ವಿಷಯಕ್ಕೆ ಹೋಗು

ಪುಟ:ನನ್ನ ಸಂಸಾರ.djvu/೧೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
40
ಕಾದಂಬರೀ ಸಂಗ್ರಹ

ವಿಲ್ಲವೆಂದು ಕಾಣುತ್ತೆ. ಇನ್ನು ನೀವು ಹುಡುಕಬಹುದು, ನಾನು ತಮ್ಮ ಸಂಗಡಲೇ ಬರಲೋ, ಇಲ್ಲ ಹೊರಕ್ಕೆ ಹೋಗಲೋ ?

ಮೋಸೆಸ್ಸನು ವಿಶ್ವನಾಥನನ್ನೂ ಸಂಗಡಲೇ ಬರುವಂತೆ ಹೇಳಿ ತನ್ನ ಸಂಗಡ ಬಂದಿದ್ದ ಪೋಲೀಸ್ ಸೇವಕನನ್ನು ತನ್ನ ರಿವಾಲ್ವರುಗಳನ್ನು ಕೈಲಿ ಹಿಡಿದುಕೊಂಡು ಬಾಗಿಲಲ್ಲಿ ಕಾದಿರಬೇಕೆಂದು ಅಪ್ಪಣೆಯನ್ನು ಮಾಡಿ ತಾನೂ ತನ್ನ ರಿವಾಲ್ವರುಗಳನ್ನು ಕೈಯಲ್ಲಿಟ್ಟುಕೊಂಡು ಒಂದೊಂದು ಕೊಠಡಿಗಳನ್ನಾಗಿ ಪರೀಕ್ಷಿಸುತ್ತಾ ಹೊರಟನು. ಅವನು ನೋಡಿದ ಸ್ಥಳದಲ್ಲೆಲ್ಲಾ ಒಬ್ಬ ಸಭ್ಯರು ವಾಸಮಾಡುವುದಕ್ಕೆ ಬೇಕಾದ ಸಾಮಗ್ರಿಗಳಿದ್ದಿತೇ ವಿನಹಾ ಮತ್ತೇನೂ ಇರಲಿಲ್ಲವು. ಮೋಸೆಸ್ಸನು ತನ್ನನ್ನು ತನ್ನ ಶತ್ರುವು ಸೋಲಿಸಿದನೆಂದು ಯೋಚಿಸುತ್ತಾ ಬರುತ್ತಿರಲು ಒಂದು ಕೊಠಡಿಯಲ್ಲಿ ನೆಲಕ್ಕೆ ಜಮಖಾನವನ್ನು ಹಾಸಿರುವುದನ್ನು ನೋಡಿ ಅದನ್ನು ತೆಗೆದು ನೋಡಲು ಒಂದು ಮೊಳೆಯು ಕಾಣಿಸಿತು. ಅದನ್ನು ಹಿಡಿದು ಹಿಂದಕ್ಕೂ ಮುಂದಕ್ಕೂ, ಕೆಳಕ್ಕೂ ಮೇಲಕ್ಕೂ ಆಡಿಸಿದರೂ ಏನೂ ಪ್ರಯೋಜನವಿಲ್ಲದಿರುವುದನ್ನು ನೋಡಿ ಅದರಲ್ಲೇನೂ ಇಲ್ಲವೆಂದು ತಿಳಿದು ಅದನ್ನು ಬಿಟ್ಟು ಮುಂದಕ್ಕೆ ಹೊರಟನು. ಕೊನೆಗೂ ಅವನಿಗೆ ಸಂಶಯಾಸ್ಪದವಾದ ಪದಾರ್ಥವೊಂದೂ ಸಿಗಲಿಲ್ಲ. ವಿಶ್ವನಾಥನು ನಗುತ್ತಾ “ಸ್ವಾಮಿ! ಮತ್ತೊಂದುಸಲ ಬೇಕಾದರೂ ಹುಡುಕಿರಿ” ಎಂದನು.

ಮನಸ್ಸಿನಲ್ಲಿ ಉಕ್ಕಿ ಬರುತ್ತಿದ್ದ ಕೋಪವನ್ನು ತೋರ್ಪಡಿಸದೆ, ಮೋಸೆಸ್ಸನು ವಿಶ್ವನಾಥನನ್ನು ಕುರಿತು "ಅಯ್ಯಾ, ನೀನು ಈ ದಿವಸ ನನ್ನನ್ನು ಸೋಲಿಸಿರುವಿ, ಆದರೆ ಒಂದು ಕುರಿಯು ಒಂದುಸಲ ಬಿದ್ದ ಹಳ್ಳಕ್ಕೆ ಮತ್ತೊಂದುಸಲ ಬೀಳುವುದಿಲ್ಲವು. ನೀನು ನನ್ನನ್ನು ಜಯಿಸಿದೆನೆಂದು ಸಂತೋಷಪಡದಿರು. ಅಲ್ಪಕಾಲದಲ್ಲೇ ನಿನ್ನನ್ನು ಪೋಲೀಸಿಗೆ ಹಿಡಿದುಕೊಡುವೆನು, ನಿನ್ನ ವಿಷಯವೆಲ್ಲಾ ನನಗೆ ತಿಳದಿದೆ.” ಎಂದು ಹೇಳಿ ತನ್ನ ಸೇವಕನನ್ನೂ ಕರೆದುಕೊಂಡು ಹೊರಟನು.

ವಿಶ್ವನಾಥನು ಮೋಸೆಸ್ಸನು ಹೊರಟುಹೋದ ಕೂಡಲೇ ಗುಪ್ತಗೃಹವನ್ನು ಹೊಕ್ಕು ಅಲ್ಲಿದ್ದವರಿಗೆಲ್ಲಾ ಮೋಸೆಸ್ಸನ ವಿಷಯವನ್ನು ತಿಳಿಸಿ ಮದುವೆಯು ಇನ್ನು ಮೂರು ದಿವಸಗಳಲ್ಲಿ ಅದೇ ಮನೆಯಲ್ಲಿ ನಡೆಯುವುದೆಂದು ಹೇಳಿ ಪುನಃ ಮೇಲಕ್ಕೆ ಹೊರಟುಹೋದನು. ಭಾಸ್ಕರನು ಅವನು ಹೋಗುವುದನ್ನೇ ನೋಡಿಕೊಂಡಿದ್ದು ತಾನೂ ಮೇಲಕ್ಕೆ ಬಂದು ಸ್ವಲ್ಪ ಹೊರಕ್ಕೆ ಹೋಗಿ ಬರುವುದಾಗಿ ತಿಳಿಸಿ ಅಲ್ಲಿಂದ ಹೊರಟು ಯಾರಿಗೂ ತಿಳಿಯದ ರೀತಿ ಗೋವಿಂದನ ಮನೆಯನ್ನು ಸೇರಿ ತನ್ನ ಉಡುಪನ್ನು ಬದಲಾಯಿಸಿಕೊಂಡು ವೃತ್ತಪತ್ರಿಕೆಗಳನ್ನು ನೋಡುತ್ತ ಕುಳಿತನು.