ಪುಟ:Vimoochane.pdf/೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಗಳಿಗೆಯಾಗೆತ್ತು. ನಾನು ಪತ್ರಿಕೆಗಳ ಮಾರಾಟ ಮುಗಿಸಿ, ತಂದೆಗಾಗಿ ಸೇಬು ಹಣ್ಣುಗಳನ್ನು ಕೊಂಡುಕೊಂಡು ಅದೇ ಆಗ ಮನೆಗೆ ಹಿಂತಿರುಗಿದ್ದೆ. ತಂದೆ ಮಲಗಿರಲಿಲ್ಲ. ಕಂಬಳಿ ಹೊದ್ದುಕೊಂಡು ಎದ್ದು ಕುಳಿ ತಿದ್ದ,-ನನ್ನ ಆಗಮನವನ್ನೇ ಇದಿರುನೋಡುತ್ತಿದ್ದನೇನೊ ಎನ್ನುವ ಹಾಗೆ. ನಾನು ಕೆಳಕ್ಕೆ ಇರಿಸಿದ ಸೇಬು ಹಣ್ಣುಗಳನ್ನು ಆತ ನೋಡಿದ.ಆತ ಓದಲೆಂದು ಮನೆಗೆ ತಂದಿದ್ದ ಒಂದು ಕನ್ನಡ ಪತ್ರಿಕೆಯನ್ನೂ ನೋಡಿದ. ಆದರೆ ಮಾತನಾಡಲಿಲ್ಲ.

"ಹೊರಕ್ಕೆ ಚಳಿ ಗಾಳಿ ಬೀಸ್ತಾ ಅದೇ. ಕದ ತೆರೆದಿಟ್ಟು ಯಾಕೆ ಕೂತ್ಕೂಂಡಿದೀಯಾ? ಬೆಚ್ಚಗಿರ್ಬೇಕೂಂತಲ್ವಾ ಡಾಕ್ಟರು ಹೇಳಿದ್ದು?"

"ಹೂಂ" ಎಂದು ತಂದೆ ನಿಟ್ಟುಸಿರು ಬಿಟ್ಟ. ಅಸಮಾಧಾನದ ಛಾಯೆ ಇತ್ತು ಆ ಸ್ವರದಲ್ಲಿ.

"ಯಾಕಪ್ಪಾ ಏನಾಯ್ತು?"

ತಂದೆ ಸುಮ್ಮನಿದ್ದ, ಸ್ವಲ್ಪ ಹೊತ್ತಿನ ಬಳಿಕ ಅವನ ಗಡಸು ಸ್ವರ ಕಂಪಿಸುತ್ತ ಕಂಪಿಸುತ್ತ ಹೊರಬಿತ್ತು.

"ಚಂದ್ರು, ಸತ್ಯ ಹೇಳ್ಬಿಡು. ನೀನು ಯಾಕೆ ಸ್ಕೂಲು ಬಿಟ್ಬುಟ್ಟೆ? ನಿಂಗೆ ಓದೋಕೆ ಇಷ್ಟ ಇರ್ಲಿಲ್ವ?"

'ಸ್ಕೂಲು ಬಿಟ್ಟುದು' ಸುಳ್ಳೆಂದು ಆಲ್ಲಗಳೆಯುವುದರಲ್ಲಿ ಅರ್ಥ ವಿರಲಿಲ್ಲ.ಆದರೆ ನಾನು ಓದುತ್ತಿಲ್ಲವೆಂದು ತಂದೆಗೆ ಹೇಳಿದವರು ಯಾರು-ಯಾರು?

"ಯಾರಪ್ಪಾ ಹಾಗೆ ನಿಂಗೆ ಹೇಳ್ದೋರು?"

"ಮೊದಲು ನನ್ನ ಪ್ರಶ್ನೆಗೆ ಉತ್ತರ ಕೊಡು."

"ಯಾಕೆ? ಯಾಕೆ ಸುಮ್ಮಗಿದ್ದೀಯಾ?"

"ಅಪ್ಪಾ,ಅಪ್ಪಾ"

"ಏನು ಹೇಳ್ಬಾರ್ದೇನು? ಎಲ್ಲರಂಗೇನೆ ನಾನೂ ಪೋಲಿಯಾ ದೇಂತ ಹೇಳ್ಬಾರ್ದೇನು?"

"ಇಲ್ವಪ್ಪ ಇಲ್ಲ............."