ನಾಸ್ತಿಕ ಕೊಟ್ಟ ದೇವರು/ಮೇಲ್ನುಡಿ

ವಿಕಿಸೋರ್ಸ್ದಿಂದ

pages ೧೬೬-೧೭೮

೧೬೦

ಮೇಲ್ನುಡಿ

ಕನ್ನಡದ ಇಂದಿನ ಲೇಖಕರಲ್ಲಿ ನಿರಂಜನರ ಹೆಸರು ಎಲ್ಲರಿಗೂ
ಪರಿಚಿತವಾದುದೇ. 'ನಿರಂಜನ' ಎಂಬುದನ್ನು ಮೊದಲು ಕಾವ್ಯನಾಮ
ವಾಗಿ ಕುಳುಕುಂದ ಶಿವರಾಯರು ಬಳಸಿದರೂ, ಈಗ ಅದು ಆವರಣ
ಗುರುತುಗಳನ್ನು ಕಳೆದುಕೊಂಡು ಅವರ ನಾಮಧೇಯವಾಗಿದೆ. ಪತ್ರಿಕಾ
ವೃತ್ತಿಯಲ್ಲಿ ಪಳಗಿದ ಇವರ ಲೇಖನಿ ಕಥೆ ಕಾದಂಬರಿಗಳಲ್ಲಿ ಅನುರಕ್ತ
ವಾಗಿದೆ. ಸುಮಾರು ಇಪ್ಪತ್ತೈದು ಕಾದಂಬರಿಗಳನ್ನೂ ಹತ್ತಾರು ಕಥಾ
ಸಂಕಲನಗಳನ್ನೂ ಅನೇಕ ಅನುವಾದ ಗ್ರಂಥಗಳನ್ನೂ ರಚಿಸಿರುವ ನಿರಂಜನ,
ಇತರ ಸಾಹಿತ್ಯ ಪ್ರಕಾರಗಳಲ್ಲಿಯೂ ಗ್ರಂಥಗಳನ್ನು ಹೊರತಂದಿದ್ದಾರೆ.
ಅವುಗಳಲ್ಲಿ ನಾಟಕಗಳು ಪತ್ರಸಂಕಲನಗಳು ಮುಖ್ಯವಾದುವು. ಈ ವರೆಗೆ
ಅವರ ಒಟ್ಟು ಕೃತಿಗಳ ಸಂಖ್ಯೆ ಐವತ್ತನ್ನು ಮಿಕ್ಕಿದೆ.
'ಬನಶಂಕರಿ', 'ಚಿರಸ್ಮರಣೆ', 'ರಂಗಮ್ಮನ ವಠಾರ', 'ಕಲ್ಯಾಣ
ಸ್ವಾಮಿ', 'ಸ್ವಾಮಿ ಅಪರಂಪಾರ' ಮುಂತಾದುವು ಅವರ ಉತ್ತಮ
ಕಾದಂಬರಿಗಳು. ಅವರ ಸಣ್ಣಕಥೆಗಳಲ್ಲಿ ಸ್ವಾರಸ್ಯವಾದ ಕೆಲವನ್ನು ಈ
ಸಂಕಲನದಲ್ಲಿ ನಾವು ನೋಡಬಹುದು.ಈ ಮೇಲ್ನುಡಿಯಲ್ಲಿ ನಿರಂಜನರ ಈ
ಕಥೆಗಳ ಪರಿಚಯಮಾಡಿಕೊಡಲು ಪ್ರಯತ್ನ ಮಾಡಿದೆ. ವಾಸ್ತವತೆಯನ್ನು
ಚಿತ್ರಿಸುವುದರಲ್ಲಿಯೂ, ವಿಡಂಬನೆಯನ್ನು ಸರಿಯಾಗಿ ಮಾಡುವುದ
ರಲ್ಲಿಯೂ, ಭಾವಕ್ಕೆ ಸರಿಯಾದ ಶೈಲಿಯನ್ನಳವಡಿಸುವುದರಲ್ಲಿಯೂ
ಸಾಮರ್ಥ್ಯವನ್ನು ಪಡೆದಿರುವ ನಿರಂಜನರ ಕಥೆಗಳ ಮುಂದಿನ ವಿಶ್ಲೇಷಣೆ
ಯಿಂದ ಓದುಗರಿಗೆ ಸಹಾಯವಾಗಬಹುದೆಂದು ಲೇಖಕನ ಆಸೆ.

ನಾಸ್ತಿಕ ಕೊಟ್ಟ ದೇವರು
ಕಲೆಗಾರ ಸೀತಾಪತಿ ಘಟ್ಟದ ಸೀಮೆಗೆ ಅಲ್ಲಿನ ರಮ್ಯ ವಾತಾವರಣದ
ಸುಖಾಸ್ವಾದನೆಗಾಗಿ ಬಂದರೆ ಅಲ್ಲಿ ಅವನಿಗೆ ದೊರಕಿದುದು ಅದಕ್ಕೆ ವಿರುದ್ಧ

ವಾದುದೇ. ಬಯಲುನಾಡಿನ ಬಡವರ ಸೇನೆ ಅಲ್ಲಿ ಬಂದು ದುಡಿಮೆಗಾಗಿ


ಮೇಲ್ನುಡಿ

೧೬೧

ಬೀಡುಬಿಟ್ಟಿತ್ತು. ಇಲ್ಲಿಗೆ ಒಂದು ಸಲ ಬಂದರಾಯಿತು ಮುಂದಿನ ಸಲವೂ
ಬರುವುದಕ್ಕೆ ಬೇಕಾದಷ್ಟು ಸಾಲದ ಭಾರವನ್ನು ಹೊತ್ತೇ ಊರಿಗೆ ಹಿಂದಿರುಗು
ವುದು. ಮತ್ತೆ ಈ ಚಕ್ರಕ್ಕೆ ನಿಲುಗಡೆಯೇ ಇಲ್ಲ. ಇಂಥ ಬಿಕ್ಕಟ್ಟಿನಲ್ಲಿ
ಸಿಕ್ಕಿದ್ದ ಒಂದು ಕುಟುಂಬದ ಹೆಣ್ಣು ಬಯಲುಸೀಮೆಯ ಅರ್ಧ ಊಟವಾ
ದರೂ ಸಾಕೆಂದು ಹಿಂದಿನ ಆವರಣವನ್ನೆ ಬಯಸುವುದರಲ್ಲಿ ತುಂಬ ಅರ್ಥ
ವಿದೆ. ಇದನ್ನು ಸೀತಾಪತಿಗೆ ತಿಳಿಸಿದ್ದು ಯಾವ ವ್ಯಕ್ತಿಯೂ ಅಲ್ಲ; ಅವನ
ಕಿವಿಯಮೇಲೆ ಅಯಾಚಿತವಾಗಿ ಬಿದ್ದ "ತಿಗಳರ ಏಕಾಂತ".
ಕಲಾವಿದನ ಮನಸ್ಸಿನ ಮೇಲಾದ ಗಾಢ ಪರಿಣಾಮದ ಪ್ರತಿಫಲವಾಗಿ
ಒಂದು ಕಲಾಕೃತಿ ಜೇಡಿಯ ಮಣ್ಣಿನಿಂದ ನಿರ್ಮಾಣವಾಯಿತು—
ಹುಟ್ಟೂರಿನತ್ತ ಕೈಚಾಚಿ ಹಂಬಲದ ದೃಷ್ಟಿ ಬೀರಿದ ಬಡಪಾಯಿಗಳ ಪ್ರತಿನಿಧಿ.
ಇದರಿಂದ ಕಲಾವಿದನಿಗೆ ತೃಪ್ತಿಯಾಯ್ತು.
ಅಲ್ಲಿನ ಧರ್ಮಗುರುಗಳು ಬಂದು ಒಂದು ದೇವರ ವಿಗ್ರಹ ನಿರ್ಮಾ
ಣಕ್ಕೆ ಒತ್ತಾಯಹಾಕಿದರು. ಇದು ಸೀತಾಪತಿಗೆ ಇಷ್ಟವಿಲ್ಲದ ಕೆಲಸ.
ತೋಟದಿಂದ ಯಾರೂ ವಾಪಸು ಓಡಿಹೋಗದಂತೆ ಮಾಡಲು ತೋಟದ
ಯಜಮಾನ ಧರ್ಮಗುರುಗಳ ಮರೆಹೊಕ್ಕು ಈ ದೇವ ವಿಗ್ರಹವನ್ನು
ತಯಾರುಮಾಡಿಸಲು ಹವಣಿಸಿದ್ದ. ಇಲ್ಲೂ ಎರಡು ಪಕ್ಷ. ಒಂದು ಓಡಿ
ಹೋಗಲು ಬಯಸುವ ಪಕ್ಷ—ಆ ಹೆಣ್ಣಿನಂತೆ. ಇನ್ನೊಂದು—ಅವರನ್ನು
ಅಲ್ಲೆ ನೆಲೆನಿಲ್ಲುವಂತೆ ಮಾಡುವ ಮತ್ತು ಅದರಿಂದ ತನ್ನ ಬೊಕ್ಕಸತುಂಬಲು
ಹವಣಿಸುವ ತೋಟದ ಯಜಮಾನ , ಅವನ ಅನುಯಾಯಿ ಧರ್ಮಗುರು.
ಕಲಾವಿದನಿಗೆ ಎರಡೂ ಒಂದೆ—ಎರಡೂ ಒಂದೊಂದು ಸತ್ಯದ ಪ್ರತಿ
ನಿಧಿಗಳು.
ಸೀತಾಪತಿ ದೇವರ ವಿಗ್ರಹವನ್ನು ನಿರ್ಮಾಣ ಮಾಡಿದ. " ಉದ್ದಕ್ಕೂ
ಮುಗುಳ್ನಗುತ್ತಿದ್ದ ಸೀತಾಪತಿಯ ಕೈಯಲ್ಲಿ ಆ ಮಣ್ಣು ರೂಪುತಳೆದು
ಮೆಲ್ಲಮೆಲ್ಲನೆ ದೇವರಾಗಿ ಮಾರ್ಪಾಟಾಯಿತು." ಅದರ ಪ್ರತಿಷ್ಠಾಪನೆಯ
ದಿನ ಅವನು ತನ್ನೂರಿಗೆ ಹಿಂದಿರುಗಿದ್ದ. ಕಲಾವಿದನ ವ್ಯವಹಾರ, ರೀತಿ
ಗಳನ್ನು ಕಂಡ ಧರ್ಮಗುರು ಅವನನ್ನು ನಾಸ್ತಿಕನೆಂದು ಹಿಂದೆಯೇ
ತೀರ್ಮಾನಿಸಿದ್ದರು. ಈಗ ಅವನ ಪ್ರತಿಭೆಯಿಂದ ನಿರ್ಮಿತವಾದ
ವಿಗ್ರಹಕ್ಕೆ ಪೂಜೆಗೈಯಲು ಸಿದ್ಧರಾಗಿದ್ದರು. ಇದರಲ್ಲಿ ಸೀತಾಪತಿಗೆ

೧೧

೧೬೨

ಮೇಲ್ನುಡಿ

ಆಸಕ್ತಿಯಿಲ್ಲ. ಧರ್ಮಗುರುಗಳಿಗೆ ವಿಗ್ರಹ ಬೇಕೆ ಹೊರತು ವಿಗ್ರಹ ಏನು
ಹೇಳುತ್ತಿದೆ ಎಂಬ ಕಡೆ ಗಮನವಿಲ್ಲ.
ಈ ಕಥೆಯಲ್ಲಿ ಬಹು ಭಾಗವನ್ನು ಓದುಗ ಊಹಿಸಿಕೊಳ್ಳಬೇಕು.
ಇಲ್ಲದಿದ್ದರೆ ನಡುನಡುವೆ ಏನೋ ಸಂದು ಬಿದ್ದಂತೆ ಕಂಡುಬರುತ್ತದೆ.
ಧರ್ಮಗುರುಗಳು ಸೀತಾಪತಿಯ ಪರಿಚಯ ಪಡೆದುದು ಆತನ ಮೊದಲ
ವಿಗ್ರಹ ನಿರ್ಮಾಣದ ಮೂಲಕವೇ ಇರಬೇಕು. ಅದು ನಡೆದುದು ಹೇಗೆ,
ಎಲ್ಲಿ ಎಂಬುದೆಲ್ಲ ಇಲ್ಲಿ ಸ್ಪಷ್ಟವಿಲ್ಲ. ಊಹಿಸಲು ಸೂಚನೆಯೂ ಇಲ್ಲ.
ಕಲಾವಿದನ ಸ್ನೇಹಿತ ಯಾವಾಗ ಊರಿಗೆ ಹೋದ, ಏಕೆ, ಅವನಿಗೂ ಈ
ಧರ್ಮಗುರುಗಳಿಗೂ ವಿಶ್ವಾಸ ಹೇಗಿತ್ತು? ಈ ಪ್ರಶ್ನೆಗಳಿಗೆ ತಲೆಯೆತ್ತಿದರೆ
ಇಲ್ಲಿ ಉತ್ತರವಿಲ್ಲ. ಕಥೆಯಲ್ಲಿ ಇದೊಂದು ಶೈಥಿಲ್ಯವಾಗಿರಬಹುದು.
ಆದರೂ ಆ ಎರಡು ವಿಗ್ರಹಗಳ ಸಂಬಂಧ - ವಿರೋಧ ಇವುಗಳ ಮೂಲಕ
ಕಥೆ ಮನಸ್ಸಿಗೆ ಕಚಕ್ಕನೆ ಹಿಡಿಯುತ್ತದೆ. ಕಥೆಯ ಹೆಸರು ಕುತೂಹಲ
ಕಾರಿಯಾಗಿದೆ.

ಮಣ್ಣಿನ ಮಗ ಗನ್ನು ತಂದ

ನಮ್ಮ ದೇಶದ ಇತ್ತೀಚಿನ ರಾಜಕೀಯ ಆವರಣದಿಂದ ಪ್ರೇರಣೆ
ಗೊಂಡ ಈ ಕಥೆಯಲ್ಲಿ ನಮ್ಮ ದೇಶಭಕ್ತಿಯ ಆಚಾರ ವಿಚಾರಗಳನ್ನು
ಕುರಿತ ಒಂದು ವಿಶ್ಲೇಷಣೆಯಿದೆ. ದೇಶಭಕ್ತಿ ನಮ್ಮ ಜನರೆಲ್ಲರ ನಾಡಿ
ನಾಡಿಯಲ್ಲಿ ಮಿಡಿಯುತ್ತಿದೆ. ಒಬ್ಬ ವ್ಯಕ್ತಿ ನಿಷ್ಪ್ರಯೋಜಕನಾಗಿರಬಹುದು.
ಅನೇಕ ದೃಷ್ಟಿಗಳಲ್ಲಿ ಅಂಥವನೂ ಅವಕಾಶ ಉಂಟಾದಾಗ ತನ್ನ ಸತ್ವವನ್ನು
ವ್ಯಕ್ತಪಡಿಸದೆ ಬಿಡುವುದಿಲ್ಲ. ಇದಕ್ಕೆ ಬೇಕಾಗಿರುವುದೊಂದೆ - ಸರಿಯಾದ
ಆವರಣ ನಿರ್ಮಾಣ. ಇದು ಕೆಲವು ವೇಳೆ ಮಾನವನ ಅಧೀನ ಮತ್ತೆ
ಕೆಲವು ವೇಳೆ ದೈವದ ಅಧೀನ. ಸಮಾಜವೂ ಅಷ್ಟೆ, ಗೆದ್ದ ಎತ್ತಿನ ಬಾಲ
ಹಿಡಿಯುವ ಸ್ವಭಾವದ್ದು. ಎಲ್ಲವೂ ಎಂದು ತಾನೇ ಸರಿಹೋದೀತು !
ವಾಸ್ತವ ಚಿತ್ರ ಹೇಗಿದೆಯೆಂಬುದು ಇಲ್ಲಿ ಸ್ಪಷ್ಟವಾಗಿದೆ.
'ಗುಲ್ಡು' ಎಂಬುದು ಬೀರಣ್ಣನಿಗೆ ಅವರ ಉಪಾಧ್ಯಾಯರು
ಕೊಟ್ಟ ಬಿರುದು. ಅವನಿಗೆ ಅವರು ಹೇಳಿಕೊಟ್ಟದ್ದು ತಿಳಿಯದೆ ಇದ್ದುದ

ರಿಂದ ಅವನು ಎಮ್ಮೆ ಕಾಯುವುದಕ್ಕೆ ಹೋಗಬೇಕಾಯ್ತು. ಆದರೂ


ಮೇಲ್ನುಡಿ

೧೬೩

ಬೀರಣ್ಣ ಆ ' ಬಿರುದ ' ನ್ನು ನಿಜವಾದ ಬಿರುದೆಂಬಂತೆಯೇ ಉಪಯೋಗಿಸು
ತ್ತಿದ್ದು. " ನಾನು ಯಾರು ಗೊತ್ತೇನ್ರೋ ? ಗುಲ್ಡು. ಹುಷಾರ್!"
ಮನೆಯಲ್ಲಿಯೂ ಎಲ್ಲರೂ ಗುಲ್ಡುವನ್ನು ನಿಷ್ಪ್ರಯೋಜಕನೆಂದೇ ತಿಳಿದರು.
ತಾಯಿ " ಎಂಥ ಮಗ ಹುಟ್ಟಿದನಪ್ಪ! " ಎಂದು ಆಡಿದ ಕಹಿಮಾತು
ಬೀರಣ್ಣನ ಮನಸ್ಸನ್ನು ಸಂಪೂರ್ಣವಾಗಿ ಕಲಕಿರಬೇಕು. ಬೀರಣ್ಣ
ಬೆಂಗಳೂರಿಗೆ ಬಂದು ಸೈನ್ಯಕ್ಕೆ ಸೇರಿಬಿಟ್ಟನು.
ಹೊಸ ಆವರಣಕ್ಕೆ ಬೀರಣ್ಣ ಬೇಗ ಹೊಂದಿಕೊಂಡ. ಸೈನಿಕರ
ಒರಟು ಜೀವನ, ನಗೆಮಾತು, ಶಿಸ್ತು ಇವು ಅವನಿಗೆ ಬೇಕಾದುವು.
ಅವನಿಗೆ ಯಾವುದೋ ಹೊಸ ಸ್ವಾತಂತ್ರ್ಯ ಸಿಕ್ಕಂತಾಗಿತ್ತು. ವಿವಿಧ
ವೇಷ, ಭಾಷೆಗಳ ಜನರೊಡನೆ ಅವನು ಬೇಗ ಬೆರೆತುಬಿಟ್ಟ.
ವೆಲಾಂಗ್ ರಣರಂಗದಲ್ಲಿ ಬೀರಣ್ಣ ತನ್ನ ಅಸಮ ಸಾಹಸವನ್ನು
ವ್ಯಕ್ತಪಡಿಸಿದ್ದನು. ಚೀಣಿಯರ ಅನಿರೀಕ್ಷಿತ ಧಾಳಿಯನ್ನು ಅವನೂ
ಅವನ ಸ್ನೇಹಿತರೂ ಎದುರಿಸಬೇಕಾಯ್ತು. ಎಲ್ಲರೂ ಸಿಕ್ಕಾಬಟ್ಟೆ ಓಡಿ
ಹೋದಾಗ ಒಬ್ಬನೇ ತನ್ನ ಮೇಲೆ ಬರುತ್ತಿದ್ದ ಮೂವರಲ್ಲಿ ಇಬ್ಬರನ್ನು
ಬಂದೂಕಿನಿಂದ ಹೊಡೆದಾಯಿತು. ಮುಂದೆ ಮದ್ದಿಲ್ಲದ ಅಸಹಾಯ
ಪರಿಸ್ಥಿತಿ. ಮೂರನೆಯವನು ಹತ್ತಿರಕ್ಕೆ ಬಂದಾಗ ಅವನನ್ನು ಕೆಳಗೆ
ಬೀಳಿಸಿ ಅವನ ಬಂದೂಕಿನಿಂದಲೇ ಅವನನ್ನು ಕೊಂದು ಗುಂಡುಗಳ ಮಧ್ಯೆ
ಓಡಿ ಎಲ್ಲೋ ಆಳಕ್ಕೆ ಧುಮುಕಿ ತಪ್ಪಿಸಿಕೊಂಡಿದ್ದ ಬೀರಣ್ಣ, ಹಿಂದೆಯೇ
ಓಡಿಬಂದಿದ್ದ ಮೃತ್ಯುವಿನ ಹಿಡಿಯನ್ನು.
ಮುಂದೆ ಆಸ್ಪತ್ರೆ - ರಜ - ಊರು. ಎಲ್ಲವೂ ಅನಿರೀಕ್ಷಿತ, ಅಷ್ಟೇ
ಆಶ್ಚರ್ಯ ಸಂತೋಷದಾಯಕ. ಯಾರಿಗೂ ಹೇಳದೆ ಊರಿಗೆ ಬಂದರೆ
ಅಲ್ಲೂ ಅನಿರೀಕ್ಷಿತವಾದ ಸ್ವಾಗತ. 'ಗುಲ್ಡು' ಎಂಬ ಬಿರುದು ಕೊಟ್ಟಿದ್ದ
ಉಪಾಧ್ಯಾಯರೇ ಆತನ ಪರಾಕ್ರಮವನ್ನು ಹೊಗಳಿದರು. ಎಲ್ಲರೂ
'ಗುಲ್ಡು' ಬೀರಣ್ಣನಿಗೆ ಜಯಕಾರಮಾಡಿದರು.
ಮುಂದೆ ಬೀರನ ತಂಗಿ ಸೀತಮ್ಮನ ಮದುವೆ ಸುಲಭ. ತಾಯಿಗೆ
ಜೀವನಕ್ಕೆ ಸ್ವಲ್ಪ ಭೂಮಿಯನ್ನು ಬೇರೆ ಕೊಡುತ್ತಾರಂತೆ. ಹೀಗೆ ಬೀರಣ್ಣ
ನಿಷ್ಪ್ರಯೋಜಕ ಸಂಸಾರಕ್ಕೆ ರಕ್ಷಕನಾಗಿಬಿಟ್ಟ.





೧೬೪

ಮೇಲ್ನುಡಿ

ಈ ಕಥೆಯಲ್ಲಿ ಹಳ್ಳಿಯ ಮನೆ, ಗ್ರಾಮಶಾಲೆ, ಯುದ್ಧರಂಗ , ಆಸ್ಪತ್ರೆ,
ಬಸ್ಸು, ಇವುಗಳೆಲ್ಲದರೊಳಗಿನ ಆವರಣದ ಸ್ಥೂಲ ಚಿತ್ರದ ಮೂಲಕ
ಬೀರಣ್ಣನ ಸೂಕ್ಷ್ಮಚಿತ್ರ ಕಾಣಿಸಿಕೊಳ್ಳುತ್ತದೆ. ಬೀರ ನಿಜವಾಗಿ
ವೀರನಾದುದು ಇಲ್ಲಿಯ ಸ್ವಾರಸ್ಯ. ' ಮಣ್ಣು,' 'ಗನ್ನು' ಇವೆರಡು
ಪದಗಳು ಕವನದಲ್ಲಿ ಪ್ರಾಸವಾಗುತ್ತವೆಯೋ ಇಲ್ಲವೋ ಅವೆರಡರ ಸಂಬಂಧ
ಮಾತ್ರ ದೂರವಲ್ಲವೆನ್ನುವುದು ಈ ಕಥೆಯಲ್ಲಿ ಚೆನ್ನಾಗಿ ವ್ಯಕ್ತವಾಗಿದೆ.

ಹಮಾಲ ಇಮಾಮ್ ಸಾಬಿ

' ಹಮಾಲ' ಎಂದರೆ ಮೂಟೆ ಹೊರುವವನು, ಕೂಲಿ. ಇಮಾಮ್
ಒಬ್ಬ ಹಮಾಲ, ರೈಲ್ವೆ ನಿಲ್ದಾಣದ ಕೂಲಿ. ಅವನ ಕಥೆಯಲ್ಲಿ ಎರಡು
' ಪ್ಲಾಟ್ ಫಾರಂ' ಗಳ ಕಥೆಗಳು ಒಂದಕ್ಕೊಂದು ಬೆಸೆದುಕೊಂಡಿವೆ.
ಒಂದು ಅವನು ಕೂಲಿಗೆ ಹೋಗುತ್ತಿದ್ದುದು. ಎರಡು ಅವನ ಮನೆ, ಸಂಸಾರ.
ಜೀವನ ಯಾವಾಗಲೂ ಒಂದು ಪ್ರಯಾಣವೇ. ಕಾಲವೆನ್ನುವ ರೈಲುಬಂಡಿ
ಯಲ್ಲಿ ಕುಳಿತು ಕೆಲವು ಮೈಲಿಗಳು ಪ್ರಯಾಣಮಾಡಿ ಇಳಿದುಬಿಡುವುದು;
ಇತರರಿಗೆ ಸ್ಥಳ ಬಿಡುವು ಮಾಡಿಕೊಡುವುದು.

ಬಾಲ್ಯದಿಂದಲೂ ಇಮಾಮ್ ಹಮಾಲನೇ. ತನ್ನ ಅರುವತ್ತು ವರ್ಷ
ಗಳನ್ನೂ ಅಲ್ಲೇ ಆ 'ಪ್ಲಾಟ್ ಫಾರಂ' ಮೇಲೆಯೇ ಕಳೆದವನು ಅವನು.
ಇಲ್ಲಿ ಮೊದಮೊದಲು ಬಂದವರೆಲ್ಲ ಪರಿಚಯ ಇದ್ದವರು. ಆಮೇಲೆ
ಯಾರು ಯಾರೋ, ಅವರ ಪರಿಚಯವಿಲ್ಲ. ಬಂದ ಸಂಪಾದನೆ ಸಾಕಾ
ಗಿತ್ತು ಅವನ ಸಂಸಾರಕ್ಕೆ. ಮೊದಲನೆಯ ಹೆಂಡತಿಯನ್ನು ಕಳೆದುಕೊಂಡು
ಎರಡನೆಯ ಮದುವೆ ಮಾಡಿಕೊಳ್ಳುವ ಹೊತ್ತಿಗೆ ಮೂವತ್ತು ವರುಷ
ವಯಸ್ಸಾಗಿತ್ತು ಅವನಿಗೆ. ಎರಡನೆಯ ಆಕೆಯಲ್ಲಿ ಪಡೆದ ಐದು ಜನ
ಗಂಡುಮಕ್ಕಳಲ್ಲಿ ಹತ್ತಿರ ನಿಂತವನೊಬ್ಬನೆ ಕೊನೆಯವನು. ಮಿಕ್ಕವರೆಲ್ಲ
ಪ್ರಯಾಣ ಹೊರಟು ಎಲ್ಲೋ ನೆಲಸಿದರು. ಅವನ ಸೊಸೆ ಗರ್ಭಿಣಿ
ಯಾಗಿದ್ದು ಈಗ ಪ್ರಸವವಾಗಬೇಕಿತ್ತು. ಇಮಾಮನು ಮನಸ್ಸಿನಲ್ಲಿ ತನ್ನ
ಮಕ್ಕಳಲ್ಲಿ ನಾಲ್ಕು ಜನ ದೂರ ಹೋಗಿರುವುದು, ಅವರ ಮಕ್ಕಳು ಮರಿ
ಗಳನ್ನು ಕಾಣದಾಗಿರುವುದು, ಈಗ ಈ ಹೊಸ ಜೀವದ ಆಗಮನದ
ನಿರೀಕ್ಷೆ ಇವುಗಳ ವಿವಿಧ ಪರಿಣಾಮಗಳನ್ನು ತನ್ನಲ್ಲಿಯೇ ವಿಮರ್ಶಿಸು
ತ್ತಿದ್ದನು. ಅವುಗಳ ಜೊತೆಯಲ್ಲಿ ತನ್ನ ಹಿರಿಯ ಹೆಂಡತಿ ಚೊಚ್ಚಲು
ಹೆರಿಗೆಯಲ್ಲಿಯೇ ತೀರಿಕೊಂಡ ಅನುಭವ ತಲೆಯೆತ್ತಿ ಅವನ ಹೃದಯವನ್ನು
ಹಿಂಡಿರಬೇಕು. ಇದೊಂದು ಕಡೆ.
ಇನ್ನೊಂದು ಕಡೆ ಹೋಗಿಬರುವ ಗಾಡಿಗಳ ಮೇಲೆ ಗಮನವಿಟ್ಟಿರ
ಬೇಕು. ಆದರೆ ಹಿಂದಿನಂತೆಯೇ ತಾನೇ ಗಾಡಿಗಳನ್ನು ಹುಡುಕಿ ಸ್ಥಳಗಳನ್ನು
ಮೀಸಲುಮಾಡಿಟ್ಟು, ಪ್ರಯಾಣಿಕರಿಗೆ ಸುಖಮಾಡಿಕೊಡುವ ಶಕ್ತಿ ಸಾಲ
ದಾಗಿದೆ. ಒಬ್ಬ ಯುವಕ ಇಮಾಮನಿಂದ ಒದಗಿದ ಸಹಾಯ ಸಾಲ
ದೆಂದೋ, ಅವನಿಗೆ ಚಟುವಟಿಕೆ ಸಾಲದೆಂದೋ ಅವನ ಕೈಗೆ ನಾಲ್ಕಾಣೆ
ಹಾಕಿ ' ಮುದುಕನಾದೆ ನೀನು, ಹೋಗು" ಎಂದ ಮಾತಿನ ಯಾವ ಪರಿ
ಣಾಮ ಅವನ ಮೇಲಾಯಿತೋ, ಯಾರು ಬಲ್ಲರು! ಕಣ್ಣೀರು ಬರುವುದ
ರಲ್ಲಿತ್ತು; ಮುದುಕ ತೆಡೆದು ಮನೆಯ ಕಡೆಗೆ ನಡೆದ.
ಈ ಎಲ್ಲ ಗೋಜುಗಳನ್ನು ಬಿಡಿಸಿ ಸುಖದ ನೇರದಾರವನ್ನು ತೋರು
ವಂತೆ ಮನೆಯ ಬಳಿ ಬಂದ ವರ್ತಮಾನ_ಮೊಮ್ಮಗನ ಸುಖಾಗಮನ.
ಆನಂದಾತಿರೇಕದಲ್ಲಿ ಕಣ್ಣೀರುಸುರಿಸಿ ನಿಲ್ಲಲಾರದೆ ಕುಳಿತವನು, ಈ ಲೋಕ
ದಲ್ಲಿ ನಿಲ್ಲಲಾರದೆ ಹೊರಟೀಹೋದನು.
ಕಥೆಯ ಸ್ವಾರಸ್ಯವಿರುವುದು ಹಮಾಲನ ಮನಸ್ಸಿನ ಆಲೋಚನೆ
ಗಳ ಪದರಪದರಗಳನ್ನು ಬಿಡಿಸಿರುವುದರಲ್ಲಿ; ನಿರೀಕ್ಷಿಸಿದ್ದ ಫಲ ಕೈಗೆಟುಕಿ
ತೆನ್ನುವಷ್ಟರಲ್ಲಿ ಉಂಟಾದ ಇಮಾಮನ ಅನಿರೀಕ್ಷಿತ ಪ್ರಯಾಣದಲ್ಲಿ. ಅವಿ
ಭಕ್ತ ಕುಟುಂಬದ ನಿರ್ನಾಮವಾಗಿ ನಮ್ಮ ದೇಶದ ಸ್ವಾಸ್ಥ್ಯ ಹೇಗೆ ಚೆಲ್ಲಾಪಿಲ್ಲಿ
ಯಾಗಿದೆಯೆಂಬುದೂ, ಹಳೆಯ ನಂಬಿಕೆ ಹೇಗೆ ಇಂಥ ಕಡೆಗಳಲ್ಲಿ ನಾಶ
ಹೊಂದುತ್ತವೆ ಎಂಬುದೂ ಈ ಕಥೆಯಲ್ಲಿ ಧ್ವನಿತವಾಗಿದೆ. ಇದು ಕೇವಲ
ಹಮಾಲ ಇಮಾಮನ ಕಥೆ ಮಾತ್ರವಲ್ಲ. ಇಂಥ ಎಲ್ಲ ಸಂಸಾರಗಳ ಕಥೆ.

ತಪ್ಪು ಎಣಿಕೆ

ಜವಾನ ನಾಗಪ್ಪನ ಅನೇಕ ದಿನಗಳ ಅಭ್ಯಾಸ , ಪುಢಾರಿತನ ಎಡವಿ
ಬಿದ್ದ ಪ್ರಸಂಗ ಈ ಕಥೆಯ ಜೀವಾಳ. ಇಂಥವರನ್ನು ಈಗ ಲೋಕದಲ್ಲಿ
ಹುಡುಕಬೇಕಾಗಿಲ್ಲ. ಎಲ್ಲ ಕಛೇರಿಗಳಲ್ಲಿ, ಅಂಗಡಿಗಳಲ್ಲಿ, ಸಂಸ್ಥೆಗಳಲ್ಲಿ,
ಕೊನೆಗೆ ಬಾಲಕರಲ್ಲಿ, ನಾಗಪ್ಪನ ಪ್ರತಿನಿಧಿಗಳು ಅಸಂಖ್ಯಾತರಾಗಿದ್ದಾರೆ.
ಎದುರಾಳಿಯ ಭಯವೇ ಅವರ ಆಯುಧ. ಅದನ್ನೇ ಉಪಯೋಗಿಸಿ
ಎದುರಾಳಿಯನ್ನು ಗೆಲ್ಲುವುದು ಅವರ ಅನೇಕ ವರ್ಷಗಳ ಸಾಧನೆ.
ಇಂಥವನೊಬ್ಬ, ದಕ್ಷ ಅಧಿಕಾರಿಯ ಹಿಡಿತಕ್ಕೆ ಸಿಕ್ಕಿ ನಾಶವಾದ
ಸನ್ನಿವೇಶ ಬಹು ಸ್ವಾರಸ್ಯವಾಗಿದೆ. ರೆವಿನ್ಯೂ ಇಲಾಖೆಯ ಅಧಿಕಾರಿಗಳಿಗೆ
'ಸರ್ಕ್ಯೂಟ್‌' ಇದ್ದೇ ಇರುತ್ತದೆ. ಅವರ ಮನೆಯವರು ಭಯಗ್ರಸ್ತರಾದರೆ
ಆಳುಕಾಳಗಳಿಗೆ ಒಳ್ಳೆಯ ಸುಗ್ಗಿ. ಅಂಥ ಸಂಸಾರ ಉಮಾಪತಿಯದು.
ಅವನ ಹೆಂಡತಿ ವೀಣಾ ಸ್ವಲ್ಪ ಪುಕ್ಕಲು ಸ್ವಭಾವದವಳು. ಹಳಬನಾದ
ನಾಗಪ್ಪ ಕಛೇರಿಯಲ್ಲಿ, ಸಾಹೇಬರ ಮನೆಯಲ್ಲಿ, ಎಲ್ಲರನ್ನೂ ತನ್ನ ಹತೋಟ
ಯಲ್ಲಿಟ್ಟುಕೊಂಡಿದ್ದ. ಮನೆಯ ಹೆಣ್ಣಾಳಿನೊಡನೆ ಅಕ್ರಮ ಸಂಬಂಧವನ್ನೂ
ಹೊಂದಿದ್ದ. ಒಳಗಿನ ಸಮಾಚಾರವನ್ನೆಲ್ಲ ತಿಳಿದು, ಆಗಬೇಕಾಗಿದ್ದ
ಪಿತೂರಿಗಳನ್ನೆಲ್ಲ ಮಾಡುತ್ತಿದ್ದ-- ಪರಿಣಾಮವಾಗಿ ಸಂಪಾದನೆ, ಸುಖ,
ಜಬರದಸ್ತು ಇಷ್ಟೂ ಇತ್ತು: ಇಂಥವನು ಬಿದ್ದ ಬೇಸ್ತು ಈ ಕಥೆಯಲ್ಲಿ
ಚೆನ್ನಾಗಿ ನಿರೂಪಿತವಾಗಿದೆ. ತನ್ನ ಪ್ರತಿಷ್ಠೆಯನ್ನೂ ಅಧಿಕಾರವನ್ನೂ
ಪ್ರಕಾಶಪಡಿಸುವುದರ ಮೂಲಕವೇ ಅವನು ಹಳ್ಳಕ್ಕೆ ಬಿದ್ದದ್ದು ಸ್ವಾರಸ್ಯ
ವಾಗಿದೆ. ' ಡಿಸ್ಮಿಸ್‌' ಆದಮೇಲೆ ಅವನೇನು ಮಾಡಿದನೊ ! ಊಹಿಸುವು
ದಕ್ಕೆ ಚೆನ್ನು.
ಈ ಕಥೆಯ ಅಧಿಕಾರಿ ಶಕ್ತ, ದಕ್ಷ. ನಮ್ಮಲ್ಲಿ ಇನ್ನಷ್ಟು ಜನ ಇಂಥ
ಅಧಿಕಾರಿಗಳು ಹೆಚ್ಚಿದರೆ ಜನಕ್ಕೂ ಅನುಕೂಲ, ಸರಕಾರಕ್ಕೂ ಬಿಗಿ. ಆದರೆ
ಅನುಕೂಲ ಮಾಡಿಕೊಡುವ, ಬಿಗಿಯಾಗಿರುವ ಆಪೇಕ್ಷೆ ಬೇಕಲ್ಲ! ಅದ
ನ್ನೆಲ್ಲಿಂದ ತರೋಣ?

ಸ್ವಸ್ತಿಪಾನ

ಮದ್ಯಪಾನ ಪ್ರಪಂಚಕ್ಕೆ ಸೇರಿದ ಈ ಕಥೆಗೆ ಪೀಠಿಕೆ ಚಿಕ್ಕಣ್ಣಯ್ಯ
ಬದರಿ ಇವರ ಸ್ನೇಹ. ಪಾನಾವಸರದಲ್ಲಿ ಬಂದ ಕಥೆ ದಯಾನಂದರಿಗೆ
ಸಂಬಂಧಪಟ್ಟದ್ದು. ಮೊದಲ ಪೀಠಿಕೆಯ ಸನ್ನಿವೇಶ ಸಾಧಾರಣವಾದದ್ದು.
ಚಿಕ್ಕಣ್ಣಯ್ಯ ಮದುವೆಯಾದಮೇಲೆ ಪಾನ ಪ್ರಸಂಗಗಳನ್ನು ಕಡಮೆ ಮಾಡಿ
ಮನೆಯ ಕಡೆ ಗಮನ ಕೊಟ್ಟದ್ದು- ಸಂಸಾರದ ಪುಣ್ಯ. ಬದರಿಯ ಕಥೆ
ಸಾಕಷ್ಟು ಸ್ಪಷ್ಟವಿಲ್ಲ. ಹಣವನ್ನೇನೋ ಸಂಪಾದಿಸುತ್ತಿದ್ದ- ವಿವಿ ಧ

ವ್ಯಾಪಾರ ವ್ಯವಹಾರಗಳಿಂದ. ಈ ಇಬ್ಬರೂ ಮತ್ತೆ ಹಳೆಯ ಪಾನ
ಮಂದಿರದಲ್ಲಿಯೇ ಸೇರಿದ್ದಾಗ ಬದರಿ ತನ್ನ ಸ್ಫೂರ್ತಿಯಿಂದ ಹೇಳಿದ ಕಥೆ-
ಸಾವುಕಾರರ ಕಥೆ.
ಆವರಣ ನಿರ್ಮಾಣದಲ್ಲಿ ಈ ಕಥೆಗೆ ಹಿರಿಮೆಯಿದೆ. ಎರಡು ಆವರಣ
ಗಳ ನಿರ್ಮಾಣ, ಪೀಠಿಕೆ, ಕಥೆ. ಆವರಣಕ್ಕೆ ಹೊಂದಿಕೊಳ್ಳುವಂತಿದೆ
ದಯಾನಂದರ ಚಿತ್ರ. ಕಥೆಯ ಸೊಗಸಿರುವುದೂ ಅಲ್ಲಿಯೇ! ಕಥೆ ಚೋದಿ
ಸುವ ಕಲ್ಪನೆಯಲ್ಲಿ ನಾವು ಆನಂದಪಡಬಹುದು.
ಯಾವ ಜನ್ಮದ ಶಾಪ?
ವಿಶ್ವನಾಥಯ್ಯ, ಅವರ ಹೆಂಡತಿ, ಮಕ್ಕಳು ಪ್ರಸಾದ, ಗಿರಿಜಾ
ಇವರಿಂದ ಕೂಡಿದ ಚೊಕ್ಕ ಸಂಸಾರ. ನೋಡುವವರು ಕರುಬುವಂತಿತ್ತು.
ಆದರೆ ಒಳಗಡೆ ಇದ್ದವರಿಗೆ ಗೊತ್ತಿತ್ತು ಅವರ ಧರ್ಮಸಂಕಟ. ಪ್ರಸಾದ
ಓದಿ ಎಂಜಿನಿಯರ್‌ ಆಗಿ ರೂರ್ಕೆಲಾ ಸೇರಿದ. ಗಿರಿಜಾ ಓದಿದ್ದಳು,
ಮನೆಯಲ್ಲೇ ಇದ್ದಳು. ವಿಶ್ವನಾಥಯ್ಯ ಕೆಲಸದಿಂದ ನಿವೃತ್ತಿಹೊಂದಿ
ಮನೆಗೆ ಬಂದಿದ್ದರು. ಇಲ್ಲಿಂದ ಕಥೆ ಪ್ರಾರಂಭ.
ಗಿರಿಜೆಯ ಮದುವೆ ಯೋಚನೆ, ಅದಕ್ಕೆ ತಗಲುವ ವೆಚ್ಚದ
ಯೋಚನೆ. ಮಗನಿಗೆ ವರದಕ್ಷಿಣೆ ತೆಗೆದುಕೊಂಡು ಅದನ್ನೇ ಅಳಿಯ
ನಾಗುವವನಿಗೆ ದಾಟಿಸುವ ಯೋಚನೆ--ಇವೆಲ್ಲ ಒಂದೊಂದಾಗಿ ಗಂಡ
ಹೆಂಡಿರ ಮನಸ್ಸಿನಲ್ಲಿ ಸುಳಿಯತೊಡಗಿತು. ವಿಶ್ವನಾಥಯ್ಯ ಮಗನನ್ನು
ಊರಿಗೇ ಕರೆಸಿಕೊಂಡು, ಮದುವೆ ಮಾಡಿಸಿ, ಇಲ್ಲೇ ಯಾವುದಾದರೂ
ಕೆಲಸಕ್ಕೆ ಹತ್ತಿಸಿದರೆ ತಾನು ನಿವೃತ್ತಿಯಾದ ಮೇಲಿನ ಹಣದ ಅರಕೆ
ಯನ್ನು ಪೂರೈಸಬಹುದು ಎಂದು ಆಲೋಚಿಸಿ ತನ್ನ ದೇಹಸ್ಥಿತಿ ಕೆಟ್ಟಿರುವು
ದಾಗಿ ತಂತಿ ಕೊಟ್ಟು ಮಗನನ್ನು ಊರಿಗೆ ಕರೆಸಿದರು.
ಹಿರಿಯರಿಗೂ ಕಿರಿಯರಿಗೂ ದೃಷ್ಟಿಭೇದ ಎಷ್ಟಿದೆಯೆಂಬುದು ಈಗ
ಸ್ಪಷ್ಟವಾಗುತ್ತದೆ. ತಂದೆಯ ಅಭಿಪ್ರಾಯಕ್ಕೆ ಮಗನ ಒಪ್ಪಿಗೆಯಿಲ್ಲ.
ಅವನು ಇಷ್ಟರಲ್ಲಿಯೇ ಜರ್ಮನಿಗೆ ಹೆಚ್ಚಿನ ಅಭ್ಯಾಸಕ್ಕೆ ಹೋಗುವವನು.
ಅವನ ಸಂಸ್ಥೆಯವರೇ ಕಳುಹಿಸಲಿದ್ದಾರೆ. ಆದರೆ ತಂದೆಗೆ ಇದೆಲ್ಲ
ಯಾವುದೋ ಗಂಡಾಂತರಗಳಿದ್ದಂತೆ ಕಾಣುತ್ತಿದೆ. ತಾಯಿಗೂ ಅಷ್ಟೆ.

ಗಿರಿಜೆಗೇನೋ ಸಂತೋಷ, ತನ್ನ ಅಣ್ಣ ಜರ್ಮನಿಗೆ ಹೋಗುವುದು.
ಗಿರಿಜೆಯೂ ಕೆಲಸಕ್ಕೆ ಸೇರಲಿ ಎಂಬುದು ಪ್ರಸಾದನ ಅಭಿಪ್ರಾಯ.
ಹೆಣ್ಣು ಕೊಡಲು ಬಂದ ಚಂದ್ರಶೇಖರಯ್ಯನವರಿಗೆ ವಿವರಗಳು
ಸ್ವಲ್ಪ ಸ್ವಲ್ಪವಾಗಿ ತಿಳಿದು ಅವರು ವಿಫಲ ಪ್ರಯತ್ನರಾಗಿ ಮನೆಗೆ ಹಿಂದಿರುಗು
ತ್ತಾರೆ. ವಿಶ್ವನಾಥಯ್ಯ ತನ್ನ ಸಮಸ್ಯೆಯನ್ನು ಬಗೆಹರಿಸಲಾರದೆ ಆತ್ಮ
ಹತ್ಯೆಯ ಯೋಚನೆಯನ್ನೂ ಮಾಡುತ್ತಾರೆ. ಗಿರಿಜೆ ಶಾನು ಈಗಲೇ
ಮದುವೆ ಮಾಡಿಕೊಳ್ಳುವುದಿಲ್ಲ, ಕೆಲಸಕ್ಕೆ ಸೇರಿಕೊಳ್ಳುವಳೆಂದು ಹೇಳಿ
ದರೂ ತಂದೆ ತಾನು ಬದುಕಿರುವವರೆಗೂ ಗಿರಿಜೆಯನ್ನು ಸಮಾಜಕ್ಕೂ
ಕಳಿಸಲು ಒಪ್ಪುವುದಿಲ್ಲ. ಅವರದು ಒಂದೇ ಮಾತು “ಬಾಗಿಲು ಹಾಕ್ಕೋ."
ಸಂಸಾರದ ಆರ್ಥಿಕ ಅಗತ್ಯಗಳನ್ನು ಪೂರೈಸಲು ವಿಶ್ವನಾಥಯ್ಯ
ಮತ್ತೆ ಯಾವುದೋ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. ನಿವೃತ್ತಿಯ ವಿವರಣೆ
ಯಲ್ಲಿ ಮೊದಲ್ಗೊಂಡ ಕಥೆ ಹೊಸ ಕೆಲಸಕ್ಕೆ ಹೊರಟ ವಿವರಣೆಯಿಂದ
ಕೊನೆಯಾಗುತ್ತದೆ.
ಈ ಕಥೆ ಎರಡು ತಲೆಮಾರುಗಳ ನಡುವೆ ಜೀವನದ ಮೌಲ್ಯಗಳನ್ನು
ಕುರಿತು ಭಾವನೆಗಳು ಎಷ್ಟು ವ್ಯತ್ಯಾಸವಾಗಿವೆ ಎಂಬುದನ್ನು ಬಹು ಅರ್ಥ
ವತ್ತಾಗಿ ಚಿತ್ರಿಸುತ್ತದೆ: ಚಿಕ್ಕ ಸಂಸಾರದ ನಾಲ್ಕು ಜನ ಎರಡು ಬಣ
ಗಳಾಗಿ ವಿಭಾಗಗೊಂಡಂತೆ, ಅವರ ನಡುವೆ ಪ್ರಚ್ಛನ್ನ ಸಮರವೇ ಅವ್ಯಕ್ತ
ವಾಗಿ ನಡೆಯುತ್ತಿದ್ದಂತೆ, ಇದರಿಂದ ಇಬ್ಬರಿಗೂ ಸ್ವಾಸ್ಥ್ಯ ಕದಡಿದಂತೆ,
ಸಮಾಜ ಕೈಗೆಟಕುವ ಸುಖವನ್ನು ಸಂಪ್ರದಾಯದ ನೆರಳಿನಲ್ಲಿ ನಿಂತು
ದೂರ ಮಾಡುವಂತೆ ಕಾಣುವ ಚಿತ್ರ ಎಷ್ಟು ವಾಸ್ತವವಾದುದು? ವಿಶ್ವ
ನಾಥಯ್ಯ ತಮ್ಮ ಸ್ಥಿತಿಗತಿಯನ್ನು “ಯಾವ ಜನ್ಮದ ಶಾಪ?” ಎಂದು
ಪ್ರಶ್ನಿಸಿಕೊಳ್ಳುತ್ತಾರೆ. ಇದು ಶಾಪವೋ? ಸ್ವಯಂಕೃತಾಪರಾಧವೋ?
ಈ ಸಮಸ್ಯೆ ಮಧ್ಯಮ ವರ್ಗದ ಎಲ್ಲ ಸಂಸಾರಗಳ ಸಮಸ್ಯೆ. ಇದಕ್ಕೆ
ಉತ್ತರ ಈ ಕಥೆಯಲ್ಲಿಲ್ಲ. ಆದರೆ ಅದು ಓದುಗನಿಗೆ ಬರಬಹುದಾದ ಸ್ಪಷ್ಟ
ಚಿತ್ರದಲ್ಲಿ ತಾನಾಗಿಯೇ ಮೂಡುತ್ತದೆ. ಇದೊಂದು ಉತ್ತಮವಾದ ಕಥೆ.
ಅನ್ನಪೂರ್ಣಾ

ನಾಲ್ಕು ಪುಟಗಳ ಈ ಸಣ್ಣ ಕಥೆ ನಿಜವಾಗಿಯೂ ಬಹು ಅರ್ಥ
ಪೂರ್ಣವಾದ ಕಥೆ.

ಊರಿನ ದೇವತೆ ಅನ್ನಪೂರ್ಣಾ. ಲೋಕದ ಜನಗಳಿಗೆ ಅನ್ನ
ಹಾಕುವುದು ಆಕೆಯ ಆಶಯ. ಎಲ್ಲರನ್ನೂ ಸುಖವಾಗಿಟ್ಟಿರುವುದು ಆಕೆಯ
ಅಪೇಕ್ಷೆ. ಆದುದರಿಂದಲೇ ಆ ಊರಿನಲ್ಲಿ ಒಂದು ಪದ್ಧತಿ ನಡೆದುಬಂತು.
ದೇವರಿಗೆ ನೈವೇದ್ಯವಾದ ಮೇಲೆ ಅರ್ಚಕ ಕೂಗಿ ಕರೆಯಬೇಕು:
“ಉಣ್ಣಲಿಕ್ಕಿದ್ದಾರೆಯೇ! ಇನ್ನೂ ಉಣ್ಣಲಿಕ್ಕಿದ್ದಾರೆಯೇ ?" ಎಂದು.
ಜನ ದೇವತೆಯು ತಮಗೆ ಕೊಟ್ಟಿರುವ ಸೌಲಭ್ಯವನ್ನು ಗಮನಿಸಿ ಕೃತಜ್ಞತೆ
ಯಿಂದ 'ಹಸಿದವರಿಲ್ಲ, ದೇವಿ' ಎಂದು ಸಂತೃಪ್ತಿಯ ಉತ್ತರವನ್ನೀಯು
ತ್ತಿದ್ದರು.
ದೇಶದಲ್ಲಿ ದಾರಿದ್ರ್ಯ ದೇವಿ ನರ್ತನಮಾಡಿದಾಗ, ಅರ್ಚಕನ ಕೂಗಿಗೆ
ಅನೇಕ ಭೀಕ್ಷುಕರು, ಹೆಸಿದವರು ಬಂದದ್ದುಂಟು. ಅವರಿಗೆ ದೇವಿಯ
ನೈವೇದ್ಯದಲ್ಲಿ ಪಾಲುದೊರೆತದ್ದೂ ಉಂಟು. ಆದರೆ ಈ ಹಸಿದವರ ಸಂಖ್ಯೆ
ಹಿರಿದಾದಾಗ, ಎಲ್ಲರಿಗೂ ಧರ್ಮಸಂಕಟವೊದಗಿತು. ಎಷ್ಟು ದಿನ ಎಷ್ಟು
ಜನರಿಗೆ ಉಚಿತವಾಗಿ ಅನ್ನದಾನಮಾಡಲಾದೀತು?
ಯಾವುದೋ ಪಿಸುಮಾತು ಹೊರಟು “ಈ ಜನರ ನಡವಳಿಕೆಯಿಂದ
ದೇವಿಗೆ ಅತೃಪ್ತಿಯಾಗಿದೆ” ಎಂಬ ವಾರ್ತೆ ಹಬ್ಬಿತು. ಕ್ರಮೇಣ ಜನ
ದೇಗುಲಕ್ಕೆ ಅಶನಾರ್ಥಿಗಳಾಗಿ ಬರುವುದು ನಿಂತುಹೋಯಿತು.
ಆದರೆ ಬರಗಾಲ ನಿಲ್ಲಲಿಲ್ಲ. ಬೇರೆ ಊರುಗಳಿಂದ ಭಿಕ್ಷುಕರು,
ಹಸಿದವರು ಕೆಲವರು ದೇಗುಲದ ಬಳಿ ಬಂದು ನಿಂತರು. ಅರ್ಚಕ
"ಉಣ್ಣಲಿಕ್ಕಿದ್ದಾರೆಯೇ?” ಎಂದರೆ "ಇದ್ದೇವೆ” ಎಂದರು ಈ 'ಪಾಪಿ'
ಗಳು. ಅರ್ಜಕನ ದೃಷ್ಟಿಯಲ್ಲಿ ಸತ್ಯವನ್ನು ನುಡಿದ ಇವರು ಪಾಪಿಗಳಾದರು.
'ಇದ್ದೇವೆ' ಎಂದರೂ ಅರ್ಚಕ ಅವರಿಗೆ ಪ್ರಸಾದ ಕೊಡಲಿಲ್ಲ.
ಮಾತಾಡದೆ ಮನೆಗೆ ನಡೆದ, ನೈವೇದ್ಯದೊಡನೆ. ಮಾರನೆಯ ದಿನವೂ
ಇದೇ ಪ್ರಶ್ನೆ ಎದುರಿಗೆ ನಿಂತಾಗ ಅರ್ಚಕ ಹೇಳಿದ ಮಾತು "ಈಗ ಆ ಪದ್ಧತಿ
ಇಲ್ಲ- ಗೊತ್ತಿಲ್ಲವೆ?” ಅದಕ್ಕೆ ಬಡಪಾಯಿಯ ಪ್ರತಿಪ್ರಶ್ನೆ-“ ಅನ್ನಪೂರ್ಣೆ
ಈಗ ಆನ್ನದಾನ ಮಾಡುವುದಿಲ್ಲವೆ?" ಈ ಪ್ರಶ್ನೆಗೆ ಉತ್ತರವಿಲ್ಲ, ಬೈಗಳು
ಮಾತ್ರ ದೊರೆಯುತ್ತವೆ. ಇದು ದೇಗುಲದ ಈ ಸನ್ನಿವೇಶದಲ್ಲಿ ಮಾತ್ರ
ವಲ್ಲ- ಎಲ್ಲ ಕಡೆ ಎಲ್ಲ ಸನ್ನಿವೇಶಗಳಲ್ಲಿ.

