ಪುಟ:ನಾಸ್ತಿಕ ಕೊಟ್ಟ ದೇವರು.pdf/೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



ನಾಸ್ತಿಕ ಕೊಟ್ಟ ದೇವರು

೮೧

ಲೋಕಾಭಿರಾಮ ಮಾತುಗಳನ್ನಾಡುತ್ತ ಸಂಜೆಯನ್ನು ಕಳೆದು ಮನೆಗೆ ಮರಳಿದರು ವಿಶ್ವನಾಥಯ್ಯ.
ಮಗಳನ್ನು ಅವರು ಕೇಳಿದರು:
"ಎಷ್ಟು ಹೊತ್ತಾಯ್ತು ಬಂದು?"
"ಆಗಲೆ ಬಂದೆ, ಅಣ್ಣಯ್ಯ.”
ಊಟಕ್ಕೆ ಕುಳಿತಾಗ ವಸ್ತುಸ್ಥಿತಿಯ ಚಿಂತೆ ಮತ್ತೆ ವಿಶ್ವನಾಥಯ್ಯನವರನ್ನು ಕಾಡಿತು.
ಕೈ ತೊಳೆಯುವಾಗ ಅವರೆಂದುಕೊಂಡರು : ಯೋಚಿಸುತ್ತಾ ಕಾಲ ಕಳೆಯುವುದರಲ್ಲಿ ಅರ್ಥವಿಲ್ಲ. ಏನನ್ನಾದರೂ ತಾನು ಮಾಡಲೇ ಬೇಕು. ಗಿರಿಜೆಯ ವಿವಾಹ ತಡವಾಗಬಾರದು. ಹುಟ್ಟಿ ಬೆಳೆದ ಊರು ಬಿಟ್ಟು ಸಾವಿರ ಮೈಲು ಆಚೆ ಮಗನ ಜೊತೆ ತಾವು ವಾಸಮಾಡುವುದು, ಆಗದ ಮಾತು. ಪ್ರಸಾದ ತಮ್ಮ ಬಳಿಯಲ್ಲೇ ಇರಬೇಕು. ಇಲ್ಲೇ ಆತನಿಗೆ ಕೆಲಸ ದೊರಕಿಸಿ ಕೊಡಬೇಕು. ಸೊಸೆ ಮನೆಗೆ ಬರಬೇಕು. ಅಷ್ಟು ಮಾಡುವುದು ತನ್ನಿಂದ ಆಗಲಾರದೇನು?
ರಾತ್ರಿ ದಿಂಬಿಗೆ ತಲೆ ಸೋಂಕಿದಾಗ, ಮಗನನ್ನು ಬೇಗನೆ ಕಂಡು ಮಾತನಾಡಬೇಕೆಂಬ ಬಯಕೆ ಅವರಿಗೆ ಬಲವಾಯಿತು. ಭಾನುವಾರಕ್ಕೆಂದು ತಾನು ಮುಂದೆ ತಳ್ಳಿದ್ದ ಮಾತುಕತೆಯ ನೆನಪಾಗಿ, ತಮ್ಮ ಆಸೆ ಈಡೇರುವುದೆಂಬ ನಂಬಿಕೆ ಮೊಳೆಯಿತು. ಮಾರನೆಯ ದಿನ ಮಗನಿಗೆ ಕಳುಹಬೇಕಾದ ತಂತಿಯನ್ನು ವಿಶ್ವನಾಥಯ್ಯ ಮನಸ್ಸಿನಲ್ಲೆ ರೂಪಿಸಿದರು.
"ತಂದೆಗೆ ಸಕತ್ ಕಾಹಿಲೆ ತಕ್ಷಣ ಹೊರಟು ಬಾ, ಗಿರಿಜಾ.”
[ಹೌದು, ಗಿರಿಜೆಯ ಹೆಸರು ಕೊನೆಯಲ್ಲಿ.]
ವಿಶ್ವನಾಥಯ್ಯನವರ ದೃಷ್ಟಿ ತಾರಸಿ ಛಾವಣಿಯತ್ತ ಹೊರಳಿತು. ತೊಟ್ಟಿಲುತೂಗುವ ಕರಿದುಕೊಂಡಿಗಳು ಕೆಳಮೊಗವಾಗಿ ಅವರನ್ನೇ ನೋಡುತ್ತಿದ್ದುವು.