ಕರ್ನಾಟಕ ಗತವೈಭವ/೧೪ನೆಯ ಪ್ರಕರಣ

ವಿಕಿಸೋರ್ಸ್ದಿಂದ



೧೧೦

ಕರ್ನಾಟಕ-ಗತವೈಭವ


೧೪ನೆಯ ಪ್ರಕರಣ


ಧಾರ್ಮಿಕ ಉನ್ನತಿ

ನ್ನಡಿಗರೇ, ಕರ್ನಾಟಕ ಅರಸರ ಕಾಲದಲ್ಲಿ ಧರ್ಮಜಾಗ್ರತಿಯು ಎಷ್ಟರ ಮಟ್ಟಿಗೆ ಆಗಿತ್ತೆಂಬುದನ್ನು ನಾವು ಸ್ವಲ್ಪದರಲ್ಲಿಯೇ ಹೇಳುವೆವು. ಈ ಪ್ರಕರಣದಲ್ಲಿ ಮೂರೇ ವಿಷಯಗಳನ್ನು ಕುರಿತು ಹೇಳತಕ್ಕವರಿದ್ದೇವೆ. ಅವು ಯಾವುವೆಂದರೆ(೧) ನಮ್ಮಲ್ಲಿಯ ಧಾರ್ಮಿಕ ಗುರುಗಳು ರಾಜಕಾರಣವನ್ನು ಧಿಕ್ಕರಿಸಲಿಲ್ಲವೆಂಬುದು, (೨) ದ್ವೈತ, ಅದ್ವೈತ, ವಿಶಿಷ್ಟಾದ್ವೈತ ಮುಂತಾದ ಪ್ರಬಲಮತಗಳ ಉತ್ಪತ್ತಿಗೂ ಹೆಚ್ಚಳಕ್ಕೂ ಕರ್ನಾಟಕವೇ ಹುಟ್ಟು ಭೂಮಿಯೆಂಬುದು, (೩)ನಮ್ಮ ಅರಸರು ಪರಧರ್ಮ ಸಹಿಷ್ಣುತೆಯುಳ್ಳವರಾಗಿದ್ದರೆಂಬುದು.

ಸಾಮಾನ್ಯವಾಗಿ ಸಮಾಲೋಚಿಸಿದರೆ, ಹಿಂದುಸ್ಥಾನದೊಳಗಣ ರಾಜ್ಯಗಳೆಲ್ಲವೂ ಮೊದಲು ಧಾರ್ಮಿಕ ಪರುಷರಿಂದಲೇ ಉಗಮ ಹೊಂದಿರುವುವು, ಅಥವಾ ಪೋಷಿಸಲ್ಪಟ್ಟಿರುವುವು ಎಂದು ಕಂಡುಬರುವುದು. ಶ್ರೀರಾಮಚಂದ್ರನಿಗೆ ವಸಿಷ್ಠ - ವಿಶ್ವಾಮಿತ್ರರೇ ರಾಜಕೀಯ ಗುರುಗಳು; ಅರ್ಜುನನಿಗೆ ಶ್ರೀಕೃಷ್ಣನೂ ಯುಧಿಷ್ಠಿರನಿಗೆ ಭೀಷ್ಮಾಚಾರ್ಯರೂ ರಾಜ ನೀತಿಯ ಉದ್ಭೋಧಕರಾಗಿದ್ದರು. ಇಹಲೋಕದ ಸುಖಕ್ಕೆ ಮೆಚ್ಚಿ ಮರುಳಾಗದ ಪಂಡಿತರೇ ರಾಜವೈಭವವನ್ನು ಬೆಳೆಸಲಿಕ್ಕೆ ರಾಜರಿಗೆ ಸಹಾಯಕರ್ತರೂ ಉಪದೇಶಕರೂ ಆದರು. ಇವರು ತಮ್ಮ ಸುತ್ತಲೂ ಸಂಪತ್ತಿಯ ರಾಶಿಯು ಒಟ್ಟಿದ್ದರೂ, ಮತ್ತು ಆ ರಾಶಿಯನ್ನು ಹುಟ್ಟಿಸುವುದಕ್ಕೆ ತಾವೇ ಕಾರಣರಾಗಿದ್ದರೂ, ಅದರೊಳಗೆ ತಮ್ಮ ಮನಸ್ಸನ್ನು ತೊಡಕಿಸಿ ಅಂಧರಾಗಲಿಲ್ಲ. ಆದುದರಿಂದ, ಅವರು ಮಾಡಿದ ಉಪದೇಶವು ಸ್ವಾರ್ಥ ಬುದ್ಧಿಯಿಂದ ಆಲಿಪ್ತವಾಗಿ ಉಳಿಯುತ್ತಿತ್ತು. ಇದೊಂದು ಹಿಂದೂ ದೇಶದ ವೈಲಕ್ಷಣ್ಯವೆಂದೇ ಹೇಳಬೇಕು. ಬ್ರಾಹ್ಮಣರಾಗಲಿ ಬೇರೆ ಧಾರ್ಮಿಕ ಗುರುಗಳಾಗಲಿ ರಾಜಕೀಯ ಅವನತಿಯ ಕಾಲಕ್ಕೆ ಅದಕ್ಕೆ ಸಹಾಯವನ್ನೀಯಲಿಕ್ಕೂ “ಶಾಪಾದಪಿ ಶರಾದಪಿ” ಎಂಬಂತೆ, ಸಮಯ ಬಂದರೆ ತಾವೇ ಕೈಯಲ್ಲಿ ಖಡ್ಗ ಧರಿಸಲಿಕ್ಕೂ ಮುಂದಾಗಿರುವಂಥ ಸಂಗತಿಗಳು ನಮ್ಮ ಭಾರತೀಯ ಇತಿಹಾಸ 

