ಪುಟ:ಕರ್ನಾಟಕ ಗತವೈಭವ.djvu/೧೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

-೧೬೬-


ಕೊಳ್ಳಬೇಕು. ಐತಿಹಾಸಿಕ ವಿಷಯದ ಪ್ರತಿಪಾದನೆಯನ್ನು ಮಧುರ ಭಾಷೆಯೊಡನೆ ಬೆರೆಸಿದ್ದರಿಂದ ಈ ಪ್ರಬಂಧವು ಬಹಳ ಸರಸವಾಗಿ ತೋರುವದು. ಸಾಮಾನ್ಯ ವಾಚಕರಿಗೆ ಈ ಪ್ರಬಂಧವು ಮನೋರಂಜನೆಯನ್ನೀಯುವದು. ಕರ್ನಾಟಕ ಇತಿಹಾಸ ಮಂದಿರವನ್ನು ಪ್ರವೇಶಲಿಚ್ಚಿಸುವವರಿಗೆ ಇದು ಮಾರ್ಗದರ್ಶಿಯಾಗಿರುವದು. ಭಾಷಾಭಿಲಾಷಿಗಳಿಗೆ ಇದು ಕೈಪಿಡಿಯಾಗಿರುವದು. ಸ್ವದೇಶಕ್ಕೂ ಸ್ವಭಾಷೆಯ ವಿಷಯಕ್ಕೂ ಅನಾದರವನ್ನೂ ನಿರಾಶವನ್ನೂ ತಾಳಿದ ಪ್ರತಿಯೊಬ್ಬ ಕನ್ನಡಿಗನ ಮನಸ್ಸಿನಲ್ಲಿ ಈ ಪ್ರಬಂಧವು ಸ್ವಾಭಿಮಾನದ ಬೀಜವನ್ನು ಒಡಮೂಡಿಸದೆ ಇರದು. ಕರ್ನಾಟಕದ ಗತವೈಭವವನ್ನು ಅರಿತು ಕೊಳ್ಳಲಿಚ್ಚಿಸುವವರು ಈ ಪುಸ್ತಕವನ್ನು ಒಂದು ಅರಘಳಿಗೆ ಓದಿದರೆ ಸಾಕು, ಪ್ರಾಚೀನ ಕಾಲದ ನಮ್ಮ ಎಲ್ಲ ವೈಭವವು ನಮ್ಮ ಕಣ್ಣ ಮುಂದೆ ಕಟ್ಟಿದಂತಾಗುವದು. ರಾ। ರಾ| ವೆಂಕಟರಾವ್ ಆಲೂರವರು ಕರ್ನಾಟಕ ಉದ್ಧಾರಾರ್ಥವಾಗಿ ಪ್ರಾರಂಭಿಸಿದ ತಪಶ್ಚರ್ಯಕ್ಕೆ ಕನ್ನಡ ಮಾತೆಯು ಪ್ರಸನ್ನಳಾಗಿ ಅವರ ಲೆಖ್ಖಣಿಕೆಗೆ ಸ್ಫೂರ್ತಿ ಯನ್ನು ಕೊಟ್ಟಿರುವಳು. ಕನ್ನಡ ಮಾತೆಯ ಮುದ್ದು ಮಕ್ಕಳಾದ ಕೈ.ವಾ.ತೂರಮರಿ, ವೆಂಕಟ ರಂಗೋಕಟ್ಟಿ, ಧೋಂಡೋ ನರಸಿಂಹ ಮುಳಬಾಗಲ ಮುಂತಾದ ಲೇಖಕರ ಮಣಿಮಾತೆಯಲ್ಲಿ ಇವರನ್ನು ಪೋಣಿಸಲಿಕ್ಕೆ ಏನೂ ಅಡ್ಡಿ ಇಲ್ಲ. ರಾ। ರಾ| ಆಲೂರವರ ಮಾತೃ ವಾತ್ಸಲ್ಯಕ್ಕೆ ಲುಬ್ಧಳಾದ ನಮ್ಮ ಕನ್ನಡ ಮಾತೆಯು ಕನ್ನಡ ಪುಸ್ತಕ ಭಾಂಡಾರವನ್ನು ಸುಶೋಭಿತ ಮಾಡಲಿಕ್ಕೆ ಅವರಿಗೆ ಹೆಚ್ಚಿನ ಬುದ್ಧಿಯನ್ನೂ ಸಾಮರ್ಥ್ಯವನ್ನೂ ಕೊಟ್ಟು ಕನ್ನಡಿಗರನ್ನು ಜಾಗ್ರತೆ ಪಡಿಸಲೆಂದು ನಾವು ಪರಮೇಶ್ವರನನ್ನು ಪ್ರಾರ್ಥಿಸುತ್ತೇವೆ.

ವಿಜ್ಯಾಪುರ

ಕರ್ನಾಟಕ ವೈಭವ.

೫ ಮಾರ್ಚಿ, ಸನ್ ೧೯೧೮

ಇವಲ್ಲದೆ ವಾಗ್ಭೂಷಣ, ಚಂದ್ರೋದಯ, ಡೆಕ್ಕನ ಕಾಲೇಜ ಪತ್ರಿಕೆ, ಕರ್ನಾಟಕ ಕಾಲೇಜ ಪತ್ರಿಕೆ ಮುಂತಾದವುಗಳಲ್ಲಿ ಉತ್ತಮವಾದ ಅಭಿಪ್ರಾಯಗಳು ಬಂದಿವೆ.