ಪುಟ:ನಾಸ್ತಿಕ ಕೊಟ್ಟ ದೇವರು.pdf/೧೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನ೦. ೨೦೮ ಮತ್ತು ನೀಲಿ ಬುಶ್ ಕೋಟು

೧೪೩

—ಹೇಗಾದರೂ ಮಾಡಿ ಅದಕ್ಕಿಂತ ಮುಂಚೆಯೇ ಹೊರಟು ಹೋಗಬೇಕು.
ಕೈಯಿಂದ ಕೆಲಸ ಸಾಗಲೇ ಇಲ್ಲ.
ಮೇಸ್ತ್ರಿಣಿ ಬಂದಾಗ, ಪಕ್ಕದಲ್ಲಿದ್ದಾಕೆ ಎದ್ದು ನಿಂತು ಹೇಳಿದಳು :
"ಶಾರದಮ್ಮನಿಗೆ ಬವಳಿ ಬರ್ತಾ ಇದೆ."
"ಸರಿ!" ಎಂದಳು ಮೇಸ್ತ್ರಿಣಿ, ತಿಳಿವಳಿಕೆಯ ಮುಗುಳ್ನಗೆ ಬೀರಿ ಬವಳಿ ಬರುವುದಕ್ಕೂ ಯೌವನಕ್ಕೂ ಯಾವಾಗಲೂ ಸಂಬಂಧ ಇದ್ದೇ ಇದೆ ಎನ್ನುವ ದೃಢ ಅಭಿಪ್ರಾಯವಿತ್ತು ಆಕೆಗೆ.
ಅವಳು ತೀರ್ಪು ಕೊಟೃಳು :
" ಮೂರು ಗಂಟೆ ಈಗ . . . ಹೋಗಿಬಿಡು. ಅರ್ಧ ದಿನ ಲೀವ್ಹಾ ಕಿಸ್ತೀನಿ. ಸರಿಯಾದ ಔಷಧಿ ತಗೋ. ಬಿಲ್ಲೆ ಕೊಟ್ಬಿಟ್ಟು ಹೊರಟ್ಹೋಗು."
ಬಿಲ್ಲೆಯನ್ನು ಕೊಟ್ಟು ಟಿಫಿನ್ ಕ್ಯಾರಿಯರಿನೊಡನೆ ಶಾರದಾ ಹೊರಟಳು. ಹಾಗೂ ಹೀಗೂ ಕಾಲುಗಳು ಗೇಟನ್ನು ದಾಟಿದುವು.
ಮುಂದೆ ಎಲ್ಲಿಗೆ ಹೋಗಬೇಕು? ಆಸ್ಪತ್ರೆಗೆ? ಇಷ್ಟು ಬೇಗನೆ? ಅಥವಾ ಮನೆಗೆ? ಅದೂ ಇಷ್ಟು ಬೇಗನೆ? ಏನೆಂದು ಉತ್ತರ ಕೊಡಬೇಕು? ಏನೆಂದು?
. . . ಅಯ್ಯೋ ! ಅಮ್ಮಾ - ಅಪ್ಪಾ ! ಓ ನಾಣೀ !
ಆಗ ನಿಜವಾಗಿ ಅವಳಿಗೆ ಬವಳಿ ಬಂದ ಹಾಗಾಯಿತು. ಬೀದಿಯ ಬಳಿಯಲ್ಲೆ ಒಂದು ಕ್ಷಣ ಆಕೆ ನಿಂತಳು. ಕಾಲುಗಳು ಥರಥರನೆ ಕಂಪಿಸಿದುವು. ಮುಖವೆಲ್ಲ ಬಿಳಿಚಿಕೊಂಡಿತು. ಕಣ್ಣೀರು ಕೋಡಿಕಟ್ಟಿ ಹರಿಯಿತು.
. . . ಬೀದಿಯಲ್ಲಿ ಹಾದು ಹೋಗುತ್ತಿದ್ದವರು ಆಕೆಯನ್ನು ನೋಡ ತೊಡಗಿದರು . . .
ಅಯ್ಯೋ - ತಾನು ಮಾಡಿದ್ದೇನು? ಏನು ಮಾಡಿಬಿಟ್ಟೆ ತಾನು?
ಇದಕ್ಕೆ ಪರಿಹಾರ? ಮುಂದೆ? ಅಪ್ಪ - ಅಮ್ಮನಿಗೆ ಗೊತ್ತಾದರೆ?
ನಾಣಿಗೆ ಗೊತ್ತಾದರೆ?
ಮುಂದೆಯೂ ಹೋಗಲಿಲ್ಲ. ಹಿಂದೆಯೂ ಹೋಗಲಿಲ್ಲ. ನಿಂತಲ್ಲೆ ನಿಂತಳು ಆಕೆ . . . ಎರಡು ಕ್ಷಣ ಹಾಗೆಯೇ.