೧೪ನೆಯ ಪ್ರಕರಣ - ಧಾರ್ಮಿಕ ಉನ್ನತಿ.

೧೧೧


ದಲ್ಲೇನೂ ಒಂದೆರಡಿಲ್ಲ. ಪ್ರಸ್ತುತಕ್ಕೆ ನಮಗೆ ಕೇವಲ ಕರ್ನಾಟಕದ ವಿಚಾರವೇ ಕರ್ತವ್ಯವಿರುವುದರಿಂದ, ಆ ದೃಷ್ಟಿಯಿಂದಲೇ ನಾವು ಅದನ್ನು ವಿಮರ್ಶಿಸೋಣ.

ಕರ್ನಾಟಕದೊಳಗೆಲ್ಲಾ ಕದಂಬರು ಬಹಳ ಪ್ರಾಚೀನದ ಅರಸುಮನೆತನದವರು. ಈ ವಂಶದ ಮೂಲಪುರುಷನು ಮಯೂರಶರ್ಮನೆಂಬ ಬ್ರಾಹ್ಮಣನು. ಇವನು ವೇದಾಧ್ಯಯನ ಮಾಡಬೇಕೆಂಬ ಅಪೇಕ್ಷೆಯಿಂದ ಕಂಚಿಗೆ ಹೋಗಿರಲು, ಯಾವ ಕಾರಣದಿಂದಲೋ ಅವಮಾನಿತನಾದನು, ಮತ್ತು "ಕ್ಷತ್ರಿಯ ರಾಜರು ಬ್ರಾಹ್ಮಣರಿಗೆ ಅಪಮಾನ ಮಾಡುವುದಕ್ಕೆ ಅವರೇನು ಹೆಚ್ಚಿನವರು" ಎಂದು ಅವನ ಮನಸ್ಸಿನಲ್ಲಿ ಉದ್ಭವಿಸಿ ಅವನು ಕ್ಷತ್ರಿಯ ವೃತ್ತಿಯನ್ನು ಕೈಕೊಂಡನು. ಸಾರಾಂಶ:- ಆ ಅಪಮಾನವೇ ಅವನ ಕ್ಷತ್ರಿಯ ವೃತ್ತಿಗೆ ಬೀಜವಾಯಿತು. ಇದರಿಂದ, ಮೊದಲು ವೇದ ಪಠಿಸುತ್ತಿರುವವನು ಒಮ್ಮಿಂದೊಮ್ಮೆ ಶಸ್ತ್ರಧಾರಿಯಾಗಿ ಅದೇ ಪಲ್ಲವ ರಾಜರನ್ನು ಸೋಲಿಸಿ “ಕದಂಬ” ವಂಶವನ್ನು ಸ್ಥಾಪಿಸಿದನು. ಕದಂಬರ ಕಾಲೀನರಾದ 'ಗಂಗ' ಅರಸರಿಗೆ ಜೈನರು ಗುರುಗಳಾಗಿದ್ದರು. ಸಿಂಹನಂದಿಯೆಂಬ ಜೈನ ಗುರುವು ದಡ್ಡಿಗನ ಅಥವಾ ೨ನೆಯ ಮಾಧವನ ಗುರುವಾಗಿದ್ದನು. ಇವನೇ ಗಂಗರಾಜವಂಶದ ಅಸ್ತಿವಾರವನ್ನು ಹಾಕಿದನು. ಅದೇ ಮೇರೆಗೆ ಶಬ್ದಾವತಾರವೆಂಬ ವ್ಯಾಕರಣ ಗ್ರಂಥವನ್ನು ರಚಿಸಿದ ಪೂಜ್ಯಪಾದನೆಂಬವನು ದುರ್ವಿನೀತನ ಗುರುವಾಗಿದ್ದನು.

