ಪುಟ:ನಾಸ್ತಿಕ ಕೊಟ್ಟ ದೇವರು.pdf/೧೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಯಾವ ಜನ್ಮದ ಶಾಪ?

೧೦೫

ಆ ಸದವಕಾಶವನ್ನು ಬಳಸಿಕೊಂಡು ಆಕೆಯ ತಾಯಿಯೂ ಕಂಬನಿ ಮಿಡಿದರು.
ವಿಶ್ವನಾಥಯ್ಯ ಎದ್ದು, ಮನೆಯಿಂದ ಹೊರಬೀಳಲು ಅಣಿಯಾದರು. ಕೊಠಡಿಯ ಬಾಗಿಲಿಗೊರಗಿ ರೋದಿಸುತ್ತಿದ್ದ ಮಗಳಿಗೆ ಅವರೆಂದರು:
“ಗಿರಿಜಾ! ನಾನು ಸಾಯುವವರೆಗೆ ನಿನ್ನನ್ನ ಚಾಕರಿಗೆ ಕಳಿಸೋದಿಲ್ಲ. ಕೆಲಸಕ್ಕೆ ನಾನು ಸೇರ್ಕೋತೀನಿ. ದೇವರು ಕಣ್ಣು ತೆರೆದರೆ, ಯಾವನಿಗಾದರೂ ಕೊಟ್ಟು ನಿನ್ನನ್ನು ಮದುವೆ ಮಾಡೇನು. ಸಮಾಜ ಗಿಮಾಜ ಅಂತ ಹೋಗ್ಬೇಡ. ಬಾಗಿಲು ಹಾಕ್ಕೋ . . .”
“ಏಳೀಂದ್ರೆ..."
"ಹಾಂ ಹಾಂ-"
ಗಡಬಡಿಸಿ ವಿಶ್ವನಾಥಯ್ಯ ಎದ್ದರು.
"ಇವತ್ನಿಂದ ಕೆಲಸಕ್ಕೆ ಹೋಗ್ಬೇಕು ಅಂದಿದ್ರಿ, ಅಲ್ವೆ?”
"ಹೌದು. ಎದ್ದೆ."
ರೇಡಿಯೋನಿಂದ ವೆಂಕಟೇಶಸ್ತುತಿ ಕೇಳಿಬರುತ್ತಿತ್ತು.
[ಈ ದಿನ ಈ ಸ್ತೋತ್ರ, ನಾಳೆ ಮಲ್ಲಿಕಾರ್ಜುನ ಸ್ತೋತ್ರ]
ಅವಸರದ ಮುಖಮಾರ್ಜನ, ಗುಟುಕು ಕಾಫಿ, ಸ್ನಾನ. ಬಿಸಿಬಿಸಿ ಅನ್ನದ ತುತ್ತು.
ಹಿಂದಿನ ದಿನ ಉದ್ಯೋಗ ದೊರಕಿಸಿಕೊಂಡಿದ್ದರು ವಿಶ್ವನಾಥಯ್ಯ. ನೂರು ರೂಪಾಯಿ ಮಾಸಿಕ ತಲಬಿನ ಆಫೀಸು ಮ್ಯಾನೇಜರು. ಏಕ ಕಾಲದಲ್ಲೇ ಹತ್ತಾರು ಕಟ್ಟಡಗಳ ನಿರ್ಮಾಣಕಾರ್ಯವನ್ನು ಕೈಗೊಳ್ಳುವುದರಲ್ಲಿ ಹೆಸರು ಪಡೆದಿದ್ದ ಕಂಟ್ರಾಕ್ಟರು ಮಹಾದೇವಯ್ಯ – ಸ್ವತಃ ನಿರಕ್ಷರ ಕುಕ್ಷಿ- ತಮ್ಮ ವ್ಯವಹಾರ ಸುಗಮವಾಗುವುದಕ್ಕೋಸ್ಕರ ಆಫೀಸು ತೆರೆದಿದ್ದರು.