ಪುಟ:ಪರಂತಪ ವಿಜಯ ೨.djvu/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅಧ್ಯಾಯ ೨

೧೫

ನೆಂಬುದನ್ನೂ ನಿರ್ಣಯಿಸುವುದಕ್ಕೆ, ಈ ಸಭಿಕರೇ ಸಾಕ್ಷಿಭೂತರಾಗಿರುವ ರಲ್ಲವೆ! ನೀನು ಈಗ ಬರೆದಿರುವ ನಿರ್ಣಯಪತ್ರಿಕೆಯೇ ಪ್ರಬಲವಾದ ಸಾಕ್ಷಿಯಾಗಿರುವುದು. ನಮ್ಮಿಬ್ಬರಲ್ಲಿ ಯಾರು ವಂಚಕರೆಂಬುದನ್ನು ಈ ಸಭಿಕರೇ ನಿರ್ಣಯಿಸಲಿ. ಅಧರ್ಮದ್ಯೂತದಿಂದ ಅನೇಕ ಜನರನ್ನು ವಂಚಿಸಿ ಗಳಿಸಿಟ್ಟಿರುವ ನಿನ್ನ ದ್ರವ್ಯವು, ಎಷ್ಟು ದಿವಸ ನಿನಗೆ ಸಹಕಾರಿಯಾಗಿರುವುದು ? "ಅತ್ಯುತ್ಕಟೈಃ ಪುಣ್ಯಪಾಪೈಃ ಇಹೈವ ಫಲಮಶ್ನುತೇ ” ಎಂಬ ನ್ಯಾಯಕ್ಕನುಸಾರವಾಗಿ, ನೀನು ಮಾಡಿರುವ ಅತಿ ಕ್ರೂರವಾದ ಪಾಪಕೃತ್ಯ ಗಳಿಗೆ ಈಗಲೇ ತಕ್ಕ ಫಲವನ್ನನುಭವಿಸಬೇಕಾಗಿದೆ. ಆದುದರಿಂದ, ಇನ್ನು ಮೇಲೆ ಇಂಥ ಕಪಟಕೃತ್ಯಗಳನ್ನು ಬಿಡು. ಇಂಥ ಲೋಕಾಪವಾದದಲ್ಲಿ ಜೀವಿಸುವುದಕ್ಕಿಂತ ಮರಣವೇ ಉತ್ಕೃಷ್ಟವೆಂದು ಹಿರಿಯರು ಹೇಳುವರು. ಆದುದರಿಂದ, ಪೂರ್ವಾಪರಗಳನ್ನು ಯೋಚಿಸಿ ವಿವೇಕದಿಂದಿರು.
    ಈ ಮಾತನ್ನು ಕೇಳಿದೊಡನೆಯೆ ದುರ್ಬುದ್ಧಿಯು ಅತ್ಯಂತ ಕ್ರೋಧ ಪರವಶನಾಗಿ, ತಾನು ಬಚ್ಚಿಟ್ಟು ಕೊಂಡಿದ್ದ ಕಠಾರಿಯನ್ನು ತೆಗೆದು "ಎಲಾ ! ನೀಚನಾದ ಮಾಧವನೆ : ಸಾಕು. ನಿನ್ನ ನೀತಿಬೋಧನೆಯನ್ನು ಇಷ್ಟಕ್ಕೆ ನಿಲ್ಲಿಸು. ನಿನ್ನ ಆಯುಸ್ಸು ಇಂದಿಗೆ ಮುಗಿಯಿತು.” ಎಂದು ಅವನಮೇಲೆ ಅದನ್ನು ಪ್ರಯೋಗಿಸಿದನು. ಒಡನೆಯೇ ಮಾಧವನು ಮೂರ್ಛಿತನಾಗಿ ಕೆಳಕ್ಕೆ ಬಿದ್ದನು. ಇವನು ಬೀಳುವುದರೊಳಗಾಗಿಯೇ ದೊಡ್ಡ ಶಬ್ದ ವೊಂದು ಕೇಳಿಸಿತು. ಅಲ್ಲಿ ಸೇರಿದ್ದ ಜನರೆಲ್ಲರೂ ಗಾಬರಿಯಿಂದ ಅತ್ತಿತ್ತ ನೋಡುತ್ತಿರುವಷ್ಟರಲ್ಲಿ, ಆ ದುರ್ಬುದ್ಧಿಯು ಭಿನ್ನ ಗಾತ್ರನಾಗಿ ಕೆಳಗೆ ಬಿದ್ದಿದ್ದನು. ಅಷ್ಟರಲ್ಲಿಯೇ ಅಲ್ಲಿ ಕೋಲಾಹಲವು ಪ್ರಬಲವಾಯಿತು. ಬಹು ಜನಗಳು ಬಂದು ಸೇರಿದರು. ದುರ್ಬುದ್ಧಿಗೆ ಇಂಥ ಅಪಾಯವು ಯಾರಿಂದ ಸಂಭವಿಸಿತೆಂದು ಎಲ್ಲೆಲ್ಲಿ ನೋಡಿದರೂ ಗೊತ್ತಾಗದಿರಲು, ಚಿಂತಾಕ್ರಾಂತರಾಗಿ ಅವನ ಕಡೆಯವರು ಅವನನ್ನು ಎತ್ತಿಕೊಂಡು ಹೊರಟು ಹೋದರು.