ನ್ನಾಲಿಸುತ್ತ ಗುಹೆಗಳನ್ನು ಪ್ರವೇಶಿಸಿ ನೋಡುತ್ತ ನಾನಾ ವಿಧವಾದ ಮೃಗಗಳನ್ನು ಕೊಲ್ಲುತ್ತ ಬರುತ್ತಿರಲು ; ಅಲ್ಲೊಂದು ಕಡೆಯಲ್ಲಿ ತನ್ನ ಮಗಳೊಡನೆ ವಾಸಿಸುತ್ತಿದ್ದ ಮಯನೆಂಬವನನ್ನು ನೋಡಿ--ನೀನು ಯಾರು ? ಈ ಕಾಡಿನಲ್ಲಿ ವಾಸಿಸುವುದಕ್ಕೆ ಕಾರಣವೇನು ? ಈ ಅಬಲೆಯು ಯಾರ ಮಗಳು ? ನಿನ್ನ ಉದ್ಯೋಗವಾವುದು ? ಎಂದು ಕೇಳಲು ; ಅದಕ್ಕೆ ಮಯನು--ಎಲೈ ವೀರನೇ, ಕೇಳು ; ಈ ಲೋಕದಲ್ಲಿ ನನ್ನನ್ನು ಮಯನೆಂದು ಕರೆಯುತ್ತಾರೆ. ನನಗೆ ಸಂಪ್ರಾಪ್ತವಾಗಿರುವ ಅಪಾರವಾದ ದುಃಖವನ್ನು ಯಾರು ತಾನೆ ಪರಿಹರಿಸಬಲ್ಲರು ? ಆದರೂ ಹೇಳುತ್ತೇನೆ ಕೇಳು. ಅಪ್ಸರ ಸ್ತ್ರೀಯರೊಳಗೆ ಶ್ರೇಷ್ಠಳಾದ ಹೇಮೆ ಎಂಬ ವನಿತಾಮಣಿಯ ವಿಷಯವನ್ನು ನೀನು ಕೇಳಿಬಲ್ಲೆಯಷ್ಟೆ ? ದೇವತೆಗಳು ಪ್ರೀತಿಯಿಂದ ಆಕೆಯನ್ನು ನನಗೆ ಹೆಂಡತಿಯನ್ನಾಗಿ ಮಾಡಿಕೊಟ್ಟರು. ನಾನು ಐನೂರು ಸಂವತ್ಸರಗಳ ವರೆಗೂ ಆಕೆಯೊಡನೆ ಸುಖಿಯಾಗಿದ್ದೆನು, ಆ ಮೇಲೆ ನನಗೆ ಆ ಸುಂದರಿಯಲ್ಲಿ ಮಾಯಾವಿ ದುಂದುಭಿ ಎಂಬಿಬ್ಬರು ಗಂಡುಮಕ್ಕಳೂ ಸ್ತ್ರೀ ಶಿರೋಮಣಿಯಾದ ಮಂಡೋದರಿ ಎಂಬ ಈ ಹೆಣ್ಣು ಮಗಳೂ ಹುಟ್ಟಿದರು. ಆ ಮೇಲೆ ನನ್ನ ದೌರ್ಭಾಗ್ಯವಶದಿಂದ ಆಕೆಯೊಡನೆ ನನಗೆ ವಿಯೋಗ ವುಂಟಾಯಿತು, ಪ್ರಾಣಪ್ರಿಯಳಾದ ಪತ್ನಿಯ ವಿಯೋಗತಾಪವನ್ನು ಸಹಿಸಿಕೊಂಡು ಯಾವನು ತಾನೇ ಬದುಕಬಲ್ಲನು ? ಕಠಿಣಹೃದಯನಾದ ನಾನು ಮೊದಲು ಆಕೆಯನ್ನು ವಿವಾಹವಾಗಿ ಮಾಯೆಯಿಂದ ಹೇಮೆ ಎಂಬ ಪುರವನ್ನು ನಿರ್ಮಿಸಿಕೊಂಡು ಅಲ್ಲಿ ಸುಖಿಯಾಗಿದ್ದೆನು. ಈಗ ಸಹಿಸಲಶಕ್ಯವಾದ ದುಃಖದಿಂದ ಅನಾಥನಾಗಿ ಆ ಪಟ್ಟಣವನ್ನೂ ಬಿಟ್ಟು ಈ ಮಗಳನ್ನು ಕರೆದುಕೊಂಡು ಹೊರಟುಬಂದು ಸದ್ವಂಶಜನೂ ಯೋಗ್ಯನೂ ಆದ ಒಬ್ಬ ವರನಿಗೆ ಈಕೆಯನ್ನು ಕೊಡಬೇಕೆಂಬ ನಿರೀಕ್ಷೆಯಿಂದ ಈ ಅರಣ್ಯದಲ್ಲಿ ಸೇರಿಕೊಂಡಿದ್ದೇನೆಂದು ಹೇಳಿ, ನೀನು ಯಾರು ? ಎಂದು ಕೇಳಿದನು. ದಶಮುಖನು--ಎಲೈ ಮಯನೇ, ಕೇಳು, ನಾನು ಪುಲಸ್ಯ ಮಹಾಮುನಿಯ ಪುತ್ರನಾದ ವಿಶ್ರವಸ್ಸಿನ ತನಯನು, ನನ್ನನ್ನು ದಶಕಂಠನೆಂದು ಕರೆಯುವರು ಎಂದು ಹೇಳಲು; ಈ ಮಾತನ್ನು ಕೇಳಿದ ಮಯನು ಸಂತೋಷಿಸಿ--ಈಗ ನನ್ನಿಷ್ಟಾರ್ಥವು ಸಿದ್ದಿಸಿತು, ಈ ಪುತ್ರಿಗೆ ಯೋಗ್ಯನಾದ ವರನು ದೊರಕಿದನು ಎಂದು ಮನಸ್ಸಿನಲ್ಲಿ ಆಲೋಚಿಸಿ, ದಶಗ್ರೀವನನ್ನು ಕುರಿತು--ಎಲೈ ಮಹಾತ್ಮನೇ, ಬ್ರಹ್ಮಕುಲಸಂಭವನಾದ ನಿನಗಿಂತಲೂ ಸುತ್ಕುಲೋತ್ಪನ್ನ ನದಾರುಂಟು ? ಸುಂದರಿಯೂ ಸುಶೀಲೆಯೂ ಆದ ಈ ನನ್ನ ಪುತ್ರಿಯನ್ನು ಪತ್ನಿಭಾವದಿಂದ ಪರಿಗ್ರಹಿಸಬೇಕೆಂದು ಪ್ರಾರ್ಥಿಸಲು ; ದಶವದನನು ಹಾಗೇ ಆಗಲೆಂದು ಒಪ್ಪಿಕೊಂಡನು, ಆ ಮಯನ ಮಾಯಾಬಲವಿಂತಿರುವುದೆಂದು ಹೇಳಬಲ್ಲ ವರಾರು ? ನವರತ್ನ ಖಚಿತವಾಗಿಯೂ ವಿಚಿತ್ರತರವಾಗಿಯೂ ಸರ್ವಲೋಕರಮ್ಯವಾಗಿಯೂ ಇರುವ ವಿವಾಹಮಂಟಪವು ಆ ಕ್ಷಣದಲ್ಲಿಯೇ ಉಂಟಾಗಿ ಪರಿಶೋಭಿಸಿತು. ಆಗ ಮಯನು ಅನೇಕರಾದ ತತ್ವಜ್ಞಾನಿಗಳನ್ನು ಕರೆಯಿಸಿಕೊಂಡು, ವೈದಿಕವಿಧಾನದಿಂದ ಅಗ್ನಿಯಲ್ಲಿ ಹೋಮಮಾಡಿ ಮಂಡೋದರಿಯನ್ನು ರಾವಣನಿಗೆ ಧಾರಾ ಪೂರ್ವಕವಾಗಿ ಮದುವೆ ಮಾಡಿ ಕೊಟ್ಟನು. ಆ ಮೇಲೆ ಅಳಿಯನಿಗೆ ಬಹುಮಾನವಾಗಿ
ಪುಟ:ಕಥಾ ಸಂಗ್ರಹ - ಭಾಗ ೨.djvu/೧೯
ಗೋಚರ