ಪುಟ:ಕ್ರಾಂತಿ ಕಲ್ಯಾಣ.pdf/೪೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೪೪ ೨ ಕ್ರಾಂತಿ ಕಲ್ಯಾಣ ಮಾದರಸರು ನಗರದ ಹೊರಗಿರುವ ಶೀಲವಂತರ ಮಠಕ್ಕೆ ಹೋದೆವು. ಮಠಪತಿಯ ಪ್ರಾರ್ಥನೆಯಂತೆ ನಾವು ಸ್ನಾನ ಪೂಜೆ ಆರೋಗಣೆಗಳನ್ನು ಮುಗಿಸಿಕೊಂಡು ಸಂಜೆಯ ಹೊತ್ತಿಗೆ ಮೋಳಿಗೆ ಮಾರಯ್ಯನವರ ಆಶ್ರಮ ಸೇರಿದೆವು. ಅಲ್ಲಿ ಮಾರಯ್ಯನವರಿರಲಿಲ್ಲ. - ಅವರಿಗಾಗಿ ಕಾಯುತ್ತ ಅಲ್ಲಿಯೇ ಕುಳಿತೆವು. ಸೂರ್ಯಾಸ್ತವಾಗಿ ಕೊಂಚ ಹೊತ್ತಿನ ಮೇಲೆ ಸಿದ್ದರಾಮೇಶ್ವರ ಶಿವಯೋಗಿಗಳೊಡನೆ ಅವರು ಹಿಂದಿರುಗಿದರು. ಸಕಲೇಶ ಮಾದರಸರು ಶ್ರೀಶೈಲಕ್ಕೆ ಹೊರಟಿರುವ ವಿಚಾರ ತಿಳಿದಾಗ ಸಿದ್ದರಾಮೇಶ್ವರರು 'ಇನ್ನೊಂದು ವಾರದಲ್ಲಿ ಸೊನ್ನಲಾಪುರದಿಂದ ಯಾತ್ರಾತಂಡವೊಂದು ಶ್ರೀಶೈಲಕ್ಕೆ ಹೋಗುತ್ತದೆ. ಸಕಲೇಶ ಮಾದರಸರನ್ನು ನಾನು ಅವರ ಸಂಗಡ ಕಳುಹಿಸುತ್ತೇನೆ. ನೀನು ಉಳಿವೆಯ ಯಾತ್ರಾದಳವನ್ನು ಸೇರಿಕೊಂಡರೆ ಒಳ್ಳೆಯದು,' ಎಂದು ನನಗೆ ಹೇಳಿದರು. ಸಕಲೇಶ ಮಾದರಸರು ಸಲಹೆಯನ್ನು ಅನುಮೋದಿಸಿದರು. ನಾನು ಒಪ್ಪಬೇಕಾಯಿತು. ಮರುದಿನ ಮುಂಜಾವಿನಲ್ಲಿ ಸಕಲೇಶ ಮಾದರಸರೂ ಸಿದ್ದರಾಮೇಶ್ವರರೂ ಸೊನ್ನಲಾಪುರಕ್ಕೆ ಹೊರಟರು. ನಾನು ಬಾಂಧವರ ಓಣಿಯಲ್ಲಿ ಮಾರಯ್ಯನವರ ಆಶ್ರಮದಲ್ಲಿ ಉಳಿದೆ.” “ನೀನು ಆ ದಿನವೇ ಹೊರಟಿದ್ದರೆ ನಾಲ್ಕು ದಿನ ಮೊದಲೆ ನಮ್ಮನ್ನು ಸೇರಬಹುದಾಗಿತ್ತು. ತಡವಾದ ಕಾರಣ ?” ಪುನಃ ಮಾಚಿದೇವರು ಪ್ರಶ್ನಿಸಿದರು. ಬಾಚರಸ ಹೇಳಿದನು : "ಮಾರಯ್ಯನವರು ತಡೆದರು..... ಕಲ್ಯಾಣದಲ್ಲಿ ಇನ್ನೂ ಬಹಳ ಜನ ಶರಣರಿದ್ದಾರೆ. ಅವರನ್ನು ನಗರದಿಂದ ಹೊರಗೆ ಕರೆತಂದು ಸುರಕ್ಷಿತ ಸ್ಥಾನಗಳಿಗೆ ಕಳುಹಿಸಲು ನಿರ್ಧರಿಸಿದ್ದೇನೆ. ಅದಕ್ಕಾಗಿ ಇಂದು ನಗರಕ್ಕೆ ಹೋಗಬೇಕಾಗಿದೆ, ನೀನು ಸಂಗಡಿದ್ದರೆ ಒಳ್ಳೆಯದು. ಶರಣರು ವಲಸೆ ಹೋದ ಮೇಲೆ ನಗರದಲ್ಲಿ ಏನು ನಡೆಯಿತೆಂಬುದನ್ನು ತಿಳಿದು ಮಾಚಿದೇವರಿಗೆ ವರದಿ ಮಾಡಲು ಅನುಕೂಲ, ಎಂದು ಹೇಳಿದರು.” “ಹಾಗಾದರೆ ನೀವು ನಗರದೊಳಗೆ ಹೋಗಿದ್ದಿರಾ? ಶರಣರನ್ನು ರಕ್ಷಿಸುವುದು ನಿಮಗೆ ಸಾಧ್ಯವಾಯಿತೆ?” –ಅಡ್ಡ ಬಂದು ಚೆನ್ನಬಸವಣ್ಣನವರು ಕೇಳಿದರು. “ಅದಕ್ಕಾಗಿ ಮೋಳಿಗೆಯ ಮಾರಯ್ಯನವರು ಆ ದಿನವೇ ನಗರಕ್ಕೆ ಹೋಗಿ ಮಾಧವ ನಾಯಕನನ್ನು ನೋಡಿದರು. ಮಾಳವ, ಮೇಧಾಪಥ, ಸೌರಾಷ್ಟ್ರ ದೇಶಗಳ ಅರಸರು ಮಾರಯ್ಯನವರ ಸಂಬಂಧಿಗಳು ಮತ್ತು ಶಿಷ್ಯರು ಎಂದು