26
ಕೋಟಿ ಚೆನ್ನಯ
ಕೋಟಿ- “ಒಂದು ತಾಯಿಗೆ ನೀವು ಮಕ್ಕಳು ಎಷ್ಟು ಮಂದಿ?”
ಹೆಂಗಸು- “ಚೊಚ್ಚಲಿಗೆ ನಾನಂತೆ, ನನ್ನ ಬೆನ್ನ ಹಿಂದೆ ನನ್ನ ತಾಯಿ ಅವಳಿಜವಳಿ ಗಂಡುಮಕ್ಕಳನ್ನು ಬೀಡಿನ ಅರೆಯಲ್ಲಿ ಹಡೆದಳಂತೆ.”
ಕೋಟಿ- “ಕರ್ಗೋಲ ತೋಟದವಳು ಬೀಡಿನ ಅರೆಯಲ್ಲಿ ಹೆರಿಗೆಯಾಗಲು ಕಾರಣವೇನು?
ಹೆಂಗಸು- “ ಅದೊ? ಅದನ್ನು ಹೇಳುತ್ತೇನೆ. ಪಡುಮಲೆಯ ಪೆರುಮಾಳು ಬಲ್ಲಾಳರಿಗೆ ಒಂದು ಸಾರಿ ಬೇಟೆಗೆ ಹೋದಾಗ ಕಾಲಿಗೆ ಮುಳ್ಳು ತಾಗಿ ಜೀವ ಹೋಕುಬರ್ಕು' ಎಂಬಂತಾಯಿತಂತೆ. ಆಗ ನಮ್ಮ ತಾಯಿ ತುಂಬಿದ ಬಸುರಿ. ಅವಳ ಮದ್ದು ಆಗಬಹುದೆಂದು ಅವಳನ್ನು ಬೀಡಿಗೆ ಕರೆತರಿಸಿದರು. ಅವಳು ತಾನು ತುಂಬಿದ ಬಸುರಿ ಎಂಬುದನ್ನು ನೋಡದೆ ತಾನೇ ಕೈಯಿಂದ ಸೊಪ್ಪು ಅರೆದು ಲೇಪಹಾಕಿ, ವಾಸಿಮಾಡಿದಳಂತೆ. ಆ ಕಾಲದಲ್ಲಿ ಆಕೆ ಅವಳಿಜವಳಿ ಗಂಡುಮಕ್ಕಳನ್ನು ಹೆತ್ತದ್ದರಿಂದ, ಅವಳ ಹೆರಿಗೆಯು ಬೀಡಿನಲ್ಲಿಯೇ ನಡೆಯಿತಂತೆ.
ಕೋಟಿ- “ ಅನಂತರ ಏನಾಯಿತು?
ಹೆಂಗಸು- “ಮಕ್ಕಳು ಹುಟ್ಟಿದ ಮೂರು ತಿಂಗಳುಗಳಲ್ಲಿಯೇ ಅವಳು ಕಾಲವಾದಳು.
ಕೋಟಿ - ಅವಳು ಕಾಲವಾಗುವಾಗ ಹತ್ತಿರ ಯಾರು ಇರಲಿಲ್ಲವೆ?”
ಹೆಂಗಸು-“ನನ್ನ ಏಳನೆಯ ವರ್ಷದಲ್ಲಿ ನನ್ನನ್ನು ಇಲ್ಲಿಗೆ ಕೈ ಹಿಡಿಸಿಕೊಟ್ಟ ತರುವಾಯ ನಾನು ಮನೆಬಿಟ್ಟು ಹೊರಕ್ಕೆ ಕಾಲು ಇಡಲಿಲ್ಲ, ಹೀಗಾದ್ದರಿಂದ ತಾಯಿಯು ಹೆತ್ತ ಸುದ್ದಿಯ ಸುಖವಾಗಲಿ, ಸತ್ತ ಗೋಳಿನ ದುಃಖವಾಗಲಿ, ಕಿವಿಯಿಂದ ಕೇಳಿದ್ದೇನೆ ಹೊರತು ಕಣ್ಣಿಂದ ಕಾಣಲಿಲ್ಲ.”
ಕೋಟಿ ಚೆನ್ನಯರ ಮನಸ್ಸಿನಲ್ಲಿ ಉಲ್ಲಾಸದ ಏರ್ತವೂ, ಉದ್ವೇಗದ ಇಳಿತವೂ ತೋರಿ, ಅವರು ಒಬ್ಬರನ್ನೊಬ್ಬರು ದೃಷ್ಟಿ ಸುತ್ತ ಒಂದು ನಿಮಿಷ ಸುಮ್ಮನಿದ್ದರು.
ಸ್ವಲ್ಪ ಹೊತ್ತಿನ ಮೇಲೆ “ಆ ಮಕ್ಕಳನ್ನು ಯಾರು ಸಾಕಿದರು? ಎಂದು ಕೋಟಿಯು ಕೇಳಿದನು.