ಪುಟ:ನಾಸ್ತಿಕ ಕೊಟ್ಟ ದೇವರು.pdf/೧೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೦೪

ನಾಸ್ತಿಕ ಕೊಟ್ಟ ದೇವರು

"ಮೂರು ತಿಂಗಳ ಕೆಳಗೆ ಸಕಲೇಶಪುರದವರು ಒಬ್ಬರು ಬಂದಿದ್ದರಲ್ಲ ಪತ್ನೀಪುತ್ರ ಸಮೇತರಾಗಿ? ಅವರ ಮಗನಿಗೆ – ಡಾಕ್ಟ್ರು ಜ್ಞಾಪಕ ಇದೇ ತಾನೆ? - ಗಿರಿಜಾ ಒಪ್ಪಿಗೆಯಂತೆ. ಒಂದು ಫಿಯೆಟ್ ಕಾರು, ಒಂದು ಸೇರು ಬಂಗಾರ, ಮೇಲೆ ಆರು ಸಾವಿರ ರೂಪಾಯಿ ಕೊಟ್ಟರೆ ಮಾಡ್ಕೋತಾನಂತೆ.”
"ಕಾರಿಗೆ ಎಷ್ಟಾಗುತ್ತೆ?”
"ಹಳೇದಲ್ಲ, ಹೊಸದು. ಹದಿಮೂರು ಸಾವಿರ ರೂಪಾಯಿ ಚಿಲ್ಲರೆ...”
"ಅಯ್ಯೋ ದೇವರೇ !"
"ಈ ಅರಮನೆ ಮಾರಿದರೆ ಹದಿನೈದು ಸಾವಿರ ರೂಪಾಯಿ ಬರಬಹುದು. ಉಳಿದದ್ದಕ್ಕೆ ಏನು ಮಾಡೋಣ?”
ಕಾಸಿಗೆ ಕಾಸು ಕೂಡಿಟ್ಟು ಕಟ್ಟಿಸಿದ ಮನೆಯನ್ನು, ಅದು ತಮಗೆ ಸೇರಿದ್ದಲ್ಲ ಎನ್ನುವಂತೆ, ಮಾರುವ ಮಾತನ್ನು ವಿಶ್ವನಾಥಯ್ಯ ಆಡಿದ್ದರು.
ಆದರೆ, ಅದನ್ನು ಆಲಿಸಿದ ಮನೆಯೊಡತಿಯ ಗಂಟಲೊಣಗಿತು.
"ಮನೆ ಮಾರಿ ನಾವೇನು ಮಾಡೋಣ ಅಂದ್ರೆ?”
"ಕೈಲಿ ಕಪ್ಪರ ಹಿಡಿದು ಹೊರಡೋದು . . . ಕಾಶಿಗೆ ಯಾಕೆ ಹೋಗಬಾರದೂ೦ತೀನಿ . . . "
"ಅಣ್ಣಯ್ಯ!”
ಕಾತರದ ಧ್ವನಿ. ಗಿರಿಜೆಯದು.
“ಇಲ್ಲೇ ಇದೀಯಾ? ಸಮಾಜಕ್ಕೆ ಹೋಗಿದಾಳೆ ಅಂದ್ಕೊಂಡಿದ್ನಲ್ಲೇ...”
"ಇಲ್ಲೇ ಇದ್ದೆ ಅಮ್ಮ. ಎಲ್ಲಾ ಕೇಳಿಸ್ಕೊಂಡೆ."
"ಸರಿ !ಸರಿ !"
ಗಿರಿಜಾ ಬಹಳ ದಿನಗಳಿಂದ ಕಂಠಪಾಠ ಮಾಡಿಕೊಂಡಿದ್ದ ಮಾತುಗಳನ್ನು ಉಸಿರು ಬಿಗಿಹಿಡಿದು ಅಂದಳು:
"ನನಗೆ ಈಗ್ಲೇ ಮದುವೆ ಬೇಡ. ನಾನು ಕೆಲಸಕ್ಕೆ ಸೇರ್ಕೋತೀನಿ,
ಅಣ್ಣಯ್ಯ. ನೀವು ಒಪ್ಪಬೇಕು, ಅಣ್ಣಯ್ಯ.”
ನೀರವತೆ. ಗಿರಿಜೆ ಆಡಿದುದಕ್ಕೆ ಪ್ರತಿಕ್ರಿಯೆಯಾಗಿ ಯಾವ ಮಾತೂ ಬರಲಿಲ್ಲ.
ನಿರಾಕರಣೆಯ ನುಡಿಗಿಂತಲೂ ಕಠಿನತರವಾಗಿತ್ತು ಆ ಮೌನ.
ಅದು ಸಹ್ಯವಾಗದೆ ಗಿರಿಜೆ ಅತ್ತಳು.