ಚಾಲುಕ್ಯರ ಅರಸನಾದ ರಾಜಸಿಂಹನಿಗೆ ಆಶ್ರಯಕೊಟ್ಟವನೂ ವಿಷ್ಣುಗೋಪನೆಂಬ ಬ್ರಾಹ್ಮಣನೇ. ರಾಜಸಿಂಹನ ತಂದೆಯಾದ ಜಯಸಿಂಹನು ಪಲ್ಲವರೊಡನೆ ಕಾದಿ ಮಡಿದ ಕಾಲಕ್ಕೆ, ಅವನ ಹೆಂಡತಿಯು ಬಸುರಾಗಿದ್ದಳು. ಅವಳಿಗೆ ಈ ವಿಷ್ಣು ಗೋಪನು ಆಶ್ರಯವನ್ನಿತ್ತು ರಾಜಸಿಂಹನನ್ನು ದೊಡ್ಡವನನ್ನಾಗಿ ಮಾಡಿದನು. ಈ ರಾಜಸಿಂಹನೇ ಚಾಲುಕ್ಯ ರಾಜ್ಯವನ್ನು ಮರಳಿ ಸ್ಥಾಪಿಸಿದನು. ಮತ್ತು ತನ್ನನ್ನು ರಕ್ಷಿಸಿದ ವಿಷ್ಣುಗೋಪನ ಸ್ಮರಣಾರ್ಥವಾಗಿ ವಿಷ್ಣುವರ್ಧನನೆಂದು ಹೆಸರಿಟ್ಟು ಕೊಂಡನು.

ರಾಷ್ಟ್ರಕೂಟರ ಪ್ರಖ್ಯಾತ ರಾಜನಾದ ನೃಪತುಂಗನ ಗುರು, ಆದಿಪುರಾಣದ ಕರ್ತನಾದ ಜಿನಸೇನನೆಂಬವನು. ಹೊಯ್ಸಳ ರಾಜ್ಯವು “ಸುದತ್ತ” ನೆಂಬ ಸನ್ಯಾಸಿಯ ಪ್ರೇರಣೆಯಿಂದಲೇ ಸ್ಥಾಪಿತವಾಯಿತು. ಈ ವಂಶಕ್ಕೆ ಸಂಬಂಧಪಟ್ಟ

