ಈ ಪುಟವನ್ನು ಪರಿಶೀಲಿಸಲಾಗಿದೆ
೧೯೦ ನೋವು ಗಜಾನನ ಹೋಟೆಲಿನ ಒಲೆಗೆ ಮತ್ತೆ ಉರಿಹಾಕಿದ. "ನೀನು ಇಲ್ಲೇ ಇರ್ಬೇಕು ಜಲ್ಜಾ," ಎಂದು ಕಾಮಾಕ್ಷಿ ದುಂಬಾಲು ಬಿದ್ದುದರಿಂದ, "ಆರತ್ಯಕ್ಷತೆ ಆಗೋತನಕ ಇರ್ತೀನೆಮ್ಮ," ಎಂದು ಜಲಜಮ್ಮ ತನ್ನ ಮಗುವಿನೊಡನೆ
ಶ್ರಿನಿವಾಸಯ್ಯನವರಲ್ಲಿಯೇ ಉళిದಳು.
ಆರತಿಗೆ ಆ ಬದುಕು ಒಗ್ಗುವುದು ಸಾಧ್ಯವೇ ಇರಲಿಲ್ಲ. ತನ್ನೆ ತಂದೆಗೂ ವಿಷ್ಣುಮೂರ್ತಿ ಯವರಿಗೂ ಇರುವ ಸಖ್ಯವನ್ನು ಸ್ಮರಿಸಿಕೊಂಡು, ಕಾಮಾಕ್ಷಿಯೊಡನೆ ಸ್ನೇಹದಿಂದಿರಲು ಅವಳು ಪ್ರಯತ್ನಪಟ್ಟಳು. ವಿದ್ಯೆಯಲ್ಲಿ ಸಂಸಾರದಲ್ಲಿ ಅಂತಸ್ತಿನಲ್ಲಿ ಹೋಟೆಲು ಮಾಲಿಕನ ಆ ಮಗಳು ತನಗಿಂತ ಕೀಳು ಎಂಬ ಅರತಿಯ ಖಚಿತಾಭಿಪ್ರಾಯ ಅವರೊಳಗೆ ಆತ್ಮೀಯತೆ ಬೆಳೆಯಲು ಅಡ್ಡಿಯಾಯಿತು. ನಿಷೇಕ ಪ್ರಸ್ತದ ಶಾಸ್ತ್ರವೂ ಮುಗಿದಿದ್ದ ದಂಪತಿಗಳು. ಆರತಿ ಪದ್ಮನಾಭನ ಕೊಠಡಿಯನ್ನು ತನ್ನ'ಕೋಟೆಯಾಗಿ ಮಾಡಿಕೊಂಡಳು. ಅಗಣಿ ಹಾಕಿಕೊಂಡು ಹಗಲೋ, ಇರುಳೋ, ಹೆಣ್ಣುಗಂಡಿನ ಆಟ ಅವರು ಆಡಿದ್ದೇ ಆಡಿದ್ದು. ಗೋಪಾಲನಿಗೆ ಪಡಸಾಲೆಗೆ ವರ್ಗವಾಗಿತ್ತು. ಗೋವಿಂದ ಕಾಮಾಕ್ಷಿಯರ ಚೆಲ್ಲಾಟಕ್ಕೆ ಅವನ ಕೊಠಡಿ ಸ್ಥಳಾವಕಾಶವಿತ್ತಿತು. ಕಾಮಾಕ್ಷಿ ಗಂಡನನ್ನು ಕೇಳಿದಳು : "ಯಾವುದ್ರೀ ನಿಮ್ಮ ರೂಮು ?" "ಅದೇ-ಪದ್ಮ ಇರೋದು." "ಆ ರೂಮು ಇದಕ್ಕಿಂತ ಚೆನ್ನಾಗಿದೆ. ಅಲ್ಲೇ ಇರೋಕಾಗ್ತಿರ್ಲಿಲ್ವ ನಾವು? ಈ ಕತ್ತಲೆ ಕೋಣೇಲಿ-" "ಕತ್ತಲೆ ಕೋಣೇನೇ ಮೇಲು ಅಲ್ಲಾ ?" "ಅದೇನು ಮೇಲು, ಬೆಳಕಿಲ್ದೆ ?” "ದೀಪ ಹಚ್ಕೊಂಡರಾಯ್ತು." "ದೀಪ ? ಹಗಲು ?" "ಅಲ್ಲ, ರಾತ್ರೆ." "ಹೋಗ್ರಿ ನೀವು. ನಾನು ಹೇಳಿದ್ದು ನಿಮಗೆ ಅರ್ಥವಾಗೊಲ್ಲ" "ಬಿಚ್ಚಿ ಹೇಳು," ಎಂದು ಹೆಂಡತಿಯ ಉಡಿಯತ್ತ ಕೈಚಾಚಿ ಗೋವಿಂದನೆಂದ. ಕಾಮಾಕ್ಷಿ ಗಂಡನಿಗೆ ಆತುಕೊಂಡು ಅವನ ಭುಜವನ್ನು ಕಚ್ಚಿದಳು. ಆ ವಿಷಯದಲ್ಲಿ ಅವಳು ಮದವೇರಿದ ಹೆಣ್ಣಾನೆ. ಹೊರಗೆ ಜನರಿದ್ದಾರೆ;ಘೀಳಿಡಬೆಡ–
ಎಂದು ಎಷ್ಟು ಹೇಳಿದರೂ ಕಿವಿಗೆ ನಾಟುವಂತಿರಲಿಲ್ಲ. ಗಟ್ಟಿ ಉಸಿರಾಡ್ಬೇಡ-ಎನ್ನುತ್ತಿದ್ದ ಗೋವಿಂದ ಪದೇ ಪದೇ. ಗಂಟಲಿನಿಂದ ಸ್ವರ ಹೊರಬೀಳದಿರಲೆಂದು ತನ್ನ ಬಾಯಿಯಿಂದ ಅವಳ ಬಾಯಿಯನ್ನು ಒತ್ತಿ ಹಿಡಿಯುತ್ತಿದ್ದ.
ದಣಿವು ಎಂಬುದಿರಲಿಲ್ಲ ಕಾಮಾಕ್ಷಿಗೆ. ಮತ್ತೆ ಕೆಲ ನಿಮಿಷಗಳಲ್ಲೇ ಮಾತು. "ಅಲ್ರೀ, ಆ ಸಣಕಲಮ್ಮ ಏನ್ಮಾಡ್ತಿದಾಳೇಂತ ಆ ರೂಮ್ನಲ್ಲಿ ಬಚ್ಚಿಟ್ಕೊಂಡು." "ಇನ್ನೇನ್ಮಾಡ್ತಾಳೆ? ಕಥೆ ಪುಸ್ತಕ ಓದ್ತಿರ್ಬೇಕು.” "ಅವಳು ಅದಕ್ಕೇ ಲಾಯಕ್ಕು. ಓದೋದು ಅಂದರೆ ನನಗೆ ತಲೆನೋವು.”