ಪುಟ:ಅಜಿತ ಕುಮಾರ.djvu/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮಲ್ಲ ಯುದ್ಧ,

ಅಜಿತನು ಅಲ್ಲಿ ಸಂತೆ ನೆರೆಯುವ ಸ್ಥಳಕ್ಕೆ ಹೋಗಿ, “ಇಲ್ಲಿಯ
ರಾಜನಾದ ಕ್ರೂರಾಕ್ಷನೆಲ್ಲಿ ? ಆತನೊಡನೆ ಕಾದಬೇಕಾಗಿದೆ ! ಇಂದು ಅವನ
ಗರ್ವವನ್ನು ಮುರಿದುಬಿಡುತ್ತೇನೆ!” ಎಂದು ಗಟ್ಟಿಯಾಗಿ ಕೂಗಿ ಹೇಳಿದನು.

ಇದನ್ನು ಕೇಳಿ ಜನಗಳು ಸುತ್ತಲೂ ಗುಂಪುಕಟ್ಟಿಕೊಂಡು, “ಸುಂದ
ರಾಂಗನಾದ ಯುವಕನೇ, ಏತಕ್ಕಾಗಿ ಅವನ ಕೈಯಲ್ಲಿ ಸಾಯುವೆ ?
ಆದಷ್ಟು ಬೇಗನೆ ಈ ಊರಿಂದ ಓಡಿಹೋಗು ! ನೀನು ಬಂದ ಸಂಗತಿ
ಯನ್ನು ಆ ನೀಚನಿಗೆ ತಿಳಿಯಗೊಡಿಸಬೇಡ!” ಎಂದು ಬೋಧಿಸತೊಡಗಿದರು.

ಆದರೆ ಅಜಿತನು ಅವರ ಮಾತಿಗೆ ಕಿವಿಗೊಡದೆ, ಅರಮನೆಯ ಕಡೆಗೆ
ಹೊರಟನು, ಎಲ್ಲರೂ ಆತನಿಗೆ ಹೋಗಬೇಡವೆಂದು ಪ್ರಾರ್ಥಿಸುತ್ತ ಅರ
ಮನೆಯ ಹೆಬ್ಬಾಗಿಲಿನ ವರೆಗೆ ಬಂದರು. ಆದರೆ ಒಳಕ್ಕೆ ಹೋಗುವಷ್ಟು
ಧೈರ್ಯವು ಯಾರಿಗೂ ಸಾಕಾಗಲಿಲ್ಲ. ಅಜಿತನೊಬ್ಬನೇ ಪ್ರವೇಶಿಸಿ
ದನು. ಹೆಬ್ಬಾಗಿಲಿನಿಂದ ಚಾವಡಿಯ ತನಕವೂ ಮನುಷ್ಯರ ತಲೆಯೋ
ಡುಗಳೂ, ಮೂಳೆಯ ರಾಶಿಗಳೂ ಬಿದ್ದಿದ್ದುವು. ಚಾವಡಿಯಲ್ಲಿ, ಯಾವನ
ಹೆಸರನ್ನು ಕೇಳಿದ ಮಾತ್ರದಿಂದ ಜನಗಳು ಮೈ ತೆಗೆಯುತಿದ್ದರೆ ಅಂಥ
ಕ್ರೂರಾಕ್ಷನು ಕುಳಿತಿದ್ದನು.

ಚಾವಡಿಯಲ್ಲಿ ಮತ್ತೆ ಯಾರೂ ಇರಲಿಲ್ಲ. ಕ್ರೂರಾಕ್ಷನ ಇದಿರಿ
ನಲ್ಲಿ ಬಕಾಸುರನ ಬಲಿಯಂತೆ ಅನ್ನದ ದೊಡ್ಡ ರಾಶಿಯೊಂದಿತ್ತು. ಎಡ
ಗಡೆ ಎರಡು ಹಂಡೆಗಳಲ್ಲಿ ತುಂಬ ಸೋಮರಸವಿತ್ತು. ಅವನನ್ನು ನೋಡು
ತ್ತಲೇ ಅಜಿತನು, “ಎಲೊ, ಜಟ್ಟಿಯೆ, ಇಂದು ಒಂದು ಸಲ ನಿನ್ನ ಚಮ
ತ್ಕಾರವನ್ನು ತೋರಿಸಿಬಿಡುವೆಯಾ ?” ಎಂದು ಕೇಳಿದನು.

ಕ್ರೂರಾಕ್ಷನು ಅವನನ್ನು ನೋಡಿ ನಕ್ಕು, “ಆಗಲಿ, ನನ್ನ ಕೌಶಲ
ವನ್ನು ತೋರಿಸುವೆನಂತೆ. ಆದರೆ, ಈಗ ಒಳಕ್ಕೆ ಬಾ. ನಾನೂ ಒಬ್ಬನೇ
ಇದ್ದೇನೆ, ನೀನೂ ಬಳಲಿರುವೆ. ಸಾಯುವುದಕ್ಕೆ ಮೊದಲು ಕೊಂಚ
ಊಟ ಮಾಡಿಬಿಡು” ಎಂದು ಉಪಚಾರ ಹೇಳಿದನು.