೧೧೨

ಕರ್ನಾಟಕ ಗತವೈಭವ


ವಿಷ್ಣುವರ್ಧನ ಅಥವಾ ಬಿಟ್ಟಿದೇವನಿಗೆ ರಾಮಾನುಜಾಚಾರ್ಯರೇ ಗುರುಗಳು. ಕಡೆಗೆ, ಶ್ರೀ ವಿದ್ಯಾರಣ್ಯರು ತಮ್ಮ ಜಗದ್ಗುರು ಪೀಠವನ್ನು ಸಹ ತ್ಯಾಗ ಮಾಡಿ, ಹುಕ್ಕಬುಕ್ಕರ ಸಹಾಯಾರ್ಥವಾಗಿ ಧಾವಿಸಿ, ವಿಜಯನಗರ ಸಾಮ್ರಾಜ್ಯಕ್ಕೆ ತಳಹದಿಯನ್ನು ಹಾಕಿದ ಸಂಗತಿಯೂ ಈ ತತ್ವವನ್ನೇ ಬಲಪಡಿಸುತ್ತದೆ. ಈ ಕಾರಣದಿಂದಲೇ ಅವರಿಗೆ "ಕರ್ನಾಟಕ ಸಿಂಹಾಸನ ಸ್ಥಾಪನಾಚಾರ್ಯ"ರೆಂದು ಗೌರವದ ಬಿರುದು ಪ್ರಾಪ್ತವಾಯಿತು. ಈ ವಿದ್ಯಾರಣ್ಯರು ಮೂರು ತಲೆಯವರೆಗೆ ರಾಜಕೀಯ ಗುರುಗಳಾಗಿ, ಎಡೆತಡೆಯಿಲ್ಲದೆ ರಾಜ್ಯ ಸೂತ್ರಗಳನ್ನು ನಡೆಸಿದರೂ, ತಾವು ರಾಜ ವೈಭವದಿಂದ ಅಲಿಪ್ತರೇ ಇದ್ದರು. ಅದೇ ಮೇರೆಗೆ ವಿಜಯನಗರದ ಅರಸರಿಗೆ 'ಕ್ರಿಯಾಶಕ್ತಿ ಪಂಡಿತ' ರೆಂಬವರೂ ಗುರುಗಳಾಗಿದ್ದರು, ಸಾರಾಂಶ:- ಕರ್ನಾಟಕದ ಧಾರ್ಮಿಕ ಇತಿಹಾಸದಲ್ಲಿ ನೆನಪಿನಲ್ಲಿಡತಕ್ಕ ಮೊದಲನೆಯ ಸಂಗತಿಯು- ದೇಶಕ್ಕೆ ಸಂಕಟವೊದಗಿದಾಗ, ಸಾಮಾನ್ಯತಃ ಐಹಿಕ ಸುಖದಿಂದ ಅಲಿಪ್ತರಾಗಿರುವವರೇ, ಯೋಗ್ಯ ಜನರಿಗೆ ಕ್ಷಾತ್ರತೇಜವನ್ನು ಪ್ರಕಟಗೊಳಿಸುವಂತೆ ಪ್ರೇರಿಸಿ, ಅವರಿಂದ ರಾಜ್ಯಗಳನ್ನು ಸ್ಥಾಪಿಸಿ ತಾವು ಮಾತ್ರ ವಿಷಯಸುಖದಲ್ಲಿ ತೊಡಕಿಕೊಳ್ಳದೆ ವಿದ್ಯಾವ್ಯಾಸಂಗದಲ್ಲಿ ಜನ್ಮವನ್ನು ಕಳೆಯುತ್ತಿದ್ದರೆಂಬುದು. ರಾಜಕೀಯ ವಿಷಯಕ್ಕೂ ಧರ್ಮಕ್ಕೂ ಏನೇನೂ ಸಂಬಂಧವಿಲ್ಲವೆಂದು ಕೊಚ್ಚುವವರು ಈ ನಮ್ಮ ಪೂರ್ವಪರಂಪರೆಯನ್ನು ಲಕ್ಷ್ಯದಲ್ಲಿಡಬೇಕು.

