ಪುಟ:ನನ್ನ ಸಂಸಾರ.djvu/೨೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

 ಶಂಕರಕಥಾಸಾರ ೬೭

 ಆಗ ಶಾರದೆಯು ಏನೂ ಉತ್ತರವನ್ನು ಕೊಡದಿರಲು ಶಂಕರದೇಶಿಕರು ಸರ್ವಜ್ಞ ಪೀಠವನ್ನು ಅಧಿರೋಹಿಸಿ ಗಾರ್ಗ್ಯ, ಕಪೋಲ ಮುಂತಾದವರಿಂದ ಯಾಜ್ಞವಲ್ಕ್ಯರು ಸೇವಿಸಲ್ಪಟ್ಟಂತೆ, ಶಾರದಾ ಮತ್ತು ವಿದ್ವಾಂಸರುಗಳಿಂದ ಪೂಜಿಸಲ್ಪಟ್ಟರು.
 ಆಗ ಇಂದ್ರಾದಿ ದೇವತೆಗಳು ಆಚಾರ್ಯರ ತಲೆಯಮೇಲೆ ಕಲ್ಪವೃಕ್ಷದ ಪುಷ್ಪಗಳಿಂದ ವೃಷ್ಟಿಯನ್ನು ಸುರಿಸಿ, ಸಂತೋಷದಿಂದ ಸ್ವಲೋಕಾಭಿಮುಖರಾದರು.
 ಬಳಿಕ ಶಂಕರದೇಶಿಕರು ತಮ್ಮ ಭಾಷ್ಯಕ್ಕೆ ಜ್ಞಾನರಾಜ್ಯಪಟ್ಟಾಭಿಷೇಕವಂ ಮಾಡಿ ಜಗದ್ಗುರುತ್ವವನ್ನು ವಹಿಸಿ ಸುರೇಶ್ವರರೇ ಮೊದಲಾದ ಕೆಲವರು ಶಿಷ್ಯರನ್ನು ಶೃಂಗಗಿರಿಯಲ್ಲಿ ಇರುವಂತೆ ಹೇಳಿದರು.
 ಇವರ ಮಹಿಮೆಯನ್ನು ಕೇಳಿದ ಜ್ಞಾನಿಗಳೂ, ರಾಜರೂ, ಸಂಘಪತಿಗಳೂ ಮೊದಲಾದವರು ಬಂದು "ಸ್ವಾಮಿ! ಲೋಕದಲ್ಲಿ ವರ್ಣಾಶ್ರಮ ಧರ್ಮ ಕೆಡ ದಂತೆಯೂ, ಧರ್ಮಬ್ರಹ್ಮ ಮಾಮಾಂಸರಾಸ್ತ್ರಗಳು ನೆಲಗೊಂಡಿರುವಂತೆಯೂ, ಆಸೇ ತುಹಿಮಾಚಲಪರ್ಯಂತರವಾದ ಈ ಭರತಖಂಡದಲ್ಲಿ ಸದಾಚಾರವಿಚಾರದಿಂದ ಧರ್ಮವಂ ಪರಿಪಾಲಿಸುತ್ತಿರುವಂತೆ ತಮ್ಮ ಶಿಷ್ಯರನ್ನು ಮಠಾಧಿಪತಿಗಳನ್ನಾಗಿ ಏರ್ಪಡಿಸಿ ಲೋಕ ವೆಲ್ಲವೂ ತದಾಜ್ಞಾನುಸಾರ ಇರುವಂತೆ ಮಾಡಬೇಕು," ಎಂದು ಪ್ರಾರ್ಥಿಸಿದರು.
 ಶಂಕರದೇಶಿಕರು ಅದರಂತೆ ಪೂರ್ವದಿಕ್ಕಿನಲ್ಲಿರುವ ಜಗನ್ನಾಥದಲ್ಲಿ ಭೋಗ ವರ್ಧನವೆಂಬ ಮಠವನ್ನು ನಿರ್ಮಿಸಿ, ಅಲ್ಲಿಗೆ ಪದ್ಮಪಾದರನ್ನು ಆಧೀಶರನ್ನಾಗಿ ಮಾಡಿ ಪಶ್ಚಿಮದಿಕ್ಕಿನಲ್ಲಿರುವ ದ್ವಾರಕಿಯಲ್ಲಿ ಒಂದು ಮಠವನ್ನು ನಿರ್ಮಿಸಿ ಅಲ್ಲಿಗೆ ಹಸ್ತಾ ಪುಲಕರನ್ನು ಒಡೆಯರನ್ನಾಗಿಮಾಡಿ, ಉತ್ತರದಿಕ್ಕಿನಲ್ಲಿ ಬದರಿಕಾಶ್ರಮದಲ್ಲಿ ಒಂದು ಮಠವನ್ನು ನಿರ್ಮಿಸಿ ತೋಟಕರನ್ನು ಅಲ್ಲಿಗೆ ಆಧೀಶರನ್ನಾಗಿಮಾಡಿ, ಅನಂತರ ನಿಜ ಯೋಗಶಕ್ತಿಯಿಂದ ಕೈಲಾಸಕ್ಕೆ ಹೋಗಿ, ಚಂದ್ರಮೌಳೀಶ್ವರ ದಿವ್ಯ ಲಿಂಗವನ್ನೂ, ರತ್ನ ಗರ್ಭಗಣಪತಿಯನ್ನೂ , ದೇವೀಸೌಂದರ್ಯಲಹರ್ಯಾದಿಗಳನ್ನೂ, ಸುರೇಶ್ವರರಿಗೆ ಕೊಟ್ಟು ನಿಜಶಿಷ್ಯರಿಗೆ ಸ್ವಾತ್ಮಾನುಸಂಧಾನರಹಸ್ಯವನ್ನು ಪದೇಶಿಸುತ್ತಾ ಇದ್ದರು.
 ಅನಂತರ ಸುರೇಶ್ವರರು ಶಂಕರರ ಇಷ್ಟದಂತೆ ತೈತ್ತಿರೀಯ ಬೃಹದಾರಣ್ಯಕಾದಿ ಭಾಷ್ಯಗಳಿಗೆ ವಾರ್ತಿಕವನ್ನೂ, ದಕ್ಷಿಣಾಮೂರ್ತಿಸ್ತೋತ್ರಕ್ಕೆ ಮಾನಸೋಲ್ಲಾಸವೆಂಬ ವಾರ್ತಿಕವನ್ನೂ , ರಚಿಸಿದರು.
 ಬಳಿಕ ಶಂಕರದೇಶಿಕರು ಬದರಿಕಾಶ್ರಮಕ್ಕೆ ಹೋಗಿ ಅಲ್ಲಿ ಕೆಲವು ದಿನಗಳಿದ್ದು ಅಲ್ಲಿದ್ದ ಪಾತಂಜಲಶಾಸ್ತ್ರನಿಷ್ಠರಾದ ಕೆಲವರಿಗೆ ತಮ್ಮ ಭಾಷ್ಯವನ್ನುಪದೇಶಿಸುತ್ತಿದ್ದರು.