ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಚಿರಸ್ಮರಣೆ
" ಕರುಣಾಕರ ಶಾಲೆಗೆ ಬೇಗನೆ ಬಂದರೆ ಅಲ್ಲಿಯೇ ಪಾಠ ಹೇಳಿಕೊಬಹುದು. ಅದೇ ಮೇಲು ಅಲ್ಲವೇ?" ನಂಬಿಯಾರರು ಹುಬ್ಬು ಗಂಟಿಕ್ಕಿದರು. "ಯಾಕೆ. ನಿಮಗೆ ಸುಲಭವಾಗ್ತದೇಂತಲೋ?" "ಹಾಗಲ್ಲ, ಹೆಚ್ಚು ಹೊತ್ತು ಪಾಠ ಹೇಳಬಹುದು. ಶಾಲೆ ಶುರುವಾಗುವವದರೆಗೊ ಸಮಯವಿರ್ತದೆ." ನಂಬಿಯಾರರ ಗಂಟಿಕ್ಕಿದ ಹುಬ್ಬು ಸಡಿಲವಾಯಿತು. ಮಾಸ್ತರು ಹೇಳಿದ ಆ ಕಾರಣ ಪ್ರಾಮಾಣಿಕವಾದುದೆಂದು ಅವರು ನಂಬಿದರು. "ಆಗಲಿ, ಹಾಗೆಯೇ ಆಗಲಿ. ನಾಳೆಯಿಂದ ಅಲ್ಲಿಯೇ ಪಾಠ ಹೇಳ್ಕೊಡಿ," ....ಮುಂದೆ ಈ ರೀತಿಯ ಏರ್ಪಾಟಿನಿಂದ ಬೇರೊಂದು ಸಮಸ್ಯೆ ಹುಟ್ಟಿದುದನ್ನು ಕಂಡು ಮಾಸ್ತರಿಗೆ ತಮಾಷೆ ಎನಿಸಿತು. ನಂಬಿಯಾರರ ಮಗನಿಗೆ ವಿಶೇಷ ಪಾಠವೆಂದಾದರೆ ನಂಬೂದಿರಿಯ ಮಕ್ಕಳು ಮಾಡಿದ ತಪ್ಪೇನು? ನಂಬಿಯಾರರಷ್ಟೇ ಪ್ರಮುಖರಾದ ಆ ಜಮೀನ್ದಾರರೂ ತಮ್ಮ ಅಧಿಕಾರವನ್ನು ಚಲಾಯಿಸಿದರು. ಹೀಗಾಗಿ, ಮೂವರು ಹುಡುಗರಿಗೆ ಮಾಸ್ತರು ವಿಶೇಷ ಪಾಠ ಹೇಳಿಕೊಡಬೇಕಾಯಿತು. ಶಾಲೆಯ ಗೋಡೆಗೆ ಅಂಟಿಕೊಂಡೇ ಅದರ ಹಿಂಭಾಗದಲ್ಲಿದ್ದ, ಹುಲ್ಲು ಛಾವಣಿಯ ಕೊಠಡಿಯಲ್ಲಿ ಜಮೀನ್ದಾರರ ಮಕ್ಕಳಿಗೆ ಪಾಠ, ಆಗ ಶಾಲೆಯ ಹೊರಗೆ, ಹಿತ್ತಲಲ್ಲಿ, ಕಿವಿಯೊಡೆಯುವ ಹಾಗೆ ಇಪ್ಪತೈದು ಮೂವತ್ತರಷ್ಟು ಹುಡುಗರ ಗದ್ದಲ. ಜಮೀನ್ದಾರರ ಮಕ್ಕಳಿಗಿರುವ ವಿಶೇಷ ಸಲವತ್ತು ತಮಗೆ ಯಾಕಿಲ್ಲ?.....ಎಂದು ಆ ಮಕ್ಕಳು ಗೊಂದಲವೆಬ್ಬಿಸದಿದ್ದರೂ, ಆ ಶ್ರೀಮಂತ ಪುತ್ರರಿಗೆ ಪಾಠವಾಗುವಾಗ ತಾವು ಮೌನವಾಗಿರಬೇಕೆಂಬ ತತ್ತ್ವವನ್ನು ಮಾತ್ರ ಅವರು ಒಪ್ಪಲಿಲ್ಲ. 'ಸುಮ್ಮನಿರಿ!' ಎಂದು ಮಾಸ್ತರು ಅವರಿಗೆ ಹೇಳಲೂ ಇಲ್ಲ..... ಆ ಸಂದರ್ಭದಲ್ಲೊಂದು ರಾತ್ರೆ ಪಂಡಿತರು ಕಯ್ಯೂರಿಗೆ ಬಂದರು. ಅಪ್ಪು ಮತ್ತು ಚಿರುಕಂಡ ಪಂಡಿತರನ್ನು ಕಾಣದೆ ಆಗಲೇ ಒಂದು ವರ್ಷವಾಗಿತ್ತು. ಮತ್ತೆ ಅವರನ್ನು, ಅದೂ ತಮ್ಮ ಹಳ್ಳಿಯಲ್ಲೇ ಕಾಣುವಂತಾಯಿತೆಂದು ಹುಡುಗರಿಗಾದ ಸಂತೋಷ ಅಷ್ಟಿಷ್ಟಲ್ಲ. ಪಂಡಿತರೂ ಹುಡುಗರ ಹೆಗಲು ಮುಟ್ಟಿ, ಬೆನ್ನು ತಟ್ಟಿ, ಸುಖದುಃಖ ವಿಚಾರಿಸಿದರು. ಅವರ ಜತೆಯಲ್ಲಿ ಧಾಂಡಿಗನಿದ್ದ. ಬೆಂಗಾವಲಿಗೆ ಬಂದಿದ್ದ ಭಟ. ಆತ ಮೊದಲು ಹುಡುಗರನ್ನು ಮಾತನಾಡಿಸಲೇಯಿಲ್ಲ. ಗಂಭೀರವಾಗಿದ್ದ. ಆತ ತಮ್ಮ