ಧಾರ್ಮಿಕ ಇತಿಹಾಸದಲ್ಲಿಯ ಎರಡನೆಯ ಮಹತ್ವದ ಸಂಗತಿಯೇನೆಂದರೆ ದ್ವೈತ ಅದ್ವೈತ ವಿಶಿಷ್ಟಾದ್ವೈತ ಮುಂತಾದ ಪ್ರಬಲ ಮತಗಳಿಗೆ ಕರ್ನಾಟಕವೇ ತವರು ಮನೆಯಾಗಿತ್ತೆಂಬುದು. ಕ್ರಿಸ್ತಶಕದ ಪ್ರಾರಂಭಕ್ಕೆ ಇಲ್ಲಿ ಬೌದ್ಧ ಧರ್ಮವು ಪ್ರಬಲವಾಗಿತ್ತೆಂದೂ, ಅನಂತರ ಅನೇಕ ನೂರು ವರ್ಷಗಳವರೆಗೆ ಜೈನ ಧರ್ಮವು ಹಬ್ಬಿಕೊಂಡಿತ್ತೆಂದೂ, ಅನಂತರ ಶೈವಧರ್ಮಕ್ಕೆ ಉಕ್ಕು ಬಂತೆಂದೂ, ಕೊನೆಗೆ ವೈಷ್ಣವಧರ್ಮವು ಹೆಚ್ಚಿತೆಂದೂ ಸಾಮಾನ್ಯವಾಗಿ ಹೇಳಬಹುದು. ಆದರೆ ದಕ್ಷಿಣ ಹಿಂದುಸ್ಥಾನದಲ್ಲಿ, ಯಾವಾಗಲೂ ಬೌದ್ಧ ಧರ್ಮಕ್ಕಿಂತಲೂ ಜೈನಧರ್ಮವೇ ಪ್ರಬಲವಾಗಿತ್ತು, ಕರ್ನಾಟಕದ ಮೊದಲಿನ ಕವಿಶ್ರೇಷ್ಠರೂ ನೃಪಶ್ರೇಷ್ಠರೂ ಜೈನಧರ್ಮದವರೇ ಆಗಿದ್ದರು.

ಜೈನಮತವನ್ನು ಸಮಂತಭದ್ರನು ೨ನೆಯ ಶತಮಾನದಲ್ಲಿಯೂ ಅಕಲಂಕನು 

೧೪ನೆಯ ಪ್ರಕರಣ-- ಧಾರ್ಮಿಕ ಉನ್ನತಿ.

೧೧೩


೮ ಅಥವಾ ೯ನೆಯ ಶತಮಾನದಲ್ಲಿಯೂ ಬೋಧಿಸಿದರು, ಜೈನರ ಪ್ರಮುಖ ಗ್ರಂಥಗಳಿಗೆಲ್ಲ ನೃಪತುಂಗನ ಗುರುವಾದ ಜಿನಸೇನಾಚಾರ್ಯರೇ ಪ್ರಣೇತಾರರು. ತರ್ಕಶಾಸ್ತ್ರಾದಿ ಪಾರಗನಾದ ಲಕುಲೀಶನು ಶೈವೋಪಾಸನೆಯನ್ನು ಪ್ರಚಾರಗೊಳಿಸಿದನು. ಇವನು ಒಂದನೆಯ ಶತಮಾನದಲ್ಲಿದ್ದನೆಂದು ಹೇಳುತ್ತಾರೆ. ಶಂಕರಾಚಾರ್ಯರು ೮ನೆಯ ಶತಕದಲ್ಲಿ ಇದ್ದರು. ೧೨ನೆಯ ಶತಮಾನದಲ್ಲಿ ರಾಮಾನುಜಾಚಾರ್ಯರ ಉದಯವು, ೧೨ನೆಯ ಶತಮಾನದ ಮಧ್ಯಭಾಗದಲ್ಲಿ ವೀರಶೈವಮತವು ಬಸವೇಶ್ವರ ಚನ್ನಬಸವರಿಂದ ಉದ್ಧರಿಸಲ್ಪಟ್ಟಿತು. ೧೩ ನೆಯ ಶತಮಾನದಲ್ಲಿ ಮಧ್ವಾಚಾರ್ಯರು ದ್ವೈತಮತವನ್ನು ಸ್ಥಾಪಿಸಿದರು. ಇದರ ಮೇಲಿಂದ ಈಗ ಭರತಖಂಡದಲ್ಲೆಲ್ಲ ಪ್ರಾಮುಖ್ಯ ಹೊಂದಿ ಪ್ರಚಲಿತವಿರುವ ಮತಗಳು ಮೊದಲು ಕರ್ನಾಟಕದಲ್ಲಿಯೇ ಹುಟ್ಟಿದುವೆಂಬುದನ್ನು ಒಡೆದು ಹೇಳಬೇಕಾದುದಿಲ್ಲ. ಒಂದು ಬಗೆಯಿಂದ ನೋಡಲು, ಇಡೀ ಹಿಂದೂ ದೇಶವೇ ಧರ್ಮಾಚಾರ್ಯರ ವಿಷಯದಲ್ಲಿ ಕರ್ನಾಟಕಕ್ಕೆ ಋಣಿಯಾಗಿರುವುದೆಂದರೂ ಅತಿಶಯೋಕ್ತಿ ದೋಷವು ಬಾರದು. ತಮ್ಮ ನಾಡಿನ ಈ ಅಸಾಧಾರಣವಾದ ಧಾರ್ಮಿಕ ಸಂಪತ್ತಿಗಾಗಿ ಕನ್ನಡಿಗರು ಅಭಿಮಾನಪಡುವುದು ಯಥಾರ್ಥವಾಗದೇ !

