ಪುಟ:ಪರಂತಪ ವಿಜಯ ೨.djvu/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



೨೫

ಅಧ್ಯಾಯ ೩


ಮಾಧವ-ನಿನ್ನ ಕೈಯಲ್ಲಿ ಕೊಟ್ಟಿರುವುದಲ್ಲದೆ ನನ್ನ ಪೆಟ್ಟಿಗೆಯಲ್ಲಿ ಉಳಿದಿರುವ ರತ್ನಗಳನ್ನು ವಿಕ್ರಯಿಸಿದರೆ, ೧೦ ಕೋಟಿ ವರಹಗಳಿಗಿಂತ ಹೆಚ್ಚಾಗಿಯೇ ಬರಬಹುದು. ಅದರಲ್ಲಿ ೨ ಕೊಟಿ ದ್ರವ್ಯಗಳಿಂದ, ವಿಶಾಲವಾಗಿಯೂ ಅನುಕೂಲವಾಗಿಯೂ ಇರುವ ಒಂದು ವೈದ್ಯಶಾಲೆಯನ್ನು ಕಟ್ಟಿಸಬೇಕು. ಉಳಿದುದನ್ನು ರಾಜ್ಯಾಧಿಕಾರಿಗಳಲ್ಲಿ ಮೂಲ ಧನವಾಗಿ ಕೊಟ್ಟು, ಅದರ ವೃದ್ಧ್ಯಾಂಶವನ್ನು, ದರಿದ್ರರಾಗಿಯೂ ರೋಗಪೀಡಿತರಾಗಿಯೂ ಇರುವ ಜನಗಳ ಅನ್ನ ಪಾನಗಳಿಗಾಗಿಯೂ ಔಷಧಗಳಿಗಾಗಿಯೂ ಉಪಯೋಗಿಸುವಂತೆ ಮಾಡಬೇಕು. ನೀನು ದುಡ್ಡು ಕೊಡತಕ್ಕವರಿಗೆ ಎಷ್ಟು ಆದರದಿಂದ ಚಿಕಿತ್ಸೆ ಮಾಡುತಿದ್ದೆಯೋ, ಹಾಗೆ ಆ ವೈದ್ಯ ಶಾಲೆಗೆ ಬರತಕ್ಕಂಥ ರೋಗಿಗಳಿಗೆ ಪಾರಮಾರ್ಥಿಕವಾಗಿ ಬೆಕಿತ್ಸೆ ಮಾಡುತಿರಬೇಕೆಂಬುದೇ ನನ್ನ ಪ್ರಾರ್ಥನೆ. ಈ ಧರ್ಮವು ಆಚಂದ್ರಾರ್ಕವಾಗಿ ನಡೆಯುವಂತೆ, ನೀನೂ ಪರಂತಪನೂ ಪರ್ಯಾಲೋಚಿಸಿ. ನಿಮ್ಮಿಬ್ಬರಿಗೂ ಸೂಕ್ತವಾದ ರೀತಿಯಲ್ಲಿ ನಡೆಯಿಸಬೇಕು. ಈ ರತ್ನಗಳನ್ನೆಲ್ಲ ಏತದರ್ಥವಾಗಿ ಈಗಲೇ ರಾಜ್ಯಾಧಿಕಾರಗಳಲ್ಲಿ ಒಪ್ಪಿಸಿ-ನನ್ನ ಮನೋರಥವು ಸಫಲವಾಗುವುದೆಂಬ ಪ್ರತ್ಯಯವನ್ನು ಉಂಟುಮಾಡಿದರೆ, ನಾನು ಸಂತೋಷದಿಂದ ಪ್ರಾಣಗಳನ್ನು ಬಿಡುವೆನು.
ಪರಂತಪ-ನಿನ್ನ ಮನೋರಥ ನೆರವೇರುವಂತೆ ಈಗಲೇ ಮಾಡುವೆವು, ಅಯ್ಯಾ ! ಚಿಕಿತ್ಸಕನೆ ! ಇವನನ್ನು ನೋಡಿಕೊಂಡಿರು. ನಾನು ಅಯ್ದು ನಿಮಿಷಗಳೊಳಗಾಗಿ ಈ ಪಟ್ಟಣದ ನ್ಯಾಯಾಧಿಪತಿಯನ್ನು ಕರೆದುಕೊಂಡು ಬರುವೆನು. ಮಾಧವನು ಈ ಅನ್ಯಾದೃಶವಾದ ಧರ್ಮವನ್ನು ತನ್ನ ಕೈಯಿಂದಲೇ ಮಾಡಲಿ.

  ಜೀವಾನಂದ-ಅಗಲಿ, ನೀನು ಜಾಗ್ರತೆಯಾಗಿ ಹೋಗಿ ಬಾ.
  ಪರಂತಪನು ಕೂಡಲೆ ನ್ಯಾಯಾಧಿಪತಿಯ ಬಳಿಗೆ ಹೋಗಿ, ಈ ಅಂಶ ಗಳನ್ನು ಅವನಿಗೆ ಸಂಕ್ಷೇಪವಾಗಿ ತಿಳಿಯಿಸಿ, ಅವನನ್ನು ಕರೆದುಕೊಂಡು ಬಂದನು. ಮಾಧವನು ಅವನಿಗೆ ಪ್ರತ್ಯುತ್ಥಾನಮಾಡಲಾರದೆ ಶ್ರಮಪಡುತಿದ್ದುದನ್ನು ನೋಡಿ, ಪರಂತಪನೂ ಜೀವಾನಂದನೂ ಅವನನ್ನು ಎತ್ತಿ ಕೂರಿಸಿದರು. ಆಗ ಮಾಧವನು ನ್ಯಾಯಾಧಿಪತಿಯನ್ನು ನೋಡಿ 'ಅಯ್ಯಾ!