ವಿಷಯಕ್ಕೆ ಹೋಗು

ಪುಟ:ನನ್ನ ಸಂಸಾರ.djvu/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ನನ್ನ ಸಂಸಾರ
23

ನಮ್ಮ ತಾತನವರಿಗೆ ಶ್ರೀ ನಗರದಲ್ಲಿ ಈಗ ಐವತ್ತು ರೂಪಾಯಿ ತಲಬು ಬರುತಿತ್ತು. ನಮ್ಮ ಭಾವನವರಿಗೆ ಹರಪುರದಲ್ಲಿ ಮೂವತ್ತು ರೂಪಾಯಿಗಳು ತಲಬುಳ್ಳ ಪ್ರಧಾನೋಪಾಧ್ಯಾಯರ ಕೆಲಸವಿದ್ದಿತು. ನಮ್ಮ ಯಜಮಾನರಿಗೆ ಹತ್ತು ರೂಪಾಯಿಗಳುಳ್ಳ ಸಣ್ಣ ನೌಕರಿಯೊಂದಿದ್ದಿತು. ನಾನೂ ನನ್ನ ಅಕ್ಕನೂ ಹರಪುರದಲ್ಲಿ ಸಂಸಾರ ಮಾಡುತ್ತಿದ್ದಾಗ ಒಬ್ಬರಮರ್ಜಿ ಇನ್ನೊಬ್ಬಳಿಗೆ ಸರಿಬೀಳುತ್ತಿರಲಿಲ್ಲ. ಆಹಾರ ವ್ಯವಹಾರಗಳಲ್ಲೂ ಶಿಶು ಪೋಷಣಾದಿ ಕಾರ್ಯಗಳಲ್ಲೂ ನಮ್ಮ ಅಕ್ಕನು ವಿಶೇಷ ಪಕ್ಷಪಾತ ಮಾಡುತಿದ್ದರು. ನಾನು ಕಿರೀ ಸೊಸೆಯಾದ್ದರಿಂದಲೂ ಅಷ್ಟು ಸ್ವಾತಂತ್ರ್ಯವಿಲ್ಲದ್ದರಿಂದಲೂ ನನ್ನ ಅಕ್ಕನು ಹೇಳಿದಂತೆ ಕೇಳುತಿದ್ದೆನು. ಆದರೆ ಒಂದೆರಡು ವಿಚಾರಗಳು ತಿಳಿದಮೇಲೆ ನನಗೆ ನನ್ನ ಅಕ್ಕನಮೇಲೆ ವಿಶೇಷ ಸ್ಪರ್ಧೆಯುಂಟಾಯಿತು. ಕೆಲಸ ಬೊಗಸೆಗಳನ್ನು ನಾನೇ ಮಾಡಲೆಂಬ ಅಭಿಪ್ರಾಯದಿಂದ ನನ್ನ ಅಕ್ಕನು ಕೆಲವುದಿನ ಕೆಲಸಗಳನ್ನು ನನ್ನ ಪಾಲಿಗೆ ಬಿಟ್ಟು ತಾವು ಅಡಿಗೆ ಕೆಲಸವನ್ನು ಇಟ್ಟುಕೊಂಡರು. ಅದರಂತೆ ನಾನೂ ನಡೆಯುತ್ತಿದ್ದೆನು. ಆದರೊಂದು ದಿನ ನಾನು ಉಪಕರಣವನ್ನು ತೊಳೆದು ಒಳಗಿಡುವುದಕ್ಕೆಂದು ಬಂದೆನು. ಆಗ ಅಕ್ಕನವರು ಮಕ್ಕಳಿಗೆ ಹಾಲು ಕಾಸಿ ಕೆಳಗಿಳಿಸುತ್ತಿದ್ದರು. ನಾನು ನನ್ನ ಮಗುವಿಗೆ ಹಾಲು ಹಾಕಬೇಕೆಂದು ಆಗಲೇ ಹಾಲನ್ನು ಕೇಳಿದೆನು. ಒಂದು ಪಂಚಪಾತ್ರೆಯಲ್ಲಿದ್ದ ಹಾಲನ್ನು ಅಕ್ಕನು ನನ್ನ ವಶಕ್ಕೆ ಕೊಟ್ಟರು. ಅದನ್ನು ತೆಗೆದುಕೊಂಡು ನೋಡಲು ತುಂಬಾ ನೀರು ಬೆರಸಿದ್ದಂತೆ ತೋರಿತು. ಬಳಿಕ ನಾನು ಅದನ್ನು ಅವರಿಗೇ ಕೊಟ್ಟು ಬೇರೆ ಪಾತ್ರೆಯಲ್ಲಿದ್ದ ಹಾಲನ್ನು ಕೊಡಬೇಕೆಂದು ಕೇಳಿದೆನು. ಅವರಿಗೆ ಅಷ್ಟಕ್ಕೇ ಕೋಪ ಬಂದು ಹಾಲಿನ ಪಾತ್ರೆಯನ್ನು ಎಸೆದುಬಿಟ್ಟರು. ಅದನ್ನು ನೋಡಿ ನನಗೆ ಬಹು ದುಃಖವಾಯಿತು. ಅಂದಿನಿಂದ ಅವರು ನಾನು ಮಾಡತಕ್ಕ ಕೆಲಸಗಳಲ್ಲಿ ಏನಾದರೊಂದು ತಪ್ಪನ್ನು ಕಂಡು ಹಿಡಿಯುತ್ತಲೇ ಬಂದರು. ನಾನು ಸಹಿಸುವವರೆಗೂ ಸಹಿಸುತ್ತಿದ್ದೆನು. ಕ್ರಮೇಣ ನನಗೆ ಸಹನೆಯು ಕಮ್ಮಿಯಾಗುತ್ತ ಬಂದಿತು. ನಮ್ಮ ಅಕ್ಕನವರ ಈ ವರ್ತನೆಗಳನ್ನು ನಾನು ನಮ್ಮ ಯಜಮಾನರೊಡನೆ ಏಕಾಂತದಲ್ಲೊಂದು ದಿನ ಹೇಳಿದೆನು. ಅವರು ಅದನ್ನು ಗಮನಿಸದೆ ನನ್ನನ್ನೇ ಬೈದು ಹಿರಿಯರು ಹೇಳಿದಂತೆ ಕೇಳಿಕೊಂಡು ಬಿದ್ದಿರಬೇಕೆಂದು ಅಂದುಬಿಟ್ಟರು. ನನಗೆ ಅದನ್ನು ಕೇಳಿ ಆಕಾಶವೇ ಬಿದ್ದು ಹೋದಂತಾಯಿತು. ಇದೇರೀತಿ ಇನ್ನು ಮುಂದೆ ಪಕ್ಷಪಾತಗಳೂ ಅಂತಃ ಕಲಹಗಳೂ ಹೆಚ್ಚುತ್ತ ಹೋದುವು. ಇದು ನಮ್ಮ ಯಜಮಾನರಿಗೆ ತಿಳಿದು ಕೆಲವು ತಿಂಗಳು ರಜವನ್ನು ಪಡೆದು ಶ್ರೀ ನಗರಕ್ಕೆ ಹೊರಟು ಹೋದರು. ಅವರ ಮನಸ್ಸಿನಲ್ಲಿ ಹರಪುರವನ್ನು ಬಿಟ್ಟು ಶ್ರೀ ನಗರದಲ್ಲೇ ಇದ್ದರೆ ಸಂಸಾರದಲ್ಲಿ