ಪುಟ:ನಾಸ್ತಿಕ ಕೊಟ್ಟ ದೇವರು.pdf/೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



ಯಾವ ಜನ್ಮದ ಶಾಪ?

೭೯

ವಿಶ್ವನಾಥಯ್ಯ ಪತ್ರಿಕೆ ಓದತೊಡಗಿದರು. ಅರ್ಧ ಓದಿ ಊಟಕ್ಕೆದ್ದರು. ಊಟದ ಬಳಿಕ ಓದಿ ಮುಗಿಸಿದರು. ನರಸಿಂಗರಾಯರ ಮೊಮ್ಮಗ ಮತ್ತೆ ಬಂದಾಗ, ಪತ್ರಿಕೆಯನ್ನು ರಭಸದಿಂದಲೆ ಮಡಚಿ ಹುಡುಗನೆಡೆಗೆ ತಳ್ಳಿದರು.
ಮನಸ್ಸು ಎಲ್ಲಿಗೋ ಹಾರಾಡಿ ಅಠಾರಾ ಕಚೇರಿಯ ಸುತ್ತುಸುತ್ತು ಸುಳಿಯುತ್ತಿತ್ತು. ಕೆಂಪು ಕಟ್ಟಡದಿಂದ ವಿಧಾನಸೌಧಕ್ಕೆ ಅವರು ಸ್ಥಾಳಾಂತರ ಹೊಂದಿರಲಿಲ್ಲ. ವೇತನ ಹೆಚ್ಚುವುದಕ್ಕೆ ಮುನ್ನವೇ నిವೃತ್ತರಾಗಿದ್ದರು. ತಾನು ಕೈ ಓಡಿಸಿದ್ದ ತನ್ನ ಹಸ್ತಾಕ್ಷರವಿದ್ದ, ಆ ಫೈಲುಗಳೆಲ್ಲ ಎಲ್ಲಿವೆಯೊ ಈಗ? ಹತ್ತಾರು ಕಡೆಗಳಿಂದ ಹೊಸಬರು ಬಂದು ಅಠಾರಾ ಕಚೇರಿಯ ವಾತಾವರಣವೇ ಬದಲಾಗಿತ್ತು-ಬದಲಾಗಿತ್ತು . . .
ಪ್ರಸಾದ ಬರೆಯುತಿದ್ದುದೂ ಅದನ್ನೇ. "ಊರುಬಿಟ್ಟು ಇಷ್ಟು ದೂರ ಬಂದೆನೆಂದು ನನಗೆ ಸಂತೋಷವಾಗಿದೆ. ನಾಳೆ ಇಲ್ಲೇ ನನಗೆ ಕೆಲಸ ಖಾಯ೦ ಆಗಬಹುದು. ವಿದೇಶ ವ್ಯಾಸಂಗಕ್ಕೂ ಅವಕಾಶವಿರಬಹುದು. ದೇಶಕ್ಕೆ ಉಪಯುಕ್ತನಾದ ಮನುಷ್ಯನಾಗಿದೇನೆ ಎಂದು ನನಗೆ ಸಮಾಧಾನ..."
ಸಮಾಧಾನವೇ! ತಾನು ಕೂಗಿದರೆ ಸಾಕು ಲೋಕಕ್ಕೆಲ್ಲ ಬೆಳಕು.
“ನೀನೂ ಯಾವುದಾದರೂ ಕೆಲಸಕ್ಕೆ ಸೇರಿಕೊ ಗಿರಿಜಾ.”
ತನ್ನದು ಸಾಲದೆಂದು ತಂಗಿಗೂ ಹಿತಬೋಧೆ ಬೇರೆ!
ಪ್ರಸಾದನಿಗೆ ಮದುವೆ ಬೇಡವಂತೆ–ಈಗಲೇ ಬೇಡವಂತೆ. ಸರಿ. ನಾಳೆ ಯಾರನ್ನೋ ಕಟ್ಟಿಕೊಂಡ ಅಂದರೆ ಅಲ್ಲಿಗಾಯಿತು. ಹೇಗೂ ಕಟ್ಟುತ್ತಿರುವುದು ಜಾತ್ಯತೀತ ರಾಷ್ಟ್ರತಾನೆ? ಹಿಂದಿನವರು ಉಚ್ಚ ಶಿಕ್ಷಣಕ್ಕೆಂದು ವಿಲಾಯತಿಗೆ ಹೋಗಿ ದೊರೆಸಾನಿಗಳ ಜೊತೆ ಬರುತ್ತಿದ್ದರು. ಈಗಿನವರು ಅವೆುರಿಕದಿ೦ದಲೋ ರಷ್ಯದಿಂದಲೋ ತಂದರಾಯಿತು. ಹುಚ್ಚಶಿಕ್ಷಣ, ಹುಂ. ಎದುರು ನಿಂತಾಗ ಪ್ರಸಾದ ಮಿತಭಾಷಿ. ತಂದೆ ಎನ್ನುವ ಪ್ರಾಣಿ ದೂರದ ಸಂಬಂಧವೇನೋ ಎನ್ನುವ ಹಾಗೆ. ಪರವೂರು ಸೇರಿದ್ದೇ ತಡ, ಹೇಗೆ ಬಲಿತುಕೊಂಡುವು ರೆಕ್ಕೆಗಳು!
ಮಗಳ ವಿಷಯದಲ್ಲಂತೂ ತಾನು ತೋರಿಸಿದ ಔದಾರ್ಯ ಹೆಚ್ಚಾಯಿತು. ಐದಾರು ವರ್ಷ ಹಿಂದೆಯೇ ಯಾರಿಗಾದರೂ ಕೊಟ್ಟುಬಿಟ್ಟಿದ್ದರೆ