ಪುಟ:ನಾಸ್ತಿಕ ಕೊಟ್ಟ ದೇವರು.pdf/೧೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



ಯಾವ ಜನ್ಮದ ಶಾಪ?

೯೫

ಗಿರಿಜೆಯ ಮದುವೆಯನ್ನಾದರೂ ಮಾಡಿಬಿಡೋಣ ಎಂದರೆ ಅಡಚಣೆಗಳು ಹತ್ತಾರು. ಪ್ರಸಾದನಿಗೆ ಸರಿಯಾದ ಕಡೆ ಹೆಣ್ಣು ಗೊತ್ತಾದರೆ ಬರುವ ಹಣದಿಂದ ಮಗಳ ಮದುವೆಯನ್ನು ಮಾಡಿ ಮುಗಿಸಬಹುದು. ಆದರೆ, ತನ್ನ ಹೊರತಾಗಿ ಇತರರ ಪರಿವೆಯೇ ಇಲ್ಲವಲ್ಲ ಪ್ರಸಾದನಿಗೆ!. . .
ನಾಲ್ಕು ರಸ್ತೆಗಳು ಕೂಡುವೆಡೆ ಒಂದು ವೃತ್ತ ರಚಿಸಿದ್ದರು. ಅದರೊಳಗೆ ಹೂವಿನ ಗಿಡಗಳು. ಮಧ್ಯದಲ್ಲೊಂದು ಕಾರಂಜಿ. ಸಿಮೆಂಟಿನ ಬೆ೦ಚುಗಳು ಕೆಲವು.
ಅವನ್ನು ಕಂಡಾಗ, ತಮ್ಮ ಕಾಲುಗಳು ಸೋತಿವೆ, ತುಸು ವಿಶ್ರಾಂತಿಬೇಕು-ಎನಿಸಿತು ವಿಶ್ವನಾಥಯ್ಯನವರಿಗೆ.
ಅವರು ಕಲ್ಲುಗೂಟಗಳ ನಡುವಣ ಸಂದಿಯಿಂದ ಸುಲಭವಾಗಿ ತಮ್ಮ ತೆಳು ಶರೀರವನ್ನು ಒಳಕ್ಕೆ ದಾಟಿಸಿ, ತೆರವಾಗಿದ್ದ ಬೆಂಚೊಂದನ್ನು ದಿಟ್ಟಿಸಿ ಅದರತ್ತ ನಡೆದರು.
ಆಟವಾಡುತ್ತಿದ್ದ ಹುಡುಗರು. ಹುಲ್ಲಿನ ಮೇಲೆ ಕುಳಿತಿದ್ದ ಒಂದು ಸಂಸಾರ. ["ನೀರಿನ ಹತ್ರಕ್ಕೆ ಹೋಗ್ಬೇಡ, ಮರಿ” "ಹೂ ಕೀಳ್ಬೇಡ್ವೇ. ಮಾಲಿ ಹಿಡಕೊಂಡು ಹೋಗ್ತಾನೆ.”] ನಡೆಗೋಲುಗಳನ್ನು ಹಿಡಿದು ವಾಯುಸೇವನೆಗೆ ಹೊರಟ ವೃದ್ಧರು ಮೂವರು ['ನಿವೃತ್ತರಿರಬೇಕು? . . . .']
ಸುತ್ತಲಿನ ವಾಪಾರವನ್ನು ಜಡವಾದ ಕಣ್ಣಗಳಿಂದ ದಿಟ್ಟಿಸುತ್ತ ವಿಶ್ವನಾಥಯ್ಯ ಕುಳಿತರು.
ರಾತ್ರಿಯ ರೈಲು ಹೊರಡುವುದು ಹತ್ತೂಕಾಲಿಗೆ. ಟಾಕ್ಸಿ [ಇನ್ನೇನು ಜಟಕವೆ?] ಒಂಭತ್ತೂವರೆಗೆ ಮನೆಗೆ ಬರಬಹುದು . . .
ವಿಶ್ವನಾಥಯ್ಯ ಅಂದುಕೊಂಡರು:
ಮನೆಗೆ ತಾವು ಹೋಗದೇ ಇದ್ದರೇನಾದೀತು? ಇವತ್ತು ಈ ಬೆಂಚಿನ ಮೇಲೆಯೇ ಮಲಗಿಬಿಡಬೇಕು. ಮಗ ಸತ್ತ ಅ೦ತ ಸೂತಕ. ಬೆಳಗಾಗುವದರೊಳಗೆ ಚಳಿಯಿಂದ ಹೆಪ್ಪು ಗಟ್ಟಿ ತಾವು ಕೊರಡಾದರೆ? ಅದೂ ಒಳ್ಳೆಯದೇ. ಯಾಕಾಗಬಾರದು? ಅನಾಥ ಶವವನ್ನು ಎಳೆದೊಯ್ಯಲು ಪುರಸಭೆ ಇಲ್ಲವೆ? ಅವರು ಸುಮ್ಮನಿದ್ದರೆ ಜನ ಬಿಡುತ್ತಾರೆಯೆ? ಶವದಿಂದ ದುರ್ನಾತ ಹೊರಟಾಗ ಸಹಿಸುವುದುಂಟೆ ಸಾರ್ವಜನಿಕರು?
'ಉದ್ಯಾನದಲ್ಲಿ ಅನಾಥ ಶವ'