ಗೊಡ್ಡು ಶಾಸ್ತ್ರದಂತೆ ಬಹಿಷ್ಕಾರಕ್ಕೆ ಯೋಗ್ಯಳೆಂದೂ ಆದರೆ ತಾವೆಲ್ಲರೂ ಔನ್ನತ್ಯವನ್ನು (Reform) ಪಡೆದವರಾದ್ದರಿಂದ ಹುಡುಗಿಯು ಋತುವಾದರೂ ಲಕ್ಷ್ಯಮಾಡುವುದಿಲ್ಲವೆಂತಲೂ ತಿಳಿಸಿದರು.
ಆಗ ಮುಖ್ಯಸ್ಥನು "ಸರಿ, ನೀವು ಹೇಳಿದ ರೀತಿಯೇ ನಡೆದುಕೊಳ್ಳೋಣ" ಎಂದು ತನ್ನ ಬಳಿ ಕುಳಿತಿದ್ದವನ ಮುಖವನ್ನು ನೋಡಿಬಿಟ್ಟು ಪುನಹಾ ಹೇಳತೊಡಗಿದನು. "ಸಹೋದರರೇ, ನಾನು ಹೇಳಿದ ರೀತಿ ಒಂದು ವಿವಾಹವು ನಿಂತುಹೋಯಿತು. ವರನ ತಂದೆಯೂ ವಧುವಿನ ತಂದೆಯೂ ವಿವಾಹವು ಸಂಪೂರ್ಣವಾಗಿ ನೆರವೇರಿದ ಹಾಗೆಯೇ ತೀರ್ಮಾನಿಸಿರುತ್ತಾರೆ. ನಿಮ್ಮ ಅಭಿಪ್ರಾಯವನ್ನು ವರನ ತಂದೆಗೆ ತಿಳಿಯಪಡಿಸಬೇಕು. ನನ್ನ ಪುತ್ರಿಯು ಋತುಮತಿಯಾದವಳು. ಅವಳನ್ನು ಇವರಿಗೆ ಕೊಡುತೇನೆ, ನೀವೆಲ್ಲರೂ ಬಂದು ಈ ಕೂಟವನ್ನು ಸಾಂಗವಾಗಿ ನೆರವೇರುವ ಹಾಗೆ ಮಾಡಿದಕ್ಕೆ ನಿಮ್ಮನ್ನೆಲ್ಲಾ ವಂದಿಸುತ್ತೇನೆ. ಈ ಹೊಸ ಮೆಂಬರಿನ ವಿಷಯವಾಗಿ ಜಯವನ್ನು ಮಾಡಿ ಅವನ ಆರೋಗ್ಯಲಾಭಕ್ಕಾಗಿ ಎಲ್ಲರೂ ಮದ್ಯವನ್ನು ಕುಡಿಯೋಣ.
ಕ್ಷಣಮಾತ್ರದಲ್ಲೇ ಎಲ್ಲರ ಕೈಗೂ ಮದ್ಯ ತುಂಬಿದ ಬಟ್ಟಲುಗಳು ಬಂದವು. ಎಲ್ಲರೂ ಜಯನಾದವನ್ನು ಮಾಡುತ್ತಾ ಮದ್ಯವನ್ನು ಪಾನಮಾಡಿದರು. ಅಗ್ರಾಸನಾಧಿಪತಿಯು ಎದ್ದು ಎಲ್ಲರಿಗೂ ಆರೋಗ್ಯವೂ ಲಾಭವೂ ಉಂಟಾಗಲೆಂದೂ ಎಲ್ಲರೂ ಜಾಗರೂಕರಾಗಿರಬೇಕೆಂದೂ ಹೇಳಿ ಸಭೆಯನ್ನು ಮುಗಿಸಿದನು. ಎಲ್ಲರೂ ಕೈ ಚಪ್ಪಾಳೆ ತಟ್ಟುತ್ತ ವ್ಯಸನಾಕ್ರಾಂತನಾದ ಹೊಸ ಮೆಂಬರನ ಕೈಹಿಡಿದು ಆಡಿಸುತ್ತಾ ಎಂ (M) ಸಂಘದ ಅಧಿಕಾರಿಯಿಂದ ಅಪ್ಪಣೆಯನ್ನು ಪಡೆದು ಒಬ್ಬೊಬ್ಬರಾಗಿ ಹೊರಕ್ಕೆ ಹೊರಟು ಬಂದರು. ಸ್ವಲ್ಪಕಾಲದಲ್ಲಿ ಆ ಸೋಮಾರಿಗಳ ಗುಹೆಯಲ್ಲಿ ಐದಾರು ಜನಗಳು ವಿನಹಾ ಮತ್ತಾರೂ ಇಲ್ಲದ ಹಾಗಾಯಿತು.
ಆ ರ ನೇ ಅ ಧ್ಯಾ ಯ
(ಏಳುಬಣ್ಣದ ಕರವಸ್ತ್ರ.)
ಭಾಸ್ಕರನು ಕಲ್ಕತ್ತಾ ನಗರವನ್ನು ತಲಪಿ ಗೋವಿಂದನ ಮನೆಯನ್ನು ತಲಪಿದನೆಂದು ಹಿಂದೆಯೇ ತಿಳಿಸಿದ್ದೇವಷ್ಟೆ. ಅಲ್ಲಿ ಅವನು ಗೋವಿಂದನಿಗೆ ಎಲ್ಲಾ ವಿಷಯಗಳನ್ನೂ ತಿಳಿಸಿ ತನ್ನನ್ನು ಇನ್ನು ಮುಂದೆ ಸತ್ಯಚಂದನೆಂದು ಕರೆಯಬೇಕೆಂದು ಹೇಳಿದನು.