ಪುಟ:ನಾಸ್ತಿಕ ಕೊಟ್ಟ ದೇವರು.pdf/೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಯಾವ ಜನ್ಮದ ಶಾಪ?

೮೧

ಅವರು ಎಚ್ಚೆತ್ತಾಗ ಸಂಜೆಯಾಗಿತ್ತು. ಎದ್ದ ಗಂಡನನ್ನು ನೋಡಿ ಮುಗುಳು ನಕ್ಕು, ಹೆಂಡತಿ ಕಾಫಿ ತಂದುಕೊಟ್ಟರು.
"ಗಿರಿಜಾ ಎಲ್ಲಿ?"
"ಸಮಾಜಕ್ಕೆ ಹೋಗಿದಾಳೆ.”
"ಸರಿ!"
ಚೀಲ ತಂದು ಕೊಡ್ತೀನಿ. ಮಾರ್ಕೆಟ್ ಕಡೆ ಹೋಗಿ ಬ‍‍‍‍ರ್ತೀರಾ?"
"ಓಹೋ!"
ಪೋಷಾಕು ಧರಿಸಿ ಸೈಕಲಿನ ಗೊಡವೆಗೆ ಹೋಗದೆ ಕಾಲ್ನಡಿಗೆಯಲ್ಲೇ ವಿಶ್ವನಾಥಯ್ಯ ಹೊರಟರು. ಎಂತಹ ಜನಜಂಗುಳಿ ಬೀದಿಯಲ್ಲಿ! ಅల్ల! ಹೇಗಿದ್ದ ಬೆಂಗಳೂರು ಹೇಗಾಗಿ ಹೋಯಿತು ಅಂತ ! ಇಷ್ಟೊಂದು ಕಾರುಗಳು ಮೊದಲು ಇದ್ದುವೆಲ್ಲಿ? ನಾನಾ ತರಹೆ ಜೀವನ ವೈಖರಿ . . . ಇಪ್ಪತ್ತನೆಯ ಶತಮಾನ. ಎಲ್ಲರೂ ನಾಗರಿಕರೇ. ಮೊನ್ನೆ ಯಾವನೋ ತತ್ವಜ್ಞಾನಿ ಹೇಳಿದನಲ್ಲವೆ? 'ಚಂದ್ರಲೋಕ ವಾಸಯೋಗ್ಯವೆ ಅಂತ ಸಂಶೋಧನೆ ನಡಸಿದಾರೆ; ಭೂಲೋಕದಲ್ಲಿ ವಾಸ ಸಾಧ್ಯವೆ ಅಂತ ಅವರು ಮೊದಲು ಹೇಳಬೇಕು.' ಮುತ್ತಿನಂತಹ ಮಾತು.
"ನಮಸ್ಕಾರ ವಿಶ್ವನಾಥಯ್ಯ."
" ನಮಸ್ಕಾರ ಸಾರ್.”
[ ಈ ಸಾರ್ ಬಿಡಲೊಲ್ಲದು. ಯಾರಪ್ಪಾ ? ನರಸಿಂಗರಾಯರು !]
"ಯಾವ ಕಡೆ ಹೊರಟಿದೀರಿ?"
“ಮಾರ್ಕೆಟ್ಟಿಗೆ.”
"ನಾನೂ ಅಲ್ಲಿಗೇನೇ. ನಡೀರಿ, ಹೋಗೋಣ.”
[ಸಿಕ್ಕಿಬಿದ್ದೆ. ಸುಳ್ಳು ಹೇಳಿ ತಪ್ಪಿಸಿಕೊಳ್ಳಬೇಕಾಗಿತ್ತು.]
ನಿವೃತ್ತ ಮನುಷ್ಯನಿಗೆ ನಿವೃತ್ತ ಮನುಷ್ಯನೇ ಜತೆ ಎಂದುಕೊಂಡು ವಿಶ್ವನಾಥಯ್ಯ ಅಸಹಾಯರಾಗಿ ಅನಿವಾರ್ಯವಾಗಿ ನರಸಿಂಗರಾಯರೊಂದಿಗೆ ಹಾದಿ ನಡೆದರು.

****