ಪುಟ:ನಾಸ್ತಿಕ ಕೊಟ್ಟ ದೇವರು.pdf/೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಯಾವ ಜನ್ಮದ ಶಾಪ ?

೮೩

ಪ್ರಸಾದ ಊರಿಗೆ ಬಂದ. ಆತ ಬೆಂಗಳೂರನ್ನು ತಲಪಿದುದು ಬೆಳಗಿನ ಜಾವ.
ಆ ಹಿಂದಿನ ರಾತ್ರಿ ವಿಶ್ವನಾಥಯ್ಯನವರಿಗೆ ಚೆನ್ನಾಗಿ ನಿದ್ರೆ ಬಂದಿರಲಿಲ್ಲ. ಅಸ್ವಾಸ್ಥ್ಯದಿಂದಲ್ಲ, ಯೋಚನೆಯಿಂದ. ಮೂರು ಘಂಟೆಗೆ ಎಚ್ಚರವಾಗಿತ್ತು. ದೀಪ ಹಾಕಿಕೊಂಡು, ಚಾದರ ಹೊದೆದು, ಜಗಲಿಯಲ್ಲಿ ಆರಾಮ ಕುರ್ಚಿಯ ಮೇಲೆ ಕುಳಿತು ಹೊತ್ತು ಕಳೆದಿದ್ದರು.
ಅವರಾಕೆಗೂ ಬೇಗನೆ ಎಚ್ಚರವಾಯಿತು.
“ ಯಾಕೇಂದ್ರೆ ಹೀಗೆ ಕೂತ್ಬಿಟ್ಟಿದೀರಿ?"-ಎಂದರು.
"ಯಾಕಿಲ್ಲ-ಸುಮ್ನೆ,” ಎಂದರು ವಿಶ್ವನಾಥಯ್ಯ ಚುಟುಕಾಗಿ.
"ಇವತ್ತು ಪ್ರಸಾದು ಬರಬೌದು, ಅಲ್ವೆ?”
"ಹೂಂ."
ನಸುಕಿನಲ್ಲಿ ಟ್ಯಾಕ್ಸಿ ಮನೆ ಮುಂದೆ ನಿಂತಿತು. ಬಂದವನು ಪ್ರಸಾದ ಎಂಬುದನ್ನು ವಿಶ್ವನಾಥಯ್ಯ ಊಹಿಸಿಕೊಂಡರು.
ಅವರಾಕೆ ಬಾಗಿಲನ್ನು ತೆರೆದು, "ಬಾಪ್ಪಾ,” ಎಂದು ಮಗನನ್ನು ಸ್ವಾಗತಿಸುತ್ತಿದ್ದಂತೆ, ವಿಶ್ವನಾಥಯ್ಯ ಮನಸ್ಸಿನಲ್ಲೆ ಅಂದುಕೊಂಡರು :
"ದುಂದು ವೆಚ್ಚ. ನನ್ನ ಕಾಲದಲ್ಲಿ ರೈಲ್ವೆ ಸ್ಟೇಶನಿಂದ ನಡಕೊಂಡು ಬರ್‍ತಿದ್ದೆ. ಈತನ ಕೈಯಲ್ಲಿ ಅದಾಗದಿದ್ದರೆ ಜಟಕಾದಲ್ಲಾರೂ ಬರಬಹುದಿತ್ತಲ್ಲ. ಟ್ಯಾಕ್ಸಿಗೆ ದುಡ್ಡು ಸುರೀತಾನಲ್ಲಾ."
ಒಳಗೆ ಬಂದ ಪ್ರಸಾದ ನುಡಿದ:
“ ಈಗ ಹ್ಯಾಗಿದೆ ಅಣ್ಣಯ್ಯ?”
ಇವನ ದೃಷ್ಟಿಯಲ್ಲಿ ತಾವು ರೋಗಿ ಎಂಬುದು ವಿಶ್ವನಾಥಯ್ಯನಿಗೆ ಥಟ್ಟನೆ ಮನವರಿಕೆಯಾಗಿ, ಒಳಗಿಂದೊಳಗೆ ನಕ್ಕು, ಬಾಹ್ಯವಾಗಿ ಸಪ್ಪೆ ಮುಖದಿಂದಿದ್ದು, “ ಊಂ. . . ಹೂಂ . . .” ಎಂದು ರಾಗಹೊರಡಿಸಿ, ಅಸ್ಪಷ್ಟವಾಗಿ ಏನನ್ನೋ ಗೊಣಗಿದರು.
ಧರ್ಮಪತ್ನಿ ಕೈಕೊಡಬೇಕೆ?