ಪುಟ:ನಡೆದದ್ದೇ ದಾರಿ.pdf/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮುಳ್ಳುಗಳು / ನೀನೇ ತಂತಿ

೬೭

ಭಯಂಕರವಾದುದನ್ನು ಮಾಡಬೇಕು ; ಹರೀಶನಿಂದ ದೂರ ಹೋಗಬೇಕು ; ಅವನ
ಕಡೆ ಹಾರಿ ಹೋಗಬೇಕು ; ಅವನ ಕುತ್ತಿಗೆಗೆ ಹಗ್ಗ ಹಾಕಿ ಅವನನ್ನು ಅವನ
ಕೋಟೆಗೋಡೆಯ ಮೇಲಿಂದ ಕೆಳಗೆ ಜಗ್ಗಿಕೊಳ್ಳಬೇಕು ; ಇಬ್ಬರೂ ದಾಂಡೇಲಿಯ
ಅಟ್ಟಂಬಟ್ಟ ಅರಣ್ಯಕ್ಕೆ ಓಡಿ ಹೋಗಬೇಕು ; ಅಲ್ಲಿಂದ ಜಗತ್ತಿಗೇ ಕೇಳಿಸುವ ಹಾಗೆ
'ನೀನೇ ತಂತಿ' ಎಂದು ಒದರಿ ಹಾಡಬೇಕು....
ಅಲ್ಲಿಗೆ ಈ ಕತೆ ಮುಗಿಯುವುದೆ ?
****
ಸಂಜೆ ಆಫೀಸಿನಿಂದ ಬಂದ ಹರೀಶ ಮೊದಲು ಸೀದಾ ತನ್ನ ಪ್ರೀತಿಯ ಗಿಳಿಯ
ಕಡೆ ಹೋಗಿ, ಅದಕ್ಕೆ ಕೆಂಪಾದ ಸೇಬುವಿನ ಹೋಳುಗಳನ್ನು ತಿನ್ನಿಸಿ, ಪಂಜರದ
ಸಲಾಕೆಗಳಲ್ಲಿ ತನ್ನ ತುಟಿಗಳನ್ನು ತೂರಿ ಅದರ ಚುಂಚಿನ ಮೇಲೆ ಮುತ್ತಿನ
ಮುದ್ರೆಯನ್ನೊತ್ತಿದನು. ಇಷ್ಟೊತ್ತು ಅರಚುತ್ತಲಿದ್ದ ಗಿಳಿ ಅದಾವ
ಮಾಯದಿಂದಲೋ ಸುಮ್ಮನಾಯಿತು.
-ಸರಯೂ ನೋಡುತ್ತಲೇ ಇದ್ದಳು.
ಹರೀಶನ ಮುಖ ಯಾಕೋ ಎಂದಿಗಿಂತ ಹೆಚ್ಚಾಗಿ ಅರಳಿತ್ತು. ಹೆಂಡತಿಯನ್ನು
ಸಮೀಸುತ್ತಿದ್ದಂತೆ ಆತ ನಗುತ್ತ ಕೇಳಿದ,"ಸರೂ, ನಿನಗೊಂದು ಸ್ವೀಟ್ ನ್ಯೂಜ್
ಹೇಳಿದರ ಏನು ಕೊಡ್ತೀ ನನಗ ?"
ಅವನ ಉತ್ಸಾಹಕ್ಕೆ ಪ್ರಯತ್ನಪಟ್ಟು ಸಾಥ ಕೊಡುತ್ತ ತುಟಿಯರಳಿಸಿದಳು ಆಕೆ,
"ನೀನು ಕೇಳಿದ್ದು."
"ಆಞ ?ಖರೇನs ? ಹಂಗಾರ ಕೇಳಿಲ್ಲೆ."
ತನ್ನನ್ನು ಬಳಸುತ್ತಿದ್ದ ಆತನ ತೋಳುಗಳಿಂದ ದೂರವಾಗಬೇಕೆಂಬಾಸೆಯಿಂದ
ಆಕೆಯ ಮನಸ್ಸು ಹುಚ್ಚೆದ್ದು ಕುಣಿಯಿತು. ಆದರೆ ಆತ ಹೇಳಲಿರುವ ಆ 'ಸ್ವೀಟ್
ನ್ಯೂಜ'ನ ಕಲ್ಪನೆ ಯಾಕೋ ಅವಳಿಗೆ ಹೆದರಿಕೆ ತರಿಸಿತು; ಇಲ್ಲಿಂದ ಹಾರಿಹೋಗಲು
ತಾನು ಶತಪ್ರಯತ್ನ ಮಾಡುತ್ತಿದ್ದಾಗ ಯಾರೋ ತನ್ನ ರೆಕ್ಕೆಗಳನ್ನೇ ಕತ್ತರಿಸುತ್ತಿದ್ದಾರೆ
ಎನ್ನಿಸಿತು ; ಸೋತು ಹೋಗುತ್ತಿದ್ದೇನೆ, ಬಿದ್ದು ಹೋಗುತ್ತಿದ್ದೇನೆ ಎನ್ನಿಸಿತು ; ಇದೇ
ಎಲ್ಲದರ ಕೊನೆಯೇನೋ ಎಂದು ಅಂಜಿಕೆಯಾಗತೊಡಗಿತು......
'ನಿನ್ನೆ ಸಂಜೀನ್ಯಾಗ ಎಲ್ಲೆ ಹೋಗಿದ್ವಿ ನೆನಪದs ಏನು ಸರೂ ?"
"ಅದೇ ಡಾಕ್ಟರರ ಕಡೆ. ಸುಳ್ಳs ನನಗ ಜಡ್ಡಗೇದಂತ ಹೇಳಿ ಅವರ ಕಡೆ
ಕರಕೊಂಡು ಹೋದಿ.ನನಗೇನು ಧಾಡೀನೂ ಆಗಿಲ್ಲ. ಅವರರೆ ಏನು ಹೇಳ್ಯಾರು ಪಾಪ".
"ಅವರು ನಿನ್ನೆ ಮುದ್ದಾಂ ಹೇಳಲಿಲ್ಲಂತ. ಇವತ್ತ ನನಗ ಆಫೀಸಿಗೆ ಫೋನ್