ಪುಟ:ಕರ್ನಾಟಕ ಗತವೈಭವ.djvu/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



- ೬ -

.

ಗಳಲ್ಲಿ ಬೆರಿಸಿ, ಆ ಮಿಶ್ರಣವನ್ನು ಕಾಸಿ ಕರ್ನಾಟಕದ ಅಭಿಮಾನವೆಂಬ ಎರಕದಲ್ಲಿ ಕೈಲಾದಷ್ಟು ಮಟ್ಟಿಗೆ ಹೊಯ್ದು ಈ ಪ್ರಬಂಧವನ್ನು ರಚಿಸಲಾಗಿದೆ. ಆದುದರಿಂದ, ನಮ್ಮ ಪೂರ್ವಜರ ಗುಣಾನುವಾದವೇ ಈ ಪ್ರಬಂಧದಲ್ಲಿ ಕಂಡುಬರುವುದು. ನಾವು ಹೊಗಳುಭಟ್ಟರಂತೆ ನಮ್ಮ ಪೂರ್ವಜರನ್ನು ಹೀಗೆ ಹೊಗಳಿರುವ ಮಾತ್ರದಿಂದ, ಅವರು ಲೋಕವಿಲಕ್ಷಣರೂ ಸರ್ವಗುಣ ಪರಿಪೂರ್ಣರೂ ದೋಷವಿವರ್ಜಿತರೂ ಆಗಿದ್ದರೆಂದು ನಮ್ಮ ಅಭಿಪ್ರಾಯವಿರುವುದಾಗಿ ಯಾರೂ ಊಹಿಸಕೂಡದು. ಆದರೆ, ಇಲ್ಲದ ಸಲ್ಲದ ದೋಷಗಳನ್ನು ಕೇಳಿ ಕೇಳಿ ನನ್ನ ಕಿವಿಗಳು ಮರಗಟ್ಟಿರುತ್ತವೆ; ಮತಿಯು ಮಸಣಿಸಿದೆ; ಕ್ರಿಯಾಶಕ್ತಿಯು ಕುಗ್ಗಿದೆ, ಮತ್ತು 'ನಾವು ಎಂದಿಗೂ ಹೇಡಿಗಳೇ, ಮುಂದೆಯೂ ಹಾಗೆಯೇ ಉಳಿಯುವವರು' ಎಂಬ ರಾಷ್ಟ್ರವಿಘಾತಕ ಭಾವನೆಯು ನಮ್ಮಲ್ಲಿ ಬೇರೂರಿದೆ. ಆದ್ದರಿಂದ ನಾವು ಅಭಿಮಾನ ಶೂನ್ಯರಾಗಿದ್ದೇವೆ, ಆತ್ಮವಿಶ್ವಾಸವನ್ನು ಕಳೆದುಕೊಂಡಿದ್ದೇವೆ. ಈಗ.

अभिमानो धनं येपं चिर जीवन्तु ते नराः।
अभिमानविहीनानां किं धनेन किमायुषा ॥

ಎಂಬಂತೆ, ಅಭಿಮಾನಶೂನ್ಯರಾದ ನಾವು ಇದ್ದೂ ಇಲ್ಲದಂತೆಯೇ ಆಗಿದೆ. ಆದುದ ರಿಂದ “ನಾವೂ ಮನುಷ್ಯರು; ನಮ್ಮನ್ನೂ ದೇವರೇ ಹುಟ್ಟಿಸಿರುವನು; ನಮ್ಮಿಂದಲೂ ಹಿಂದಕ್ಕೆ ಮಹಾ ಮಹಾ ಕಾರ್ಯಗಳು ನೆರವೇರಿವೆ; ನಮಗೂ ಬುದ್ಧಿಯುಂಟು, ಭಾಷೆಯುಂಟು, ರಾಷ್ಟ್ರವುಂಟು, ವೈಭವವುಂಟು, ಇತಿಹಾಸವುಂಟು; ಜಗತ್ತನ್ನು ವ್ಯಾಪಿಸಿರುವ ಮಹತ್ವದ ತತ್ವ ವಿಚಾರಗಳು ನಮ್ಮಿಂದಲೇ ಪ್ರಸೃತ ವಾಗಿವೆ; ನಮ್ಮವರೂ 'ಗಂಗಾವಾರಿಧಿಯೋಳ್ ಆತ್ಮತುರಂಗಮಂಮಿಸಿಸಿ'ರ್ದರು. ನಮ್ಮಲ್ಲಿಯ ವಿದ್ವಾಂಸರೂ ವೀರರೂ ಉದಯಿಸಿದರು.” ಇವೇ ಮುಂತಾದ ಕಲ್ಪನೆಗಳನ್ನು ಕನ್ನಡಿಗರಲ್ಲಿ ಹುಟ್ಟಿಸಲು (೧) ಈ ಪ್ರಸ್ತಾವನೆಯ ಪ್ರಾರಂಭದ ಅವತರಣಿಕೆಯಲ್ಲಿ ಲೋಕಮಾನ್ಯರವರು ಹೇಳಿದಂತೆ ಹಿಂದಕ್ಕೆ ಈಗಿನ ಮಹಾ ರಾಷ್ಟ್ರದಲ್ಲಿಯೂ ಕನ್ನಡ ಭಾಷೆಯೇ ಪ್ರಚಲಿತವಾಗಿತ್ತು, (೨) ನಮ್ಮ ಕರ್ನಾಟಕವು ಆಗಿನ ಕಾಲಕ್ಕೆ ತಕ್ಕಂತೆ ಇತಿಹಾಸರಂಗದಲ್ಲಿ ಮುಖ್ಯ ಪಾತ್ರವನ್ನು ಸ್ವೀಕರಿಸಿತ್ತು. ಎಂಬೆರಡು ಸಂಗತಿಗಳನ್ನು ವಾಚಕರ ಲಕ್ಷ್ಯಕ್ಕೆ ತಂದಿಡುವುದೇ ಈ ಪ್ರಬಂಧದ ಮೂಲೋದ್ದೇಶವು.