ಪುಟ:ನನ್ನ ಸಂಸಾರ.djvu/೨೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

 ಕಾದ೦ಬರೀ ಸ೦ಗ್ರಹ


ಮಗುವು ಮೆಲ್ಲನೆ ಅಳುತ್ತಿತ್ತು. ಕರುಣಾಕರನು ದುಃಖದಿಂದ-“ ಅಯ್ಯೋ ! ಪಾಪ ” ಯಾರೋ ಈ ಶಿಶುವನ್ನು ಬಡತನದಿಂದಲೋ ಅಥವಾ ಇನ್ಯಾವ ಕಾರಣದಿಂದಲೋ ಹಿಮಾವೃತವಾದ-ನರಸಂಚಾರರಹಿತವಾದ ಇಂತಹ ಪ್ರದೇಶದಲ್ಲಿ ಹಾಕಿ ಹೋಗಿರುವರು. ಆಹ !! ಎಂತಹ ನಿರ್ಘೃಣರು ಎಂದು ಹೇಳಿಕೊಂಡು ಸುತ್ತುಮುತ್ತಲೂ ನೋಡಲು ಯಾರ ಧ್ವನಿಯೂ ಕೇಳಿಸಲಿಲ್ಲ. ಮತ್ತು ಯಾವ ಮನುಷ್ಯನೂ ಸಿಕ್ಕಲಿಲ್ಲ. ಆಗ ಅವನು ಈ ಮಗುವನ್ನು ಇಲ್ಲಿ ಯಾರು ಹಾಕಿ ಹೋಗಿರುವರೋ ಅಂತಹರ ಶೋಕ ನಿವಾರಣೆಗಾಗಿ ಈ ಶಿಶುವನ್ನು ಸಂರಕ್ಷಿಸುವೆನೆಂದು ಘಟ್ಟಿಯಾಗಿ ಹೇಳಿ ಆ ಮಗುವಿಗೆ ತನ್ನ ಪಂಚೆಯನ್ನು ಹೊದ್ದಿಸಿ ಬೆಚ್ಚಗೆ ಮಾಡಿ ಕುದುರೆಯ ಮೇಲೆ ಹತ್ತಿ ಮಗುವನ್ನು ಜೋಪಾನವಾಗಿ ಎತ್ತಿಕೊಂಡು ತನ್ನ ಅಕ್ಕನ ಊರಿಗೆ ಹೋಗುವುದನ್ನು ನಿಲ್ಲಿಸಿ ಹಿಂತಿರುಗಿ ತನ್ನ ಮನೆಗೇ ಬಂದುಬಿಟ್ಟನು.

    ಇವನ ಬರುವಿಕೆಯನ್ನೇ ನಿರೀಕ್ಷಿಸುತ್ತಿದ್ದ ಅವನ ತಮ್ಮ ದಯಾಕರನು ಬೇಗ ಬಂದು ಕುದುರೆಯನ್ನು ಹಿಡಿದುಕೊಂಡನು. ಕರುಣಾಕರನು ಕುದುರೆಯ ಮೇಲೆ ಕುಳಿತಿದ್ದಂತೆಯೇ ಮಗುವನ್ನು ತೆಗೆದು ದಯಾಕರನ ಕೈಯಲ್ಲಿ ಕೊಟ್ಟನು.
    ದಯಾಕರನು ಅದನ್ನು ನೋಡಿ, “ ಅಣ್ಣಾ ! ಈ ಮಗುವು ಎಲ್ಲಿ ಸಿಕ್ಕಿತು ? ಇದನ್ನು ಕಾಪಾಡತಕ್ಕವರು ಯಾರು ? ಇದರ ವೃತ್ತಾಂತವೇನು ? ”  ಎಂಬಿವೇ ಮೊದಲಾದ ಪ್ರಶ್ನೆಗಳನ್ನು ಮಾಡಲು ಕರುಣಾಕರನು, ನಮ್ಮನ್ನು ಹೊರತು ಸಂರಕ್ಷಿಸತಕ್ಕವರು ಮತ್ತಾರು ? ಎಂದು ಹೇಳಿ, “ ಆ ಮಗುವನ್ನು ಬೆಳಕಿನ ಕಡೆಗೆ ತೆಗೆದುಕೊಂಡು ಬಾ ” ಎಂದನು. ದಯಾಕರನು ಬೆಳಕಿನಲ್ಲಿ ಕ್ಷಣಕಾಲ ಮಗುವನ್ನು ಚೆನ್ನಾಗಿ ನೋಡಿ “ ಆಹಾ ? ಇದೆಂತಹ ಸುಂದರವಾದ ಹೆಣ್ಣು ಕೂಸು ! ಇದರ ಕಣ್ಣುಗಳು ಎಷ್ಟು ರಮ್ಯವಾಗಿವೆ ! ಆಗಲೇ ಇದು ಸುತ್ತುಮುತ್ತಲೂ ನೋಡಿ ಹೇಗೆ ನಗುವುದು ! ಪ್ರಾಯಶಃ ಇದಕ್ಕೆ ಹತ್ತು ಹನ್ನೊಂದು ತಿಂಗಳಿರಬಹುದು. ಅಯ್ಯೋ ಪಾಪ ! ತುಂಬ ಹಸಿದಿರಬಹುದು. ಸ್ವಲ್ಪ ಹಾಲನ್ನು ಕುಡಿ