ಹಳೆಯ ಸಂಪ್ರದಾಯಗಳು ಹೇಗೆ ಅರ್ಥವನ್ನೂ ಸತ್ವವನ್ನೂ ಕಳೆದು
ಕೊಂಡು ಸಮಾಜವು ಡಂಭಾಚಾರದ ಗಣೆಗಳಾಗಿವೆ ಎಂಬುದು ಈ ಕಥೆ

ನಮ್ಮನ್ನು ಕೇಳುವ ಪ್ರಶ್ನೆ. ನಾವು, ನಮ್ಮ ಸಮಾಜ ಈ ಪ್ರಶ್ನೆಗೆ ಉತ್ತರಿಸ
ಲಾರೆವು-ಮಾತನಾಡಲೇ ಬೇಕಾದರೆ ಬೈಯುತ್ತೇವೆ -"ಷಂಡ, ನಾಸ್ತಿಕ."
"ಅನ್ನಪೂರ್ಣೆ ಒಳಗಣ್ಣಿನಿಂದ ತನ್ನ ಆ ಮಕ್ಕಳನ್ನು ನೋಡಿ ನಗುತ್ತಿದ್ದಂತೆ
ತೋರಿತು" ಎಂಬ ಕಥೆಗಾರರ ಮಾತು ಎಷ್ಟು ಅರ್ಥಪೂರ್ಣವಾಗಿದೆ!

ಅನ್ನದೇವರ ರೈಲು ಪ್ರಮಾಣ
"ಅನ್ನದೇವರು ಎಲ್ಲ ದೇವರ ಹಾಗೆ ಎಲ್ಲ ಕಡೆಯಲ್ಲೂ ಇದಾರೆ. ಆದರೂ
ಯಾರಿಗೂ ಕಾಣಿಸುವುದಿಲ್ಲ" ಎಂಬುದು ಈ ಕಥೆಯ ಸಿದ್ಧಾಂತ. ಸದ್ಯದ
ಪರಿಸ್ಥಿತಿಗೂ ಚೆನ್ನಾಗಿ ಹೊಂದಿಕೊಳ್ಳುವ ಈ ಕಥೆ ಬರಹಕ್ಕೆ ಇಳಿ
ದದ್ದು ಸುಮಾರು ಹತ್ತು ವರ್ಷಗಳ ಹಿಂದೆ. ಪ್ರಚಾರವೇ ಸರ್ವಸಮಸ್ಯೆ
ಗಳ ಪರಿಹಾರ ಸಾಧನವಾಗಿರುವ ಈ ಕಾಲದಲ್ಲಿ ಅಧಿಕಾರ ಹೇಗೆ ಜನರ
ಕಣ್ಣಿಗೆ ಮಣ್ಣೆರಚಬಹುದೆಂಬುದು ಇಲ್ಲಿ ಸೂಚಿತವಾಗಿರುವ ವಿಷಯ.
ಜನ ನೋಡುವುದು ರೈಲನ್ನಷ್ಟೆ--ಅಕ್ಕಿಯನ್ನಲ್ಲ. 'ಜೈ' ಕಾರ ಹೇಳಿಸು
ವವರು ಅಧಿಕಾರ ಗರ್ವಿತರು. ಯಾವ ಊರಿನಲ್ಲಿಯೂ ಅಕ್ಕಿಯ ಮೂಟಿ
ಯನ್ನಿಳಿಸದೆ ಕೊನೆಯ ಊರು ಸೇರಿದಾಗ ಅಕ್ಕಿಯನ್ನು ಕಾಣಲು ಬಂದವ
ರಿಗೆ ದೊರಕುವ ಉತ್ತರ “ಎಷ್ಟೊಂದು ಊರು ದಾಟಿಬಂದಿರೋದು!
ಏನ್ಕಥೆ! ?"
ಉತ್ಸವ, ಸಮಾರಂಭ, ಭಾಷಣ, ಜಯಕಾರ, ಪ್ರಚಾರ, ಪ್ರಕಟಣೆ
ಗಳನ್ನೇ ತಿಂದು ಬದುಕುವುದು ಸಾಧ್ಯವಾದರೆ ನಮ್ಮ ದೇಶದಲ್ಲಿ ಅಜೀರ್ಣ
ವಾಗಬೇಕಾಗಿದೆ--ಯಾರಿಗೂ ಹಸಿವಂತೂ ಇರದು.

ಆ ಕಾಳರಾತ್ರಿ

ಒಂದು ಸಂಸಾರದ ಕಷ್ಟ ಸಮಯದ ಕಥೆಯಾದ ಈ ಬರೆಹದಲ್ಲಿ
"ಪೂರ್ವಸ್ಮರಣ" ತಂತ್ರದಲ್ಲಿ ಆ ಸಂಸಾರದ ಅನೇಕ ವರ್ಷಗಳ ಜೀವನ
ಮೂಡುತ್ತದೆ. ಒಂದೊಂದು ಮಾತು ಒಂದೊಂದು ಸನ್ನಿವೇಶವನ್ನೆ
ಚಿತ್ರಿಸಿ ಒಂದು ಸ್ಪಷ್ಟ ಸ್ವರೂಪ ನಿರ್ಮಾಣಗೊಳ್ಳುತ್ತದೆ. "ಯುದ್ಧ ವರ್ಷ
ಗಳ ಆಹಾರಾಭಾವ, ರೋಗರುಜಿನ, ನೋವು ಸಾವು” ಇವುಗಳ ತುಳಿತಕ್ಕೆ
ಸಿಕ್ಕಿದ ಒಂದು ಕುಟುಂಬದ ಕಥೆ--ಇನ್ನೆಷ್ಟು ಕುಟುಂಬಗಳ ಮೇಲೆ ಈ
ಸನ್ನಿವೇಶದ ಪ್ರಭಾವವೋ ಹೇಳುವವರಾರು? ಈ ಕಥೆಯ ಪರಿಣಾಮ.
ಓದುಗನ ಮೇಲೆ ಅಗಾಧವಾಗಿದ್ದರೆ ಆಶ್ಚರ್ಯವೇಕೆ?

ಮೇಲ್ನುಡಿ

೧೭೧

ಒಂಟಿ ನಕ್ಷತ್ರ ನಕ್ಕಿತು
ರಾಷ್ಟ್ರನಿರ್ಮಾಣ ಕಾರ್ಯದಲ್ಲಿ ಜನಮನ ಪ್ರಾರಂಭದಲ್ಲಿ ತೋರಿ
ಸುವ ಆಶ್ರದ್ದೆಯನ್ನೂ, ಕಾರ್ಯವೊಂದು ಪೂರ್ಣವಾದಾಗ ಜನಮನದಲ್ಲಿ
ಆಗುವ ಆಶ್ಛರ್ಯವನ್ನು ಸಮಾಧಾನವನ್ನೂ ನಾವಿಲ್ಲಿ ದರ್ಶಿಸಬಹುದು.
ಮಗನನ್ನು 'ಉಚ್ಮುಂಡೆ' ಎಂದು ಬೈದ ಹಿರಿಯ ಕೊನೆಗೆ ತನ್ನನ್ನೇ
'ಉಚ್ಮುಂಡೆ' ಎಂದು ಬೈದುಕೊಳ್ಳುವುದರಲ್ಲಿ ಕಥೆ ಪರ್ಯವಸಾನ ಹೊಂದು
ತ್ತದೆ. ಮೂಢನಂಬಿಕೆ, ಪುರುಷಪ್ರಯತ್ನದಲ್ಲಿ ಅಪನಂಬಿಕೆ, ಸಂಪ್ರದಾಯ
ಶರಣತೆ ಇವುಗಳನ್ನು ಉರುಳಿಸಬೇಕಾದರೆ ದೇಶ ಇನ್ನೂ ತುಂಬ ಕಾಲ
ವನ್ನು ಕಳೆಯಬೇಕು. ವಿದ್ಯಾಭ್ಯಾಸ ಹೆಚ್ಚಬೇಕು, ಹೊಸ ತಲೆಮಾರಿನ
ಜನ ಶಕ್ತರಾದ ಮುಂದಾಳುಗಳಾಗಬೇಕು.
ಹಿರಿಯನು ಸೋಲೊಪ್ಪಿದುದನ್ನು ನೋಡಿ, ತಾನೇ ತನ್ನನ್ನು ಬೈದು
ಕೊಂಡದ್ದನ್ನು ನೋಡಿ ಓಂಟಿ ನಕ್ಷತ್ರ ನಕ್ಕಿತಂತೆ. ಈ ಕಥೆಯಲ್ಲಿ ನವಯುಗದ
ನಿರ್ಮಾಣ ಕಾರ್ಯದ ಹಿರಿಮೆ, ಕಷ್ಟ, ನಿಷ್ಠೆಗಳ ಅರ್ಥಪೂರ್ಣ ಚಿತ್ರ ಇವು
ಮೂಡಿಬಂದಿವೆ. ಕಥೆಯ ಅರ್ಥಕ್ಕೆ ಕಥೆಯ ಕೊನೆಯಲ್ಲಿ ಬರುವ ಗಂಡು
ಮಗುವಿನ ಜನನದ ವರ್ತಮಾನ ಹೆಚ್ಚು ಪುಷ್ಟಿಯನ್ನೊದಗಿಸಿದೆ.

