ಪುಟ:ಕರ್ನಾಟಕ ಗತವೈಭವ.djvu/೧೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೦ನೆಯ ಪ್ರಕರಣ - ಹೊಯ್ಸಳ ಯಾದವರು

೭೫


ರಾಜನು, ಈತನು ೧೧೭೩ ನೆಯ ಇಸವಿಯ ಜುಲೈ ೨೨ನೆಯ ದಿವಸ ದ್ವಾರಸಮುದ್ರದಲ್ಲಿ ಪಟ್ಟವೇರಿದನು. ಈತನು ಚಂಗಾಳ ಉಚ್ಚಂಗಿಯ ಪಾಂಡ್ಯ ಕಲಚೂರ್ಯ ಮುಂತಾದ ಅರಸರನ್ನು ಸೋಲಿಸಿದನು. ಆದರೆ ಎಲ್ಲಕ್ಕೂ ಮೇಲಾದ ಈತನ ಶೂರತನದ ಕೃತ್ಯವಾವುದೆಂದರೆ ಸೇವುಣ ಅಂದರೆ ದೇವಗಿರಿ ಯಾದವರ ದೊಡ್ಡ ಸೈನ್ಯವನ್ನು ಸೊರಟೂರಿನಲ್ಲಿ ಸೋಲಿಸಿದ್ದು. ಈ ಸೈನ್ಯದಲ್ಲಿ ಎರಡು ಲಕ್ಷ ಕಾಲಾಳುಗಳಿದ್ದುವು. ೧೧೯೩ರಲ್ಲಿ ಇವನು ಲಕ್ಕುಂದಿಯಲ್ಲಿ ವಾಸವಾಗಿದ್ದನು. ಆದರೆ ಮುಂದೆ ರಾಣೇಬೆನ್ನೂರ ತಾಲುಕಿನಲ್ಲಿರುವ ಹುಲ್ಲೂರ ಪಟ್ಟಣವನ್ನು ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡಿದ್ದನು, ಈತನು ೪೭ ವರ್ಷಗಳವರೆಗೆ ವೈಭವದಿಂದ ಆಳಿ ೧೨೨೦ರಲ್ಲಿ ಮಡಿದನು. ಈತನು ಮಡಿದ ಕೂಡಲೆ ಈತನ ಪರಮ ಭಕ್ತನಾದ ಲಕ್ಷ್ಯನೆಂಬವನೂ ಇವನ ಹೆಂಡತಿಯೂ ಒಂದು ಸಾವಿರ ಜನ ವೀರರೂ ಈತನ ಮೇಲಿನ ಪ್ರೇಮಾತಿಶಯದ ಮೂಲಕ ಆತ್ಮಹತ್ಯೆವನ್ನು ಮಾಡಿಕೊಂಡರು!
ತನ ತರುವಾಯದಲ್ಲಿ ಪಟ್ಟವೇರಿದ ೨ನೆಯ ನರಸಿಂಹನು ಪರಾಕ್ರಮಿಯಾದ ಅರಸನೇ. ಇವನು ಅನೇಕ ರಾಜ್ಯಗಳನ್ನು ಗೆದ್ದು ರಾಮೇಶ್ವರದಲ್ಲಿ ವಿಜಯ ಸ್ತಂಭವನ್ನೂರಿದನು. ಈತನು ದೇವಗಿರಿ ಯಾದವರನ್ನು ಸೋಲಿಸಿದನು.
ನರಸಿಂಹನ ಮಗನಾದ ಸೋಮೇಶ್ವರನೂ ಶೂರನೇ. ಆದರೆ ಈ ಸೋಮೇಶ್ವರನ ಮರಣದ ನಂತರ ಈ ರಾಜ್ಯದಲ್ಲಿ ಎರಡು ಭಾಗಗಳಾಗಿ ಕನ್ನಡ ರಾಜ್ಯವು ೩ನೆಯ ನರಸಿಂಹನ ಪಾಲಿಗೆ ಬಂದಿತು. ತಮಿಳು ರಾಜ್ಯವು ರಾಮನಾಥನೆಂಬ ಅವನ ತಮ್ಮನ ಪಾಲಿಗೆ ಹೋಯಿತು. ೩ನೆಯ ನರಸಿಂಹನು ದೇವಗಿರಿ ಯಾದವರನ್ನು ಬೆಳವಡಿಯಲ್ಲಿ ಸೋಲಿಸಿದನು. ಆದರೆ ಮುಂದೆ ೩ ನೆಯ ಬಲ್ಲಾಳನ ಕಾಲಕ್ಕೆ ಇವರ ರಾಜ್ಯದಲ್ಲಿ ಮುಸಲ್ಮಾನರ ಪ್ರವೇಶವಾಗಿ ಇವರ ವಂಶವು ನಷ್ಟ ವಾಯಿತು.

ಕೊಲ್ಲಾಪುರದ ಶಿಲಾಹಾರರು


ಲ್ಲಿಯವರೆಗೆ ನಾವು ಸ್ವತಂತ್ರ ರಾಜವಂಶಗಳನ್ನು ಹೇಳಿದೆವು. ಇನ್ನು ಮುಂದೆ ಸಾಗುವ ಮೊದಲು, ರಾಷ್ಟ್ರಕೂಟರ ಕಾಲಕ್ಕೂ ಚಾಲುಕ್ಯರ ಕಾಲಕ್ಕೂ ಪ್ರಾಬಲ್ಯಕ್ಕೆ ಬಂದ ಕೆಲವು ಮಾಂಡಲಿಕ ರಾಜವಂಶಗಳನ್ನು ಕುರಿತು ಹೇಳುವೆವು.