ಈ ಪುಟವನ್ನು ಪರಿಶೀಲಿಸಲಾಗಿದೆ
ನೋವು ೧೯೧
"ಇನ್ಯಾವುದು ನಿನಗಿಷ್ಟ?" “ಇದು!” ತೋರು ಬೆರಳಿನಿಂದ ಗೋವಿಂದನ ಹೊಟ್ಟೆಯನ್ನು ತಿವಿದಳು ಕಾಮಾಕ್ಷಿ. "ಜಲಜ ಪಾಪ, ದೊಡ್ಡಮ್ಮನೊಟ್ಟಿಗೆ ಒಬ್ಳೇ ಇದಾಳೆ. ಹೋಗಿ ಅವಳ ಜತೇಲಿರು.” "ಯಾಕಪ್ಪ ಅವಳ ಮೇಲೆ ನಿಮಗಿಷ್ಟೊಂದು ಕನಿಕರ ?" "ಸುಮ್ನೆ ಹೇಳ್ದೆ. ಮಗು ಚಿಕ್ದು." "ಮಗೂಗೇನು, ಮಲ್ಕೊಂಡಿರುತ್ತೆ." "ಕೆಲಸ್ದಲ್ಲಾದರೂ ಸಹಾಯ ಮಾಡು." ಕಾಮಾಕ್ಷಿ ಗಟ್ಟಿಯಾಗಿ ನಕ್ಕಳು. "ನಾನೆ ? ನಾನು ಕೆಲಸ ಮಾಡ್ಲೆ ? ಹಹ್ಹಹ್ಹ..." "ಶ್ !" ಎಂದ ಗೋವಿಂದ. ಪ್ರಯೋಜನವಾಗಲಿಲ್ಲ. ಮಾತು ನಿಲ್ಲಿಸಬೇಕಾದರೆ ಆಟವಾಡಬೇಕು. ಕಾಮಾಕ್ಷಿ ಸಿದ್ಧವಾಗಿದ್ದಳು. ಗೋವಿಂದ ಮನಸ್ಸಿಲ್ಲದ ಮನಸ್ಸಿನಿಂದ ಕಣಕ್ಕಿಳಿದ. ...ಹಳ್ಳಿಗೆ ಬಂದ ಮಾರನೆಯ ದಿನ ಕಾಮಾಕ್ಷಿ ಗಂಡನನ್ನು ಕೇಳಿದಳು : "ಅಲ್ರೀ, ಅಮ್ಮಾವ್ರು ಯಾವಾಗ್ಬರ್ತರಂತೆ ?" ಗೋವಿಂದನೆಂದ : "ಗೊತ್ತಿಲ್ಲ, ಆರತ್ಯಕ್ಷತೆ ದಿವಸ ಹಾಜರಾಗ್ಬಹುದೂಂತ ಕಾಣುತ್ತೆ. ಕರಕೊಂಡ್ಬ ರೋಕೆ ಗೋಪಾಲನ್ನ ಕಳಿಸ್ತಾರಂತೆ.” "ಆಕೆ ಬಂದ್ಮೇಲೆ ನಮಗೆ ರೂಮು ?” "ಪದ್ಮನಿಗೆ ಕಾಲೇಜಿಲ್ವೆ ? ಹೊರಟ್ಹೋಗ್ತಾನೆ." "ಸಣಕಲಮ್ಮ ?" "ಹಾಗನ್ಬಾರ್ದು ಕಾಮೂ. ಅವಳಿಗೇನು ಹೆಸರಿಲ್ವೆ ?" "ಇದೆ. ಆ-ರತಿ ದೇವಿ; ಕಾಮನರಗಿಣಿ." "ಅವನ ಹಿಂದೆ ಅವಳೂ ಹೋಗ್ತಾಳೆ." "ಆಮೇಲೆ ಆ ರೂಮು ನನ್ದೊ ?” "ಹ್ಞು." "ಅಲ್ರೀ... ಈ ಮನೆ ಒಂದು ಹಳೇಕಾಲದ ಹೋಟ್ಲ ಥರ ಇಲ್ವೆ ?” "ಏನು ಹಾಗಂದ್ರೆ?" "ಒಂದೊಂದು ರೂಮ್ನಲ್ಲಿ ಒಂದೊಂದು ಸಂಸಾರ. ರೂಮುಗಳಿಗೆ ನಂಬರ್ ಹಾಕ್ಬೌದು. "ಗಣೇಶ ಭವನದ ಜ್ಞಾಪಕ ಬರುತ್ತೊ ?” "ಹೂ೦ದ್ರೆ..." “ಸರಿಹೋಯ್ತು. ಅಮ್ಮನ ನೆನಪಾಗುತ್ತೇನೊ ?” "ಊಹೂಂ. ಕೇಸರಿಭಾತಿಂದು. ಆ ಜಲಜೆಗೆ ಹೇಳಿ ಬೆಳಗ್ಗೆ ಮಾಡಿಸ್ಬೇಕು.” "ಮಾಡ್ಸು, ಅದಕ್ಕೇನು?"