ಪುಟ:ನಡೆದದ್ದೇ ದಾರಿ.pdf/೧೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕೊನೆಯ ದಾರಿ / ಮಳೆ ಬಂದಾಗ

೧೦೧

ವಹಿಸಿದ್ದಳು ತಾನು. ಅವನು ಎಷ್ಟು ಸೊಗಸಾಗಿ ಮಾತಾಡುತ್ತಿದ್ದ! ಅವನ
ಕತೆ ಅವನ ಬಾಯಿಂದ ಕೇಳುತ್ತಿದ್ದಾಗ ಮೈ ಜುಮ್ಮೆನ್ನುತ್ತಿತ್ತು. ದೇಶ ವಿಭಜನೆ ಕಾಲದಲ್ಲಿ ಹತ್ತು
ವರ್ಷದ ಹುಡುನಾಗಿದ್ದ ಆತ ಆನೇಕ ನಿರಾಶ್ರಿತರೊಂದಿಗೆ ಕರಾಚಿಯಿಂದ ಓಡಿ
ಬಂದಿದ್ದನಂತೆ. ಚಿಕ್ಕಂದಿನಿಂದಲೂ ಏನೇನೋ ಕಷ್ಟ ಅನುಭವಿಸಿ ಬೆಳೆದಿದ್ದ, ಯಾರ
ಪ್ರೀತಿಯನ್ನೂ ಅನುಭವಿಸದೆ ಬದುಕಿದ್ದ, ಪ್ರೀತಿಗಾಗಿ ಹಸಿದಿದ್ದ ಜೀವ-ಎನಿಸಿತ್ತು
ಮೊದಲಲ್ಲಿ. ಆದರೆ....ಹ್ಞು, ಯಾರಿಗೆ ಗೊತ್ತಿತ್ತು ಅವನ ರಾಮಾಯಣ!
"ತಗೋ ಕಾಫಿ, ಕುಡಿ. ಹೇಳು ಈಗ."
ದಿನಾ ಸಂಜೆ ಅವನಿಗಾಗಿ ತಾನು ಕಾಯುತ್ತಿದ್ದುದು, ಅವನೊಂದಿಗೆ ಏನೆಲ್ಲ
ಹರಟುತ್ತಿದ್ದುದು, ಅವನಿಗಾಗಿ ಸತತ ಒಂದು ವರ್ಷ ಶ್ರಮಿಸಿದ್ದು, ಒದ್ದಾಡಿದ್ದು
ನೆನಪಾಯಿತು ಸಹನಾಗೆ.
"ನಿಮ್ಮ ಪ್ರಯತ್ನದಿಂದ ಅವನಲ್ಲೆ ಏನರೆ ಗುಣಾ ಕಾಣಿಸಿತೇನು? ದಿನಾ ಏನು
ಮಾತಾಡತಿದ್ದಿ ಅವನ ಜೋಡಿ?"
"ಅವನ ಜೋಡಿ ನಾ ಅಂತೂ ಮಾತಾಡಲಾರದ ವಿಷಯನೇ ಉಳೀಲಿಲ್ಲ. ಅವನ
ಭೂತಕಾಲ ಭಾಳ ದುಃಖದ್ದಿತ್ತು ಅಂತ ಗೊತ್ತಾದ ಮ್ಯಾಲೆ ಅವನಿಗೆ ಏನು ಔಷಧ
ಕೊಡಬೇಕೆನ್ನೂದು ಡಾಕ್ಟರು ಠರಾಯಿಸಿರು. ಮೂರೇ ತಿಂಗಳದಾಗ ಎಷ್ಟು
ಸುಧಾರಿಸಿದಾ ಅಂತೀ. 'ನಾ ಈಗ ಹೊಸಾ ಮನುಷ್ಯ ಆಗೀನಿ. ಇದೆಲ್ಲಾ ನಿಮ್ಮ
ಸಹವಾಸದ ಫಲ' ಅಂತಿದ್ದ ನಮಗ. ಅವನ ದೈಹಿಕ-ಮಾನಸಿಕ ಸ್ಥಿತಿ ದಿನಾ ದಿನಾ ಸುಧಾ
ರಸತಾ ಇದ್ದದ್ದು ನೋಡೂದರಾಗ ನನಗಂತೂ ಒಂದು creative pleasure
ಅನಿಸಿತ್ತು."
"ಅಂಥಾ ಮಹಾದುಃಖ ಅನುಭವಿಸಿದ್ನೇನು ಆತ?"
"ಹ್ಞೂ, ಅದರಾಗ ಅರ್ಧಾ ಅವನೇ ತಂದುಕೊಂಡದ್ದು
ಅನ್ನು. ಅವನ ತಲಿ ಅಂದರ ಡೆವಿಲ್ಸ್ ವರ್ಕ್ ಶಾಪ್ ನೋಡು. ನೂರಾಎಂಟು ಭಾನಗಡಿ.
ವಂಡರ್ ಫುಲ್ ಕಥೆ ಅವನದು."
"ಮುಂದ ಮಳೆಯೊಳಗೆ ತೊಯ್ಸಿಗೊಳ್ಳೋದು ಬಿಟ್ಟೇಬಿಟ್ನೇನು ಆತ?"
"ಹಾಂಗ ಒಮ್ಮೆಲೇ ಎಲ್ಲಾ ಬಿಡಲಿಲ್ಲ. ಮೊದಮೊದ್ಲು ನಾವು ಹೇಳಿದ್ದೆಲ್ಲಾ
ಲಕ್ಷಗೊಟ್ಟು ಕೇಳತಿದ್ದ. ನಮ್ಮ ಜೋಡಿ ಛೆಂದಾಗಿ ಹರಟೀ ಹೊಡೀತಿದ್ದ. ನಮ್ಮಲ್ಲೆ
ಕೆಲವು ಸರೆ ಊಟಕ್ಕೂ ಬರ್ತಿದ್ದ. ಆದರೆ ಅಕಸ್ಮಾತ್ ಮಳೆ ಸುರು ಆದರ ಅವನ
ಮುಖಾನೇ ಒಂದು ಥರಾ ಆಗಿಬಿಡತಿತ್ತು."
"ಅದು ಹಂಗ್ಯಾಕ ಆಗುತಿತ್ತು ಸಹನಾ? ಮಳೆ ಬಂದಾಗ ಮಣ್ಣಿಗೆ ಒಂದು