೧೦
ನಾಸ್ತಿಕ ಕೊಟ್ಟ ದೇವರು
ಮಾಡಿದ್ದುವು. ಸನ್ನದ್ಧರಾಗಿದ್ದ ಭಾರತೀಯ ಯೋಧರ ಗುಂಡುಗಳು ಪ್ರತ್ಯುತ್ತರ ನೀಡಿದ್ದುವು.
"ಹಿಂದೀ ಚೀನೀ ಭಾಯಿ ಭಾಯಿ!"
ಅಲ್ಲವೆ ಪಾಪ! ತಗೋ, ಇದೊಂದು.
ಇದು ಒಂದು, ಇನ್ನೊಂದು ...
ಗಿರಿಕಂದರಗಳ ತುಂಬ ಗುಂಡಿನ ಭೋರ್ಗರೆತದ ಧ್ವನಿ, ಪ್ರತಿಧ್ವನಿ.
"ಫಯರ್! ಫಯರ್!"
ನಿಕರದ ಕಾಳಗ. ಅಂಗುಲ ಅಂಗುಲ ನೆಲಕ್ಕೆ. ಆ ಇರುಳು. ಒಂದು ಹಗಲು, ಮತ್ತೊಂದು ಇರುಳು.
ಕರ್ಕಶವಾದ ಮೃಗೀಯ ಹೇಷಾರವಕ್ಕೆ ಉತ್ತರ :
"ಭಾರತ್ ಮಾತಾ ಕಿ ಜಯ್!"
ಹಿಮ್ಮೆಟ್ಟಬೇಕೆಂಬ ಆಜ್ಞೆ ಆಗ ಬಂತು. ಚೆಲ್ಲಾಪಿಲ್ಲಿಯಾಗಿ ಚೆದುರು ವುದಲ್ಲ. ಆಯಕಟ್ಟಿನ ಇನ್ನೊಂದು ಸ್ಥಳದಿಂದ ಮತ್ತೆ ಹೋರಾಡುವುದಕ್ಕಾಗಿ ಹಿನ್ನಡೆ; ಗಾಯಗೊಂಡವರನ್ನು ಎತ್ತಿಕೊಂಡು, ಆಯುಧಗಳಿಗೆ ಆತು ಕೊಂಡು.
"ಎಲ್ಲಿ ಒಡನಾಡಿಗಳು? ತುಕ್ಕಡಿಯಲ್ಲಿ ಸೇರ್ಪಡೆಯಾದ ದಿನದಿಂದ ಮೊದಲ್ಗೊಂಡು ತನ್ನ ಆತ್ಮೀಯ ಬಂಧುವಾಗಿ ಜತೆಗಿದ್ದ ಕರ್ನಾಯಿಲ್ ಸಿಂಗ್"? ಹಾಸ್ಯಪಟು ರಾಮನ್ ನಾಯರ್? ಚಲಚ್ಚಿತ್ರಗೀತೆಗಳನ್ನು ಅದ್ಭುತವಾಗಿ ಹಾಡುತ್ತಿದ್ದ ಶೇರ್ ಗಾಂವ್ಕರ್?
ಸೈನಿಕರು ಹರಿದುಹಂಚಿಹೋದಾಗ ತಾನೊಬ್ಬನೇ ಆದೆ. ಕೈಯಲ್ಲಿ ಬಂದೂಕಿತ್ತು. ಅದನ್ನೆತ್ತಿಕೊಂಡು ಹಿಂದಕ್ಕೆ ತಿರುಗಬೇಕೆನ್ನುವಷ್ಟರಲ್ಲೆ ಸಪ್ಪಳ ಕೇಳಿಸಿತು. ರಟಟಟ ಟ್ಟ-ತನ್ನ ಕಡೆಗೆ. ತಾನು ಅಂಗಾತ ಮಲಗಿ ಆ ಗುಂಡಿನೇಟುಗಳಿಂದ ತಪ್ಪಿಸಿಕೊಂಡೆ. ಕತ್ತಲಲ್ಲಿ ಮೂರು ಆಕೃತಿ ಗಳು ತನ್ನನ್ನು ಹುಡುಕಿಕೊ೦ಡು ಬರುತ್ತಿದ್ದುವು. ತಾನು ಸತ್ತಿರುವೆನೋ ಇಲ್ಲವೋ ಎಂಬುದನ್ನು ಖಚಿತಪಡಿಸುವುದಕ್ಕೋಸ್ಕರ ಇರಬೇಕು ...
... ಮಲಗಿದಲ್ಲಿಂದಲೇ ಗುಂಡು ಹಾರಿಸಿದೆ. ಒಂದು ಎರಡು ಮೂರು.
ಆಕೃತಿಗಳಲ್ಲಿ ಎರಡು ನೆಲಕ್ಕುರುಳಿದವು: