ಪುಟ:ಕರ್ನಾಟಕ ಗತವೈಭವ.djvu/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



೧೦

ಕರ್ನಾಟಕ ಗತವೈಭವ


ದೇಶದ ಇತಿಹಾಸದಲ್ಲಿ ವೈಭವದ, ಪರಾಕ್ರಮದ, ಬುದ್ಧಿವಂತಿಕೆಯ ಸಂಗತಿಗಳು ಎಂದಿಗೂ ಶೂನ್ಯವಾಗಿರುವವೋ, ಯಾವ ನಾಡು ನಾಮ ಮಾತ್ರಕ್ಕೆ ಮನುಷ್ಯರಿಂದ ತುಂಬಿರುವದೋ, ಅಂಥ ನಾಡಿನವರು ಹೀಗೆ ಅಪ್ಪುಗೈ ಹಾಕಿಕೊಂಡು ಕುಳಿತರೆ ಒಂದು ವೇಳೆ ಸರಿದೋರಬಹುದು; ಏಕೆಂದರೆ ದೇಶದಲ್ಲಿ ಎಂದಿಗೂ ಜೀವಂತತನದ ಕುರುಹುಗಳೇ ಇಲ್ಲದ ಮೇಲೆ, ಆ ದೇಶದವರಿಂದ ಮುಂದೆ ಏನಾದರೂ ಮಹಾ ಕಾರ್ಯಗಳಾಗುವವಂದರೆ ಒಂದು ವೇಳೆ ಸಂದೇಹವುಂಟಾಗಬಹುದು. ಆದರೆ ಯಾವ ರಾಷ್ಟ್ರವು ಇತಿಹಾಸ ರಂಗದೊಳಗೆ ಬಹು ಗೌರವದಿಂದ ಎಡೆಬಿಡದೆ ಸಾವಿರಾರು ವರ್ಷಗಳ ತನಕ ಮೆರೆಯಿತೋ, ಯಾವುದರ ಹೆಸರು ಸುವರ್ಣಾಕ್ಷರಗಳಿಂದ ಬರೆಯಲ್ಪಡಲಿಕ್ಕೆ ಯೋಗ್ಯವೋ, ಅಂಥ ರಾಷ್ಟ್ರವು ಕಾಲನಿಂದ ಗೃಸ್ತವಾಗಿ ನಿದ್ರಿತವಾಗಿದ್ದರೂ, ಅದು ಇಂದಿಲ್ಲದಿದ್ದರೆ, ನಾಳೆಯಾದರೂ ತನ್ನ ಕಳೆದು ಕೊಂಡ ವೈಭವವನ್ನು ಸಂಪಾದಿಸಿಯೇ ತೀರುವದೆಂಬುದು ನಿರ್ವಿವಾದವಾದ ಸಂಗತಿಯು. ಸಾರಾಂಶ: ಒಮ್ಮೆ ಜೀವಂತವಾಗಿದ್ದ ರಾಷ್ಟ್ರವು ಎಂದೂ ಮೃತ ವಾಗದು, ಅದು ನಿದ್ದೆ ಹೋಗಿರಬಹುದು; ಗಾಬರಿಗೊಂಡು ಕಕ್ಕಾಬಿಕ್ಕಿಯಾದ ನಮ್ಮ ಕಣ್ಣಿಗೆ ಅದು ಮೃತವಾದಂತ ತೋರಬಹುದು, ಆದರೆ ಸೂಕ್ಷವಾಗಿಯೂ, ಕೂಲಂಕಷವಾಗಿಯ ವಿಚಾರಿಸಿದರೆ, ನಮ್ಮ ಭ್ರಮೆಯು ಬಯಲಾಗಿ, ಅದರಲ್ಲಿ ವೈಭವದ ಬೀಜಗಳು ಇನ್ನೂ ಅಚ್ಚಳಿಯದೆ ಇರುವವಾಗಿ ನಿದರ್ಶನಕ್ಕೆ ಬಾರದಿರದು.
ದು ಸಾಮಾನ್ಯ ವಿಚಾರವಾಯಿತು, ನಮ್ಮ ಜನ್ಮಭೂಮಿಯಾದ ಕನ್ನಡನಾಡಿನ ಸದ್ಯದ ಅವಸ್ಥೆಯೇನು? ಅದು ಮೃತರಾಷ್ಟ್ರವೋ ಜೀವಂತರಾಷ್ಟ್ರವೋ, ಎಂಬುದನ್ನು ನಾವಿನ್ನು ತಿಳಿಯಲು ಮುಂದುವರಿಯುವ, ಕನ್ನಡಿಗರೇ, ನಾವು ನಿಮ್ಮ ಕೈಯಲ್ಲಿ ಕಟ್ಟಿಕೊಟ್ಟು ಸಾರಿ ದೂಗಿ ಹೇಳುವದೇನಂದರೆ, ನಮ್ಮ ಕರ್ನಾಟಕವು ಮೃತರಾಷ್ಟ್ರವಲ್ಲ; ಅದು ಜೀವಂತರಾಷ್ಟ್ರವು, ಅಷ್ಟೇಕೆ ! ಅದೊಂದು ಪ್ರತಿಭಾ ಸಂಪನ್ನವಾದ ರಾಷ್ಟ್ರವು, ೧೦೦೦-೧೫೦೦ ವರ್ಷಗಳ ವರೆಗೆ ಅವ್ಯಾಹತವಾಗಿ ಹಿಂದೂ ದೇಶದ ಇತಿಹಾಸದಲ್ಲಿ ವೈಭವದಿಂದ ಮೆರೆದ ರಾಷ್ಟ್ರವೆಂದರೆ ಕರ್ನಾಟಕವೊಂದೇ! ಉತ್ತರ ಹಿಂದುಸ್ತಾನದಂಥ ಬಲವಾದ ರಾಷ್ಟ್ರದ ಇತಿಹಾಸವು ಕೂಡ ಹರ್ಷವರ್ಧನನ ಕಾಲದಿಂದ ಲುಪ್ತವಾಗಿ ಹೋಯಿತು, ಆದರೆ ದಕ್ಷಿಣ