ಪುಟ:ಪರಂತಪ ವಿಜಯ ೨.djvu/೧೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅಧ್ಯಾಯ ೧೭

೧೨೯


ಕಾವಲುಗಾರ- ನೀನು ಯಾರು? ನಿನಗೆ ಇಲ್ಲಿ ಏನು ಕೆಲಸ? ಏತಕ್ಕೋಸ್ಕರ ಬಂದಿರುವೆ?
ಪರಂತಪ- ನಾನು ಶಂಬರನನ್ನು ನೋಡುವುದಕ್ಕೆ ಬಂದಿರುವನು.
ಕಾವಲುಗಾರ -ಈ ರಾತ್ರಿ ಯಾರನ್ನು ನೋಡುವುದಕ್ಕೂ ಅವನಿಗೆ ಪುರುಸತ್ತಿಲ್ಲ.
ಪರಂತಪ-ನಾನು ಬಂದಿರತಕ್ಕ ಕೆಲಸವು ಬಹಳ ಮುಖ್ಯವಾದುದು. ಈ ನಿಮಿಷದಲ್ಲಿಯೇ ಆತನನ್ನು ನಾನು ನೋಡಬೇಕು. ಆದುದರಿಂದ, ಸ್ವಲ್ಪವೂ ಸಾವಕಾಶ ಮಾಡದೆ ಈ ಕಾಗದವನ್ನು ಅವನ ವಶಕ್ಕೆ ತಲುಪಿಸು.
ಎಂದು ಹೇಳಿ, ಅವನಿಗೆ ಒಂದು ಕಾಗದವನ್ನು ಕೊಟ್ಟನು. ಅದರಲ್ಲಿ ಬರೆದಿದ್ದುದೇನೆಂದರೆ:-
ಅಯ್ಯಾ ! ಶಂಬರನೆ !
ಸುಮಿತ್ರನಿಗೆ ಕೊಡಬೇಕೆಂದು, ಅವನ ವಿತ್ರನಾದ ಜಯಪಾಲನು ಬಂದು ಕೋಟಿ ಪೌನುಗಳನ್ನು ನನ್ನ ವಶಪಡಿಸಿ ಮೃತಪಟ್ಟನು. ಅದನ್ನು ಅವನಿಗೆ ತಲುಪಿಸಬೇಕೆಂದು ನಾನು ಕಲ್ಯಾಣಪುರಕ್ಕೆ ಹೋಗಿ ವಿಚಾರಿಸುವಲ್ಲಿ, ಅವನು ಮೃತಪಟ್ಟನೆಂಬುದಾಗಿಯೂ, ನೀನೇ ಅವನಿಗೆ ವಾರಸುದಾರನೆಂಬುದಾಗಿಯೂ ತಿಳಿಯಬಂದಿತು. ನನಗೆ ಬೇರೆ ಕೆಲಸವಿರುವುದರಿಂದ, ಕೂಡಲೇ ನಿನ್ನ ಭೇಟಿಯನ್ನು ಅಪೇಕ್ಷಿಸುತ್ತೇನೆ.
- ಧರ್ಮಪಾಲ.
ಕಾವಲುಗಾರನು, ಈ ಕಾಗದವನ್ನು ತೆಗೆದುಕೊಂಡುಹೋಗಿ ಶಂಬರನಿಗೆ ಕೊಟ್ಟನು. ಧರ್ಮಪಾಲನನ್ನು ಕರೆದುಕೊಂಡು ಬರಬಹುದೆಂದು, ಶಂಬರನು ಆಜ್ಞೆ ಮಾಡಿದನು. ಅವನ ಆಜ್ಞೆಗೆ ಅನುಸಾರವಾಗಿ ಕಾವಲುಗಾರನು ಬಂದು, ಅವನನ್ನು ಒಳಕ್ಕೆ ದಯಮಾಡಿಸಬಹುದೆಂದು ಹೇಳಿದನು. ಪರಂತಪನು, ಕಾವಲುಗಾರನ ಜತೆಯಲ್ಲಿ ಶಂಬರನ ಬಳಿಗೆ ಹೋದನು. ಇವನು ಒಳಕ್ಕೆ ಹೋದ ಕೂಡಲೆ, ಶಂಬರನು ಇವನಿಗೆ ಸತ್ಕರಿಸಿ, ಕುರ್ಚಿಯನ್ನು ಕೊಟ್ಟು, ಅವನು ಕುಳಿತುಕೊಳ್ಳುತ್ತಲೂ ತಾನೂ ಒಂದು ಕುರ್ಚಿ ಯಮೇಲೆ ಕುಳಿತುಕೊಂಡನು.
ಶಂಬರ- ನಿನ್ನ ಕಾಗದವನ್ನು ನೋಡಿದರೆ, ನೀನು ಲಾಯರಾಗಿರಬೇಕೆಂದು ತೋರುತ್ತದೆ.