ನಂ. ೨೦೮ ಮತ್ತು ನೀಲಿ ಬುಶ್ ಕೋಟು
ವಾತ್ಸಲ್ಯವು ಬಡತನದ ಇಕ್ಕಟ್ಟಿಗೆ ಸಿಕ್ಕಿದಾಗ ಏನು ತಪ್ಪು
ಮಾಡೀತು, ಆತ್ಮಗೌರವದ ಪ್ರತಿಷ್ಠೆ ತಲೆಯೆತ್ತಿದಾಗ ಮನಸ್ಸು ಹೇಗೆ
ನಡೆದುಕೊಂಡೀತು ಎಂಬುದು ಸ್ವಾರಸ್ಯವಾದ ವಿಚಾರ. ಈ ವಿಚಾರ
ಸರಣಿಗೆ ದೃಷ್ಟಾಂತವಾಗಿದೆ ಇಲ್ಲಿಯ ಕಥೆ.
ಶಾರದಾ ಅಕ್ಕ, ನಾಣಿ ತಮ್ಮ. ಅವರಿಬ್ಬರ ತಂದೆ ಐವತ್ತು
ರೂಪಾಯಿನ ನೌಕರ-ತಾಯಿ ರೋಗಪೀಡಿತಳಾದ ನಿತ್ರಾಣಿ. ಈ ಸಂಸಾರದ
ಉದರಂಭರಣಕ್ಕೆ ಶಾರದಾ ಸಹಾಯಕಳಾಗಬೇಕಾಗುತ್ತದೆ'ರೆಡಿಮೇಡ್'
ಉಡುಪುಗಳನ್ನು ತಯಾರಿಸುವ ಕಾರ್ಖಾನೆಯನ್ನು ಸೇರಿ. ನೀಲಿಯ ಬುಶ್
ಕೋಟ್ ಒಂದನ್ನು ಹಾಕಿಕೊಳ್ಳಬೇಕೆಂದು ಇಷ್ಟಪಟ್ಟ ನಾಣಿಗೆ ಉಡುಗೊರೆ
ಕೊಡುವುದಾಗಿ ಅಕ್ಕನ ಮಾತು. ಅದನ್ನು ಕುರಿತು ಹಾಸ್ಯಮಾಡುತ್ತಿದ
ತಮ್ಮ ನಾಣಿ-ಇವೆಲ್ಲದರ ನಡುವೆ ಶಾರದೆಯ ಕಣ್ಣಿಗೆ ನೀಲಿಯ ಬುಶ್
ಕೋಟ್ ಕಾಣಿಸುತ್ತದೆ , ಒಬ್ಬಳೇ ಇದ್ದಾಗ. ಅದನ್ನೇ ಕದ್ದು ಟಿಫಿನ್

೧೭೨

ಮೇಲ್ನುಡಿ

ಕ್ಯಾರಿಯರ್ಗೆ ಸೇರಿಸುತ್ತಾಳೆ ಅವಳು. ಮಾಡಿದ ಅಕಾರ್ಯದ ಪರಿಣಾಮ
ವಾಗಿ ತಲೆತಿರುಗಿ ಬೀಳುವುದರಲ್ಲಿರುತ್ತಾಳೆ. ಈ ಬವಳಿಗೆ ಸುತ್ತಣವರು
ಅಪಾರ್ಥವನ್ನೇ ಮಾಡುತ್ತಾರೆ. ಮನೆಗೆ ಹೊರಟವಳು, ಶಾರದಾ,
ಹಿಂತಿರುಗಿ ಬಂದು ಕಾರ್ಖಾನೆಯ ಯಜಮಾನರಿಗೆ ತನ್ನ ತಪ್ಪನ್ನು ತೋಡಿ
ಕೊಳ್ಳುತ್ತಾಳೆ. ಹಿರಿಯರೂ, ಉದಾರಿಗಳೂ ಆದ ಅವರು ನಡೆದುಕೊಂಡ
ರೀತಿ, ತೋರಿಸಿದ ಮರುಕ ಅಪರೂಪವಾದುದು. ಶಾರದಾ ಮತ್ತೆ ಆ
ಕೆಲಸಕ್ಕೆ ಹಿಂದಿರುಗಲಿಲ್ಲ.
ಇದೇ ಸಮಯದಲ್ಲಿ ರೋಗಪೀಡಿತನಾಗಿದ್ದ ನಾಣಿ ಆಸ್ಪತ್ರೆಯಿಂದ
ಮನೆಗೆ ಬರುವ ವೇಳೆಗೆ, ಅವನಿಗೆ ಪ್ರಿಯವಾದ ಬಣ್ಣವೂ ಬೇರೆಯಾಗಿತ್ತು.
ಅದು ನೀಲಿಯಲ್ಲ ಈಗ ಬಿಳಿ. ಸರಿಯೇ, ಶಾರದೆಯ ಹೆಸರೂ ಬಿಳಿಯನ್ನೆ
ಸೂಚಿಸುತ್ತದೆ. ನಾಣಿಯ ಆಸೆಯೂ ಬಿಳಿ. ಶುಭ್ರಜೀವನದ ಸಂಕೇತ
ವಾಗಿ ಅವರ ಬಿಳಿ ಬಟ್ಟೆಯ ಅಪೇಕ್ಷೆ ಮುಂದುವರಿಯುತ್ತದೆ.
ಈ ಕಥೆಯಲ್ಲಿ ಶಾರದೆಯ ಅಂತರಂಗದ ತುಮುಲದ ಚಿತ್ರ ಚೆನ್ನಾಗಿದೆ.
ಅದೇ ಕಥೆಯ ರಸಸ್ಥಾನ. ಮಿಕ್ಕ ಭಾಗಗಳು ಅದಕ್ಕೆ ಪೋಷಕ ಅಷ್ಟೇ.
ಕಥೆಯ ಕರುಣರಸ ಚಿತ್ರಣದಲ್ಲಿ 'Sentimental' ಸ್ವಭಾವವಿದ್ದರೂ
ಶೈಲಿಯ ಸತ್ವದಿಂದ ಈ ಕಥೆ ಆಕರ್ಷಕವಾಗಿದೆ.

ಡಿ ಲಕ್ಸ್
ಡಿ ಲಕ್ಸ್ ಗಾಡಿಯಲ್ಲಿನ ಪ್ರಯಾಣ , ಅದರ ವಿವಿಧ ಸ್ವರೂಪಗಳನ್ನು
ನಾವಿಲ್ಲಿ ಕಿಂಚಿತ್ ದರ್ಶಿಸುತ್ತೇವೆ. ಇಲ್ಲಿರುವ ಬೇರೆ ಬೇರೆ ವ್ಯಕ್ತಿಗಳು
ನಡವಳಿಕೆಯನ್ನೂ ಮಾತುಗಳನ್ನೂ ನಾವು ಆಸಕ್ತಿಯಿಂದ ಪರಿಶೀಲಿಸು
ತ್ತೇವೆ. ಕೊನೆಗೆ ರಾಮನ್ ಪಡೆದ ಅನುಭವನ್ನು ಸವಿಯುತ್ತೇವೆ. ಈ
ಕಥೆಯಲ್ಲಿನ ಬಹು ಸ್ವಾರಸ್ಯಮಯವಾದ ತರುಣಿಯ ಚಿತ್ರ ನಮ್ಮಲ್ಲಿ
ನಗೆಯನ್ನು ಉಕ್ಕಿಸುತ್ತದೆ. ಕಥೆಯಲ್ಲಿ ಹಾಸ್ಯದ ಹಿಂದೆ ತೀವ್ರ
ವಿಡಂಬನೆಯಿದೆ. 'ಡಿ ಲಕ್ಸ್' ಅಂದರೆ ಸುಖಸಮೃದ್ದಿಯಿಂದ ಕೂಡಿದ,
ವಿಸ್ತಾರವಾದ ಎಂಬ ಅರ್ಥವಿದೆ. ಇದು ವಸ್ತುಗಳಿಗೆ ಅನ್ವಯಿಸಬಹುದು.
ಈ ಕಥೆಯಲ್ಲಿನ ಪ್ರಯಾಣಿಕನೇ 'ಡಿ ಲಕ್ಸ್'. ಅವನ ನಡೆವಳಿಕೆಯಲ್ಲೆಲ್ಲ
ಈ 'ಡಿ ಲಕ್ಸ್' ಗುಣ ನಿರೂಪಿತವಾಗಿದೆ.

-ಜಿ. ವೆಂಕಟಸುಬ್ಬಯ್ಯ