೋಡಿ ಧನ್ಯರಾಗಬಾರದೇ ?