ಇನ್ನು, ನಮ್ಮ ಅರಸರ ಪರಧರ್ಮಸಹಿಷ್ಣುತೆಯನ್ನು ವರ್ಣಿಸುವ. ಇದು ನಮ್ಮ ರಾಷ್ಟ್ರೀಯ ಸದ್ಗುಣವಾಗಿದೆ. ತನ್ನ ಬುದ್ಧಿ ಸಾಮರ್ಥ್ಯದಿಂದ ಮಾತ್ರವೇ ನಮ್ಮ ಧರ್ಮಗುರುಗಳು ಜನರ ಮೇಲೆ ತಮ್ಮ ವರ್ಚಸ್ಸನ್ನು ಕೂಡಿಸುತ್ತಿದ್ದರು. ಅಲ್ಲದೆ, ಮಿಕ್ಕ ಯಾವ ಉಪಾಯಗಳನ್ನೂ ಅವರು ಅವಲಂಬಿಸಲಿಲ್ಲ. ನಮ್ಮ ಅರಸರೂ, ತಮ್ಮ ಪ್ರಜೆಗಳು ತಮಗೆ ಇಷ್ಟ ತೋರಿದ ಧರ್ಮವನ್ನೇ ಅನುಸರಿಸಬೇಕೆಂದು ಕಟ್ಟು ಮಾಡಿದ್ದರು. ಹೀಗಿರುವುದರಿಂದ, ಆಯಾಕಾಲದ ರಾಜರು ಜೈನರೇ ಆಗಿರಲಿ, ಬೌದ್ದರೇ ಆಗಿರಲಿ, ಶೈವರೇ ಆಗಿರಲಿ ಅಥವಾ ವೈಷ್ಣವರೇ ಆಗಿರಲಿ, ಪ್ರತಿಯೊಂದು ಧರ್ಮದವರನ್ನು ಸಮಾನವಾಗಿಯೇ ಭಾವಿಸುತ್ತಿದ್ದರು. ಈ ಅವರ ಧರ್ಮೌದಾರ್ಯದ ದೆಸೆಯಿಂದ ಇಂಥಿಂಥ ರಾಜರು ಇಂಥಿಂಥ ಧರ್ಮದವರಾಗಿದ್ದರೆಂಬುದನ್ನು ನಿಷ್ಕರ್ಷಿಸುವುದೇ ಕಷ್ಟವಾಗಿರುತ್ತದೆ. ಆದರೂ ಕದಂಬ ಗಂಗರು ಜೈನರೆಂದೂ, ಬಾದಾಮಿಯ ಚಾಲುಕ್ಯರು ವೈಷ್ಣವರೆಂದೂ, ರಾಷ್ಟ್ರಕೂಟರಲ್ಲಿ ಕೆಲವರು ಶೈವರು ಕೆಲವರು ಜೈನರೆಂದೂ, ಕಲ್ಯಾಣ ಚಾಲುಕ್ಯ

