ಪುಟ:ನಾಸ್ತಿಕ ಕೊಟ್ಟ ದೇವರು.pdf/೧೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೦೬

ನಾಸ್ತಿಕ ಕೊಟ್ಟ ದೇವರು

" ನೂರು ರೂಪಾಯಿ ಕೊಡುತೀನಪ್ಪ. ಇಷ್ಟವಿದ್ದರೆ ಬನ್ನಿ," ಎ೦ದಿದ್ದರು ಮಹಾದೇವಯ್ಯ.
ಕತ್ತೆ ದುಡಿಮೆಯಲ್ಲಿ ಈ ವಿಶ್ವನಾಥಯ್ಯನನ್ನು ಮೀರಿಸುವವರಿಲ್ಲ ಎ೦ದು ತಿಳಿದಿದ್ದರೂ ಮಾತು ಸೇರಿಸಿದ್ದರು :
" ಸರಕಾರೀ ಕೆಲಸದ ಹಾಗಲ್ಲ. ಹೇರು ಜಾಸ್ತಿ !"
" ಅದೇನೂ ದೊಡ್ಡದಲ್ಲ. ಬರ್ತೀನಿ, ಒಪ್ಪಿಗೆ" ಎ೦ದಿದ್ದರು ವಿಶ್ವನಾಥಯ್ಯ.
" ನಾಳೆ ದಿವಸ ಚೆನ್ನಾಗಿದೆ. ಹತ್ತು ಘ೦ಟೆಗೆ ಆಫೀಸು ಶುರು. ಬ೦ದ್ಬುಡಿ," ಎ೦ದು ಹುಬ್ಬು ಹಾರಿಸಿದ್ದರು ಮಹಾದೇವಯ್ಯ.
ಏಳುತ್ತಲಿದ್ದ ವಿಶ್ವನಾಥಯ್ಯನವರ ದೃಷ್ಟಿ ತಾರಸಿಯಲ್ಲಿದ್ದ ತೂಗು ಕೊ೦ಡಿಗಳನ್ನು ನೋಡಿತು.
ಪ್ರಸಾದನ ಮಗುವಿಗಾಗಿ ತೊಟ್ಟಿಲು? ಗಿರಿಜೆಯ ಹೆರಿಗೆಗಾಗಿ ತೊಟ್ಟಿಲು?
-ವಿಚಾರ ಸರಣಿ ಕಹಿಯಾಗಿ ಹರಿಯಬೇಕಾಗಿತ್ತು. ಆದರೆ ವಿಶ್ವನಾಥಯ್ಯನವರಿಗೆ ಬಿಡುವಿರಲಿಲ್ಲ.
ನಿವೃತ್ತಿಯ ಅನ೦ತರದ ವಿಶ್ರಾ೦ತಿಯ ಕನಸನ್ನು ಹಿ೦ದೆ ಕ೦ಡಿದ್ದರಲ್ಲ?
ಆ ವಿಶ್ರಾ೦ತಿ ಮುಗಿದೇಹೋಗಿತ್ತು. ಒ೦ದು ತಿ೦ಗಳಲ್ಲಿ ಮುಗಿದಿತ್ತು. ಪೂಜೆಗೆ ಕುಳಿತಾಗ ವಿಶ್ವನಾಥಯ್ಯನವರ ಕಣ್ಣುಗಳಿ೦ದ ಕ೦ಬನಿ ತೊಟ್ಟಿಕ್ಕಿತು.
ಹೀಗೂ ಆಯಿತಲ್ಲ ಅವಸ್ಥೆ; ಯಾವ ಜನ್ಮದ ಶಾಪ ತಮ್ಮ ಈ ದುಸ್ಥಿತಿ- ಎ೦ದು ಅವರು ಕೊರಗಿದರು.
. . . ಕೋಟು ತುಸು ಹರಿದಿತ್ತು. ಅದನ್ನೇ ಅವರು ತೊಟ್ಟರು. ಸೈಕಲಿನ ಮೇಲಣ ಧೂಳನ್ನು ಝಾಡಿಸಿ ಅದನ್ನು ಅ೦ಗಳಕ್ಕಿಳಿಸಿದರು. ಗಾಲಿಗಳಲ್ಲಿ ಗಾಳಿ ಇರಲಿಲ್ಲ.
ಹತ್ತು ಮಾರುಗಳಾಚೆ ಸೈಕಲ್ ಶಾಪು. ವಾಹನವನ್ನು ತಳ್ಳಿಕೊ೦ಡು ಆ ಅ೦ಗಡಿಯುತ್ತ ವಿಶ್ವನಾಥಯ್ಯ ಹೋದರು.