ವಿಷಯಕ್ಕೆ ಹೋಗು

ಪುಟ:ನೋವು.pdf/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ನೋವು
೧೩

" ಹೂಂ."

" ಸರಿ. ಆಮೇಲೆ ಶವ ಸಂಸ್ಕಾರ ಮಾಡಿದರಾಯ್ತು."

ಅಷ್ಟು ಹೇಳಿ ದೊಡ್ಡಮ್ಮ, ಆಗಲೇ ನಿಂತಿದ್ದ ಮಗನ ಕಡೆ ನೋಡಿ, "ಅಂಗಿ ಹಾಕ್ಕೋ" ಎಂದರು.

ಶ್ರೀನಿವಾಸಯ್ಯ ಶರಟು ತೊಟ್ಟುಕೊಳ್ಳುತ್ತಿದ್ದಂತೆ ದೊಡ್ಡಮ್ಮ ಮಾತು ಮುಂದು ವರಿಸಿದರು:

" ದಿಬ್ಬದ ಹೊಂಡ ಕೆಟ್ಟ ಜಾಗ. ಹಾವು ಕಚ್ಚಿತೋ, ದೆವ್ವ ಬಡೀತೋ ಯಾರು ಬల్ల ? "

ಶ್ರೀನಿವಾಸಯ್ಯ ತಾಯಿಯ ಮುಖ ನೋಡಿದರು.

" ಏನಮ್ಮ ನೀನು ಹೇಳ್ತಿರೋದು ? ಯಾರೋ ಕೊಂದ್ಹಾಕಿದಾರೆ ಅಂತಾನೆ ರಂಗಣ್ಣ!"...

ದೊಡ್ಡಮ್ಮ ಅಂದರು:

" ಈ ಮಗೂಗೆ ಏನು ಗೊತ್ತಾಗುತ್ತೆ ಅದೆಲ್ಲ? ನಮ್ಮ ಹಳ್ಳಿಯವರೇ ಕೊಂದರೂಂತ ಹೇಳೋಕಾಗುತ್ತೇನೋ? ಶಾಮಣ್ಣನ ಕೇಳಿ ನೋಡು ಬೇಕಾದರೆ. ಅದೇನಿದ್ದರೂ ಪಂಚಾಯತಿಯವರು ತೀರ್ಮಾನ ಮಾಡ್ತಾರೆ. ನೀನು ಹೋಗು."

ಶ್ರೀನಿವಾಸಯ್ಯ ತಮ್ಮ ಕರಿಯ ಟೋಪಿಯನ್ನು ಇಟುಕೊಳ್ಳಲೋ ಬೇಡವೋ ಎಂದು ಅನುಮಾನಿಸಿ, ಟೋಪಿಯನ್ನು ಗೂಟದಲ್ಲೇ ಬಿಟ್ಟು ಬಾಗಿಲಲ್ಲಿ ನಿಂತಿದ್ದ ರಂಗಣ್ಣನನ್ನು ದಾಟಿ ಹೊರಬಂದು, ಜಗಲಿಯ ಮೂಲೆಯಲ್ಲಿದ್ದ ಎಕ್ಕಡ ಮೆಟ್ಟಿಕೊಂಡು, "ಬರ್ತೀನಿ ಅಮ್ಮ" ಎಂದು ಅಂಗಳಕ್ಕಿಳಿದರು.

ಹಾಗೆ ಅವರು ಇಳಿಯುವುದಕ್ಕೂ ಪದ್ಮನಾಭ ಒಳಕ್ಕೆ ಬರುವುದಕ್ಕೂ ಸರಿಹೋಯಿತು. " ಪದ್ಮ ಬಂದ. ನೀವಿಬ್ರೂ ಇಲ್ಲೀ ಮಾತಾಡ್ತಾ ಇರಿ ರಂಗ " ಎಂದು ನುಡಿದು, ದೊಡ್ಡಮ್ಮ ಒಳಹೋದರು.

ಮೊದಲೇ ಕಳೆಗುಂದಿದ್ದ ಪದ್ಮನಾಭನ ಮುಖ ರಂಗಣ್ಣನನ್ನು ನೋಡಿದೊಡನೆ ಪೂರ್ಣ ಕಪ್ಪಿಟ್ಟಿತು. ಅವನು ಪಡಸಾಲೆಗೆ ಬರದೆ ಜಗದಲ್ಲೀ ನಿಂತ.

ಆ ನಿಮಿ‍‌‍ಷದಲ್ಲಿ ರಂಗಣ್ಣನ ಪಾಲಿಗೆ ಮಧ್ಯಾಹ್ನದ ಅನಂತರದ ಘಟನೆಗಳೆಲ್ಲ ಪುನಃ ಜೀವ ತಳೆದುವು. ದೊಡ್ಡಮ್ಮನ ದರ್ಶನದಿಂದ ಶಾಂತವಾಗಿದ್ದ ಮನಸ್ಸು ಮರಳಿ ಕೆರಳಿತು. ಮುನಿಯನ ಕೊಲೆ (ಸಾವು?) ಹೇಗೆ ಆಗಿರಬಹುದೆಂಬುದನ್ನು ತರ್ಕಿಸಹೊರಟಿದ್ದ ರಂಗಣ್ಣ ಯೋಚನೆಯ ಜಾಲದಿಂದ ಹೊರಬಂದು ಪದ್ಮನಾಭನಿಗೆ ಇದಿರಾದ.

ಅವನ ಅಂತರಾಳದಲ್ಲಿ ಪದಗಳು ಗುಡುಗಿದುವು:

——ನೀಚ!

——ಪಾಪಿ!

ರಂಗಣ್ಣನೆಂದುಕೊಂಡ :

" ಮುನಿಯನ ಬದಲು ಈತ ಬಿದ್ದಿರಬಾರದಾಗಿತ್ತೆ ಆ ಹೊಂಡದಲ್ಲಿ?” ದೊಡ್ಡಮ್ಮನನ್ನು ಕರೆದು ಇವನ ಪಾಪ ಕಾರ್ಯದ ಬಗ್ಗೆ ಹೇಳಲೆ? ಎನಿಸಿತು.