ಪುಟ:ಪರಂತಪ ವಿಜಯ ೨.djvu/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



ಅಧ್ಯಾಯ ೧



ಪರಂತಪ-ಅಯ್ಯಾ! ನಾನು ಪರದೇಸಿ. ದೇಶಾಟನಾರ್ಥವಾಗಿ ಬರು ತಿರುವಾಗ, ಈ ವುದ್ಯಾನದ ರಾಮಣೀಯಕವನ್ನು ನೋಡಿ, ನನ್ನ ಮನಸ್ಸು ನನ್ನನ್ನು ಇಲ್ಲಿಗೆ ಆಕರ್ಷಿಸಿತು. ಆದರೆ, ನಿನ್ನ ವಿಶ್ವಾಸೋಕ್ತಿಗಳಿಗೆ ನಾನು ಬಹಳ ಕೃತಜ್ಞನಾಗಿರುವೆನು. ನನ್ನ ಪೂರ್ವಾಪರಗಳನ್ನು ತಿಳಿದುಕೊಳ್ಳುವುದರಿಂದ, ನಿನಗೆ ಪ್ರಯೋಜನವೇನೂ ತೋರುವುದಿಲ್ಲ.

ಮಾಧವ-ಲೋಕದಲ್ಲಿ, ಯಾವ ಕಾರವನ್ನಾಗಲಿ, ಅಥವಾ ಯಾವ ಪದಾರ್ಥವನ್ನಾಗಲಿ ನಿಷ್ಪ್ರಯೋಜನವೆಂದು ಹೇಳುವುದಕ್ಕಾಗುವುದಿಲ್ಲ. ನಿನ್ನ ಆಕಾರ ಮಾತ್ರದಿಂದಲೆ, ನಿನ್ನ ಬುದ್ಧಿಯ ಚಾತುರ್ಯಾತಿಶಯವು ಪ್ರಕಟಿಸಲ್ಪಡುತಿರುವುದು. ಆದುದರಿಂದ, ನೀನು ಇಲ್ಲಿಗೆ ವೃಥಾ ಬಂದವನಂತೆ ತೋರುವುದಿಲ್ಲ. ನೀನು ಇಲ್ಲಿಗೆ ಬಂದುದಕ್ಕೆ ಉದ್ದೇಶವೇನು? -ಹೇಳು. ಇದೇ ನಮ್ಮಿಬ್ಬರಿಗೂ ಪ್ರಥಮ ಪರಿಚಯವಾದಾಗ್ಯೂ, ಯಾವುದೋ ಒಂದು ಅನಿರ್ವಚನೀಯವಾದ ಸಂದರ್ಭಸಂಯೋಗದಿಂದ, ನನ್ನ ಮನಸ್ಸು ನಿನ್ನಲ್ಲಿ ಪ್ರೇಮಾತಿಶಯವುಳ್ಳದಾಗಿರುವುದು.ನಾನು ನಿನ್ನನ್ನು ಹಿಂದೆ ಎಂದೂ ನೋಡಿದಂತೆ ತೋರುವುದಿಲ್ಲ; ಆದರೂ, ಈಗ ನಿನ್ನಲ್ಲಿ ನನಗೆ ಆಕಸ್ಮಿಕವಾಗಿ ಉಂಟಾಗಿರುವ ಪ್ರೇಮಾತಿಶಯವನ್ನು ನೋಡಿದರೆ, ನಮ್ಮಿಬ್ಬರಿಗೂ ಯಾವುದೋ ಒಂದು ಸಂಬಂಧವಿದ್ದರೂ ಇರಬಹುದೆಂಬ ಸಂಶಯವು ನನ್ನ ಮನಸ್ಸಿನಲ್ಲಿ ಅಂಕುರಿಸುತ್ತಿರುವುದು. ಆದುದರಿಂದ, ನನಗೆ ನಿನ್ನಲ್ಲಿ ಉಂಟಾಗುತಿರುವ ವಿಶ್ವಾಸಕ್ಕೆ ಕಾರಣವನ್ನು ತಿಳಿದುಕೊಳ್ಳುವುದಕ್ಕಾಗಿ, ನಾನು ನಿನ್ನ ಪೂರ್ವಾಪರಗಳನ್ನು ಕೇಳುತ್ತೇನೆ.-ಹೇಳು.

ಪರಂತಪ -ಹಾಗಾದರೆ, ನನ್ನ ವೃತ್ತಾಂತವನ್ನು ಹೇಳುವುದಕ್ಕೆ ಮೊದಲು ನಿನ್ನ ಪೂರ್ವೋತ್ತರಗಳನ್ನು ತಿಳಿಯಬೇಕೆಂಬ ಅಭಿಲಾಷೆ ನನಗುಂಟಾಗಿರುವುದರಿಂದ, ನೀನು ಮೊದಲು ನಿನ್ನ ವೃತ್ತಾಂತವನ್ನು ಹೇಳು.

ಮಾಧವ- ನಾನು ಕಲ್ಯಾಣಪುರ ನಿವಾಸಿ ; ನನ್ನ ತಂದೆ ಮಹೇಂದ್ರ ಪಾಲನೆಂಬವನು. ನನ್ನ ಒಡಹುಟ್ಟಿದವರಲ್ಲಿ ಒಬ್ಬನು ಸತ್ತನು. ಅವನಿಗೆ ಶಂಬರನೆಂಬ ಒಬ್ಬ ಮಗನಿರುವನು. ನನ್ನ ಹಿರಿಯಣ್ಣನು ಸುಮಿತ್ರನು. ನಾನೇ ಕಿರಿಯವನು. ರತ್ನಾಕರವೆಂಬ ದೇಶವು ನನ್ನ ಅಧೀನದಲ್ಲಿರುವುದು,