೧೧೪

ಕರ್ನಾಟಕ ಗತವೈಭವ


ರಲ್ಲಿ ಕೆಲವರು ಶೈವರು ಕೆಲವರು ವೈಷ್ಣವರೆಂದೂ ವಿಜಯನಗರದ ಅರಸರಲ್ಲಿಯೂ ಕೆಲವರು ಶೈವರು ಕೆಲವರು ವೈಷ್ಣವರೆಂದೂ ಸ್ಥೂಲಮಾನದಿಂದ ಹೇಳಬಹುದು. ಅದು ಹೇಗೇ ಇರಲಿ! ಎಲ್ಲರೂ ಅತ್ಯಂತ ಪರಧರ್ಮ ಸಹಿಷ್ಣುಗಳಾಗಿದ್ದರೆಂಬುದಂತೂ ನಿರ್ವಿವಾದವೇ! ಜಿನ, ವಿಷ್ಣು, ಶಿವ ಈ ಮೂರ್ತಿಗಳು ಒಂದೆಡೆಯಲ್ಲಿ ಸ್ಥಾಪಿತವಾದ ಉದಾಹರಣೆಗಳುಂಟು. ಅದೇ ಮೇರೆಗೆ ಬ್ರಹ್ಮ ವಿಷ್ಣು ಮಹೇಶ್ವರ ಮೂರ್ತಿಗಳನ್ನೂ ಒಂದೆಡೆಯಲ್ಲಿ ಕಾಣಬಹುದು.
ಈ ಕೆಳಗಿನ ಶ್ಲೋಕವು ನಮ್ಮ ಧಾರ್ಮಿಕ ಸಹಿಷ್ಣುತೆಯನ್ನು ಚೆನ್ನಾಗಿ ಹೊರಪಡಿಸುತ್ತದೆ.

यं शैवाः समुपासते शिव इति ब्रह्मेति वेदान्तिनो|
 बौद्धाः बुद्ध इति प्रमाणपटवः कर्तेति नैयायिकाः॥
अहश्चेति ह जैनशासनपराः कर्मेति मीमांसकाः|

 सायं वो विदधातु इच्छितफलं श्रीशवस्सर्वदा॥
ಸಾರಾಂಶ:-"ಶೈವರು ಶಿವನಂದೂ ವೇದಾಂತಿಗಳು ಬ್ರಹ್ಮನೆಂದೂ ಬೌದ್ದರು ಬುದ್ಧನೆಂದೂ ಪ್ರಮಾಣ ಪಟುಗಳಾದ ನೈಯಾಯಿಕರು ಕರ್ತನೆಂದೂ ಜೈನರು ಅರ್ಹನೆಂದೂ ಮೀಮಾಂಸಕರು ಕರ್ಮವೆಂದೂ - ಹೀಗೆ ನಾನಾ ಜನರು ನಾನಾ ವಿಧವಾಗಿ ಉಪಾಸನೆಗೈಯುವ ಶ್ರೀ ಕೇಶವನು ನಮಗೆ ಸದಾ ವಾಂಛಿತ ಫಲವನ್ನೀಯಲಿ.”

ಇದು ಬೇಲೂರಲ್ಲಿಯ ಒಂದು ಶಿಲಾಲೇಖದೊಳಗಿನ ಶ್ಲೋಕವು.
ಧರ್ಮ ಸಹಿಷ್ಣುತೆಯ ಮತ್ತೊಂದು ಬೋಧಪ್ರದವಾದ ಉದಾಹರಣೆಯನ್ನು ಕೊಟ್ಟು ಈ ಪ್ರಕರಣವನ್ನು ಮುಗಿಸುವೆವು.
೧೩೬೮ ನೆಯ ವರ್ಷದಲ್ಲಿ ವಿಜಯನಗರದೊಳಗೆ ಬುಕ್ಕಮಹಾರಾಯನು ಆಳುತ್ತಿರಲು, ಜೈನರು ವೈಷ್ಣವರಿಂದ ತಮ್ಮ ಧರ್ಮಾಚರಣಕ್ಕೆ ವ್ಯತ್ಯಯವುಂಟಾಗುವುದೆಂದು ಅವನಿಗೆ ದೂರು ಹೇಳಿಕೊಂಡರು. ಆಗ, ಬುಕ್ಕರಾಯನು ಎರಡು ಪಂಥದ ಮುಖಂಡರನ್ನೂ ಕರೆಯಿಸಿ, ಪ್ರತಿಯೊಬ್ಬರು ತಮ್ಮ ತಮ್ಮ ಧರ್ಮದಂತೆ ನಡೆಯಬೇಕು, ಒಬ್ಬರು ಮತ್ತೊಬ್ಬರ ಧರ್ಮಾಚರಣೆಗೆ ಅಡ್ಡ ಬರಬಾರದು.” ಎಂದು ವಿಧಿಸಿದನು. ಅಲ್ಲದೆ, ಅವನು ಸ್ವತಃ ಜೈನರ ಕೈಯಲ್ಲಿ ವೈಷ್ಣವರ